
ದುಬೈ: ಮಧ್ಯಪ್ರಾಚ್ಯದಲ್ಲಿ ತೀವ್ರವಾಗಿರುವ ಸಂಘರ್ಷವು, ದುಬೈ ದಶಕಗಳಿಂದ ಕಟ್ಟಿಕೊಂಡಿದ್ದ ಜಗತ್ತಿನ ಅತ್ಯಂತ ಸುರಕ್ಷಿತ ನೆಲೆ, ಮಧ್ಯಪ್ರಾಚ್ಯದ ಸ್ವಿಜರ್ಲೆಂಡ್ ಎಂಬಿತ್ಯಾದಿ ಖ್ಯಾತಿಗಳಿಗೆ ದೊಡ್ಡ ಆಘಾತ ನೀಡಿದೆ. ಅತ್ಯಂತ ಆಕರ್ಷಣೀಯ ನಗರವಾಗಿ ಮಾತ್ರವಲ್ಲದೆ, ತೆರಿಗೆ ಮುಕ್ತ, ಸ್ಥಿರತೆಯುಳ್ಳ, ವ್ಯಾಪಾರ-ಪ್ರವಾಸೋದ್ಯಮ-ಹಣಕಾಸು ಕೇಂದ್ರವಾಗಿಯೂ ಗಳಿಸಿದ್ದ ಹೆಗ್ಗಳಿಕೆಗೆ ಪೆಟ್ಟು ಕೊಟ್ಟಿದೆ.
ಇರಾನ್ನ ಕ್ಷಿಪಣಿಗಳು ದುಬೈನ ವಿಮಾನ ನಿಲ್ದಾಣಗಳು, ಹೋಟೆಲ್ಗಳು, ಬಂದರುಗಳು ಮತ್ತು ಇತರ ಪ್ರಮುಖ ತಾಣಗಳ ಮೇಲೆ ದಾಳಿ ನಡೆಸಿವೆ. ಇದು ದುಬೈ ಅತ್ಯಂತ ಸುರಕ್ಷಿತ ಸ್ಥಳ ಎಂಬ ಜನರ ಭಾವನೆಯೇ ಅಲುಗಾಡುವಂತೆ ಮಾಡಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ಮತ್ತು ವ್ಯಾಪಾರಿಗಳು ಆತಂಕಕ್ಕೆ ಒಳಗಾಗಿದ್ದು, ದೀರ್ಘಕಾಲೀನ ಸಂಘರ್ಷದಿಂದ ಪರ್ಯಾಯ ಸ್ಥಳಗಳಿಗೆ ಹುಡುಕಾಟ ನಡೆಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಪ್ರಪಂಚದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ, ಸ್ಕೈಲೈನ್, ಪಾಮ್ ಜುಮೈರಾ ಮತ್ತು ಇತರ ಕೃತಕ ದ್ವೀಪಗಳು ದುಬೈಯನ್ನು ಅದ್ಭುತವಾಗಿ ಮಾಡಿವೆ. ಇಲ್ಲಿ ವೈಯಕ್ತಿಕ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. ಕಾರ್ಪೊರೇಟ್ ತೆರಿಗೆ ಕಡಿಮೆ. ಶ್ರೀಮಂತರು, ವ್ಯಾಪಾರಿಗಳು ಮತ್ತು ವಲಸಿಗರಿಗೆ ಇದು ಆಕರ್ಷಣೀಯ ನಗರ. ಕಟ್ಟುನಿಟ್ಟಾದ ಕಾನೂನು ಮತ್ತು ಪೊಲೀಸ್ ವ್ಯವಸ್ಥೆಯಿಂದಾಗಿ ಜನ ಭಯವಿಲ್ಲದೆ ಬದುಕುತ್ತಾರೆ. ಹಣಕಾಸು, ಪ್ರವಾಸೋದ್ಯಮ, ರಿಯಲ್ ಎಸ್ಟೇಟ್, ತಂತ್ರಜ್ಞಾನ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿಯೂ ಭರ್ಜರಿ ಅವಕಾಶಗಳಿವೆ. ಹೀಗಾಗಿ 200ಕ್ಕೂ ಹೆಚ್ಚು ರಾಷ್ಟ್ರಗಳ ಜನರು ಇಲ್ಲಿ ವಾಸಿಸುತ್ತಾರೆ.
ಸಂಘರ್ಷದಿಂದಾಗಿ ಯುಎಇ ಷೇರು ಮಾರುಕಟ್ಟೆ ಮೇಲೆ ಹೊಡೆತ ಬಿದ್ದಿದೆ. ಬ್ರೆಂಟ್ ಕಚ್ಚಾತೈಲ ಬೆಲೆ ಏರಿಕೆ, ವಿಮಾನಗಳ ರದ್ದು ಮೊದಲಾದ ಸಮಸ್ಯೆಗಳು ತಲೆದೋರಿವೆ. ಈ ವರ್ಷ ಪ್ರವಾಸೋದ್ಯಮದಲ್ಲಿ ಶೇ.50 ಆದಾಯ ಕುಸಿತವನ್ನು ಅಂದಾಜಿಸಲಾಗಿದೆ. ಹೂಡಿಕೆದಾರರು ಆತಂಕಕ್ಕೆ ಒಳಗಾಗಿದ್ದು, ರಿಯಲ್ ಎಸ್ಟೇಟ್ ವಹಿವಾಟುಗಳು ತಾತ್ಕಾಲಿಕವಾಗಿ ನಿಂತಿವೆ. ವಿದೇಶಿ ಹೂಡಿಕೆದಾರರು ಪರ್ಯಾಯ ಸ್ಥಳಗಳಿಗೆ ಹುಡುಕಾಟ ಆರಂಭಿಸಿದ್ದಾರೆ. ದುಬೈಯ ರಕ್ಷಣಾ ವ್ಯವಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರೂ, ದಾಳಿಗಳು ಜನರಿಗೆ ಮಾನಸಿಕ ಆಘಾತ ನೀಡಿವೆ. ದೀರ್ಘಕಾಲೀನ ಸಂಘರ್ಷದಿಂದ ಬಂಡವಾಳ ಹರಿವು ಕಡಿಮೆಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ