London: ಬಸವೇಶ್ವರರ ಪ್ರತಿಮೆಗೆ ಗೌರವ ಸಲ್ಲಿಸಿದ ಸಚಿವ ಅಶ್ವತ್ಥ್ ನಾರಾಯಣ್!

By Govindaraj SFirst Published May 22, 2022, 8:03 PM IST
Highlights

ಇಲ್ಲಿನ ಲ್ಯಾಂಬೆತ್‌ನಲ್ಲಿನ ಥೇಮ್ಸ್ ನದಿಯ ತಟದಲ್ಲಿರುವ ಬಸವೇಶ್ವರರ ಪ್ರತಿಮೆಗೆ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಭಾನುವಾರ ಭೇಟಿ ನೀಡಿ, ಗೌರವ ನಮನಗಳನ್ನು ಸಲ್ಲಿಸಿದರು.

ಲಂಡನ್ (ಮೇ.22): ಇಲ್ಲಿನ ಲ್ಯಾಂಬೆತ್‌ನಲ್ಲಿನ ಥೇಮ್ಸ್ ನದಿಯ ತಟದಲ್ಲಿರುವ ಬಸವೇಶ್ವರರ ಪ್ರತಿಮೆಗೆ (Basaveshwara Statue) ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ  (Dr Cn Ashwath Narayan)  ಅವರು ಭಾನುವಾರ ಭೇಟಿ ನೀಡಿ, ಗೌರವ ನಮನಗಳನ್ನು (Tribute) ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 'ಬಸವಣ್ಣ ಅವರ ತತ್ತ್ವ-ಚಿಂತನೆಗಳಿಂದ ಪ್ರೇರಣೆ ಪಡೆದುಕೊಂಡಿರುವ ಕರ್ನಾಟಕವು ಇನ್ನು 25 ವರ್ಷಗಳಲ್ಲಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಜಾಗತಿಕವಾಗಿ ನಾಯಕ ಸ್ಥಾನದಲ್ಲಿ ಪ್ರತಿಷ್ಠಾಪಿತವಾಗಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

`ಪ್ರಧಾನಿ ಮೋದಿಯವರು 2014ರಲ್ಲಿ ಉದ್ಘಾಟಿಸಿದ ಈ ಪ್ರತಿಮೆಯು ಇಡೀ ವಿಶ್ವಕ್ಕೇ ಒಂದು ಅಮೂಲ್ಯ ಸಂದೇಶವನ್ನು ಸಾರುತ್ತಿದೆ. ಮೋದಿ ಕೂಡ ಪ್ರಜಾಪ್ರಭುತ್ವದ ಪ್ರಸ್ತಾಪ ಬಂದಾಗಲೆಲ್ಲ ಬಸವಣ್ಣನವರ ಪ್ರಜಾಸತ್ತಾತ್ಮಕ ಪರಿಕಲ್ಪನೆಯಾದ ಅನುಭವ ಮಂಟಪದ ಉಲ್ಲೇಖ ಮಾಡುತ್ತಲೇ ಇರುತ್ತಾರೆ. ಈ ದೃಷ್ಟಿಯಿಂದ ನೋಡಿದರೆ, ಬಸವಣ್ಣನವರು ಜಗತ್ತಿನ ಮೊಟ್ಟಮೊದಲ ಪ್ರಜಾಪ್ರಭುತ್ವವಾದಿ’ ಎಂದು ಅವರು ಬಣ್ಣಿಸಿದರು. ಯಾವುದೇ ಸಮಾಜವು ಆರ್ಥಿಕವಾಗಿ ಪ್ರಗತಿ ಸಾಧಿಸಿದರೆ ಸಾಲದು. ಅದರ ಜತೆಯಲ್ಲೇ ಲಿಂಗ ಸಮಾನತೆ, ಸಾಮಾಜಿಕ ಸಮಾನತೆ ಮತ್ತು ನೈತಿಕತೆ ಹಾಗೂ ಮೌಲ್ಯಗಳನ್ನೂ ಸಾಧಿಸಬೇಕು. ಆಗ ಮಾತ್ರ ಮಾನವೀಯ ಸಂಸ್ಕೃತಿ ನೆಲೆಗೊಳ್ಳುತ್ತದೆ ಎನ್ನುವುದು ಬಸವಣ್ಣನವರ ಚಿಂತನೆಯಾಗಿತ್ತು ಎಂದು ಅವರು ನುಡಿದರು.

Latest Videos

1000 ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆಗೆ ಲಂಡನ್‌ನ ಐಒಎ ಆಸಕ್ತಿ

ಕಾಯಕ, ಜ್ಞಾನ ಮತ್ತು ದಾಸೋಹಗಳಿಗೆ ಪ್ರಾಶಸತ್ಯ ಕೊಡುವ ಮೂಲಕ ಬಸವಣ್ಣನವರು 12ನೇ ಶತಮಾನದಲ್ಲೇ ಉದ್ಯೋಗ, ಶಿಕ್ಷಣ ಮತ್ತು ಆಹಾರ ಭದ್ರತೆಗಳ ಬಗ್ಗೆ ಗಾಢವಾಗಿ ಚಿಂತಿಸಿದ್ದರು. ಜತೆಗೆ ಸಮಾಜವನ್ನು ಅನಪೇಕ್ಷಿತ ನಿರ್ಬಂಧಗಳಿಂದ ಮುಕ್ತಗೊಳಿಸಲು ಅವರು ಪ್ರಾಮಾಣಿಕವಾಗಿ ಶ್ರಮಿಸಿದವರಾಗಿದ್ದಾರೆ ಎಂದು ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು. ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯ ಅಭಿಜಿತ್ ಸಾಲೀಮಠ ಮತ್ತು 'ಯುಕೆ ಕನ್ನಡಿಗರು' ಸಂಘಟನೆಯ ಅಧ್ಯಕ್ಷ ಗಣಪತಿ ಭಟ್ ಮುಂತಾದವರಿದ್ದರು.

ಉನ್ನತ ಶಿಕ್ಷಣ ಸಚಿವರಿಂದ ಕಾಮನ್ ವೆಲ್ತ್ ಶಿಕ್ಷಣ ತಜ್ಞರ ಮುಂದೆ ಅನಾವರಣ: ಕರ್ನಾಟಕದ ಉನ್ನತ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ-2020) ಅಳವಡಿಕೆಯಲ್ಲಿ ಹೇಗೆ  ಇಡೀ ಭಾರತದಲ್ಲಿ ಮುಂಚೂಣಿಯಲ್ಲಿದೆ ಎಂಬುದನ್ನು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣಅವರು ವಿವಿಧ ದೇಶಗಳ ಶೈಕ್ಷಣಿಕ ಹಿತಾಸಕ್ತಿದಾರರ ಮುಂದೆ ಗುರುವಾರ ಎಳೆ ಎಳೆಯಾಗಿ ಅನಾವರಣಗೊಳಿಸಿದರು. ಇಲ್ಲಿನ ಥೇಮ್ಸ್ ನದಿ ದಂಡೆಯಲ್ಲಿರುವ ‘ಪಾರ್ಕ್ ಪ್ಲಾಜಾ ಲಂಡನ್ ರಿವರ್ ಬ್ಯಾಂಕ್’ ಹೋಟೆಲ್ ನಲ್ಲಿ ನಡೆದ ಕಾಮನ್‌ವೆಲ್ತ್ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಗುಣಮಟ್ಟದ ಶಿಕ್ಷಣವನ್ನು ಎಲ್ಲರಿಗೂ ಲಭ್ಯವಾಗಿಸುವ ಮೂಲಕ ಸದೃಢ ಸಮಾಜ ನಿರ್ಮಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಹಲವಾರು ಉಪಕ್ರಮಗಳಿಗೆ ಚಾಲನೆ ಕೊಡಲಾಗಿದೆ ಎಂದು ವಿವರಿಸಿದರು.

BJP core committee ಬಿಜೆಪಿ ಕೋರ್‌ ಕಮಿಟಿಯಲ್ಲಿ ಅಶ್ವತ್ಥ್, ಡಿವಿ ಸದಾನಂದ ಗೌಡ‌ ಗರಂ!

‘ಇಂಟರ್ ನ್ಯಾಷನಲ್ ಸ್ಕಿಲ್ ಡೆವಲಪ್ ಮೆಂಟ್ ಕಾರ್ಪೊರೇಷನ್’ ಸಂಸ್ಥೆ ಹಾಗೂ ‘ಬ್ರಿಡ್ಜ್ ಇಂಡಿಯಾ’ ಜೊತೆ ಸೇರಿ ಈ ಸಮಾವೇಶ ಏರ್ಪಡಿಸಿದ್ದವು. ಆಧುನಿಕ ವಿದ್ಯಮಾನಗಳಿಗೆ ತೆರೆದುಕೊಂಡ ಹಾಗೂ ಅದೇ ವೇಳೆ ಭಾರತೀಯ ಪರಂಪರೆಯಲ್ಲಿ ಬೇರುಬಿಟ್ಟ ಶಿಕ್ಷಣವನ್ನು ಯುವ ಜನಾಂಗಕ್ಕೆ ಕೊಡಬೇಕೆನ್ನುವುದು ಎನ್ಇಪಿ ಆಶಯವಾಗಿದೆ. ಇದು ವಿದ್ಯಾರ್ಥಿಗಳಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯಿರುವ ವಿಶ್ವಾತ್ಮಕ ದೃಷ್ಟಿಯ ಭವಿಷ್ಯದ ಪೀಳಿಗೆಯನ್ನು ಸೃಷ್ಟಿಸಲಿದೆ ಎಂದು ಸಚಿವರು ಪ್ರತಿಪಾದಿಸಿದರು.

click me!