
20 ನೇ ಶತಮಾನದ ಆರಂಭದಲ್ಲಿ ಮಹಾತ್ಮ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾಗ, ರಷ್ಯಾದ ಮಹಾನ್ ಸಾಹಿತ್ಯ ದಿಗ್ಗಜ ਲಿಯೋ ಟಾಲ್ಸ್ಟಾಯ್ ಅವರ ಬರವಣಿಗೆಗಳ ಪರಿಚಯವಾಯಿತು. ಅಲ್ಲಿಂದ ಆರಂಭವಾದ ಈ ಐತಿಹಾಸಿಕ ಸಂಪರ್ಕವು, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಿದ್ಧಾಂತವನ್ನು ಬದಲಾಯಿಸಿದ್ದಲ್ಲದೆ, ಶತಮಾನಗಳ ನಂತರ ಇಂದು ಭಾರತ ಮತ್ತು ರಷ್ಯಾದ ನಡುವಿನ ರಾಜತಾಂತ್ರಿಕ ಬಾಂಧವ್ಯಕ್ಕೂ ಸೇತುವೆಯಾಗಿದೆ.
1908ರ ಡಿಸೆಂಬರ್ 14ರಂದು ಟಾಲ್ಸ್ಟಾಯ್ ಎ ಲೆಟರ್ ಟು ಎ ಹಿಂದೂ ಎಂಬ ಪ್ರಸಿದ್ಧ ಲೇಖನವನ್ನು ಬರೆದಿದ್ದರು. ಕ್ರಾಂತಿಕಾರಿ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಫ್ರೀ ಹಿಂದೂಸ್ತಾನ್ ಪತ್ರಿಕೆಯ ಸಂಪಾದಕ ತಾರಕ್ನಾಥ್ ದಾಸ್ ಅವರ ಕೋರಿಕೆಯ ಮೇರೆಗೆ ಇದನ್ನು ರಚಿಸಲಾಗಿತ್ತು. ಈ ಪತ್ರದಲ್ಲಿ ಟಾಲ್ಸ್ಟಾಯ್ ಬ್ರಿಟಿಷ್ ವಸಾಹತುಶಾಹಿಯನ್ನು ತೀವ್ರವಾಗಿ ಖಂಡಿಸಿದರು. ಬೆರಳೆಣಿಕೆಯಷ್ಟು ಬ್ರಿಟಿಷ್ ಸೈನಿಕರು ಹಾಗೂ ಒಂದು ಸಣ್ಣ ವ್ಯಾಪಾರ ಕಂಪನಿ (ಈಸ್ಟ್ ಇಂಡಿಯಾ ಕಂಪನಿ) ಕೋಟ್ಯಂತರ ಭಾರತೀಯರನ್ನು ಆಳಲು ನಾವೇ ನೀಡುತ್ತಿರುವ ಸಹಕಾರವೇ ಕಾರಣ ಎಂದು ಅವರು ವಾದಿಸಿದರು. ಹಿಂಸೆ ಅಥವಾ ಭಯೋತ್ಪಾದನೆಯಿಂದ ಸ್ವಾತಂತ್ರ್ಯ ಸಿಗಲು ಸಾಧ್ಯವಿಲ್ಲ, ಬದಲಿಗೆ 'ನಾಗರಿಕ ಅಸಹಕಾರ' ಮತ್ತು 'ಅಹಿಂಸೆ'ಯಿಂದ ಮಾತ್ರ ಬ್ರಿಟಿಷರನ್ನು ಸೋಲಿಸಬಹುದು ಎಂದು ಅವರು ಪ್ರತಿಪಾದಿಸಿದರು.
1909ರಲ್ಲಿ ಈ ಪತ್ರವನ್ನು ಓದಿದ ಯುವ ಮೋಹನದಾಸ ಕರಮಚಂದ ಗಾಂಧಿಯವರು ತೀವ್ರವಾಗಿ ಪ್ರಭಾವಿತರಾದರು. ಟಾಲ್ಸ್ಟಾಯ್ ಅವರಿಗೆ ಪತ್ರ ಬರೆದು, ಅದನ್ನು ತಮ್ಮ "ಇಂಡಿಯನ್ ಒಪೀನಿಯನ್" ಪತ್ರಿಕೆಯಲ್ಲಿ ಪ್ರಕಟಿಸಲು ಅನುಮತಿ ಪಡೆದರು. ಇದು ಇಬ್ಬರ ನಡುವೆ ೧೯೧೦ ರಲ್ಲಿ ಟಾಲ್ಸ್ಟಾಯ್ ನಿಧನರಾಗುವವರೆಗೂ ಸುದೀರ್ಘ ಪತ್ರವ್ಯವಹಾರಕ್ಕೆ ದಾರಿಯಾಯಿತು. ಟಾಲ್ಸ್ಟಾಯ್ ತಮ್ಮ ಪತ್ರದಲ್ಲಿ ಪ್ರೀತಿ ಮತ್ತು ಅಹಿಂಸೆಯ ಶಕ್ತಿಯನ್ನು ವಿವರಿಸಲು ವೇದಗಳು ಹಾಗೂ ಕೃಷ್ಣನ ಬೋಧನೆಗಳ ಜೊತೆಗೆ ಪ್ರಾಚೀನ ತಮಿಳು ಸಾಹಿತ್ಯವಾದ 'ತಿರುಕ್ಕುರಲ್'ನ ಪದ್ಯಗಳನ್ನು ಉಲ್ಲೇಖಿಸಿದ್ದರು. ಇದನ್ನು ಅವರು ಹಿಂದೂ ಕುರಲ್ ಎಂದು ಕರೆದಿದ್ದರು. ಕವಿ-ಸಂತ ತಿರುವಳ್ಳುವರ್ ಬರೆದ ಈ ಮಹಾಕಾವ್ಯವು ದಕ್ಷಿಣ ಭಾರತದ ಶ್ರೇಷ್ಠ ನೈತಿಕ ಚಿಂತನೆಗಳನ್ನು ಒಳಗೊಂಡಿತ್ತು. ಟಾಲ್ಸ್ಟಾಯ್ ಪತ್ರದ ಮೂಲಕ ಈ ತಮಿಳು 'ಖಜಾನೆ' ಗಾಂಧೀಜಿಯವರ ಗಮನಸೆಳೆಯಿತು. ಜೈಲಿನಲ್ಲಿದ್ದಾಗ ಗಾಂಧೀಜಿಯವರು ಇದನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದರು. ತಿರುಕ್ಕುರಲ್ನ ನೈತಿಕ ಬೋಧನೆಗಳು ಗಾಂಧೀಜಿಯವರ 'ಸತ್ಯಾಗ್ರಹ' ಮತ್ತು 'ಅಹಿಂಸೆ'ಯ ತತ್ವಗಳಿಗೆ ಬಲವಾದ ಅಡಿಪಾಯ ಹಾಕಿಕೊಟ್ಟವು.
ಶತಮಾನಗಳ ಹಿಂದೆ ರಷ್ಯಾದ ಸಾಹಿತಿಯಿಂದ ಭಾರತದ ಗಾಂಧೀಜಿಗೆ ತಲುಪಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿಯಾಗಿದ್ದ ಆ ತಮಿಳು ಮಹಾಕಾವ್ಯದ ವೃತ್ತವು ಇಂದು ಪೂರ್ಣಗೊಂಡಿದೆ. ನವದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಈ ಪ್ರಸಿದ್ಧ ತಮಿಳು ಪಠ್"ತಿರುಕ್ಕುರಲ್" ನ ರಷ್ಯನ್ ಅನುವಾದವನ್ನು ವಿಶೇಷ ಉಡುಗೊರೆಯಾಗಿ ನೀಡಿದರು.
ಜಾಗತಿಕ ಮಟ್ಟದಲ್ಲಿ ಭಾರತದ ರಾಜತಾಂತ್ರಿಕ ತೂಕ ಹೆಚ್ಚುತ್ತಿರುವ ಈ ಸಮಯದಲ್ಲಿ, ಈ ಉಡುಗೊರೆಯು ಸಾಂಸ್ಕೃತಿಕವಾಗಿ ಮಹತ್ವದ ಮೈಲಿಗಲ್ಲಾಗಿದೆ. ಭಾರತದ ತಮಿಳು ಸಾಹಿತ್ಯ ಪರಂಪರೆ, ರಷ್ಯಾದ ಸಾಹಿತ್ಯ ದಿಗ್ಗಜನ ಚಿಂತನೆ ಮತ್ತು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಐತಿಹಾಸಿಕ ಸಂಬಂಧವನ್ನು ನೆನಪಿಸುವ ರೀತಿಯಲ್ಲಿ ಪ್ರಧಾನಿ ಮೋದಿ ಈ ಅಪರೂಪದ ಗಿಫ್ಟ್ ನೀಡುವ ಮೂಲಕ ಜಾಗತಿಕ ವೇದಿಕೆಯಲ್ಲಿ ಗಮನ ಸೆಳೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ