ತಾಲಿಬಾನಿ ಆಫ್ಘನ್‌ನಿಂದ ಭಾರತಕ್ಕೆ ಉಗ್ರ ಅಪಾಯ!

By Kannadaprabha NewsFirst Published Sep 8, 2021, 7:12 AM IST
Highlights
  • ಅಷ್ಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರ ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೇ, ಆ ನೆಲದಿಂದ ಭಾರತ ಮತ್ತು ರಷ್ಯಾಕ್ಕೂ ಭಯೋತ್ಪಾದನೆಯ ಅಪಾಯ
  • ಭಾರತದಲ್ಲಿನ ರಷ್ಯಾ ರಾಯಭಾರಿ ನಿಕೋಲೆ ಕುದಶೇವ್‌ ಆತಂಕ 

ನವದೆಹಲಿ (ಸೆ.08): ನೆರೆಯ ಅಷ್ಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರ ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೇ, ಆ ನೆಲದಿಂದ ಭಾರತ ಮತ್ತು ರಷ್ಯಾಕ್ಕೂ ಭಯೋತ್ಪಾದನೆಯ ಅಪಾಯ ಹರಡುವ ಆತಂಕ ಇದೆ ಎಂದು ಭಾರತದಲ್ಲಿನ ರಷ್ಯಾ ರಾಯಭಾರಿ ನಿಕೋಲೆ ಕುದಶೇವ್‌ ಆತಂಕ ವ್ಯಕ್ತಪಡಿಸಿದ್ದಾರೆ. ಕಾಶ್ಮೀರ ಸೇರಿದಂತೆ ವಿಶ್ವದಲ್ಲಿನ ಯಾವುದೇ ಮುಸ್ಲಿಮರ ಹಕ್ಕಗಳಿಗಾಗಿ ಧ್ವನಿ ಎತ್ತಲು ನಾವು ಸ್ವತಂತ್ರರು ಎಂಬ ತಾಲಿಬಾನಿಗಳು ಮತ್ತು ಸ್ವತಂತ್ರ ಕಾಶ್ಮೀರ ಕನಸಿನ ಕುರಿತು ಅಲ್‌ಖೈದಾ ಉಗ್ರರ ಇತ್ತೀಚಿನ ಹೇಳಿಕೆಗಳ ಬೆನ್ನಲ್ಲೇ ನಿಕೋಲೆ ಅವರಿಂದ ವ್ಯಕ್ತವಾದ ಈ ಕಳವಳ ಸಾಕಷ್ಟುಆತಂಕಕ್ಕೆ ಕಾರಣವಾಗಿದೆ.

ಅಲ್ಲದೆ ಮುಂದಿನ ದಿನಗಳಲ್ಲಿ ಅಲ್‌ಖೈದಾ ಸೇರಿದಂತೆ ಹಲವು ಉಗ್ರರ ಬೆಂಬಲ ಹೊಂದಿರುವ ತಾಲಿಬಾನಿ ಸಂಘಟನೆ, ಭಾರತದ ಕಣಿವೆ ರಾಜ್ಯ ಕಾಶ್ಮೀರ ಸೇರಿದಂತೆ ಇತರೆ ಭಾಗಗಳಿಗೆ ಹೊಸ ಸಮಸ್ಯೆಯಾಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆಗಳನ್ನು ಮುಂದಿಟ್ಟಿದೆ.

ಕಾಬೂಲಿಗೆ ತಾಲೀಬಾನಿಗಳು ಬಂದ ದಿನ ಏನಾಯ್ತು? ಉಡುಪಿಗೆ ಬಂದಿಳಿದ ಜಾನ್ ಹೇಳಿದ ಸತ್ಯಗಳು!

ಕಾಶ್ಮೀರಕ್ಕೆ ಅಪಾಯ:  ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ರಾಯಭಾರಿ ನಿಕೋಲೆ ‘ಅಷ್ಘಾನಿಸ್ತಾನದಲ್ಲಿನ ಒಟ್ಟಾರೆ ಬೆಳವಣಿಗೆಗಳ ಕುರಿತು ಭಾರತ ಮತ್ತು ರಷ್ಯಾದ ನಿಲುವು ಒಂದೇ ಆಗಿದೆ. ತಾಲಿಬಾನಿ ಸರ್ಕಾರಕ್ಕೆ ಮಾನ್ಯತೆ ನೀಡುವ ರಷ್ಯಾದ ನಿರ್ಧಾರವು ಅವರ ಕಾರ್ಯಗಳನ್ನು ಅವಲಂಬಿಸಿರಲಿದೆ. ಅಷ್ಘಾನಿಸ್ತಾನಕ್ಕೆ ಭದ್ರತೆ, ಸ್ಥಿರತೆ ಮತ್ತು ನಿರೀಕ್ಷಿಸಬಹುದಾದ ಆಡಳಿತ ನೀಡುವ ಸಮಗ್ರ ಸರ್ಕಾರ ರಚನೆಯನ್ನು ನಾವು ಬಯಸುತ್ತೇವೆ’ ಎಂದು ಹೇಳಿದ್ದಾರೆ.

ಇದೇ ವೇಳೆ ‘ಅಷ್ಘಾನಿಸ್ತಾನದಲ್ಲಿನ ಬೆಳವಣಿಗೆಗಳ ಬಗ್ಗೆ ಭಾರತ ಮತ್ತು ರಷ್ಯಾ ಎರಡೂ ಕಳವಳ ಹೊಂದಿವೆ. ಈ ವಲಯದ ಯಾವುದೇ ದೇಶಗಳಿಗೂ ಉಗ್ರವಾದ ಹಬ್ಬುವ ನೆಲವಾಗಿ ಅಷ್ಘಾನಿಸ್ತಾನ ಹೊರಹೊಮ್ಮಬಾರದು ಎಂದು ನಾವು ಬಯಸುತ್ತೇವೆ. ಆದರೂ ಅಷ್ಘಾನಿಸ್ತಾನದಲ್ಲಿ ಉದ್ಭವವಾಗುವ ಯಾವುದೇ ಆಂತರಿಕ ಸಂಘರ್ಷ ಪ್ರಾದೇಶಿಕ ಭದ್ರತೆಗೆ ಅಪಾಯಕಾರಿಯಾಗಿ ಹೊರಹೊಮ್ಮಲಿದೆ. ಜೊತೆಗೆ ಭಯೋತ್ಪಾದನೆ ಅಪಾಯ ರಷ್ಯಾದ ಪ್ರದೇಶಗಳು ಮತ್ತು ಭಾರತದ ಕಾಶ್ಮೀರಕ್ಕೆ ಹಬ್ಬುವ ಅಪಾಯ ಇದ್ದೇ ಇದೆ. ಇದು ಎರಡೂ ದೇಶಗಳಿಗೂ ಸಮಾನ ಆತಂಕದ ವಿಷಯ’ ಎಂದು ನಿಕೋಲೆ ಹೇಳಿದ್ದಾರೆ.

ಅಷ್ಘಾನಿಸ್ತಾನ ವಿಷಯ ಕುರಿತು ಭಾರತದೊಂದಿಗೆ ಚರ್ಚಿಸಲು ರಷ್ಯಾದ ಭದ್ರತಾ ಮಂಡಳಿ ಕಾರ್ಯದರ್ಶಿ ಜ.ನಿಕೋಲೆ ಪಟ್ರುಶೇವ್‌ ಅವರು ಮಂಗಳವಾರದಿಂದ 2 ದಿನಗಳ ಭೇಟಿಗಾಗಿ ಆಗಮಿಸಿರುವ ಹೊತ್ತಿನಲ್ಲೇ ಭಾರತದಲ್ಲಿನ ರಷ್ಯಾ ರಾಯಭಾರಿ ನೀಡಿರುವ ಹೇಳಿಕೆ ಸಾಕಷ್ಟುಮಹತ್ವ ಪಡೆದುಕೊಂಡಿದೆ.

click me!