Russia Ukraine War: ರಷ್ಯಾಕ್ಕೆ ದೊಡ್ಡ ಇರುಸುಮುರುಸು... ಪೋಲೆಂಡ್‌ ಗಡಿಯಿಂದ ದಾಳಿ

By Kannadaprabha NewsFirst Published Mar 19, 2022, 3:47 AM IST
Highlights

* ಮತ್ತೆ ಪೋಲೆಂಡ್‌ ಗಡಿಯಲ್ಲಿ ರಷ್ಯಾ ದಾಳಿ

*  ಲ್ವೀವ್‌ ವಿಮಾನನಿಲ್ದಾಣದ ಬಳಿಯೇ ರಷ್ಯಾ ಬಾಂಬ್‌ ದಾಳಿ

*  ರಷ್ಯಾ ದಾಳಿಗೆ ನಿಲ್ದಾಣದ ವಿಮಾನ ರಿಪೇರಿ ಘಟಕ ನಾಶ

* ಕೀವ್‌, ಖಾರ್ಕೀವ್‌, ಲ್ವೀವ್‌, ಮಾರಿಯುಪೋಲ್‌ ನಗರಗಳಿಗೂ ಕ್ಷಿಪಣಿ

ಕೀವ್‌ (ಮಾ. 19)  ಸತತ ಮೂರು ವಾರಗಳಿಂದ ದಾಳಿ ನಡೆಸುತ್ತಿದ್ದರೂ ಉಕ್ರೇನ್‌ (Ukraine)ರಾಜಧಾನಿ ಕೀವ್‌ ನಗರವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ ಇರುಸುಮುರುಸಿಗೆ ಒಳಗಾಗಿರುವ ರಷ್ಯಾ(Russia) ಹೇಗಾದರೂ ಮಾಡಿ ಉಕ್ರೇನ್‌ನ ಪ್ರತಿರೋಧವನ್ನು ಸಂಪೂರ್ಣವಾಗಿ ತಡೆಯುವ ದೃಷ್ಟಿಯಿಂದ ಯುದ್ಧದ 23ನೇ ದಿನವಾದ ಶುಕ್ರವಾರ ಭಾರಿ ದಾಳಿ ನಡೆಸಿದೆ.

ಪ್ರಮುಖವಾಗಿ ಪೋಲೆಂಡ್‌ (Poland) ಗಡಿಯಿಂದ 40 ಮೈಲಿ ದೂರದಲ್ಲಿರುವ ಲ್ವೀವ್‌ ನಗರದ ವಿಮಾನ ನಿಲ್ದಾಣದ ಭಾಗಗಳಲ್ಲಿ ರಷ್ಯಾ, ಕಪ್ಪು ಸಮುದ್ರದಿಂದಲೇ ಕ್ಷಿಪಣಿ ದಾಳಿ ನಡೆಸಿದೆ. ಈ ವೇಳೆ ವಿಮಾನ ನಿಲ್ದಾಣದ ಮಿಲಿಟರಿ ವಿಮಾನ ರಿಪೇರಿ ಘಟಕ ಹಾಗೂ ಬಸ್‌ ರಿಪೇರಿ ಘಟಕ ಹಾನಿಗೊಳಗಾಗಿವೆ. ದಾಳಿಯಿಂದ ತಪ್ಪಿಸಿಕೊಳ್ಳಲು ಜನರು ಆಸ್ಪತ್ರೆ, ಶಾಲೆ ಮತ್ತು ಕಟ್ಟಡಗಳಲ್ಲಿ ಅಡಗಿಕೊಂಡಿದ್ದಾರೆ.

Latest Videos

Russia Ukraine war: ತಾನೇ ಮಾಡಿಕೊಂಡ ಎಡವಟ್ಟು...ಪುಟಿನ್‌ಗೆ ಸೌಂದರ್ಯವರ್ಧಕ ಸಿಗುತ್ತಿಲ್ಲ!

ಇದೇ ವೇಳೆ, ಉಕ್ರೇನ್‌ ರಾಜಧಾನಿ ಕೀವ್‌, ಕೀವ್‌ ಹೊರವಲಯದ ಪ್ರದೇಶಗಳು, ಲ್ವೀವ್‌ನ ವಿಮಾನ ನಿಲ್ದಾಣ, ಖಾರ್ಕೀವ್‌, ಮರಿಯುಪೋಲ್‌ ಮುಂತಾದ ಪ್ರಮುಖ ನಗರಗಳ ಮೇಲೆ ಬಾಂಬ್‌ ಮತ್ತು ಶೆಲ್‌ ದಾಳಿ ನಡೆಸಿದೆ. ಇದರಿಂದಾಗಿ ಹಲವು ಕಟ್ಟಡಗಳು ನಾಶಗೊಂಡಿವೆ. ಇದಕ್ಕೆ ಪ್ರತಿಯಾಗಿ ರಷ್ಯಾದ 6 ಕ್ಷಿಪಣಿಗಳನ್ನು ನಾಶ ಮಾಡಿದ್ದಾಗಿ ಉಕ್ರೇನ್‌ ಸಹ ಹೇಳಿದೆ. ಖಾರ್ಕೀವ್‌ ನಗರದಲ್ಲಿ ದಾಳಿಗೆ 21 ಜನರು ಮೃತಪಟ್ಟಿದ್ದಾರೆ.

ಹಲವು ನಗರಗಳಲ್ಲಿ ಈಗಾಗಲೇ ನೀರಿನ ಸಂಪರ್ಕ ಸ್ಥಗಿತಗೊಂಡಿದೆ. 6ಕ್ಕೂ ಹೆಚ್ಚು ನಗರಗಳಿಗೆ ವಿದ್ಯುತ್‌ ಪೂರೈಕೆ ತಪ್ಪಿಹೋಗಿದೆ. ರಷ್ಯಾ ಈವರೆಗೆ ಆಸ್ಪತ್ರೆಗಳ ಮೇಲೆ 43 ದಾಳಿಗಳನ್ನು ಮಾಡಿದೆ. ಇದರಲ್ಲಿ 12 ಜನರು ಸಾವಿಗೀಡಾಗಿ 34 ಜನರು ಗಾಯಗೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

 ಸುರಕ್ಷಿತ ಸ್ಥಳಾಂತರದ 9 ಕಾರಿಡಾರ್‌ಗೆ ರಷ್ಯಾ​-ಉಕ್ರೇನ್‌ ಒಪ್ಪಿಗೆ: ಕೀವ್‌: ಯುದ್ಧದಲ್ಲಿ ಸಿಲುಕಿದ್ದ ಸಂತ್ರಸ್ತರ ಸುರಕ್ಷಿತ ಸ್ಥಳಾಂತರಕ್ಕೆ ರಷ್ಯಾ ಹಾಗೂ ಉಕ್ರೇನ್‌ ಶುಕ್ರವಾರ 9 ಮಾನವೀಯ ಕಾರಿಡಾರ್‌ಗಳನ್ನು ರಚಿಸಿದ್ದವು. ಇದು ಸ್ಥಳಾಂತರಕ್ಕೆ ನೆರವಾಯಿತು.

ಮಾರಿಯುಪೋಲ್‌, ಸುಮಿ, ಟೋಸ್ಟ್ರ್ಯಾನೆಟ್ಸ್‌, ಲೆಬೆಡಿನ್‌, ಕೊನೊಟಾಪ್‌, ಕ್ರಾಸ್ನೋಪಿಲ್ಯ, ವೆಲಿಕಾ, ಪೈಸಾರಿವ್ಕಾಗಳ ಮೂಲಕ ಜನರಿಗೆ ಮಾನವೀಯ ನೆರವು ನೀಡಲು ಉಭಯ ದೇಶಗಳು ಸಮ್ಮತಿಸಿದವು. ಗೊತ್ತುಪಡಿಸಿದ 9 ಕಾರಿಡಾರ್‌ಗಳ ಪೈಕಿ 8 ಕಾರಿಡಾರ್‌ಗಳು ಶುಕ್ರವಾರ ಮಾನವೀಯ ನೆರವುಗಳ ಸಹಾಯಕ್ಕಾಗಿ ತಮ್ಮ ಕೆಲಸವನ್ನು ಮಾಡಿದವು.

ಈ ನಡುವೆ ಗುರುವಾರ ಮಾನವೀಯ ಕಾರಿಡಾರ್‌ ಮೂಲಕ 3,810 ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಹಾಗೂ ಸುಮಾರು 40 ಟನ್‌ಗಳಷ್ಟುಆಹಾರ ಮತ್ತು ಔಷಧಿಗಳನ್ನು ಪೂರೈಸಲಾಗಿದೆ ಎಂದು ತಿಳಿಸಲಾಗಿದೆ.

ಭಾರತದ ಇಂಧನ ಅಗತ್ಯ ಪೂರೈಕೆಗೆ ಇರಾನ್‌ ಸಿದ್ಧ:   ಒಪೆಕ್‌ ಸದಸ್ಯ ರಾಷ್ಟ್ರವಾದ ಇರಾನಿನ ತೈಲ ರಫ್ತಿನ ಮೇಲೆ ವಿಧಿಸಿದ ನಿರ್ಬಂಧವನ್ನು ತೆಗೆದುಹಾಕುವ ಕುರಿತು ವಿಶ್ವ ಶಕ್ತಿಗಳು ಮತ್ತು ಇರಾನ್‌ ನಡುವೆ ಮಾತುಕತೆಗಳು ಮುಂದುವರಿದಿರುವಾಗಲೇ, ಭಾರತದ ಇಂಧನ ಅಗತ್ಯವನ್ನು ಪೂರೈಸಲು ಇರಾನ್‌ ಸಿದ್ಧವಿದೆ ಎಂದು ಇರಾನಿನ ಭಾರತದ ರಾಯಭಾರಿ ಅಲಿ ಚೆಗೇನಿ ಶುಕ್ರವಾರ ತಿಳಿಸಿದ್ದಾರೆ. ಅಲ್ಲದೆ, ಮಧ್ಯವರ್ತಿಗಳಿಲ್ಲದ ನೇರ ವ್ಯವಹಾರದ ಆಫರ್‌ ನೀಡಿದ್ದಾರೆ.

‘ರುಪಾಯಿ-ರಿಯಾಲ… ನಡುವಣ ವ್ಯಾಪಾರ ಕಾರ್ಯವಿಧಾನವು ಎರಡೂ ದೇಶಗಳ ಕಂಪನಿಗಳು ಪರಸ್ಪರ ನೇರವಾಗಿ ವ್ಯವಹರಿಸಲು ಮತ್ತು ಮೂರನೇ ವ್ಯಕ್ತಿಯಗಳಿಂದಾಗುವ ಮಧ್ಯವರ್ತಿ ವೆಚ್ಚಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ’ ಎಂದು ಹೇಳಿದ್ದಾರೆ.

ಇರಾನ್‌, ಭಾರತದ ಎರಡನೇ ಅತಿದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿತ್ತು. ಆದರೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ… ಟ್ರಂಪ್‌ ಇರಾನ್‌ನೊಂದಿಗಿನ ಪರಮಾಣು ಒಪ್ಪಂದದಿಂದ ಹಿಂದೆ ಸರಿದು, ಅದರ ತೈಲ ರಫ್ತಿನ ಮೇಲೆ ನಿರ್ಬಂಧ ವಿಧಿಸಿದ ಹೇರಿಸಿದ ನಂತರ ಭಾರತ ಟೆಹ್ರಾನ್‌ನಿಂದ ಆಮದು ನಿಲ್ಲಿಸಿದೆ. ವಿಶ್ವದ ಮೂರನೇ ಅತಿ ದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕ ರಾಷ್ಟ್ರವಾಗಿರುವ ಭಾರತ ಶೇ.80ರಷ್ಟುಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತದೆ.

 

click me!