
ಪೊಲೆಂಡ್/ಬುಚಾರೆಸ್ಟ್: ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಸಮರ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ಲಕ್ಷಾಂತರ ಜನರು ಆಶ್ರಯಕ್ಕಾಗಿ ನೆರೆಯ ದೇಶಗಳಿಗೆ ತೆರಳುತ್ತಿದ್ದಾರೆ. ಆದಷ್ಟು ಬೇಗ ಉಕ್ರೇನ್ ನಿಂದ ತಪ್ಪಿಸಿಕೊಂಡು ಹೋಗಬೇಕು ಎನ್ನುವ ಆಸೆಯಲ್ಲಿರುವ ವ್ಯಕ್ತಿಗಳು, ಪಕ್ಕದ ದೇಶಗಳಿಗೆ ಕಾಲ್ನಡಿಗೆಯಲ್ಲಿಯೇ ಹೋಗುತ್ತಿದ್ದಾರೆ. ಇದರ ನಡುವೆ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರು ಹಾಗೂ ಭಾರತೀಯ ವಿದ್ಯಾರ್ಥಿಗಳನ್ನು ವಾಪಸ್ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ "ಆಪರೇಷನ್ ಗಂಗಾ" (operation Ganga) ಜಾರಿ ಮಾಡಿದ್ದು, ಈಗಾಗಲೇ ಯುದ್ಧಪೀಡಿತ ಪ್ರದೇಶದಿಂದ ಹಲವು ವಿಮಾನಗಳಲ್ಲಿ ಭಾರತೀಯರನ್ನು ಕರೆತರಲಾಗಿದೆ.
ಇನ್ನೊಂದೆಡೆ, ಗಡಿ ದೇಶಗಳಿಗೆ ಸಮೀಪದಲ್ಲಿರುವ ಭಾರತೀಯ ವಿದ್ಯಾರ್ಥಿಗಳು (Indian students), ಉಕ್ರೇನ್ ನ ದೇಶದ ಸನಿಹದಲ್ಲಿರುವ ದೇಶಗಳಿಗೆ ತೆರಳಬಹುದು. ಅಲ್ಲಿಂದ ಭಾರತಕ್ಕೆ ವಿಮಾನ ವ್ಯವಸ್ಥೆ ಇರಲಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಈ ನಿಟ್ಟಿನಲ್ಲಿ ಮಾತನಾಡಿರುವ ಭಾರತದಲ್ಲಿರುವ ಪೋಲೆಂಡ್ ರಾಯಭಾರಿ (Ambassador of Poland to India) ಆಡಮ್ ಬುರಾಕೋವ್ಸ್ಕಿ (Adam Burakowski). ಭಾರತೀಯ ವಿದ್ಯಾರ್ಥಿಗಳು ಪೋಲೆಂಡ್ ಗೆ ತೆರಳಲು ಯಾವುದೇ ವೀಸಾ ಬೇಕಿಲ್ಲ ಎಂದು ಹೇಳಿದೆ.
"ಉಕ್ರೇನ್ನಲ್ಲಿ ರಷ್ಯಾದ ಆಕ್ರಮಣದಿಂದ ಪಾರಾಗುವ ಎಲ್ಲಾ ಭಾರತೀಯ ವಿದ್ಯಾರ್ಥಿಗಳಿಗೆ ಯಾವುದೇ ವೀಸಾ ಇಲ್ಲದೆ ಪ್ರವೇಶಿಸಲು ಪೋಲೆಂಡ್ ಅನುಮತಿ ನೀಡಿದೆ' ಎಂದು ಬುರಾಕೋವ್ಸ್ಕಿ ಟ್ವೀಟ್ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ಭಾರತೀಯ ವಿದ್ಯಾರ್ಥಿಗಳು ಪೋಲೆಂಡ್ ಗೆ ತೆರಳಿದ್ದು, ಅಲ್ಲಿಂದ ಭಾರತಕ್ಕೆ ಬರುವ ಮಾರ್ಗವನ್ನು ಹುಡುಕುತ್ತಿದ್ದಾರೆ. ಈ ನಡುವೆ ಪೋಲೆಂಡ್ ಸರ್ಕಾರದ ಈ ನಿಯಮ ಭಾರತೀಯ ವಿದ್ಯಾರ್ಥಿಗಳನ್ನು ಇನ್ನಷ್ಟು ನಿರಾಳ ಮಾಡಿದೆ.
ಲಕ್ಷಾಂತರ ಉಕ್ರೇನಿಗರ ವಲಸೆ ಆರಂಭ :ರಷ್ಯಾ ದಾಳಿಯಿಂದ ತತ್ತರಗೊಂಡಿರುವ ಉಕ್ರೇನ್ನ ಸುಮಾರು 1 ಲಕ್ಷ ಪ್ರಜೆಗಳು ಪ್ರಾಣ ಉಳಿದರೆ ಸಾಕು ಎಂಬಂತೆ ತಮ್ಮ ಮನೆ-ಮಠ, ಆಸ್ತಿಪಾಸ್ತಿಗಳನ್ನು ಬಿಟ್ಟು ನೆರೆಯ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಉಕ್ರೇನ್ ಪೂರ್ವ ಭಾಗದಲ್ಲಿ ರಷ್ಯಾ ಯುದ್ಧ ಸಾರಿದ್ದು, ಈ ಭಾಗದಲ್ಲಿರುವ ಬಂಡುಕೋರರಿಗೆ ರಷ್ಯಾ ಮುಕ್ತ ಆಹ್ವಾನವೇ ನೀಡಿದೆ. ಇದರ ಹೊರತಾಗಿ, ಪಶ್ಚಿಮ ಮತ್ತು ದಕ್ಷಿಣದ ಗಡಿ ಭಾಗಗಳಿಂದ ಸಾವಿರಾರು ಜನ ಆತಂಕದಿಂದ ಹಂಗೇರಿ, ಪಶ್ಚಿಮ ಯುರೋಪ್ ಸೇರಿದಂತೆ ಇನ್ನಿತರ ದೇಶಗಳಿಗೆ ಪಲಾಯನ ಮಾಡುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಯುದ್ಧದ ಪರಿಣಾಮ ಉಕ್ರೇನ್ ಪ್ರಜೆಗಳ ಪರಿಸ್ಥಿತಿ ಭೀಕರವಾಗಿದ್ದು, ಸುರಕ್ಷಿತ ತಾಣಗಳಿಗೆ ಅವರು ತಲುಪುವಂತೆ ನೆರವಾಗಲು ನೆರೆ-ಹೊರೆಯ ದೇಶಗಳು ಗಡಿಗಳನ್ನು ಮುಕ್ತವಾಗಿಡಬೇಕು ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ಹೇಳಿದೆ. ಸಾವಿರಾರು ಜನರು ತಮ್ಮ ಕಾರುಗಳಲ್ಲಿ ಹಂಗೇರಿಯತ್ತ ಹೊರಟಿದ್ದು, ಉಕ್ರೇನ್ನ ಪಶ್ಚಿಮ ಭಾಗದಲ್ಲಿ 2 ಕಿ.ಮೀ.ಗಿಂತಲೂ ಹೆಚ್ಚು ಉದ್ದ ಕಾರುಗಳ ದಟ್ಟಣೆ ಸಂಭವಿಸಿತ್ತು. ಹೀಗಾಗಿ ಗಡಿ ದಾಟಲು ಜನರು ಸುಮಾರು 6 ಗಂಟೆಗಳ ಕಾಲ ಕಾಯುವ ಅನಿವಾರ್ಯತೆ ಎದುರಾಗಿತ್ತು.
Russia Ukraine Crisis: ಉಕ್ರೇನ್ ನ ಗಲ್ಲಿಗಲ್ಲಿಗಳ ಸೈನಿಕರ ಹೆಣ, ಸೇನಾ ವಾಹನಗಳು ಜಖಂ
ಉಕ್ರೇನ್ನ ಸುಸೇವಾ ಬಾರ್ಡರ್ನಲ್ಲಿ 4,000 ಭಾರತೀಯ ವಿದ್ಯಾರ್ಥಿಗಳು: ಸರಿಸುಮಾರು 4,000 ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ನ ಸುಸೇವಾ ಗಡಿಯಲ್ಲಿ ಸ್ಥಳಾಂತರಗೊಳ್ಳುವ ಭರವಸೆಯೊಂದಿಗೆ ಜಮಾವಣೆಯಾಗಿದ್ದಾರೆ. ಆದರೆ, ಸರ್ಕಾರದಿಂದ ಈವರೆಗೂ ಯಾವುದೇ ವ್ಯವಸ್ಥೆಯಾಗಿಲ್ಲ ಎಂದು ದೂರಿದ್ದಾರೆ ಈ ವಿದ್ಯಾರ್ಥಿಗಳು ವಿನ್ನಿತ್ಯದಿಂದ ಸ್ವಂತ ಖರ್ಚಿನಲ್ಲಿ ಬಸ್ ಮೂಲಕ ಬಂದಿದ್ದಾರೆ. ಗಡಿಯಿಂದ 12 ಅಥವಾ 13 ಕಿಲೋಮೀಟರ್ ದೂರದಲ್ಲಿ ಅವರನ್ನು ಕೆಳಗಿಳಿಸಲಾಗಿದ್ದು, ಇಷ್ಟು ದೂರದವರೆಗೆ ತಮ್ಮ ಲಗೇಜ್ ಗಳನ್ನು ಹಿಡಿದುಕೊಂಡು ಕಾಲ್ನಡಿಗೆಯಲ್ಲಿ ಗಡಿಗೆ ಬಂದಿದ್ದಾರೆ ಎಂದು ವರದಿಗಳು ತಿಳಿಸಿವೆ.
Russia-Ukraine Crisis: ಉಕ್ರೇನ್ ತೈಲ ಘಟಕಗಳ ಮೇಲೆ ರಷ್ಯಾ ದಾಳಿ, ಬಾಂಬ್ ದಾಳಿಗೆ 6 ಮಂದಿ ಸಾವು
ಭಾರತೀಯ ವಿದ್ಯಾರ್ಥಿಗಳನ್ನು ಸರ್ಕಾರದ ವೆಚ್ಚದಲ್ಲಿ ವಾಪಸ್ ಕರೆತರಲಾಗುವುದು: ಉಕ್ರೇನ್ನಲ್ಲಿ ಸಿಲುಕಿರುವ ಎಲ್ಲ ಭಾರತೀಯರನ್ನು ಸರ್ಕಾರದ ವೆಚ್ಚದಲ್ಲಿ ದೇಶಕ್ಕೆ ಕರೆತರಲಾಗುವುದು. ಈ ಉದ್ದೇಶಕ್ಕಾಗಿ ಅವರ ಅನುಮತಿಯೊಂದಿಗೆ ಉಕ್ರೇನ್ನ ನೆರೆಯ ದೇಶಗಳಿಗೆ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ