
ಬ್ರಿಟನ್ನ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ದೆಹಲಿಯ ಟ್ರಾಫಿಕ್ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ. ಇಲ್ಲಿನ ಬ್ರಿಟಿಷ್ ಹೈ ಕಮಿಷನ್ನಲ್ಲಿ ನಡೆದ ಕಾರ್ಯಕ್ರಮಕ್ಕೆ ಅವರು ಸ್ವಲ್ಪ ತಡವಾಗಿ ಬಂದರು. ಅದಕ್ಕೆ ಕ್ಷಮೆ ಕೇಳುತ್ತಾ, 'ನಾವು ಸ್ವಲ್ಪ ಲೇಟಾಗಿ ಬಂದಿದ್ದಕ್ಕೆ ಕ್ಷಮಿಸಿ, ಇದಕ್ಕೆ ಪೂರ್ತಿ ನಾನೇ ಕಾರಣ. AI ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ, ಅದಿನ್ನೂ ದೆಹಲಿಯ ಟ್ರಾಫಿಕ್ ಸಮಸ್ಯೆಯನ್ನು ಸರಿಪಡಿಸಿಲ್ಲ. ಹಾಗಾಗಿ ಇನ್ನೂ ಸಾಕಷ್ಟು ಕೆಲಸ ಬಾಕಿ ಇದೆ' ಎಂದು ನಕ್ಕರು.
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ರಿಷಿ ಸುನಕ್ ಹಾಡಿ ಹೊಗಳಿದರು. ಭಾರತ ಈಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕ್ಷೇತ್ರದಲ್ಲಿ 'ಸೂಪರ್ಪವರ್' ಆಗಿ ಹೊರಹೊಮ್ಮಿದೆ' ಎಂದು ಅವರು ಹೇಳಿದರು. ಈ ವಾರ ನಡೆದ ಕಾರ್ಯಕ್ರಮಗಳು ಪ್ರಧಾನಿ ಮೋದಿಯವರ ನಾಯಕತ್ವವನ್ನು ಮಾತ್ರವಲ್ಲ, ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಮತ್ತು ಬಳಸಲು ನಿಮ್ಮಲ್ಲಿರುವ ಉತ್ಸಾಹವನ್ನು ತೋರಿಸಿದೆ. ಇದು ಜಗತ್ತಿನ ಬೇರೆಲ್ಲೂ ಕಾಣಸಿಗದು. ಇದೇ ಕಾರಣಕ್ಕೆ, ಸ್ಟ್ಯಾನ್ಫೋರ್ಡ್ ವಿಶ್ವ ಶ್ರೇಯಾಂಕದ ಪ್ರಕಾರ, ಭಾರತವು AI ಸೂಪರ್ಪವರ್ಗಳ ಪಟ್ಟಿಯಲ್ಲಿ ಪದಕ ಗೆಲ್ಲುವ ಸ್ಥಾನಕ್ಕೆ ಏರಿದೆ. ಇದು ನಿಮ್ಮೆಲ್ಲರಿಗೂ ಹೆಮ್ಮೆಯ ವಿಷಯ" ಎಂದು ಸುನಕ್ ತಿಳಿಸಿದರು.
ತಮ್ಮ ತಮಾಷೆಯ ಮಾತುಗಳನ್ನು ಮುಂದುವರಿಸಿದ ಸುನಕ್, 'AI ರೇಸ್ನಲ್ಲಿ ಭಾರತವು ಬ್ರಿಟನ್ ಅನ್ನು ಹಿಂದಿಕ್ಕಿರುವುದು ಸ್ವಲ್ಪ ನಿರಾಸೆ ತಂದಿದೆ. ಆದರೆ, ನಾನು ಪ್ರಧಾನಿ ಮೋದಿಯವರಿಗೆ ಈಗಷ್ಟೇ ಹೇಳಿದೆ, ಐಸಿಸಿ ಟೆಸ್ಟ್ ರ್ಯಾಂಕಿಂಗ್ಸ್ ನೋಡಿದರೆ ಇಂಗ್ಲೆಂಡ್ ಇನ್ನೂ ಮುಂದಿದೆ. ಬಹುಶಃ ಇದು ಅದಕ್ಕಿಂತ ಹೆಚ್ಚು ಮುಖ್ಯ" ಎಂದು ನಗುತ್ತಾ ಹೇಳಿದರು.
ಕಾರ್ಯಕ್ರಮದಲ್ಲಿ, ಬ್ರಿಟನ್ ಉಪ ಪ್ರಧಾನಿ ಡೇವಿಡ್ ಲ್ಯಾಮಿ ಅವರು ಸುನಕ್ ಅವರನ್ನು 'ಬ್ರಿಟನ್ನ ಮಹಾನ್ ಪುತ್ರ ಹಾಗೂ ಭಾರತದ ಮಹಾನ್ ಪುತ್ರ' ಎಂದು ಪರಿಚಯಿಸಿದರು. ತಕ್ಷಣವೇ ಮಧ್ಯಪ್ರವೇಶಿಸಿದ ಸುನಕ್, 'ಭಾರತದ ಅಳಿಯ' ಎಂದು ಹೇಳುತ್ತಿದ್ದಂತೆ ಸಭೆಯಲ್ಲಿ ನಗು ಮೊಳಗಿತು. ಲ್ಯಾಮಿ ಕೂಡ 'ಹೌದು, ಭಾರತದ ಅಳಿಯ!' ಎಂದು ಒಪ್ಪಿಕೊಂಡರು. ನಂತರ ಲ್ಯಾಮಿ, 'ನನಗೂ ಭಾರತದ ನಂಟಿದೆ. ನನ್ನ ಮುತ್ತಜ್ಜಿ ಕಲ್ಕತ್ತಾದವರು' ಎಂದು ತಮ್ಮ ನಂಟನ್ನು ಬಿಚ್ಚಿಟ್ಟರು.
ಜಾಗತಿಕ AI ನಾಯಕತ್ವದತ್ತ ಗಮನ
ನಂತರ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಷಯಕ್ಕೆ ಬಂದ ಲ್ಯಾಮಿ, ಬ್ಲೆಚ್ಲಿ ಪಾರ್ಕ್ನಲ್ಲಿ ಮೊದಲ ಜಾಗತಿಕ AI ಶೃಂಗಸಭೆಯನ್ನು ಆಯೋಜಿಸಿದ್ದ ಸುನಕ್ ಅವರ ನಿರ್ಧಾರವನ್ನು ಪ್ರಸ್ತಾಪಿಸಿದರು. "ಈ ವಿಷಯ ಜಗತ್ತಿಗೆ ಮುಖ್ಯ ಎಂದು ಸಾರಲು ನಿಮ್ಮ ವೇದಿಕೆಯನ್ನು ಬಳಸಿಕೊಳ್ಳಲು ಏಕೆ ನಿರ್ಧರಿಸಿದಿರಿ? ಮತ್ತು ಆ ಪ್ರಯತ್ನ ಈಗ ಹೇಗೆ ಸಾಗುತ್ತಿದೆ ಎಂದು ನೀವು ಭಾವಿಸುತ್ತೀರಿ?" ಎಂದು ಲ್ಯಾಮಿ ಪ್ರಶ್ನಿಸಿದರು.
ದೆಹಲಿಯಲ್ಲಿ ನಡೆಯುತ್ತಿರುವ AI ಶೃಂಗಸಭೆಯ ಹಿನ್ನೆಲೆಯಲ್ಲಿ ಈ ಮಾತುಗಳು ಬಂದಿವೆ. ಈ ಶೃಂಗಸಭೆಯಲ್ಲಿ ಮಾತನಾಡಿದ್ದ ಸುನಕ್, AI ಭವಿಷ್ಯವನ್ನು ರೂಪಿಸಲು ದೆಹಲಿ ಒಂದು ಸೂಕ್ತ ಸ್ಥಳ ಎಂದು ಹೇಳಿದ್ದರು. "ಈ ತಂತ್ರಜ್ಞಾನದ ಬಗ್ಗೆ ಚರ್ಚಿಸಲು ನಮಗೆಲ್ಲರಿಗೂ ಒಂದು ವೇದಿಕೆ ಬೇಕು. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಈ ಶೃಂಗಸಭೆ ಆ ಅವಕಾಶವನ್ನು ಒದಗಿಸಿದೆ. ಈ ಶೃಂಗಸಭೆಯು ಕೇವಲ ಅಭಿವೃದ್ಧಿ ಹೊಂದಿದ ದೇಶಗಳಿಗೆ ಮಾತ್ರವಲ್ಲ, ಅಭಿವೃದ್ಧಿಶೀಲ ರಾಷ್ಟ್ರಗಳಿಗೂ AI ಹೇಗೆ ಸಹಾಯ ಮಾಡಬಲ್ಲದು ಎಂಬುದನ್ನು ತೋರಿಸಲಿದೆ" ಎಂದು ಸುನಕ್ ಅಭಿಪ್ರಾಯಪಟ್ಟರು. (ANI)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ