
ಲಂಡನ್: ಲೈಂ*ಗಿಕ ಹಗರಣದ ಕುಖ್ಯಾತಿಯ ಅಮೆರಿಕ ಉದ್ಯಮಿ ಜೆಫ್ರಿ ಎಪ್ಸ್ಟೀನ್ಗೆ ವ್ಯಾಪಾರದ ರಹಸ್ಯ ಮಾಹಿತಿ ನೀಡಿದ ಗಂಭೀರ ಆರೋಪದಡಿ, ಬ್ರಿಟನ್ ರಾಜ ಚಾರ್ಲ್ಸ್ III ಅವರ ಕಿರಿಸಹೋದರ ಆ್ಯಂಡ್ರ್ಯೂ ಮೌಂಟ್ಬ್ಯಾಟನ್ ವಿಂಡ್ಸರ್ (66) ಅವರನ್ನು ಥೇಮ್ಸ್ ವ್ಯಾಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಜನ್ಮದಿನದಂದೇ ಮಾಜಿ ಯುವರಾಜನನ್ನು ಬಂಧಿಸಲಾಗಿದೆ. ಬ್ರಿಟನ್ನಲ್ಲಿ ಭಾರೀ ಗೌರವ ಹೊಂದಿರುವ ರಾಜಮನೆತನಕ್ಕೆ ಸೇರಿದ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧನಕ್ಕೆ ಒಳಪಡಿಸಿದ್ದು ಇದೇ ಮೊದಲು. ಹೀಗಾಗಿ ರಾಜಮನೆತನಕ್ಕೆ ಇರಿಸುಮುರುಸು ಉಂಟಾಗಿದೆ.ಎಪ್ಸ್ಟೀನ್ ಒಡೆತನದ ದ್ವೀಪಗಳಿಗೆ ತೆರಳಿ ಅಲ್ಲಿ ಅಪ್ರಾಪ್ತರು ಸೇರಿದಂತೆ ಹಲವು ಮಹಿಳೆಯರೊಂದಿಗೆ ಆ್ಯಂಡ್ರ್ಯೂ ಲೈಂ*ಗಿಕ ಸಂಬಂಧ ಹೊಂದಿದ ಬಗ್ಗೆ ಕಳೆದ ಅಕ್ಟೋಬರ್ನಲ್ಲೇ ಸ್ಫೋಟಕ ಮಾಹಿತಿ ಹೊರಬಿದ್ದಿತ್ತು. ಇತ್ತೀಚೆಗೆ ಎಪ್ಸ್ಟೀನ್ ಸಂಬಂಧಿತ ಮತ್ತಷ್ಟು ರಹಸ್ಯ ಮಾಹಿತಿಗಳನ್ನು ಅಮೆರಿಕ ನ್ಯಾಯಾಂಗ ಇಲಾಖೆ ಬಹಿರಂಗಪಡಿಸಿದ್ದು, ಅದರಲ್ಲಿನ ಮಾಹಿತಿ ಅನ್ವಯ ಆ್ಯಂಡ್ರ್ಯೂ ಅವರನ್ನು ಬಂಧಿಸಲಾಗಿದೆ. ಸಹೋದರನ ಬಂಧನದ ಬಗ್ಗೆ ಕಿಂಗ್ ಚಾರ್ಲ್ಸ್ III ಪ್ರತಿಕ್ರಿಯಿಸಿದ್ದು, ‘ಇದು ಕಳವಳಕಾರಿ. ಆದರೆ ಕಾನೂನು ತನ್ನ ಕೆಲಸವನ್ನು ಮಾಡಬೇಕು. ಇದಕ್ಕೆ ನಮ್ಮ ಪೂರ್ಣ ಬೆಂಬಲ ಮತ್ತು ಸಹಕಾರವಿದೆ’ ಎಂದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಲಂಡನ್ ಪೊಲೀಸರು, ‘ಅಧಿಕಾರದಲ್ಲಿದ್ದಾಗ ಅದನ್ನು ದುರ್ಬಳಕೆ ಸಂಬಂಧ ತನಿಖೆ ನಡೆಸುತ್ತಿದ್ದೇವೆ. ಇದರ ಸಮಗ್ರತೆ ಮತ್ತು ವಸ್ತುನಿಷ್ಠತೆಯನ್ನು ರಕ್ಷಿಸುವುದು ಅಗತ್ಯ. ಆದ್ದರಿಂದ ಸೂಕ್ತ ಸಮಯದಲ್ಲಿ ಪ್ರಕರಣದ ಬಗ್ಗೆ ಮಾಹಿತಿ ಒದಗಿಸುತ್ತೇವೆ’ ಎಂದು ಆಂಡ್ರ್ಯೂರ ಹೆಸರು ಉಲ್ಲೇಖಿಸದೆ ಹೇಳಿದ್ದಾರೆ.
ಆ್ಯಂಡ್ರ್ಯೂ ಯಾರು?:
ರಾಣಿ ವಿಕ್ಟೋರಿಯಾ II ಮತ್ತು ಪ್ರಿನ್ಸ್ ಫಿಲಿಪ್ರ 2ನೇ ಪುತ್ರರಾಗಿರುವ ಆ್ಯಂಡ್ರ್ಯೂ, ತಮ್ಮ ತಾಯಿಯ ಮುದ್ದಿನ ಮಗುವಾಗಿದ್ದರು. 22 ವರ್ಷ ಬ್ರಿಟನ್ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ ಇವರು, 2001ರಲ್ಲಿ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆಗಾಗಿ ಬ್ರಿಟನ್ನ ವಿಶೇಷ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದರು.
ಮಾಜಿ ಏಕೆ?:
ಎಪ್ಸ್ಟೀನ್ ಹಗರಣದಲ್ಲಿ ಆ್ಯಂಡ್ರೂ ಹೆಸರು ಕೇಳಿಬಂದ ಬೆನ್ನಲ್ಲೇ ಅವರಿಗೆ ನೀಡಲಾಗಿದ್ದ ರಾಜಕುವರ ಮತ್ತು ಡ್ಯೂಕ್ ಆಫ್ ಯಾರ್ಕ್ ಬಿರುದುಗಳನ್ನು ಹಿಂಪಡೆಯಲಾಗಿತ್ತು.
ಆರೋಪ ಏನು?:
2001-11ರ ಅವಧಿಯಲ್ಲಿ ಆ್ಯಂಡ್ರ್ಯೂ ಬ್ರಿಟನ್ನ ವ್ಯಾಪಾರ ಮತ್ತು ಹೂಡಿಕೆ ವಿಭಾಗದ ವಿಶೇಷ ಪ್ರತಿನಿಧಿಯಾಗಿದ್ದರು. ಈ ನಡುವೆ 2010ರಲ್ಲಿ ಈ ಅವಧಿಯಲ್ಲಿ ಅವರು ಏಷ್ಯಾದ ವಿವಿಧ ದೇಶಗಳಿಗೆ ಭೇಟಿ ನೀಡಿದ್ದರು. ಈ ಭೇಟಿ ಬಳಿಕ ವಿಯೆಟ್ನಾಂ, ಹಾಂಗ್ಕಾಂಗ್, ಶೆನ್ಜೆನ್, ಸಿಂಗಾಪುರ ಮೊದಲಾ ದೇಶಗಳಲ್ಲಿನ ಹೂಡಿಕೆ ಅವಕಾಶದ ಕುರಿತ ವರದಿಯನ್ನು ಎಪ್ಸ್ಟೀನ್ ಜೊತೆ ಹಂಚಿಕೊಂಡಿದ್ದರು. ಇದು ಅಧಿಕಾರದ ದುರುಪಯೋಗವಾದ ಕಾರಣ, ಆ ಆರೋಪದಡಿ ಇದೀಗ ಆ್ಯಂಡ್ರ್ಯೂ ಅವರನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಪ್ರಕರಣ ಬೆಳಕಿಗೆ ಬಂದಾಗ ಪ್ರತಿಕ್ರಿಯಿಸಿದ್ದ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ‘ಕಾನೂನಿನೆದುರು ಎಲ್ಲರೂ ಸಮಾನರು’ ಎನ್ನುವ ಮೂಲಕ ತನಿಖೆಯ ಅಧಿಕಾರವನ್ನು ಪೊಲೀಸರಿಗೆ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ