
ನವದೆಹಲಿ (ಜ.24): ರಷ್ಯಾದ ಇಲ್ಯುಶಿನ್ Il-76 ಮಿಲಿಟರಿ ಸಾರಿಗೆ ವಿಮಾನವು ಬುಧವಾರ ಉಕ್ರೇನಿಯನ್ ಗಡಿಯ ಬಳಿ ಅಪಘಾತಕ್ಕೆ ಈಡಾಗಿದೆ. ಉಕ್ರೇನ್ ಹಾಗೂ ರಷ್ಯಾದ ಯುದ್ಧಕೈದಿಗಳ ವಿನಿಮಯದ ನಿಟ್ಟಿನಲ್ಲಿ ಉಕ್ರೇನ್ ಯುದ್ಧಕೈದಿಗಳನ್ನು ಇದರಲ್ಲಿ ಸಾಗಿಸಲಾಗುತ್ತಿತ್ತು ಎಂದು ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ರಾಜ್ಯ ಸುದ್ದಿ ಸಂಸ್ಥೆ ಆರ್ಐಎ ವರದಿ ಮಾಡಿದೆ. ವಿಮಾನ ಪತನಗೊಂಡ ಕ್ಷಣದಲ್ಲಿ 65 ಉಕ್ರೇನ್ ಯುದ್ಧಕೈದಿಗಳಲ್ಲದೆ, ಅರು ಸಿಬ್ಬಂದಿ ಹಾಗೂ ಇತರ ಮೂವರು ವ್ಯಕ್ತಿಗಳು ಈ ವಿಮಾನದಲ್ಲಿದ್ದರು ಎಂದು ಆರ್ಐಎ ತಿಳಿಸಿದೆ. ಯಾವ ಕಾರಣಕ್ಕೆ ವಿಮಾನ ಪತನಗೊಂಡಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ವಿಮಾನದಲ್ಲಿ ಯಾರೆಲ್ಲಾ ಇದ್ದರು ಎನ್ನುವ ಬಗ್ಗೆ ಮಾಹಿತಿಗಳು ಇನ್ನಷ್ಟೇ ತಿಳಿಯಬೇಕಿದೆ. ರಷ್ಯಾದ ಭದ್ರತಾ ಸೇವೆಗಳಿಗೆ ಲಿಂಕ್ ಆಗಿರುವ ಬಾಝಾ ಟೆಲಿಗ್ರಾಮ್ ಮೆಸೆಂಜರ್ ಅಪ್ಲಿಕೇಶನ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಬೃಹತ್ ವಿಮಾನವೊಂದು ನೆಲಕ್ಕೆ ಬಿದ್ದು ದೊಡ್ಡ ಪ್ರಮಾಣದಲ್ಲಿ ಬೆಂಕಿ ಉಗುಳುತ್ತಾ ಸ್ಫೋಟಗೊಳ್ಳುವ ದೃಶ್ಯ ಬಿತ್ತರವಾಗಿದೆ. Il-76 ಮಿಲಿಟರಿ ಸಾರಿಗೆ ವಿಮಾನವಾಗಿದ್ದು, ಸೇನಾಪಡೆಗಳು, ಶಸ್ತ್ರಾಸ್ತ್ರಗಳು, ಮಿಲಿಟರಿ ಉಪಕರಣಗಳು ಮತ್ತು ಯುದ್ದೋಪಕರಗಳನ್ನು ಏರ್ಲಿಫ್ಟ್ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದು ಐದು ಜನರ ಸಾಮಾನ್ಯ ಸಿಬ್ಬಂದಿಯನ್ನು ಇದು ಹೊಂದಿದ್ದು, ಏಕಕಾಲದಲ್ಲಿ 90 ಪ್ರಯಾಣಿಕರನ್ನು ಸಾಗಿಸಬಹುದಾಗಿದೆ.
ಸ್ಥಳೀಯ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೋವ್ ಅವರು ಪ್ರದೇಶದ ಕೊರೊಚಾನ್ಸ್ಕಿ ಜಿಲ್ಲೆಯಲ್ಲಿ, ಬೆಲ್ಗೊರೊಡ್ ನಗರದ ಈಶಾನ್ಯದಲ್ಲಿ ಅನಿರ್ದಿಷ್ಟ "ಘಟನೆ" ಸಂಭವಿಸಿದೆ ಎಂದು ತಿಳಿಸಿದ್ದು, ಘಟನಾ ಸ್ಥಳಕ್ಕೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ. ನಿಖಾಧಿಕಾರಿಗಳು ಮತ್ತು ತುರ್ತು ಕಾರ್ಯಪಡೆ ಈಗಾಗಲೇ ಸ್ಥಳದಲ್ಲಿದೆ ಎಂದು ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ಸೂಕ್ತವಾಗಿ ಪರಿಶೀಲನೆ ಮಾಡುತ್ತಿರುವುದಾಗಿ ಕ್ರೆಮ್ಲಿನ್ ತಿಳಿಸಿದೆ. ಉಕ್ರೇನ್ ಗಡಿಯಲ್ಲಿರುವ ಬೆಲ್ಗೊರೊಡ್ ಪ್ರದೇಶವು ಇತ್ತೀಚಿನ ದಿನಗಳಲ್ಲಿ ಉಕ್ರೇನ್ನಿಂದ ಆಗಾಗ್ಗೆ ದಾಳಿಗೆ ಒಳಗಾಗುತ್ತಿದೆ. ಡಿಸೆಂಬರ್ನಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ 25 ಮಂದಿ ಸಾವಿಗೀಡಾಗಿದ್ದರು.
ಮಾಸ್ಕೋ ಕಾಲಮಾನದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ Il-76 ಮಿಲಿಟರಿ ಸರಕು ವಿಮಾನ ಬೆಲ್ಗೊರೊಡ್ ಪ್ರದೇಶದಲ್ಲಿ ಅಪಘಾತಕ್ಕೆ ಈಡಾಗಿದೆ. ತನ್ನ ಎಂದಿನ ಹಾರಾಟದಲ್ಲಿ ಈ ವಿಮಾನವಿತ್ತು ಎಂದು ಮಾಸ್ಕೋದ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ ಉಕ್ರೇನ್ ಜೊತೆ ವಿನಿಮಯ ಮಾಡಿಕೊಳ್ಳುವ ಸಲುವಾಗಿ 65 ಉಕ್ರೇನ್ನ ಸೈನಿಕರು ಇದ್ದರು. ಆರು ವಿಮಾನದ ಸಿಬ್ಬಂದಿ ಹಾಗೂ ಮೂರು ಭದ್ರತಾ ಸಿಬ್ಬಂದಿಗಳಿದ್ದರು ಎಂದು ತಿಳಿಸಿದೆ.
ಐಎಂಎಫ್ ಸಾಲದ ಡೀಲ್ಗಾಗಿ ಉಕ್ರೇನ್ಗೆ ಪಾಕ್ ಶಸ್ತ್ರಾಸ್ತ್ರ ಸೇಲ್, 24500 ಕೋಟಿ ಸಾಲ ಪಡೆಯಲು ಅಮೆರಿಕ ಒತ್ತಡ
ಇನ್ನು ಈ ಕುರಿತಾಗಿ ಉಕ್ರೇನ್ ಯಾವುದೇ ರೀತಿಯ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಸ್ಥಳೀಯ ಮಾಧ್ಯಮಗಳು ಉಕ್ರೇನ್ನ ರಕ್ಷಣಾ ಪಡೆಗಳ ಮೂಲವನ್ನು ಉಲ್ಲೇಖಿಸಿ, ತನ್ನ ಸೇನಾ ಪಡೆಗಳೇ ಈ ವಿಮಾನವನ್ನು ಉರುಳಿಸಿದೆ. ಇದು ಕ್ಷಿಪಣಿಗಳನ್ನು ಸಾಗಾಟ ಮಾಡುತ್ತಿತ್ತು ಎಂದು ವರದಿ ಮಾಡಿದೆ.
ಭಾರತದ್ದು ದುರ್ಬಲ ಬುದ್ಧಿ ಎಂದ ಉಕ್ರೇನ್, ವಿವಾದದ ಬಳಿಕ ಸ್ಪಷ್ಟೀಕರಣ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ