ಪ್ರಧಾನಿ ಮೋದಿ ಅವರು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್ಗೆ ಗಡಿ ವಿಚಾರದಲ್ಲಿ ಎಚ್ಚರಿಕೆ ನೀಡಿದ್ದಾರೆ. ಗಡಿಯಲ್ಲಿ ಸ್ಥಿರತೆ ಕಾಪಾಡಲು ಮತ್ತು ಅಕ್ರಮ ನುಸುಳುವಿಕೆ ತಡೆಯಲು ಮೋದಿ ಸೂಚಿಸಿದ್ದಾರೆ.
ನವದೆಹಲಿ: ‘ಉಭಯ ದೇಶಗಳ ನಡುವಿನ ಸಂಬಂಧ ಹದಗೆಡಿಸುವಂತಹ ಹೇಳಿಕೆಗಳನ್ನು ನೀಡಬಾರದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್ ಅವರಿಗೆ ಎಚ್ಚರಿಸಿದ್ದಾರೆ. ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ ಬಿಮ್ಸ್ಟೆಕ್ ಶೃಂಗಸಭೆಯ ವೇಳೆ ಉಭಯ ನಾಯಕರು ಭೇಟಿಯಾಗಿದ್ದಾರೆ. ಈ ವೇಳೆ, ಈಶಾನ್ಯ ರಾಜ್ಯಗಳ ಕುರಿತು ಯೂನುಸ್ ಚೀನಾದಲ್ಲಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ ಮೋದಿ, ‘ಗಡಿಯಲ್ಲಿ ಸ್ಥಿರತೆ ಮತ್ತು ಭದ್ರತೆ ಕಾಯ್ದುಕೊಳ್ಳಲು ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಅಕ್ರಮ ಗಡಿ ನುಸುಳುವಿಕೆ ತಡೆಯಬೇಕು. ಸಂಬಂಧ ಕದಡುವ ಹೇಳಿಕೆಯನ್ನು ನೀಡಬಾರದು’ ಎಂದು ಹೇಳಿದ್ದಾರೆ.
ಮೋದಿ ಹಾಗೂ ಯೂನುಸ್ ನಡುವೆ ಸುಮಾರು 40 ನಿಮಿಷಗಳ ದ್ವಿಪಕ್ಷೀಯ ಮಾತುಕತೆ ನಡೆಯಿತು. ಈ ವೇಳೆ ಪ್ರಧಾನಿ ಮೋದಿ ಅವರು ಬಾಂಗ್ಲಾದಲ್ಲಿ ಹಿಂದೂಗಳು ಮೇಲಿನ ದಾಳಿ ಸೇರಿದಂತೆ ಹಲವು ವಿಚಾರದ ಬಗ್ಗೆ ಚರ್ಚೆ ನಡೆಸಿದರು. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದಾಳಿ ಕುರಿತು ಕಳವಳ ವ್ಯಕ್ತಪಡಿಸಿದ ಮೋದಿ, ಆ ಕುರಿತು ತನಿಖೆ ನಡೆಸುವಂತೆಯೂ ಆಗ್ರಹಿಸಿದರು. ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಪದಚ್ಯುತಿ ಬಳಿಕ ಯೂನುಸ್ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಅದಾದ ಬಳಿಕ ಉಭಯ ನಾಯಕರ ಮೊದಲ ಭೇಟಿ ಇದಾಗಿತ್ತು.
ಪ್ರಜಾಸತ್ತಾತ್ಮಕ ಬಾಂಗ್ಲಾಗೆ ಬೆಂಬಲ: ‘ಪ್ರಜಾಸತ್ತಾತ್ಮಕ, ಸ್ಥಿರ, ಶಾಂತಿಯುತ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶವನ್ನು ಭಾರತ ಬೆಂಬಲಿಸುತ್ತದೆ’ ಎಂದು ಪುನರುಚ್ಚರಿಸಿದ ಮೋದಿ, ಭಾರತವು ಜನಕೇಂದ್ರಿತ ಬಾಂಧವ್ಯದ ಮೇಲೆ ನಂಬಿಕೆ ಇಟ್ಟುಕೊಂಡಿದೆ. ಎರಡೂ ದೇಶಗಳ ನಡುವೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪರಸ್ಪರ ಸಹಕಾರದಿಂದ ಎರಡೂ ದೇಶಗಳಿಗೆ ಅನುಕೂಲವಾಗಿದೆ ಎಂದರು. ಇನ್ನು ಸಭೆಯ ವೇಳೆ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಗಡಿಪಾರು ಕುರಿತು ಯೂನುಸ್ ಮೋದಿ ಜೊತೆ ಪ್ರಸ್ತಾಪ ಮಾಡಿದರು ಎನ್ನಲಾಗಿದೆ.
ಇದನ್ನೂ ಓದಿ: ಡೋನಾಲ್ಡ್ ಟ್ರಂಪ್ ಸರ್ಕಾರದಿಂದ ಶೀಘ್ರದಲ್ಲೇ ಎಲಾನ್ ಮಸ್ಕ್ ಹೊರಕ್ಕೆ?
ಬಿಮ್ಸ್ಟೆಕ್ ದೇಶಗಳಿಗೂ ಮೋದಿ ಯುಪಿಐ ಆಫರ್
ಬ್ಯಾಂಕಾಕ್: ಇಲ್ಲಿ ನಡೆದ 6ನೇ ಬಿಮ್ಸ್ಟೆಕ್ ಶೃಂಗಸಭೆಯಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಆನ್ಲೈನ್ ಪಾವತಿ ವೇದಿಕೆಯಾದ ಯುಪಿಐ ಅನ್ನು ತಮ್ಮ ತಮ್ಮ ದೇಶಗಳಲ್ಲಿಯೂ ಬಳಸುವಂತೆ ಸದಸ್ಯ ರಾಷ್ಟ್ರಗಳಿಗೆ ಸಲಹೆ ನೀಡಿದ್ದಾರೆ.‘ಬಿಮ್ಸ್ಟೆಕ್ನ ಸದಸ್ಯ ರಾಷ್ಟ್ರಗಳ ಪಾವತಿ ವ್ಯವಸ್ಥೆಗಳೊಂದಿಗೆ ಭಾರತದ ಯುಪಿಐ ಸೇವೆಯನ್ನು ಲಿಂಕ್ ಮಾಡುವ ಮೂಲಕ, ವ್ಯಾಪಾರ, ವಹಿವಾಟು, ಪ್ರವಾಸೋದ್ಯಮ ಕ್ಷೇತ್ರಗಳನ್ನು ಉತ್ತೇಜಿಸಬಹುದು’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದೇ ವೇಳೆ, ಬಂಗಾಳ ಕೊಲ್ಲಿ ಪ್ರದೇಶದ ನಾಯಕರು ವ್ಯಾಪಾರ ಮತ್ತು ಸಾರಿಗೆ ಸಹಕಾರವನ್ನು ಸುಧಾರಿಸುವ ಪ್ರತಿಜ್ಞೆ ಮಾಡಿದರು. ಭಾರತ ಸೇರಿದಂತೆ, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್, ಶ್ರೀಲಂಕಾ ಮತ್ತು ಭೂತಾನ್ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ದುಬಾರಿಯಾದ ಟ್ರಂಪ್ ಸುಂಕದ ಹೊಡೆತ: ಭಾರತದ ಚಾಲಾಕಿ ನಡೆ