Karnataka Hijab Row: ಭಾರತದ ರಾಯಭಾರಿ ಕರೆಸಿ ಅಸಮಾಧಾನ ಹೊರ ಹಾಕಿದ ಪಾಕಿಸ್ತಾನ!

By Suvarna NewsFirst Published Feb 11, 2022, 8:10 AM IST
Highlights

*ಕರ್ನಾಟಕ ಹಿಜಾಬ್‌ ವಿಷಯದಲ್ಲಿ ಮತ್ತೆ ಪಾಕ್‌ ಕ್ಯಾತೆ!
*ಭಾರತದ ರಾಯಭಾರಿಯನ್ನು ಕರೆಸಿ ಅಸಮಾಧಾನ ಹೊರ ಹಾಕಿದ ಪಾಕ್‌
*ವಸ್ತ್ರ ಸಂಘರ್ಷಕ್ಕೆ ಸದ್ಯ ಬ್ರೇಕ್‌: ಮಧ್ಯಂತರ ಆದೇಶ ಹೊರಡಿಸುತ್ತೇವೆ ಎಂದ ಪೀಠ

ಇಸ್ಲಾಮಾಬಾದ್‌ (ಫೆ. 11): ಕರ್ನಾಟದಲ್ಲಿ ನಡೆಯುತ್ತಿರುವ ಹಿಜಾಬ್‌ ವಿವಾದ (Hijab Row) ಕುರಿತಾಗಿ ಪಾಕಿಸ್ತಾನ ಮತ್ತೊಮ್ಮೆ ಕ್ಯಾತೆ ತೆಗೆದಿದೆ. ತನ್ನ ದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಉಪ ಅಧಿಕಾರಿಗಳನ್ನು ಕರೆಸಿಕೊಂಡ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದನ್ನು ಪ್ರಶ್ನಿಸಿರುವುದಕ್ಕೆ ಅಸಮಾಧಾನ ಹೊರಹಾಕಿದೆ.ನೆರೆಯ ದೇಶಗಳ ವಿಷಯಗಳಲ್ಲಿ ಮೂಗು ತೂರಿಸುವುದನ್ನು ಮುಂದುವರೆಸಿರುವ ಪಾಕಿಸ್ತಾನ, ಹಿಜಾಬ್‌ ವಿವಾದವನ್ನು ಧಾರ್ಮಿಕ ಅಸಹಿಷ್ಣುತೆ, ಮುಸ್ಲಿಮರ ಮೇಲಿನ ದಬ್ಬಾಳಿಕೆ, ತಾರತಮ್ಯ ಎಂದು ಕರೆದಿದೆ.

ಇದಕ್ಕೂ ಮೊದಲು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಶಿ (Shah Mahmood Qureshi) ಹಿಜಾಬ್‌ ಧರಿಸುವುದು ಮುಸ್ಲಿಂ ಬಾಲಕಿಯರ ಹಕ್ಕು, ಅದನ್ನು ತಡೆಯುವುದು ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಭಾರತದ ರಾಯಭಾರಿಯನ್ನು ಕರೆಸಿಕೊಂಡು ಅಸಮಾಧಾನ ಹೊರಹಾಕಿದೆ.

Latest Videos

ಇದನ್ನೂ ಓದಿ: Hijab Controversy: ದೇಶ ಮುಖ್ಯವೋ, ಧರ್ಮ ಮುಖ್ಯವೋ: ಮದ್ರಾಸ್‌ ಹೈಕೋರ್ಟ್‌

ಆರೋಪ ಆಧಾರರಹಿತ: ಕರ್ನಾಟಕದ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ವಿದೇಶಾಂಗ ಕಚೇರಿಯ ಎಲ್ಲಾ ಆರೋಪಗಳನ್ನು ಭಾರತದ ರಾಯಭಾರ ಕಚೇರಿ ತಳ್ಳಿಹಾಕಿದೆ.  ಭಾರತೀಯ ಅಧಿಕಾರಿಗಳು ಪಾಕಿಸ್ತಾನದ ಹೇಳಿಕೆಗಳನ್ನು "ಆಧಾರರಹಿತ"  ಮತ್ತು "ಭಾರತವು ಜಾತ್ಯತೀತ ದೇಶ" ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರರು ಹೊರಡಿಸಿದ ಹೇಳಿಕೆಯಲ್ಲಿ, "ಕರ್ನಾಟಕದಲ್ಲಿ ಆರ್‌ಎಸ್‌ಎಸ್-ಬಿಜೆಪಿ ಸಂಯೋಜನೆಯು ಮುನ್ನಡೆಸುತ್ತಿರುವ ಹಿಜಾಬ್ ವಿರೋಧಿ ಅಭಿಯಾನದ ಬಗ್ಗೆ ಪಾಕಿಸ್ತಾನದ ತೀವ್ರ ಕಳವಳವನ್ನು ಭಾರತ ಸರ್ಕಾರಕ್ಕೆ ತಿಳಿಸಲು ಅಧಿಕಾರಿಗಳನ್ನು ಒತ್ತಾಯಿಸಲಾಗಿದೆ. ಅದರ ಜನರನ್ನು ಹೊರಗಿಡುವ ಮತ್ತು ಬಹುಸಂಖ್ಯಾತ ಅಜೆಂಡಾವು ಮುಸ್ಲಿಂ ಮಹಿಳೆಯರನ್ನು ಅಮಾನವೀಯಗೊಳಿಸುವ ಮತ್ತು ರಾಕ್ಷಸೀಕರಿಸುವ ಗುರಿಯನ್ನು ಹೊಂದಿದೆ" ಹೇಳಿದೆ

"ಕರ್ನಾಟಕದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವ ಅಪರಾಧಿಗಳನ್ನು ಭಾರತ ಸರ್ಕಾರವು ವಿಚಾರಣೆಗೆ ಒಳಪಡಿಸಬೇಕು ಮತ್ತು ಮುಸ್ಲಿಂ ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: News Hour : ಸಮವಸ್ತ್ರ ಧರಿಸಿ ಕಾಲೇಜಿಗೆ ಬನ್ನಿ, ವಿದ್ಯಾರ್ಥಿಗಳಿಗೆ ಹೈಕೋರ್ಟ್ ಪಾಠ

ವಸ್ತ್ರ ಸಂಘರ್ಷಕ್ಕೆ ಸದ್ಯ ಬ್ರೇಕ್: ವಿವಾದಿತ ಹಿಜಾಬ್‌-ಕೇಸರಿ ವಸ್ತ್ರ ಪ್ರಕರಣದ ಬಗ್ಗೆ ತೀರ್ಪು ಪ್ರಕಟಿಸುವವರೆಗೂ ಹಿಜಾಬ್‌-ಕೇಸರಿ ವಸ್ತ್ರ ಸೇರಿದಂತೆ ಯಾವುದೇ ಧಾರ್ಮಿಕ ಉಡುಪು ಧರಿಸದೆ ಶಾಲಾ​-ಕಾಲೇಜಿಗೆ ತೆರಳಬೇಕು. ಈ ವಿಚಾರದಲ್ಲಿ ಯಾರೂ ಒತ್ತಾಯ ಮಾಡುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡುವುದಾಗಿ ಹೈಕೋರ್ಟ್‌ನ ವಿಸ್ತೃತ ಪೀಠ ಗುರುವಾರ ವಿಚಾರಣೆ ವೇಳೆ ತಿಳಿಸಿದೆ.

ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಸಂಹಿತೆ ಜಾರಿಗೊಳಿಸಿ ಫೆ.5ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಸ್ತೃತ ಪೀಠ ಈ ಆದೇಶ ನೀಡಿದೆ.

ಗುರುವಾರ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಅರ್ಜಿಗಳ ಕುರಿತು ವಾದ ಆಲಿಸಿದ ನ್ಯಾಯಪೀಠ, ‘ಶಿಕ್ಷಣ ಸಂಸ್ಥೆಗಳು ಮತ್ತೆ ಆರಂಭವಾಗಬೇಕು. ಪ್ರಕರಣ ನಿರ್ಧಾರವಾಗುವವರೆಗೆ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು ಮತ್ತು ಸಂಬಂಧಪಟ್ಟವರು ಹಿಜಾಬ್‌ ಅಥವಾ ಶಾಲು ಸೇರಿದಂತೆ ಯಾವುದೇ ರೀತಿಯ ಧಾರ್ಮಿಕ ಉಡುಪು ಹಾಕಬಾರದು. ಈ ವಿಚಾರದಲ್ಲಿ ಯಾರಿಗೆ ಯಾರೂ ಒತ್ತಾಯಿಸುವಂತಿಲ್ಲ. ರಾಜ್ಯದಲ್ಲಿ ಮತ್ತೆ ಶಾಂತಿ ಮತ್ತು ನೆಮ್ಮದಿ ಪುನರ್‌ ಸ್ಥಾಪನೆಯಾಗಬೇಕು. ಈ ಕುರಿತು ಮಧ್ಯಂತರ ಆದೇಶ ನೀಡಲಾಗುವುದು’ ಎಂದು ಮೌಖಿಕವಾಗಿ ಹೇಳಿ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.

click me!