
ಪಾಕಿಸ್ತಾನದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಅಲ್ಲಿನ ಸರ್ಕಾರದ ವಿರುದ್ಧ ತೀವ್ರ ಟೀಕೆ ಕೇಳಿಬರುತ್ತಿದೆ. ಈ ನಡುವೆ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರಿ ಆಸ್ಪತ್ರೆಯ ಮೇಲ್ಛಾವಣಿಯಲ್ಲಿ ನೂರಾರು ಕೊಳೆತ ಮೃತದೇಹಗಳು ಪತ್ತೆಯಾಗಿವೆ. ಈ ಸಂಬಂಧದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋಗಳು ನಿಜಕ್ಕೂ ಭಯಾನಕವಾಗಿದೆ. ಪೂರ್ತಿ ಕೊಳೆತ ಅರ್ಧ ನಗ್ನ ಸ್ಥೀತಿಯಲ್ಲಿದ್ದು ಈ ಮೃತದೇಹಗಳು ಪತ್ತೆಯಾಗಿದ್ದು, ಅಷ್ಟೊಂದು ಮೃತದೇಹಗಳು ಅಲ್ಲಿ ಪತ್ತೆಯಾಗಿದ್ದು ಹೇಗೆ, ಸಂಗ್ರಹಿಸಿದ್ದು ಯಾರು, ಯಾವಾಗಿನಿಂದ ಈ ರೀತಿ ಮೃತದೇಹಗಳನ್ನು ಅಲ್ಲಿಗೆ ಬಿಸಾಡಲಾಗುತ್ತಿದೆ ಎಂಬ ಬಗ್ಗೆ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಈ ಘಟನೆ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತ ಪಾಕ್ ಸರ್ಕಾರ ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ.
ಈ ಬಗ್ಗೆ ಪಾಕಿಸ್ತಾನದ ಪಂಜಾಬ್ ಮುಖ್ಯಮಂತ್ರಿ ಪರ್ವೇಜ್ ಇಲಾಹಿ ಶುಕ್ರವಾರ ಉನ್ನತ ಅಧಿಕಾರಿಗಳ ಸಮಿತಿಯನ್ನು ನೇಮಕ ಮಾಡಿದೆ. ವಿಶೇಷ ಆರೋಗ್ಯ ಕಾರ್ಯದರ್ಶಿ ಮುಜಾಮಿಲ್ ಬಷೀರ್ ನೇತೃತ್ವದ 6 ಸದಸ್ಯರ ಸಮಿತಿಗೆ 3 ದಿನಗಳ ಕಾಲಾವಕಾಶ ನೀಡಿದ್ದು, ಅಷ್ಟರೊಳಗೆ ಈ ಬಗ್ಗೆ ತನಿಖೆ ಮಾಡಿ ಎಂದು ಸೂಚನೆ ನೀಡಲಾಗಿದೆ.
ಅಂದ ಹಾಗೆ, ಪಾಕಿಸ್ತಾನದ ಮುಲ್ತಾನ್ ನಿಷ್ತಾರ್ ಆಸ್ಪತ್ರೆಯ ಮೇಲ್ಛಾವಣಿಯಲ್ಲಿ ಪತ್ತೆಯಾದ ಮೃತದೇಹಗಳ ಸಂಖ್ಯೆ ಎಷ್ಟು ಗೊತ್ತಾ..? ಬರೋಬ್ಬರಿ 400 ಕ್ಕೂ ಹೆಚ್ಚು ಎಂದು ಕೆಲ ವರದಿಗಳು ಹೇಳುತ್ತಿವೆ..!
ಇದನ್ನು ಓದಿ: ಪಾಕಿಸ್ತಾನ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರ: ಅಮೆರಿಕ ಅಧ್ಯಕ್ಷ ಜೋ ಬಿಡೆನ್!
ಘಟನೆ ಬೆಳಕಿಗೆ ಬಂದಿದ್ದು ಹೀಗೆ..
ಇನ್ನು, ಈ ಘಟನೆ ಬಯಲಿಗೆ ಬಂದಿದ್ದು ಹೇಗೆ ಗೊತ್ತಾ..? ಪಾಕ್ನ ಪಂಜಾಬ್ ಸಿಎಂ ಅವರ ಸಲಹೆಗಾರ ಚೌಧರಿ ಝಮಾನ್ ಗುಜ್ಜಾರ್ ಅವರು ಮುಲ್ತಾನ್ನ ನಿಷ್ತರ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ, ಆಸ್ಪತ್ರೆಯ ಶವಾಗಾರದ ಮೇಲ್ಛಾವಣಿಯಲ್ಲಿ ಈ ಶವಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಪಾಕಿಸ್ತಾನದ ಲಾಹೋರ್ನಿಂದ 350 ಕಿ.ಮೀ ದೂರದಲ್ಲಿ ಈ ಆಸ್ಪತ್ರೆ ಇದೆ. ಅಲ್ಲದೆ, ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಚೌಧರಿ ಝಮಾನ್ ಗುಜ್ಜಾರ್, ತಾನು ನಿಷ್ತಾರ್ ಆಸ್ಪತ್ರೆಗೆ ಹೋಗುತ್ತಿದ್ದಾಗ ವ್ಯಕ್ತಿಯೊಬ್ಬರು ತನ್ನ ಬಳಿಗೆ ಬಂದು ನೀವು ಒಳ್ಳೆಯ ಕೆಲಸ ಮಾಡಬೇಕೆಂದರೆ ಆಸ್ಪತ್ರೆಯ ಶವಾಗಾರಕ್ಕೆ ಹೋಗಿ ಪರೀಕ್ಷೆ ಮಾಡಿ ಎಂದು ಹೇಳಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆಗಳು ಮಾಹಿತಿ ನೀಡಿವೆ.
ಅಲ್ಲದೆ, ತಾನು ಅಲ್ಲಿಗೆ ಹೋದಾಗ ಶವಾಗಾರದ ಬಾಗಿಲುಗಳನ್ನು ತೆಗೆಯಲು ಸಿಬ್ಬಂದಿ ಹಿಂದೇಟು ಹಾಕಿದರು. ನಂತರ, ನೀವು ಇದನ್ನು ಓಪನ್ ಮಾಡದಿದ್ದರೆ ನಾನು ನಿಮ್ಮ ವಿರುದ್ಧ ಎಫ್ಐಆರ್ ದಾಖಲಿಸುತ್ತೇನೆ ಎಂದು ಹೇಳಿದೆ, ನಂತರ ಅವರು ಬಾಗಿಲು ತೆರೆದರು ಎಂದೂ ಪಾಕ್ನ ಪಂಜಾಬ್ ಮುಖ್ಯಮಂತ್ರಿಗಳ ಸಲಹೆಗಾರ ಹೇಳಿದ್ದಾರೆ. ಹಾಗೂ, ಆ ಬಾಗಿಲುಗಳನ್ನು ತೆರೆದಾಗ ಅಲ್ಲಿ ಕನಿಷ್ಠ 200 ಮೃತದೇಹಗಳು ಬಿದ್ದಿದ್ದವು. ಪುರುಷ ಹಾಗೂ ಮಹಿಳೆಯರ ಎಲ್ಲ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿದ್ದವು ಹಾಗೂ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮಹಿಳೆಯರ ಮೃತದೇಹಗಳು ಸಹ ಹಾಗೇ ಇತ್ತು ಎಂದು ಘಟನೆಯ ಭೀಕರತೆಯನ್ನು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಪಾಕ್ ಜೈಲಿನಲ್ಲಿದ್ದ ಭಾರತದ ಐವರು ಮೀನುಗಾರರು ಸೇರಿ 6 ಮಂದಿ ಸಾವು, ಕುತಂತ್ರ ಬಯಲು!
ಅಲ್ಲದೆ, ಈ ಬಗ್ಗೆ ವೈದ್ಯರನ್ನು ಕೇಳಿದಾಗ, ಮೆಡಿಕಲ್ ವಿದ್ಯಾರ್ಥಿಗಳು ಶೈಕ್ಷಣಿಕ ಉದ್ದೇಶಗಳಿಗಾಗಿ ಇವುಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಅವರು ಹೇಳಿಕೊಂಡರು ಎಂದೂ ಸಿಎಂ ಅವರ ಕಾರ್ಯದರ್ಶಿ ಹೇಳಿದ್ದಾರೆ.
ಕ್ರಮಕ್ಕೆ ಆದೇಶ
ಇನ್ನು, ಈ ಶವಗಳ ಅಂತ್ಯಸಂಸ್ಕಾರಕ್ಕೆ ಪಂಜಾಬ್ ಮುಖ್ಯಮಂತ್ರಿ ಆದೇಶ ನೀಡಿದ್ದು, ಈ ವಿಚಾರದಲ್ಲಿ ಭಾಗಿಯಾಗಿರುವ ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ವಿಡಿಯೋಗಳು ಹಲವಾರು ಶವಗಳನ್ನು ಕೆಟ್ಟ ಸ್ಥಿತಿಯಲ್ಲಿ ಛಾವಣಿಯ ಮೇಲೆ ಎಸೆದಿರುವುದನ್ನು ತೋರಿಸಿದೆ. ಹಾಗೂ, ಶವಗಳನ್ನು ಹದ್ದುಗಳು ಮತ್ತು ರಣಹದ್ದುಗಳಿಗೆ ಆಹಾರವಾಗಿ ಬಳಸಲು ಛಾವಣಿಯ ಮೇಲೆ ಇಡಲಾಗಿದೆ ಎಂಬ ವದಂತಿಯನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಭಯೋತ್ಪಾದನಾ ದಾಳಿ ಹೆಚ್ಚುತ್ತಿರುವ ಪಾಕಿಸ್ತಾನಕ್ಕೆ ಪ್ರವಾಸ ಬೇಡ, ಜನತೆಗೆ ಅಮೆರಿಕ ಸಂದೇಶ!
ಬಲೂಚ್ ಪ್ರತ್ಯೇಕತಾವಾದಿಗಳ ಶವ..?
ಇದು ತಮ್ಮವರ ನಾಪತ್ತೆಯಾದವರ ಶವಗಳಾಗಿರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಲೂಚ್ ಪ್ರತ್ಯೇಕತಾವಾದಿಗಳು ಹೇಳಿಕೊಂಡಿದ್ದು, ಪಾಕಿಸ್ತಾನ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ