
ನವದೆಹಲಿ(ಆ.21): ಕಾಬೂಲ್ ವಿಮಾನ ನಿಲ್ದಾಣದಲ್ಲಿನ ಈಗಿನ ಸ್ಥಿತಿ 1999ರಲ್ಲಿ ಕಂದಹಾರ್ ವಿಮಾನ ಅಪಹರಣಗೊಂಡ ಸಂದರ್ಭಕ್ಕಿಂತಲೂ ಭೀಕರವಾಗಿದೆ ಎಂದು ಅಂದು ತಾಲಿಬಾನ್ ಉಗ್ರರಿಂದ ಅಪಹರಣಗೊಂಡಿದ್ದ ಇಂಡಿಯನ್ ಏರ್ಲೈನ್ಸ್ ವಿಮಾನದ ಪೈಲಟ್ ಆಗಿದ್ದ ದೇವಿ ಶರಣ್ ಹೇಳಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಯ ಜೊತೆ ಮಾತನಾಡಿರುವ ಶರಣ್, ‘ಕಾಬೂಲ್ ವಿಮಾನ ನಿಲ್ದಾಣದ ಒಳಗೆ ಮತ್ತು ಹೊರಗೆ ಸೇರಿರುವ ಜನರು ಅಷ್ಘಾನಿಸ್ತಾನದಿಂದ ಪಾರಾಗಲು ಯತ್ನಿಸುತ್ತಿರುವ ದೃಶ್ಯಗಳು 22 ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸುವಂತಿದೆ. ಕಂದಹಾರ್ ವಿಮಾನ ಅಪಹರಣ ನಡೆದು 22 ವರ್ಷಗಳು ಕಳೆದಿವೆ. ಆದರೆ, ಅಂದು ಮತ್ತು ಇಂದಿನ ಚಿತ್ರಗಳು ಒಂದೇ ರೀತಿಯಾಗಿವೆ. ಒಂದು ವ್ಯತ್ಯಾಸವೆಂದರೆ ಅಂದು ನಾವು ಕೆಲವೇ ಮಂದಿ ಮಾತ್ರ ಇದ್ದೆವು. ಆದರೆ, ಇಂದು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನರು ಸೇರಿದ್ದಾರೆ. ನಾವು ಅಂದು ನಾವು ಉಗ್ರರಿಂದ ಹೇಗಾದರೂ ಪಾರಾದರೆ ಸಾಕು ಎಂದು ಬಯಸಿದ್ದೆವೋ ಅದೇ ರೀತಿ ಈಗ ಸಾವಿರಾರು ಜನರು ಕಾಬೂಲ್ನಿಂದ ಪಾರಾಗಲು ಯತ್ನಿಸುತ್ತಿದ್ದಾರೆ. ನಾವು ಈಗ ನೋಡುತ್ತಿರುವ ಕಾಬೂಲ್ ವಿಮಾನ ನಿಲ್ದಾಣದ ಚಿತ್ರಗಳು ಅಂದಿನ ಘಟನೆಗೆ ಬಹುತೇಕ ಹೋಲಿಕೆ ಆಗುವಂತಿದೆ’ ಎಂದು ಹೇಳಿದ್ದಾರೆ.
1999ರಲ್ಲಿ ಏನಾಗಿತ್ತು?
ಕಾಠ್ಮಂಡುವಿನಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಯನ್ ಏರ್ಲೈನ್ಸ್ನ ಐಸಿ814 ವಿಮಾನವನ್ನು 1999 ಡಿ.24ರಂದು ಉಗ್ರರು ಅಪಹರಿಸಿದ್ದರು. ವಿಮಾನದಲ್ಲಿದ್ದ 179 ಪ್ರಯಾಣಿಕರು ಮತ್ತು 11 ಸಿಬ್ಬಂದಿಯನ್ನು ಉಗ್ರರು ತಮ್ಮ ವಶಕ್ಕೆ ಪಡೆದು ಹತ್ಯೆ ಮಾಡುವ ಬೆದರಿಕೆ ಹಾಕಿದ್ದರು. ಬಳಿಕ ಸಂಧಾನ ಮಾತುಕತೆಗಳು ನಡೆದು ಭಾರತ ಉಗ್ರ ಮಸೂದ್ ಅಜರ್ನನ್ನು ಜೈಲಿನಿಂದ ಬಿಡುಗಡೆ ಮಾಡುವುದರೊಂದಿಗೆ ವಿಮಾನ ಅಪಹರಣ ಪ್ರಕರಣ ಅಂತ್ಯಗೊಂಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ