
ಕಾಠ್ಮಂಡು (ಏ.09) ಇಲ್ಲಿ ಉಗುಳಬೇಡಿ, ಇಲ್ಲಿ ಕಸ ಹಾಕಬೇಡಿ ಎಂದು ಬೋರ್ಡ್ ಹಾಕಿದ್ದರೂ ಅಲ್ಲೇ ಎಲ್ಲಾ ಮಾಡುವ ಸಂಪ್ರದಾಯ ನಮ್ಮಲ್ಲಿ ಬಹುತೇಕ ಕಡೆ ಕಾಣಬಹುದು. ಆದರೆ ವಿದೇಶಗಳಲ್ಲಿ ಸಿವಿಕ್ ಸೆನ್ಸ್ ತುಂಬಾ ಚೆನ್ನಾಗಿದೆ ಎಂದಲ್ಲಾ ಆದರೂ ತಕ್ಕ ಮಟ್ಟಿಗೆ ಪರ್ವಾಗಿಲ್ಲ. ಭಾರತದಲ್ಲಿ ಪಾನ್ ಮಸಾಲೆ ತಿಂದು ಉಗಿಯುವವರ ಸಂಖ್ಯೆ ತುಸು ಹೆಚ್ಚೇ ಇದೆ. ಇದೇ ಕಾರಣದಿಂದ ಹಲವು ಬಾರಿ ವಿದೇಶಿಗರ ಮುಂದೆ ಭಾರತೀಯರು ತಲೆತಗ್ಗಿಸಿದ್ದಾರೆ. ಇದೀಗ ನೇಪಾಳ ಪ್ರವಾಸ ಹೋದ ಭಾರತೀಯನೊಬ್ಬ ಭಾರತದ ರೀತಿಯಲ್ಲೇ ತುಪುಕ್ ಎಂದು ಉಗಿದಿದ್ದಾನೆ. ಆದರೆ ಸ್ಥಳೀಯ ಯುವಕನೊಬ್ಬ ಕ್ಲಾಸ್ ತೆಗೆದುಕೊಂಡ ಘಟನೆ ವಿಡಿಯೋ ಭಾರಿ ವೈರಲ್ ಆಗಿದೆ.
ನೇಪಾಳಕ್ಕೆ ಪ್ರವಾಸಕ್ಕೆ ಬಂದಿದ್ದ ಇಬ್ಬರು ಭಾರತೀಯ ಯುವಕರು ರಸ್ತೆಯಲ್ಲಿ ಉಗುಳಿದ್ದಾರೆ. ಆಗ ರಾಜು ಲಮಿಚಾನೆ ಎಂಬ ನೇಪಾಳಿ ಯುವಕ, ಆ ಇಬ್ಬರು ಭಾರತೀಯರ ಬಳಿ ಹೋಗಿ ರಸ್ತೆಯಲ್ಲಿ ಯಾಕೆ ಉಗುಳಿ ಗಲೀಜು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ಜೊತೆಗೆ, ಸಾರ್ವಜನಿಕ ಸ್ಥಳಗಳನ್ನು ಹೀಗೆ ಗಲೀಜು ಮಾಡಬಾರದು ಎಂದು ಬುದ್ಧಿ ಹೇಳಿದ್ದಾನೆ. "ಇದು ಇಂಡಿಯಾ ಅಲ್ಲ ಬ್ರದರ್, ಇದು ನೇಪಾಳ. ಇಲ್ಲಿ ಗಲೀಜು ಮಾಡ್ಬೇಡಿ, ನೀರು ಹಾಕಿ ಕ್ಲೀನ್ ಮಾಡಿ," ಎಂದು ಆತ ಭಾರತೀಯ ಯುವಕರಿಗೆ ಹೇಳಿದ್ದಾನೆ. ತಕ್ಷಣವೇ, ಭಾರತೀಯ ಯುವಕನೊಬ್ಬ ತಾನು ಉಗುಳಿದ ಜಾಗಕ್ಕೆ ನೀರು ಹಾಕಿ ಸ್ವಚ್ಛಗೊಳಿಸಿದರೆ, ಇನ್ನೊಬ್ಬ 'ಸಾರಿ' ಕೇಳಿದ್ದಾನೆ. ಆದರೆ, ಅದಕ್ಕೆ ಒಪ್ಪದ ರಾಜು, "ನೀವು ಇಷ್ಟು ದೊಡ್ಡ ದೇಶದಿಂದ ಬಂದಿದ್ದೀರಿ, ಆದರೂ ನೀವೇ ಈ ರೀತಿ ತೊಂದರೆ ಮಾಡ್ತಿದ್ದೀರಿ. ಕ್ಷಮೆ ಕೇಳೋ ಮುನ್ನ ಯೋಚನೆ ಮಾಡ್ಬೇಕು," ಎಂದು ಖಡಕ್ಕಾಗಿ ಹೇಳಿದ್ದಾನೆ. ಸಾರ್ವಜನಿಕ ಸ್ವಚ್ಛತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿನ ನಡವಳಿಕೆಯ ಬಗ್ಗೆ ಗಮನ ಸೆಳೆದ ಈ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಬಗೆಬಗೆಯ ಕಾಮೆಂಟ್ಗಳನ್ನು ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಉಗುಳಿದ ಯುವಕರ ನಡವಳಿಕೆಯನ್ನು ಅನೇಕರು ಟೀಕಿಸಿದ್ದಾರೆ. ಇದು ಅಗೌರವ ಮತ್ತು ಅಶುಚಿತ್ವದ ಪರಮಾವಧಿ ಎಂದು ಹಲವರು ಬರೆದಿದ್ದಾರೆ. ಅದೇ ಸಮಯದಲ್ಲಿ, ಸ್ವಚ್ಛತೆ ಮತ್ತು ಸಾರ್ವಜನಿಕ ನಡವಳಿಕೆಯ ಬಗ್ಗೆ ಧ್ವನಿ ಎತ್ತಿದ್ದಕ್ಕಾಗಿ ರಾಜು ಅವರನ್ನು ಅನೇಕರು ಶ್ಲಾಘಿಸಿದ್ದಾರೆ. "ಇದು ತನ್ನ ದೇಶದ ಮೇಲಿನ ಪ್ರೀತಿ, ಇದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಿ" ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. "ನೇಪಾಳಿಗಳು ನಮ್ಮ ದೇಶಕ್ಕೆ ಬಂದು, ಇಲ್ಲಿ ಕೆಲಸ ಮಾಡುವಾಗ, ನಾವು ನಿಮ್ಮನ್ನಾಗಲಿ ನಿಮ್ಮ ದೇಶವನ್ನಾಗಲಿ ಅವಮಾನಿಸುವುದಿಲ್ಲ. ಹೌದು, ಅವರು ಮಾಡಿದ್ದು ತಪ್ಪು, ಆದರೆ ಅವರು ಕ್ಷಮೆ ಕೇಳುತ್ತಿದ್ದಾರೆ. ಆದರೂ ನೀವು ಇಡೀ ದೇಶವನ್ನೇ ದೂಷಿಸುವುದು ಉದ್ದೇಶಪೂರ್ವಕ ಎನಿಸುತ್ತದೆ," ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಈ ವಿಡಿಯೋವನ್ನು ಒಂದೇ ದಿನದಲ್ಲಿ 36 ಲಕ್ಷ ಜನರು ವೀಕ್ಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ