ನೇಪಾಳ ವಿಮಾನ ದುರಂತ: ಫೇಸ್‌ಬುಕ್‌ ಲೈವ್‌ ಮಾಡುವಾಗ ಅಪಘಾತ.!

By Kannadaprabha NewsFirst Published Jan 16, 2023, 7:05 AM IST
Highlights

ನೇಪಾಳದಲ್ಲಿ ನಡೆದ ವಿಮಾನ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲಾ 68 ಪ್ರಯಾಣಿಕರು ನಾಲ್ವರು ಸಿಬ್ಬಂದಿ ಸೇರಿ ಎಲ್ಲಾ 72 ಜನ ಸಾವನ್ನಪ್ಪಿದ್ದಾರೆ. ಅಪಘಾತದ ಕೆಲವು ಸೆಕೆಂಡು ಮುನ್ನ ಮೃತ 5 ಭಾರತೀಯರ ಪೈಕಿ ಓರ್ವ ಪ್ರಯಾಣಿಕ ವಿಮಾನದಲ್ಲಿ ಫೇಸ್‌ಬುಕ್‌ ಲೈವ್‌ ಆರಂಭಿಸಿದ್ದರು. ಆಗ ವಿಮಾನ ಅಲ್ಲಾಡತೊಡಗಿದ ದೃಶ್ಯಗಳು ಲೈವ್‌ನಲ್ಲಿ ಗೋಚರಿಸಿವೆ

ಕಾಠ್ಮಂಡು: ನೇಪಾಳದಲ್ಲಿ ನಡೆದ ವಿಮಾನ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲಾ 68 ಪ್ರಯಾಣಿಕರು ನಾಲ್ವರು ಸಿಬ್ಬಂದಿ ಸೇರಿ ಎಲ್ಲಾ 72 ಜನ ಸಾವನ್ನಪ್ಪಿದ್ದಾರೆ. ಅಪಘಾತದ ಕೆಲವು ಸೆಕೆಂಡು ಮುನ್ನ ಮೃತ 5 ಭಾರತೀಯರ ಪೈಕಿ ಓರ್ವ ಪ್ರಯಾಣಿಕ ವಿಮಾನದಲ್ಲಿ ಫೇಸ್‌ಬುಕ್‌ ಲೈವ್‌ ಆರಂಭಿಸಿದ್ದರು. ಆಗ ವಿಮಾನ ಅಲ್ಲಾಡತೊಡಗಿದ ದೃಶ್ಯಗಳು ಲೈವ್‌ನಲ್ಲಿ ಗೋಚರಿಸಿವೆ. ಅಪಘಾತಕ್ಕೆ ಕೆಲವು ಸೆಕೆಂಡುಗಳ ಮೊದಲಿನ ವಿಡಿಯೋ ಇದು ಎನ್ನಲಾಗಿದೆ. ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಉತ್ತರಪ್ರದೇಶದ ಗಾಜಿಪುರದ ಯುವಕನೊಬ್ಬ ಈ ವಿಡಿಯೋವನ್ನು ಸೆರೆ ಹಿಡಿದಿದ್ದಾನೆ.

72 ಜನರಿದ್ದ ನೇಪಾಳದ ಯೇತಿ ಏರ್‌ಲೈನ್ಸ್‌ಗೆ ಸೇರಿದ ವಿಮಾನವೊಂದು ನೇಪಾಳದ ಪೋಖರಾ ವಿಮಾನ ನಿಲ್ದಾಣದ (Pokhara Airport)ಬಳಿ ಭೀಕರ ಅಪಘಾತಕ್ಕೆ ತುತ್ತಾಗಿತ್ತು. ಈ ದುರ್ಘಟನೆಯಲ್ಲಿ ವಿಮಾನದಲ್ಲಿದ್ದ 68 ಪ್ರಯಾಣಿಕರು, ನಾಲ್ವರು ಸಿಬ್ಬಂದಿ ಸೇರಿ ಎಲ್ಲಾ 72 ಜನರು ಸಾವನ್ನಪ್ಪಿದ್ದಾರೆ. ಭಾನುವಾರ ತಡರಾತ್ರಿವರೆಗೆ 69 ಶವಗಳನ್ನು ಪತ್ತೆ ಮಾಡಲಾಗಿದ್ದು, ಇನ್ನುಳಿದ ದೇಹಗಳಿಗೆ ಶೋಧ ನಡೆದಿದೆ.  ಅಪಘಾತಕ್ಕೆ ತುತ್ತಾದ ವಿಮಾನದಲ್ಲಿ 5 ಭಾರತೀಯರು ಸೇರಿದಂತೆ 10 ವಿದೇಶಿ ಪ್ರಯಾಣಿಕರು ಕೂಡ ಇದ್ದರು. ಈ 10 ಜನರಲ್ಲಿ ಇಬ್ಬರು ಪುಟ್ಟಮಕ್ಕಳು ಎನ್ನಲಾಗಿದೆ.  ತಾಂತ್ರಿಕ ದೋಷದಿಂದ ಹೀಗಾಗಿರಬಹುದು ಎಂಬ ಗುಮಾನಿ ಇದೆ. ಈ ನಡುವೆ ಘಟನೆ ಸಂಬಂಧ ತನಿಖೆಗೆ ನೇಪಾಳ ಸರ್ಕಾರ(Nepal government) 5 ಜನರ ತಂಡ ರಚಿಸಿದೆ. ಇದು ನೇಪಾಳ ಕಳೆದ 30 ವರ್ಷದಲ್ಲಿ ಕಂಡ ಅತಿ ಭೀಕರ ವಾಯುದುರಂತ ಎಂದು ಹೇಳಲಾಗಿದೆ.

ಭಾರತೀಯರು ಸೇರಿ 72 ಪ್ರಯಾಣಿಕರಿದ್ದ ನೇಪಾಳ ವಿಮಾನ ಪತನ: ಸಾವಿನ ಸಂಖ್ಯೆ 68ಕ್ಕೆ ಏರಿಕೆ!

ಏನಾಯ್ತು?:

72 ಜನರನ್ನು ಹೊತ್ತ ಯೇತಿ ಏರ್‌ಲೈನ್ಸ್‌ಗೆ (Yeti Airlines)ಸೇರಿದ 9ಎನ್‌-ಎಎನ್‌ಸಿ ಎಟಿಆರ್‌-72 ವಿಮಾನ ಭಾನುವಾರ ಬೆಳಗ್ಗೆ 10.33ಕ್ಕೆ ರಾಜಧಾನಿ ಕಾಠ್ಮಂಡುವಿನ ತ್ರಿಭುವನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಮುಖ ಪ್ರವಾಸಿ ತಾಣವಾದ ಪೋಖರಾಗೆ ಹೊರಟಿತ್ತು. ಬೆಳಗ್ಗೆ 11 ಗಂಟೆಗೆ ವಿಮಾನ ಇನ್ನೇನು ರನ್‌ವೇನತ್ತ ಇಳಿಯಲು ಸಜ್ಜಾಗುತ್ತಿದೆ ಎನ್ನುವ ಹಂತದಲ್ಲಿ, ಇದ್ದಕ್ಕಿದ್ದಂತೆ ವಿಚಿತ್ರ ರೀತಿಯಲ್ಲಿ ಮಗುಚಿಕೊಂಡು ವಿಮಾನ ನಿಲ್ದಾಣದ ಸಮೀಪದಲ್ಲೇ ಇರುವ ಸೇತಿ ನದಿಯ (Seti river) ಕಂದಕದಲ್ಲಿ ಪತನಗೊಂಡಿದೆ. ಲ್ಯಾಂಡಿಂಗ್‌ಗೆ ಕೇವಲ 10-20 ಸೆಕೆಂಡ್‌ ಇದ್ದಾಗ ಈ ಘಟನೆ ಸಂಭವಿಸಿದೆ. 

ವಿಮಾನ ನೆಲಕ್ಕೆ ಅಪ್ಪಳಿಸುತ್ತಲೇ ಭಾರೀ ಸದ್ದಿನೊಂದಿಗೆ ಬೆಂಕಿ ಹತ್ತಿಕೊಂಡು ವಿಮಾನದ ಬಹುತೇಕ ಭಾಗ ಸುಟ್ಟುಹೋಯಿತು. ಕಂದಕದ ಪ್ರದೇಶಕ್ಕೆ ಅಗ್ನಿಶಾಮಕ ಸಿಬ್ಬಂದಿ ವಾಹನ ತಲುಪುವುದು ಸಾಧ್ಯವಾಗದ ಕಾರಣ ಹೆಚ್ಚಿನ ಜನರ ರಕ್ಷಣೆ ಸಾಧ್ಯವಾಗಿಲ್ಲ. ಘಟನಾ ಸ್ಥಳದಲ್ಲೇ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಕೆಲವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅಷ್ಟರಲ್ಲೇ ಅವರು ಅಸುನೀಗಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ಭಾನುವಾರ ಪೋಖರಾ ವಿಮಾನ ನಿಲ್ದಾಣದಿಂದ ಹೊರಡುವ ಮತ್ತು ಆಗಮಿಸುವ ಎಲ್ಲಾ ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ದುರ್ಘಟನೆ ಬೆನ್ನಲ್ಲೇ ಪ್ರಧಾನಿ ಕಮಲ್‌ ದಹಲ್‌ (Kamal Dahal) ಪ್ರಚಂಡ ತುರ್ತು ಸಂಪುಟ ಸಭೆ ನಡೆಸಿದರು. ಅಲ್ಲದೆ ಈ ಕುರಿತು ತನಿಖೆಗೆ 5 ಸದಸ್ಯರ ಸಮಿತಿ ರಚನೆಗೆ ಮತ್ತು ಘಟನೆಯಲ್ಲಿ ಮಡಿದವರ ಸ್ಮರಣಾರ್ಥ ಸೋಮವಾರ ಸರ್ಕಾರ ರಜೆ ಘೋಷಣೆಗೆ ನಿರ್ಧರಿಸಲಾಯಿತು.

ಗಡಿಯಲ್ಲಿ ಮತ್ತೆ ನೇಪಾಳ ಗ್ರಾಮಸ್ಥರ ಕಲ್ಲತೂರಾಟ, ಭಾರತೀಯ ಕಾರ್ಮಿಕರ ಗುರಿಯಾಗಿಸಿ ದಾಳಿ!

5 ಭಾರತೀಯರ ಸಾವು

ಭಾನುವಾರ ನೇಪಾಳದಲ್ಲಿ ನಡೆದ ವಿಮಾನ ಅಪಘಾತದಲ್ಲಿ 5 ಭಾರತೀಯರು ಕೂಡಾ ಸಾವನ್ನಪ್ಪಿದ್ದಾರೆ. ಮೃತ ಪ್ರಯಾಣಿಕರನ್ನು ಅಭಿಷೇಕ್‌ ಕುಶ್ವಾಹ (25), ಬಿಶಾಲ್‌ ಶರ್ಮಾ (22), ಅನಿಲ್‌ ಕುಮಾರ್‌ ರಾಜಭರ್‌ (27), ಸೋನು ಜೈಸ್ವಾಲ್‌ (35) ಮತ್ತು ಸಂಜಯ್‌ ಜೈಸ್ವಾಲ್‌ ಎಂದು ಗುರುತಿಸಲಾಗಿದೆ. ಇವರು ಪೋಖರಾಗೆ ಪ್ಯಾರಾಗ್ಲೈಡಿಂಗ್‌ ಮಾಡಲು ತೆರಳುತ್ತಿದ್ದರು. ಶುಕ್ರವಾರವಷ್ಟೇ ಕಾಠ್ಮಂಡುವಿಗೆ ಬಂದಿದ್ದರು. ಈ ಪೈಕಿ ಸೋನಿ ವಾರಾಣಸಿಯವರು. ಮೃತರ ಶವಗಳ ಗುರುತು ಪತ್ತೆಯ ಯತ್ನಗಳು ನಡೆದಿದ್ದು, ಭಾರತದಲ್ಲಿನ ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲು ಇಲ್ಲಿನ ಭಾರತೀಯ ರಾಯಭಾರ ಕಚೇರಿ ಯತ್ನಿಸುತ್ತಿದೆ.

ವಾರದ ಹಿಂದಷ್ಟೇ ಚೀನಾ ನೆರವಿನ ಏರ್‌ಪೋರ್ಟ್ 2  ಉದ್ಘಾಟನೆ

ಯೇತಿ ಏರ್‌ಲೈನ್ಸ್‌ನ ವಿಮಾನ ಅಪಘಾತಕ್ಕೆ ಸಾಕ್ಷಿಯಾದ ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೇವಲ 15 ದಿನಗಳ ಹಿಂದಷ್ಟೇ ಉದ್ಘಾಟನೆಯಾಗಿತ್ತು. ಚೀನಾದ ರೋಡ್‌ ಆ್ಯಂಡ್‌ ಬೆಲ್ಟ್‌ ಯೋಜನೆಯಡಿ ಈ ವಿಮಾನ ನಿಲ್ದಾಣವನ್ನು ಸ್ವತಃ ಚೀನಾ ನಿರ್ಮಿಸಿ ನೇಪಾಳಕ್ಕೆ ಹಸ್ತಾಂತರಿಸಿತ್ತು. ಅನ್ನಪೂರ್ಣ ಪರ್ವತ ಶ್ರೇಣಿಗಳ ಸಾಲಲ್ಲಿ ನಿರ್ಮಾಣಗೊಂಡಿರುವ ನಿಲ್ದಾಣವನ್ನು 2023 ಜ.1ರಂದು ನೂತನ ಪ್ರಧಾನಿ ಪುಷ್ಪ ಕಮಲ ದಹಲ್‌ ‘ಪ್ರಚಂಡ’ ಉದ್ಘಾಟಿಸಿದ್ದರು. 


ಭಾರತ ಆಘಾತ:

ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹಾಗೂ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಪ್ರಧಾನಿ ನರೇಂದ್ರ ಮೋದಿ ಅವರು ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ನೇಪಾಳದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಭಾರತೀಯರು ಸೇರಿದಂತೆ 72 ಅಮೂಲ್ಯ ಜೀವಗಳನ್ನು ಕಳೆದುಕೊಂಡಿರುವುದು ನೋವು ತಂದಿದೆ. ಈ ದುಃಖದ ಸಮಯದಲ್ಲಿ, ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

click me!