ಭಾರತದ ಮಾಜಿ ನೌಕಾ ಅಧಿಕಾರಿಗಳಿಗೆ ಗಲ್ಲುಶಿಕ್ಷೆಯಿಂದ ಮುಕ್ತಿ ನೀಡಿದ ಕತಾರ್ ದೊರೆಗೆ ಧನ್ಯವಾದ ಹೇಳಿದ ಮೋದಿ

By Kannadaprabha NewsFirst Published Feb 16, 2024, 8:32 AM IST
Highlights

ಕತಾರ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ 8 ಮಂದಿ ಮಾಜಿ ಅಧಿಕಾರಿಗಳನ್ನು ಅಲ್ಲಿನ ನ್ಯಾಯಾಲಯ ಬಿಡುಗಡೆ ಮಾಡಿ ಭಾರತಕ್ಕೆ ಕಳುಹಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಕತಾರ್‌ನ ಅರಸ ಶೇಖ್‌ ತಮಿಮ್‌ ಬಿನ್‌ ಹಮದ್‌ ಅಲ್‌-ಥನಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.

ಪಿಟಿಐ ದೋಹಾ: ಕತಾರ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ 8 ಮಂದಿ ಮಾಜಿ ಅಧಿಕಾರಿಗಳನ್ನು ಅಲ್ಲಿನ ನ್ಯಾಯಾಲಯ ಬಿಡುಗಡೆ ಮಾಡಿ ಭಾರತಕ್ಕೆ ಕಳುಹಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಕತಾರ್‌ನ ಅರಸ ಶೇಖ್‌ ತಮಿಮ್‌ ಬಿನ್‌ ಹಮದ್‌ ಅಲ್‌-ಥನಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.

ಗುರುವಾರ ನಡೆದ ಮಾತುಕತೆಯ ವೇಳೆ ಕತಾರ್‌ನಲ್ಲಿನ ಭಾರತೀಯ ಸಮುದಾಯದ ರಕ್ಷಣೆಗಾಗಿ ಮೋದಿಯವರು ತಮಿಮ್‌ ಅವರಿಗೆ ಧನ್ಯವಾದ ಅರ್ಪಿಸಿದರು ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಯುಎಇ ಪ್ರವಾಸಕ್ಕೆ ತೆರಳಿದ್ದ ಮೋದಿ ಬುಧವಾರ ಅಲ್ಲಿ ಬೃಹತ್‌ ಹಿಂದೂ ದೇಗುಲವನ್ನು ಲೋಕಾರ್ಪಣೆ ಮಾಡಿದ ಬಳಿಕ ರಾತ್ರಿ ಕತಾರ್‌ಗೆ ತೆರಳಿದ್ದರು. ಗುರುವಾರ ಕತಾರ್‌ನ ದೊರೆ ಶೇಖ್‌ ತಮಿಮ್‌ ಜೊತೆ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಕುರಿತು ಮಾತುಕತೆ ನಡೆಸಿದರು. ‘ವ್ಯಾಪಾರ, ಹೂಡಿಕೆ, ಇಂಧನ, ಬಾಹ್ಯಾಕಾಶ, ಸಂಸ್ಕೃತಿ ಹಾಗೂ ಜನರ ಸಹಭಾಗಿತ್ವದ ಕುರಿತು ಫಲಪ್ರದ ಮಾತುಕತೆ ನಡೆಯಿತು. ಇದೇ ವೇಳೆ ಉಭಯ ನಾಯಕರು ಪ್ರಾದೇಶಿಕ ಹಾಗೂ ಜಾಗತಿಕ ವಿಚಾರಗಳ ಕುರಿತೂ ಚರ್ಚಿಸಿದರು’ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಪ್ರಧಾನಿ ಮೋದಿಗೆ ಭಾರತಕ್ಕೆ ಗೌರವ : ಬುರ್ಜ್ ಖಲೀಫಾದಲ್ಲಿ ವಿಶೇಷ ಪದಗಳ ಲೈಟಿಂಗ್ಸ್‌ ಅಲಂಕಾರ

ಬುಧವಾರ ರಾತ್ರಿಯೇ ಮೋದಿಯವರು ಕತಾರ್‌ ಪ್ರಧಾನಿ ಶೇಖ್‌ ಮೊಹಮ್ಮದ್‌ ಬಿನ್‌ ಅಬ್ದುಲ್‌ ರೆಹಮಾನ್‌ ಅಲ್‌-ಥನಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಬಳಿಕ ಕತಾರ್‌ ಪ್ರಧಾನಿಯವರು ಮೋದಿಗೆ ಔತಣ ಏರ್ಪಡಿಸಿದ್ದರು.

ಇದು ಕತಾರ್‌ಗೆ ಪ್ರಧಾನಿ ಮೋದಿ ನೀಡಿದ ಎರಡನೇ ಭೇಟಿಯಾಗಿದೆ. 2016ರಲ್ಲಿ ಅವರು ಮೊದಲ ಬಾರಿ ಕತಾರ್‌ಗೆ ತೆರಳಿದ್ದರು. ಬಳಿಕ, ಇತ್ತೀಚೆಗೆ ದುಬೈನಲ್ಲಿ ನಡೆದಿದ್ದ ಹವಾಮಾನ ಬದಲಾವಣೆ ಶೃಂಗದ ವೇಳೆ ಕತಾರ್‌ನ ದೊರೆಯನ್ನು ಭೇಟಿಯಾಗಿ, ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಾರತೀಯರ ಬಿಡುಗಡೆಯ ಕುರಿತು ಮಾತುಕತೆ ನಡೆಸಿದ್ದರು ಎಂದು ಹೇಳಲಾಗಿತ್ತು.

Qatar: ಹೇಗೆ ಕೆಲಸ ಮಾಡಿತ್ತು ಗೊತ್ತಾ ಜೈ ಶಂಕರ್ ಟೀಮ್..? ಭಾರತ ಸಾಬೀತು ಮಾಡಿದ ‘ವಿಶ್ವಗುರು’ ಪವರ್..!

click me!