
ಪ್ಯಾಲೇಸ್ತಿನ್ ಪರ ಪ್ರತಿಭಟನೆಯಿಂದಾಗಿ ಇಟಲಿ ಬೆಂಕಿಯುಂಡೆಯಂತಾಗಿದೆ. ಇಸ್ರೇಲ್ ಹಾಗೂ ಪ್ಯಾಲೇಸ್ತೀನ್ ಪರ ಹಮಾಸ್ ನಡುವಣ ಯುದ್ಧ ಆರಂಭವಾಗಿ ಎರಡು ವರ್ಷಗಳೇ ಕಳೆದಿದೆ. ಆದರೂ ಗಾಜಾದ ಮೇಲೆ ಇಸ್ರೇಲ್ ದಾಳಿ ನಿರಂತರವಾಗಿ ಮುಂದುವರೆದಿದ್ದು, ಈ ಯುದ್ಧದಿಂದಾಗಿ ಗಾಜಾದಲ್ಲಿ ಬರಗಾಲ ಉದ್ಭವಿಸಿದೆ ಮಕ್ಕಳು ದೊಡ್ಡವರೆನ್ನದೇ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದು, ಅಲ್ಲಿ ವಾಸ ಮಾಡ್ತಿದ್ದ ಲಕ್ಷಾಂತರ ಜನರ ಸ್ಥಳಾಂತರವಾಗಿದೆ ಎಂದೆಲ್ಲಾ ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈಗ ಇಸ್ರೇಲ್ ಪ್ಯಾಲೇಸ್ತೀನ್ ನಡುವಣ ಯುದ್ಧದಿಂದಾಗಿ ಇಟಲಿಯಲ್ಲಿ ಬೆಂಕಿ ಹೊಗೆಯಾಡುತ್ತಿದೆ. ಇದಕ್ಕೇನು ಕಾರಣ ಇಲ್ಲಿದೆ ಡಿಟೇಲ್ ಸ್ಟೋರಿ..
ಪ್ಯಾಲೇಸ್ತೀನ್ ಅನ್ನು ರಾಷ್ಟ್ರವನ್ನಾಗಿ ಗುರುತಿಸಲು ಇಟಲಿ ಅಧ್ಯಕ್ಷೆ ಜಾರ್ಜಿಯಾ ಮೆಲೋನಿ ನಿರಾಕರಿಸಿದರು ಎಂದು ಇಟಲಿಯಲ್ಲಿ ಪ್ಯಾಲೇಸ್ತೀನ್ ಪರ ಪ್ರತಿಭಟನಾಕಾರರು ರೊಚ್ಚಿಗೆದ್ದಿದ್ದು, ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತಿದೆ. ಗಾಜಾದಲ್ಲಿ ಇಸ್ರೇಲ್ ಯುದ್ಧದಿಂದ ಸಂಭವಿಸಿರುವ ಸಾವುಗಳು ಹಾಗೂ ಪ್ರಧಾನಿ ಜಾರ್ಜಿಯಾ ಮೆಲೋನಿ ಪ್ಯಾಲೆಸ್ತೀನಿಯನ್ ರಾಜ್ಯವನ್ನು ಅವರು ಬೆಂಬಲಿಸಲು ನಿರಾಕರಿಸಿದರು ಎಂದು ಆರೋಪಿಸಿ ಪ್ರತಿಭಟನಾಕಾರರು ಬೀದಿಗಿಳಿದಿದ್ದು, ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ರಸ್ತೆಗಳು ಮತ್ತು ಬಂದರುಗಳನ್ನು ಬಂದ್ ಮಾಡಿದ್ದಾರೆ. ಬಸ್ ನಿಲ್ದಾಣಗಳು ಮತ್ತು ಸಾರ್ವಜನಿಕ ಆಸ್ತಿಯನ್ನು ಧ್ವಂಸಗೊಳಿಸಿ ಆಕ್ರೋಶ ಹೊರಹಾಕಿದ್ದು, ಇದರಿಂದ ಇಟಲಿಯಾದ್ಯಂತ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣಗೊಂಡಿದೆ..
ಗಾಜಾದಲ್ಲಿ ಇಸ್ರೇಲ್ ನಡೆಸಿದ ದಾಳಿ ಮತ್ತು ಪ್ಯಾಲೆಸ್ಟೀನಿಯನ್ ಅನ್ನು ಒಂದು ರಾಷ್ಟ್ರವಾಗಿ ಗುರುತಿಸದ ಜಾರ್ಜಿಯಾ ಮೆಲೋನಿಯ ತೀವ್ರ ಬಲಪಂಥೀಯ ಸರ್ಕಾರದ ನಿರ್ಧಾರದ ವಿರುದ್ಧ ಸಾವಿರಾರು ಪ್ಯಾಲೆಸ್ಟೀನಿಯನ್ ಪರ ಪ್ರತಿಭಟನಾಕಾರರು ಸೋಮವಾರ ಬೀದಿಗಿಳಿದಿದ್ದರು. ಪೊಲೀಸರೊಂದಿಗೆ ಘರ್ಷಣೆ ನಡೆಸಿ ಇಟಲಿಯ ಹಲವಾರು ನಗರಗಳ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ನರ ಸಾಮೂಹಿಕ ಹತ್ಯೆ ಖಂಡಿಸಿ ದೇಶದ ಕಾರ್ಮಿಕ ಸಂಘಗಳು ಕರೆ ನೀಡಿದ್ದ 'ಎಲ್ಲವನ್ನೂ ನಿರ್ಬಂಧಿಸೋಣ'(Let's Block Everything)ಎಂಬ ಘೋಷವಾಕ್ಯದೊಂದಿದೆಗೆ ರಾಷ್ಟ್ರವ್ಯಾಪಿ ಮುಷ್ಕರ ನಡೆಸಿದರು.
ಬೀದಿಗಿಳಿದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು, ಅಶ್ರುವಾಯು ಪ್ರಯೋಗ ಮಾಡಬೇಕಾಯಿತು. ಕಪ್ಪು ಬಟ್ಟೆ ಧರಿಸಿ ಪ್ಯಾಲೆಸ್ಟೀನಿಯನ್ ಧ್ವಜವನ್ನು ಬೀಸುತ್ತಿದ್ದ ಪ್ರತಿಭಟನಾಕಾರರು, ಮಿಲನ್ನ ಸೆಂಟ್ರಲ್ ಸ್ಟೇಷನ್ನಲ್ಲಿ ಕಂಬವೊಂದನ್ನು ಬಳಸಿ ಸ್ಟೇಷನ್ನ ಗಾಜನ್ನು ಕುಟ್ಟಿ ಪುಡಿಮಾಡಿದ್ದಲ್ಲದೇ ಪೊಲೀಸರ ಮೇಲೆ ಕುರ್ಚಿಯನ್ನು ಎಸೆದರು. ಪೊಲೀಸರು ಹಾಗೂ ಪ್ರತಿಭಟನಾಕಾರರ ಈ ಘರ್ಷಣೆಯಲ್ಲಿ 60ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ 10ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ಪ್ಯಾಲೆಸ್ತೀನ್ ಪರ ಪ್ರತಿಭಟನಾಕಾರರ ಪರ ವಹಿಸಿದ ಕೆಲ ಬಂದರಿನಲ್ಲಿ ಕೆಲಸ ಮಾಡುವ ಕೆಲಸಗಾರರು ಅವರೇ ಸ್ವತಃ ಬಂದರುಗಳನ್ನು ಬಂದ್ ಮಾಡಿದರು. ದೇಶವಿಡೀ ವ್ಯಾಪಿಸಿದ ಈ ಉಗ್ರ ಪ್ರತಿಭಟನೆಯಿಂದಾಗಿ ಇಟಲಿ ಪ್ಧಾನಿ ಜಾರ್ಜಿಯಾ ಮೆಲೋನಿ ಈಗ ತಮ್ಮ ರಾಜಕೀ ವಿರೋಧಿಗಳ ಟೀಕೆಗೆ ಗುರಿಯಾಗಿದ್ದಾರೆ. ಆದರೆ ಮೆಲೋನಿ ಅವರು ಈ ಪ್ರತಿಭಟನೆಯನ್ನು ನಾಚಿಕೆಗೇಡು ಎಂದಿದ್ದಾರೆ. ಈ ತಿಂಗಳ ಆರಂಭದಲ್ಲಿ ವಿಶ್ವಸಂಸ್ಥೆಯಲ್ಲಿ ಇಟಲಿ ಪ್ಯಾಲೆಸ್ತೀನಿಯನ್ ರಾಜ್ಯತ್ವದ ಪರವಾಗಿ ಮತ ಚಲಾಯಿಸಿದ್ದರೂ, ಈಗ ಮೆಲೋನಿ ಇದೀಗ ಪ್ಯಾಲೆಸ್ತೀನ್ ಅನ್ನು ರಾಜ್ಯವನ್ನು ಔಪಚಾರಿಕವಾಗಿ ಗುರುತಿಸದೇ ಇರಲು ನಿರ್ಧರಿಸಿದ್ದಾರೆ.
ಇಟಲಿಯ ವೆನಿಸ್ ಬಂದರಿನಲ್ಲಿ ನಡೆದ ಪ್ಯಾಲೇಸ್ತೀನ್ ಪರ ಪ್ರತಿಭಟನೆಯಲ್ಲಿ ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕಲು ಜಲಫಿರಂಗಿ ಬಳಸಿದರು. ಹಾಗೆಯೇ ಇಟಲಿಯ ಇತರ ನಗರಗಳಾದ ಜಿನೋವಾ, ಲಿವೊರ್ನೊ ಮತ್ತು ಟ್ರೈಸ್ಟೆ ನಗರಗಳ ಬಂದರುಗಳಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಗಾಜಾದಲ್ಲಿ ಹಮಾಸ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ ಬಳಸುವ ಶಸ್ತ್ರಾಸ್ತ್ರಗಳು ಮತ್ತು ಇತರ ಸರಬರಾಜುಗಳನ್ನು ವರ್ಗಾಯಿಸಲು ಇಟಲಿಯನ್ನು ಕೇಂದ್ರವಾಗಿ ಬಳಸುವುದನ್ನು ತಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹಾಗೆಯೇ ಇಟಲಿಯ ಬೊಲೊಗ್ನಾದಲ್ಲಿ, ಪ್ರತಿಭಟನಾಕಾರರು ಹೆದ್ದಾರಿಯನ್ನು ತಡೆದು, ವಾಹನಗಳನ್ನು ನಿಲ್ಲಿಸಿ, ಪೊಲೀಸರೊಂದಿಗೆ ಘರ್ಷಣೆ ನಡೆಸಿದರು ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಜಲಫಿರಂಗಿ ಬಳಸಬೇಕಾಯ್ತು. ಹಾಗೆಯೇ ರೋಮ್ನಲ್ಲಿ, ಪ್ರಮುಖ ರಿಂಗ್ ರಸ್ತೆಯನ್ನು ಪ್ರತಿಭಟನೆ ಆವರಿಸುವ ಮೊದಲೇ ಹತ್ತಾರು ಸಾವಿರ ಜನರು ರೈಲ್ವೆ ನಿಲ್ದಾಣದ ಹೊರಗೆ ಫ್ರೀ ಪ್ಯಾಲೆಸ್ತೀನ್ ಮತ್ತು ಎಲ್ಲವನ್ನೂ ನಿರ್ಬಂಧಿಸೋಣ ಎಂಬ ಘೋಷಣೆಗಳನ್ನು ಹಿಡಿದು ನಿಂತಿದ್ದರು.
ಹಾಗೆಯೇ ಇಟಲಿಯ ದಕ್ಷಿಣ ನಗರವಾದ ನೇಪಲ್ಸ್ನಲ್ಲಿಯೂ ಪ್ರತಿಭಟನಾಕಾರರು, ಮುಖ್ಯ ರೈಲ್ವೆ ನಿಲ್ದಾಣಕ್ಕೆ ಬಲವಂತವಾಗಿ ನುಗ್ಗಿದಾಗ ಪೊಲೀಸರೊಂದಿಗೆ ಘರ್ಷಣೆ ಸಂಭವಿಸಿತು. ಅವರಲ್ಲಿ ಕೆಲವರು ಸ್ವಲ್ಪ ಸಮಯದವರೆಗೆ ಹಳಿಗಳ ಮೇಲೆ ಇಳಿದ್ದಿದ್ದರಿಂದ ರೈಲ್ವೆ ಸೇವೆಗಳು ವಿಳಂಬವಾದವು. ಹಾಗೆಯೇ ವಾಯುವ್ಯ ನಗರವಾದ ಜಿನೋವಾದಲ್ಲಿಯೂ ಪ್ರತಿಭಟನಾಕಾರರು ಬಂದರಿನ ಸುತ್ತಲೂ ನಡೆದ ಸಭೆಗಳಲ್ಲಿ ಪ್ಯಾಲೆಸ್ತೀನ್ ಧ್ವಜವನ್ನು ಬೀಸುತ್ತಾ ಆಕ್ರೋಶ ಹೊರಹಾಕಿದರು. ಇತ್ತೀಚೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯುಕೆ, ಆಸ್ಟ್ರೇಲಿಯಾ, ಕೆನಡಾ, ಪೋರ್ಚುಗಲ್ ಮತ್ತು ಫ್ರಾನ್ಸ್ಗಳು, ಪ್ಯಾಲೆಸ್ತೀನ್ ಅನ್ನು ರಾಷ್ಟ್ರವನ್ನಾಗಿ ಗುರುತಿಸಿದ ನಂತರ ಈ ಘರ್ಷಣೆ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ