ಯುದ್ಧ ಪೀಡಿತ ಗಾಜಾದಲ್ಲಿ ನಿರಾಶ್ರಿತರಿಗಾಗಿ ತೆರೆದಿದ್ದ ರೆಫ್ಯುಜಿ ಕ್ಯಾಂಪ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಈ ಬಾಂಬ್ ದಾಳಿಯಲ್ಲಿ 42 ಜನ ಬಲಿಯಾಗಿದ್ದಾರೆ. ಗಾಜಾದ ಅಲ್ ತುಫ್ಪಾಹ್ ಹಾಗೂ ಸಮೀಪದ ಅಲ್ ಶಾತಿ ನಿರಾಶ್ರಿತ ಕೇಂದ್ರಗಳ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದ್ದು ಒಟ್ಟು 42 ಜನ ಈ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಹಮಾಸ್ನಿಂದ ನಡೆಸಲ್ಪಡುವ ಸರ್ಕಾರಿ ಮಾಧ್ಯಮ ಕಚೇರಿ ವರದಿ ಮಾಡಿದ್ದಾಗಿ ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಹಮಾಸ್ನಿಂದ ನಡೆಸಲ್ಪಡುವ ಸರ್ಕಾರಿ ಮಾಧ್ಯಮ ಕಚೇರಿಯ ಅಲ್ ತವಬ್ತಾದ ನಿರ್ದೇಶಕ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಅಲ್ ಶಾತಿ ನಿರಾಶ್ರಿತ ಕೇಂದ್ರದ ಮೇಲೆ ಇಸ್ಟ್ರೇಲ್ ನಡೆಸಿದ ದಾಳಿಯಲ್ಲಿ ಒಟ್ಟು 24 ಜನ ಮೃತಪಟ್ಟಿದ್ದಾರೆ. ಇದರ ಜೊತೆಗೆ ಅಲ್ ತುಫ್ಫಾಹ್ ಪ್ರದೇಶಗಳನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಒಟ್ಟು 18 ಪ್ಯಾಲೇಸ್ತೀನ್ ನಾಗರಿಕರು ಸಾವನ್ನಪ್ಪಿದ್ದಾರೆ ಹೀಗಾಗಿ ಒಟ್ಟು 42 ಜನ ಸಾವನ್ನಪಿದ್ದಾರೆ.
ಮತ್ತೊಂದು ಯುದ್ಧಕ್ಕೆ ಸಜ್ಜಾದ ವಿಶ್ವ, ಇಸ್ರೇಲ್ ಮೇಲೆ ದಾಳಿಗೆ ಮುಂದಾದ ಇರಾನ್!
ಇಸ್ರೇಲ್ ಮಿಲಿಟರಿ ತನ್ನ ದಾಳಿಗೆ ಸಂಬಂಧಿಸಿದಂತೆ ಸಂಕ್ಷಿಪ್ತ ಹೇಳಿಕೆಯನ್ನು ಪ್ರಕಟಿಸಿದ್ದು, ಅದರಲ್ಲಿರುವಂತೆ ಸ್ವಲ್ಪ ಹೊತ್ತಿನ ಮೊದಲು ಐಡಿಎಫ್ ಯುದ್ಧ ವಿಮಾನಗಳು ಗಾಜಾದಲ್ಲಿ ಎರಡು ಹಮಾಸ್ ಮಿಲಿಟರಿಯ ಮೂಲಸೌಕರ್ಯ ಇರುವ ಪ್ರದೇಶಗಳ ಮೇಲೆ ದಾಳಿ ಮಾಡಿದೆ ಎಂದು ಹೇಳಿತ್ತು. ಕಳೆದ ವರ್ಷ ಅಕ್ಟೋಬರ್ 7 ರಂದು ಆರಂಭವಾದ ಈ ಎರಡು ದೇಶಗಳ ನಡುವಣ ಯುದ್ಧ ಇನ್ನು ನಿಂತಿಲ್ಲ.
ಅಂದು ಏನಾಗಿತ್ತು?:
ಕಳೆದ ವರ್ಷದ ಅ.7ರಂದು ಹಮಾಸ್ ಉಗ್ರರು ಏಕಾಏಕಿ ಇಸ್ರೇಲ್ನ ಗಡಿಭಾಗದ ನಗರದೊಳಗೆ ನುಗ್ಗಿ ಭೀಕರ ಹತ್ಯಾಕಾಂಡ ನಡೆಸಿದ್ದರು. ಈ ವೇಳೆ 1170 ಇಸ್ರೇಲಿಗಳು ಮತ್ತು ವಿದೇಶಿಯರು ಸಾವನ್ನಪ್ಪಿದ್ದರು. ಅದಾದ ಬಳಿಕ ಹಮಾಸ್ ಉಗ್ರರ ನೆಲೆಯಾದ ಗಾಜಾಪಟ್ಟಿ ಪ್ರದೇಶದ ಮೇಲೆ ಇಸ್ರೇಲ್ ಸತತ ದಾಳಿ ನಡೆಸುತ್ತಿದೆ. ಆ ಪ್ರದೇಶವನ್ನು ಅಕ್ಷರಶಃ ನೆಲಸಮ ಮಾಡಿದೆ. ಗಾಜಾಪಟ್ಟಿಯ ಬಹುತೇಕ ಕಟ್ಟಡಗಳು ನೆಲಸಮವಾಗಿದ್ದು, ವಾಸಕ್ಕೆ ಅಯೋಗ್ಯ ಸ್ಥಿತಿ ತಲುಪಿವೆ. ಕಳೆದ 8 ತಿಂಗಳಲ್ಲಿ ನಡೆದಿರುವ ನಿರಂತರ ದಾಳಿಯಲ್ಲಿ ಮೃತರಾದವರ ಸಂಖ್ಯೆ, ನೆಲೆ ಕಳೆದುಕೊಂಡವರ ಸಂಖ್ಯೆ ಲಕ್ಷದಲ್ಲಿದ್ದು, ಯುದ್ಧದಿಂದ ಅಂಗವಿಕಲರಾದವರ, ಮಕ್ಕಳು ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ.
ಹಮಾಸ್ ಜತೆ ಕೈಜೋಡಿಸಿದ ಹೌಥಿ ಉಗ್ರರು: ಇಸ್ರೇಲ್ ಮೇಲೆ ಡ್ರೋನ್, ಕ್ಷಿಪಣಿ ದಾಳಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ