
ಇಸ್ಲಾಮಾಬಾದ್ (ಆ.12) ಭ್ರಷ್ಟಾಚಾರ ಆರೋಪದಡಿ ಜೈಲು ಸೇರಿರುವ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನಿಧನರಾಗಿದ್ದಾರೆ ಎಂಬ ಸುದ್ದಿ ಪಾಕಿಸ್ತಾನದಲ್ಲಿ ಹರಿದಾಡುತ್ತಿದೆ. ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲಿದ್ದ ಇಮ್ರಾನ್ ಖಾನ್ಗೆ ಸೂಕ್ತ ಚಿಕಿತ್ಸೆಗೆ ಪಾಕಿಸ್ತಾನ ಸೇನೆ ವ್ಯವಸ್ಥೆ ಮಾಡಿಲ್ಲ. ಪರಿಣಾ ಜೈಲಿನಲ್ಲೇ ಇಮ್ರಾನ್ ಖಾನ್ ನಿಧನರಾಗಿದ್ದಾರೆ ಎಂದು ಪಾಕಿಸ್ತಾನ ಪತ್ರಕರ್ತ ವಜ್ಹತ್ ಸಯೀದ್ ಖಾನ್ ವಿಡಿಯೋ ಮೂಲಕ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ರಾವಲ್ಪಿಂಡಿಯಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಇಮ್ರಾನ್ ಖಾನ್ ಸಾವಿನ ಕುರಿತು ಕೇಳಿಬರುತ್ತಿರುವ ವದಂತಿಗಳು ವೇಗವಾಗಿ ಹರಡುತ್ತಿದ್ದು, ಮತ್ತೊಂದು ಕೋಲಾಹಲಕ್ಕೆ ಕಾರಣವಾಗುತ್ತಿದೆ.
ಪಾಕಿಸ್ತಾನ ಪತ್ರಕರ್ತ ವಜ್ಹತ್ ಸಯೀದ್ ಖಾನ್ ಈ ಕುರಿತು ವಿಡಿಯೋ ಮೂಲಕ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ವಜ್ಹತ್ ಸಯೀದ್ ವಿಡಿಯೋದಲ್ಲಿ ಹೇಳಿರುವಂತೆ, ನನಗೆ ಪಾಕಿಸ್ತಾನ ಸೇನೆಯ ಪ್ರಮುಖ ಮೂವರು ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ಇಮ್ರಾನ್ ಖಾನ್ ಜೈಲಿನಲ್ಲಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ. ಇಮ್ರಾನ್ ಖಾನ್ ಅವರ ತೆಹ್ರಿಕ್ ಇ ಇನ್ಸಾಫ್ ಪಾರ್ಟಿ ಸದಸ್ಯರು ಹಾಗೂ ಇಮ್ರಾನ್ ಖಾನ್ ಕುಟುಂಬಸ್ಥರು ಭೇಟಿಗೆ ತೆರಳಿದಾಗ ನಿರಾಕರಿಸಲಾಗಿದೆ. ಯಾವುದೇ ಕಾರಣ ನೀಡದೆ ಭೇಟಿ ನಿರಾಕರಿಸಲಾಗಿದೆ. ನಿಯಮದ ಪ್ರಕಾರ ಕುಟುಂಬಸ್ಥರಿಗೆ ಭೇಟಿಗೆ ಅವಕಾಶವಿದೆ. ಆದರೆ ಯಾವುದೇ ಅವಕಾಶ ನೀಡುತ್ತಿಲ್ಲ. ಇಮ್ರಾನ್ ಖಾನ್ ಆರೋಗ್ಯದ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ. ವೈದ್ಯಕೀಯ ದಾಖಲೆಗಳನ್ನು ನೀಡುತ್ತಿಲ್ಲ ಎಂದು ಸೇನಾಧಿಕಾರಿಗಳು ಹೇಳಿರುವುದಾಗಿ ಪತ್ರಕರ್ತ ವಿಡಿಯೋ ಮೂಲಕ ಹೇಳಿದ್ದಾರೆ.
ಇಮ್ರಾನ್ ಖಾನ್ ಕಣ್ಣಿನ ಆರೋಗ್ಯ ಸಮಸ್ಯೆ ಬಳಿಕ ಹಲವು ಸಮಸ್ಯೆಗಳು ಕಾಣಿಸಿಕೊಂಡಿದೆ. ಆದರೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಅನ್ನೋ ಆರೋಪಗಳು ಕಳೆದ ಹಲವು ತಿಂಗಳಿನಿಂದ ಕೇಳಿಬರುತ್ತಿದೆ. ಇತ್ತ ಇಮ್ರಾನ್ ಖಾನ್ ಭೇಟಿಗೆ ಅವಕಾಶ ನೀಡುತ್ತಿಲ್ಲ. ಇಷ್ಟೇ ಅಲ್ಲ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಎಲ್ಲಾ ಕಾಣಿಸಿಕೊಳ್ಳುತ್ತಿಲ್ಲ ಎಂಬ ಆರೋಪವನ್ನು ಪಾಕಿಸ್ತಾನ ಪತ್ರಕರ್ತ ಮಾಡಿದ್ದಾರೆ.
ಇಮ್ರಾನ್ ಖಾನ್ ಸಾವಿನ ವದಂತಿ ಕೇಳಿಬರುತ್ತಿದ್ದಂತೆ ಪಿಟಿಐ ಪಕ್ಷದ ನಾಯಕರು, ಕಾರ್ಯಕರ್ತರು ರಾವಲ್ಪಿಂಡಿ ಜೈಲಿಗೆ ಮುತ್ತಿಗೆ ಹಾಕೋದಾಗಿ ಬೆದರಿಕೆ ಹಾಕಿದ್ದಾರೆ.ತಕ್ಷಣವೇ ಸರ್ಕಾರ ಇಮ್ರಾನ್ ಆರೋಗ್ಯ ಕುರಿತು ಸ್ಪಷ್ಟಪಡಿಸಬೇಕು. ಇಷ್ಟೇ ಅಲ್ಲ ಇಮ್ರಾನ್ ಖಾನ್ ಅವರನ್ನು ಸಾರ್ವಜನಿಕರ ಮುಂದೆ ಹಾಜರುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ವದಂತಿ ತೀವ್ರಗೊಳ್ಳುತ್ತಿದ್ದರೂ ಸರ್ಕಾರದಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ಇತ್ತ ಇಮ್ರಾನ್ ಖಾನ್ ವಕೀಲರ ಭೇಟಿಗೂ ಅವಕಾಶ ನಿರಾಕರಿಸಲಾಗಿದೆ. ಇತ್ತ ಜೈಲು ಅಧಿಕಾರಿಗಳು ಈ ವದಂತಿಯನ್ನು ತಳ್ಳಿ ಹಾಕಿದ್ದಾರೆ. ಜೈಲಿನಲ್ಲಿ ಭದ್ರತಾ ಕಾರಣದಿಂದ ಭೇಟಿ ನಿರಾಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ