Khalistan ಪ್ರತ್ಯೇಕತಾವಾದಿ ನಾಯಕನ ಮೇಲೆ Red Corner ಮನವಿ ತಿರಸ್ಕರಿಸಿದ Interpol

By Sharath Sharma KalagaruFirst Published Oct 12, 2022, 2:50 PM IST
Highlights

Interol rejects to issue red corner notice on Khalistan seperatist: ಖಾಲಿಸ್ತಾನ ಪ್ರತ್ಯೇಕತಾವಾದಿ ಸಂಘಟನೆಯ ನಾಯಕನ ವಿರುದ್ಧ ರೆಡ್‌ ಕಾರ್ನರ್‌ ನೊಟೀಸ್‌ ಜಾರಿಗೊಳಿಸಲು ಇಂಟರ್‌ಪೊಲ್‌ ನಿರಾಕರಿಸಿದೆ.

ನವದೆಹಲಿ: ಅಂತಾರಾಷ್ಟ್ರೀಯ ಅಪರಾಧ ಪೊಲೀಸ್‌ ಸಂಸ್ಥೆ (International Criminal Police Organisation) ಖಾಲಿಸ್ತಾನ ಪ್ರತ್ಯೇಕವಾದಿಯ ವಿರುದ್ಧ ರೆಡ್‌ ಕಾರ್ನರ್‌ ನೊಟೀಸ್‌ ಜಾರಿಗೊಳಿಸುವಂತೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ. ಖಾಲಿಸ್ತಾನ ಪ್ರತ್ಯೇಕತಾವಾದಿ ಗುರ್ಪತ್ವಂತ್‌ ಸಿಂಗ್‌ ಪನ್ನುನ್‌ ವಿರುದ್ಧ ರೆಡ್‌ ಕಾರ್ನರ್‌ ನೊಟೀಸ್‌ ಜಾರಿಗೊಳಿಸುವಂತೆ ಸಿಬಿಐ ಇಂಟರ್‌ಪೊಲ್‌ಗೆ ಮನವಿ ಮಾಡಿತ್ತು. ಆದರೆ ಕೆಲವು ಪ್ರಶ್ನೆಗಳನ್ನು ಕೇಳಿ ಇಂಟರ್‌ಪೊಲ್‌ ಮನವಿಯನ್ನು ವಾಪಸ್‌ ಕಳಿಸಿದೆ. ಸಿಬಿಐ ಅಧಿಕಾರಿಗಳು ಭಾರತದ ತನಿಖಾ ಸಂಸ್ಥೆಗಳು ನೀಡಿದ್ದ ಎಲ್ಲಾ ದಾಖಲೆಗಳನ್ನೂ ಇಂಟರ್‌ಪೊಲ್‌ಗೆ ಕಳಿಸಿತ್ತು. ಆದರೂ ಇಂಟರ್‌ಪೊಲ್‌ ಇನ್ನಷ್ಟು ವಿಚಾರಗಳಿಗೆ ಉತ್ತರ ನೀಡುವಂತೆ ಕೇಳಿದೆ. 

ಕೆಲವು ವರದಿಗಳ ಪ್ರಕಾರ ದೇಶದ್ರೋಹಿ ಕೃತ್ಯದಲ್ಲಿ ಭಾಗಿಯಾಗಿರುವ ಯಾವುದೇ ಪುರಾವೆ ಸಿಬಿಐ ಸಲ್ಲಿಸಿದ ದಾಖಲೆಗಳಲ್ಲಿ ಇಲ್ಲ. ಆದರೆ ಸರ್ಕಾರದ ಮೂಲಗಳು ಇಂಟರ್‌ಪೊಲ್‌ ಈ ರೀತಿಯ ಯಾವುದೇ ಟಿಪ್ಪಣಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಸಾಮಾನ್ಯವಾಗಿ ಇಂಟರ್‌ಪೊಲ್‌ ಈ ರೀತಿಯ ಕಮೆಂಟ್‌ ಮಾಡುವುದಿಲ್ಲ. ಕಾನೂನು ಬಾಹಿರ ಚಟುವಟಿಕೆಯ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಇಂಟರ್‌ಪೊಲ್‌ ಭಾರತಕ್ಕೆ ಛೀಮಾರಿ ಹಾಕಿದೆ ಎಂದು ಕೆಲವು ವರದಿಗಳು ಹೇಳುತ್ತಿವೆ. ಬೇಕೆಂದೇ ಅಲ್ಪಸಂಖ್ಯಾತ ಸಮುದಾಯವನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಮತ್ತು ಅವರ ಹಕ್ಕುಗಳಿಗೆ ಹೋರಾಡುವ, ಪ್ರಶ್ನೆ ಮಾಡುವ ಹಕ್ಕನ್ನು ಧಮನ ಮಾಡಲಾಗುತ್ತಿದೆ ಎಂದು ಇಂಟರ್‌ಪೊಲ್‌ ಕಟುವಾಗಿ ಟೀಕಿಸಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. 

ಇದನ್ನೂ ಓದಿ: ವಿದ್ಯಾರ್ಥಿನಿಯರ ವಿಡಿಯೋ ಲೀಕ್ ಕೇಸ್ ಹಿಂದೆ ಖಲಿಸ್ತಾನ್? ಪ್ರತಿಭಟನೆ ನಿಲ್ಲಿಸಲು ಕೆನಡಾದಿಂದ ಬೆದರಿಕೆ ಕರೆ!

ಗುರ್ಪತ್ವಂತ್‌ ಸಿಂಗ್‌ ಕೆನಡಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ. ಖಾಲಿಸ್ತಾನ ಪ್ರತ್ಯೇಕತಾವಾದಿ ಸಂಘಟನೆ ಸಿಖ್ಸ್‌ ಫಾರ್‌ ಜಸ್ಟಿಸ್‌ ಸಂಘಟನೆಯ ಕಾನೂನು ಸಲಹೆಗಾರ. ಈ ಹಿಂದೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಖಾಲಿಸ್ತಾನ ಪ್ರತ್ಯೇಕ ದೇಶದ ಬೇಡಿಕೆಯೊಡ್ಡಿದ ಬ್ಯಾನರ್‌ಗಳು ಮತ್ತು ಪೇಂಟಿಂಗ್‌ಗಳು ರಾರಾಜಿಸಿದ್ದವು. ಅದಾದ ನಂತರ 2019ರಲ್ಲಿ ಸಂಘಟನೆಯನ್ನು ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪದೊಂದಿಗೆ ನಿಷೇಧಿಸಲಾಗಿತ್ತು. 

ಇದೇ ವರ್ಷದ ಜನವರಿಯಲ್ಲಿ ರಾಷ್ಟ್ರೀಯ ತನಿಖಾ ತಂಡ ಎಸ್‌ಎಫ್‌ಜೆ ಸಂಘಟನೆಯ ಸದಸ್ಯ ಜಸ್ವಿಂದರ್‌ ಸಿಂಗ್‌ ಮುಲ್ತಾನಿ ಅವರ ಬಗ್ಗೆ ಮಾಹಿತಿ ನೀಡಿದವರಿಗೆ ಹತ್ತು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿತ್ತು. ಜಸ್ವಿಂದರ್‌ ಸಿಂಗ್‌ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್‌ಐ ಜತೆಗೂಡಿ ಮುಂಬೈ ಸೇರಿದಂತೆ ಇನ್ನಿತರ ನಗರಗಳ ಮೇಲೆ ಭಯೋತ್ಪಾದಕ ದಾಳಿಗೆ ಯೋಜನೆ ರೂಪಿಸಿದ್ದ ಎಂದು ಆರೋಪಿಸಲಾಗಿತ್ತು. 

ಇದನ್ನೂ ಓದಿ: Canada: ಹಿಂದೂ ದೇವಾಲಯ ವಿರೂಪಗೊಳಿಸಿದ ಖಲಿಸ್ತಾನಿ ಉಗ್ರರು..!

ಜಸ್ವಿಂದರ್‌ ಸಿಂಗ್‌ ಮುಲ್ತಾನಿ, ಗುರ್ಪತ್ವಂತ್‌ ಸಿಂಗ್‌ ಪನ್ನುವಿನ ಆಪ್ತರಲ್ಲಿ ಒಬ್ಬ. ಪಂಜಾಬ್‌ನ ಗಡಿ ಭಾಗದಲ್ಲಿ ಆಯುಧಗಳು ಮತ್ತು ಸ್ಫೋಟಕಗಳನ್ನು ಶೇಖರಿಸಿಟ್ಟಿರುವ ಮತ್ತು ಬೇರೆಡೆಗೆ ಸಾಗಿಸಿರುವ ಶಂಕೆಯೂ ಈತನ ಮೇಲಿದೆ. ಪಾಕಿಸ್ತಾನ ಮೂಲದ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕ ಸಂಘಟನೆಯ ಮೂಲಕ ಈ ಆಯುಧಗಳನ್ನು ತರಿಸಿಕೊಂಡಿರುವ ಶಂಕೆಯಿದೆ. ಪಂಜಾಬ್‌ ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಯೋಜನೆ ರೂಪಿಸಿದ್ದ ಇದೇ ಕಾರಣಕ್ಕೆ ಶಸ್ತ್ರಗಳನ್ನು ತರಿಸಿದ್ದ ಎನ್ನಲಾಗಿದೆ. 

click me!