Middle East Crisis 'ಊಟಕ್ಕೂ ದುಡ್ಡಿಲ್ಲ, ರಕ್ಷಿಸಿ'; ಮಾಸ್ಕೋ ಏರ್‌ಪೋರ್ಟ್‌ನಲ್ಲಿ ಸಿಲುಕಿದ ಭಾರತೀಯನ ವಿಡಿಯೋ ವೈರಲ್

Published : Mar 03, 2026, 01:25 PM IST
Indian Engineer Stranded in Moscow Airport Amid Middle East Crisis Pleads for Help

ಸಾರಾಂಶ

ಮಧ್ಯಪ್ರಾಚ್ಯ ಯುದ್ಧದಿಂದ ವಿಮಾನಗಳು ರದ್ದಾದ ಕಾರಣ, ಭಾರತೀಯ ಇಂಜಿನಿಯರ್ ಒಬ್ಬರು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಊಟಕ್ಕೂ ಹಣವಿಲ್ಲದೆ ಅಸಹಾಯಕರಾಗಿದ್ದ ಅವರು, ಸಹಾಯಕ್ಕಾಗಿ ಮಾಡಿದ ಮನವಿಯ ವಿಡಿಯೋ ವೈರಲ್ ಆದ ನಂತರ ಭಾರತೀಯ ರಾಯಭಾರ ಕಚೇರಿ ಮಧ್ಯಪ್ರವೇಶಿಸಿದೆ.

ಮಾಸ್ಕೋ: ಅಮೆರಿಕ-ಇಸ್ರೇಲ್ ಸೇನೆ ಇರಾನ್ ಮೇಲೆ ಯುದ್ಧ ಘೋಷಿಸಿದ ಬೆನ್ನಲ್ಲೇ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನೇರ ಪರಿಣಾಮ ಜಾಗತಿಕ ವಿಮಾನಯಾನದ ಮೇಲೆ ಆಗಿದ್ದು, ಲಕ್ಷಾಂತರ ಭಾರತೀಯರು ಸೇರಿದಂತೆ ಹಲವು ಪ್ರಯಾಣಿಕರು ಬೇರೆ ಬೇರೆ ದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಈ ನಡುವೆ, ಮಾಸ್ಕೋ ಏರ್‌ಪೋರ್ಟ್‌ನಲ್ಲಿ ಸಿಲುಕಿಕೊಂಡ ಭಾರತೀಯ ಇಂಜಿನಿಯರ್ ಒಬ್ಬರು, 'ಊಟಕ್ಕೂ ದುಡ್ಡಿಲ್ಲ, ದಯವಿಟ್ಟು ರಕ್ಷಿಸಿ' ಎಂದು ಮಾಡಿಕೊಂಡ ಮನವಿಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಊಟ, ನೀರಿಗೂ ಹಣವಿಲ್ಲದ ಸ್ಥಿತಿ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿಯುತ್ತಿದ್ದಂತೆ, ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಯುಎಇ, ಸೌದಿ ಅರೇಬಿಯಾ, ಕುವೈತ್, ಓಮನ್‌ನಂತಹ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ಮಾಡುವ ಎಚ್ಚರಿಕೆ ನೀಡಿದೆ. ಈ ಬೆಳವಣಿಗೆಯಿಂದಾಗಿ, ಹಲವು ದೇಶಗಳು ತಮ್ಮ ವಾಯುಪ್ರದೇಶವನ್ನು ನಿರ್ಬಂಧಿಸಿವೆ. ಇದರಿಂದಾಗಿ ವಿಮಾನಗಳ ಹಾರಾಟ ರದ್ದಾಗಿದ್ದು, ಜಗತ್ತಿನಾದ್ಯಂತ ಪ್ರಯಾಣಿಕರು ಪರದಾಡುವಂತಾಗಿದೆ. ಇದೇ ರೀತಿ, ಮುಂಬೈನ ಇಂಜಿನಿಯರ್ ಸುನಿಲ್ ಗುಪ್ತಾ ಎಂಬುವವರು ಮಾಸ್ಕೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. 

ಇತಿಹಾದ್ ಏರ್‌ವೇಸ್ ತನ್ನನ್ನು ಮಾಸ್ಕೋದಲ್ಲಿ ಕೈಬಿಟ್ಟಿದೆ ಎಂದು ಅವರು ಆರೋಪಿಸಿದ್ದಾರೆ. 'ನಾನು ಇಲ್ಲಿ ಸಂಪೂರ್ಣವಾಗಿ ಒಂಟಿಯಾಗಿದ್ದೇನೆ' ಎಂದು ಹೇಳುವ ಸುನಿಲ್ ಗುಪ್ತಾ ಅವರ ವಿಡಿಯೋ 'ಎಕ್ಸ್' (ಹಿಂದಿನ ಟ್ವಿಟರ್) ನಲ್ಲಿ ವೈರಲ್ ಆಗಿದೆ. "ನಾನು ಮಾಸ್ಕೋ ಏರ್‌ಪೋರ್ಟ್‌ನಲ್ಲಿ ಸಿಲುಕಿಕೊಂಡಿದ್ದೇನೆ. ಒಬ್ಬನೇ ಇದ್ದೇನೆ, ಅಸಹಾಯಕನಾಗಿದ್ದೇನೆ, ಭರವಸೆ ಕಳೆದುಕೊಳ್ಳುತ್ತಿದ್ದೇನೆ. ಮೇಕ್ ಮೈ ಟ್ರಿಪ್ ಅಥವಾ ಇತಿಹಾದ್ ಏರ್‌ವೇಸ್‌ನಿಂದ ಯಾರೂ ನನ್ನ ಸಂದೇಶಗಳಿಗೆ ಉತ್ತರಿಸುತ್ತಿಲ್ಲ. ರಷ್ಯಾದಲ್ಲಿ ವೀಸಾ ಅಥವಾ ಮಾಸ್ಟರ್‌ಕಾರ್ಡ್ ಸ್ವೀಕರಿಸುತ್ತಿಲ್ಲ," ಎಂದು ಅವರು ವಿಡಿಯೋದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ತಮ್ಮ ಬಳಿ ಊಟ, ನೀರಿಗೂ ಹಣವಿಲ್ಲ ಎಂದು ಅವರು ಹೇಳಿದ್ದಾರೆ.

ಇಲ್ಲಿನ ಇತಿಹಾದ್ ಸಿಬ್ಬಂದಿ ಕಸ್ಟಮರ್ ಕೇರ್‌ಗೆ ಕರೆ ಮಾಡಲು ಹೇಳುತ್ತಾರೆ. ಆದರೆ ಅದು ಗಂಟೆಗಟ್ಟಲೆ ಬ್ಯುಸಿ ಬರುತ್ತದೆ. ನಾನು ಇಲ್ಲಿ ಭಿಕ್ಷುಕನಂತೆ ನಿಂತಿದ್ದೇನೆ. ಮನೆಗೆ ಹೇಗೆ ತಲುಪಬೇಕು ಎಂದು ನನಗೆ ತಿಳಿದಿಲ್ಲ. ನನಗೆ ಭಯವಾಗುತ್ತಿದೆ. ನಾನು ನಂಬಿದ್ದ ಕಂಪನಿಗಳೇ ನನ್ನನ್ನು ಕೈಬಿಟ್ಟಿವೆ. ನನ್ನ ಕುಟುಂಬ ಕಾಯುತ್ತಿದೆ, ನಾನು ಸುರಕ್ಷಿತವಾಗಿದ್ದೇನೆ ಎಂದು ಅವರಿಗೆ ಹೇಳಲೂ ಸಾಧ್ಯವಾಗುತ್ತಿಲ್ಲ. ದಯವಿಟ್ಟು, ಇತಿಹಾದ್, ಮೇಕ್ ಮೈ ಟ್ರಿಪ್ ಅಥವಾ ಭಾರತೀಯ ರಾಯಭಾರ ಕಚೇರಿಯ ಯಾರಾದರೂ ಇದನ್ನು ನೋಡಿದರೆ, ದಯವಿಟ್ಟು ನನಗೆ ಸಹಾಯ ಮಾಡಿ. ನೀವು ಇದನ್ನು ಓದುತ್ತಿದ್ದರೆ, ಒಂದು ರೀಟ್ವೀಟ್ ನನ್ನನ್ನು ಉಳಿಸಬಹುದು. ನಾನು ಬೇಡಿಕೊಳ್ಳುತ್ತಿದ್ದೇನೆ," ಎಂದು ಅವರು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.

 

ಮುನ್ಸೂಚನೆ ಇಲ್ಲದೆ ವಿಮಾನ ರದ್ದು

ಯಾವುದೇ ಮುನ್ಸೂಚನೆ ಇಲ್ಲದೆ ವಿಮಾನವನ್ನು ರದ್ದುಗೊಳಿಸಲಾಗಿದೆ ಮತ್ತು ಮಾನವೀಯತೆಯ ದೃಷ್ಟಿಯಿಂದ ಯಾವುದೇ ಸಹಾಯವನ್ನು ನೀಡಿಲ್ಲ ಎಂದು ಸುನಿಲ್ ಆರೋಪಿಸಿದ್ದಾರೆ. ಹೋಟೆಲ್ ವೋಚರ್ ಕೂಡ ನೀಡಿಲ್ಲ, ಊಟಕ್ಕೆ ಹಣವಿದೆಯೇ ಎಂದೂ ಯಾರೂ ಕೇಳಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಬುಕಿಂಗ್ ಪ್ಲಾಟ್‌ಫಾರ್ಮ್ ಮೇಕ್ ಮೈ ಟ್ರಿಪ್ ಬಗ್ಗೆಯೂ ಅವರು ಕಿಡಿಕಾರಿದ್ದಾರೆ. 'ಮಧ್ಯವರ್ತಿಯಾದ ಮೇಕ್ ಮೈ ಟ್ರಿಪ್ ಏನನ್ನೂ ಹೇಳುತ್ತಿಲ್ಲ. ರೀಬುಕಿಂಗ್ ಇಲ್ಲ, ಹೋಟೆಲ್ ಬೆಂಬಲವೂ ಇಲ್ಲ. ಏರ್‌ಪೋರ್ಟ್‌ನಲ್ಲಿ ಸಿಗುವ ಉಚಿತ ನೀರು ಕುಡಿದು ಬದುಕುತ್ತಿದ್ದೇನೆ. ಟರ್ಮಿನಲ್‌ನಿಂದ ಹೊರಗೆ ಹೋಗಲು ಅಥವಾ ಏನನ್ನೂ ಖರೀದಿಸಲು ಸಾಧ್ಯವಾಗುತ್ತಿಲ್ಲ," ಎಂದು ಅವರು ಹೇಳಿದ್ದಾರೆ. ಇದು ಕೇವಲ ನನ್ನೊಬ್ಬನ ಸಮಸ್ಯೆಯಲ್ಲ, ಇತಿಹಾದ್ ಮತ್ತು ಮೇಕ್ ಮೈ ಟ್ರಿಪ್‌ನಂತಹ ದೊಡ್ಡ ಕಂಪನಿಗಳು ಗ್ರಾಹಕರನ್ನು ಬೆಂಬಲಿಸಲು ವಿಫಲವಾದಾಗ, ಪ್ರಯಾಣಿಕರು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ರಾಯಭಾರ ಕಚೇರಿ ಮಧ್ಯಪ್ರವೇಶ

ಸುನಿಲ್ ಅವರ ವಿಡಿಯೋ ಭಾರತದಲ್ಲಿ ವ್ಯಾಪಕ ಗಮನ ಸೆಳೆದಿದೆ. ಆಮ್ ಆದ್ಮಿ ಪಕ್ಷದ ನಾಯಕ ರೂಬೆನ್ ಮಸ್ಕರೇನಾಸ್ ಅವರು, ಸುನಿಲ್ ಅವರನ್ನು ಮರಳಿ ಕರೆತರಲು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಮಾತನಾಡಿದ್ದಾಗಿ ತಿಳಿಸಿದ್ದಾರೆ. ಎನ್‌ಸಿಪಿ ವಕ್ತಾರ ಅನೀಶ್ ಗವಾಂಡೆ ಕೂಡ ಏರ್‌ಲೈನ್ಸ್ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯನ್ನು ಟೀಕಿಸಿದ್ದಾರೆ. ಈ ಬೆಳವಣಿಗೆಗಳ ನಂತರ, ಮೇಕ್ ಮೈ ಟ್ರಿಪ್ ತಂಡವು ತನಗೆ ಹೋಟೆಲ್ ವ್ಯವಸ್ಥೆ ಮಾಡಿದೆ ಎಂದು ಸುನಿಲ್ ನಂತರ ಪೋಸ್ಟ್ ಮಾಡಿದ್ದಾರೆ. 

ಈ ಮಧ್ಯೆ, ಮಧ್ಯಪ್ರಾಚ್ಯದಲ್ಲಿ ವಿಮಾನ ಸಂಚಾರ ಬಹುತೇಕ ಸ್ಥಗಿತಗೊಂಡಿದೆ ಎಂದು ವರದಿಗಳು ತಿಳಿಸಿವೆ. ಯುಎಇಯಿಂದ ಕೆಲವೇ ಕೆಲವು ವಿಮಾನಗಳು ಮಾತ್ರ ಹಾರಾಟ ನಡೆಸಿವೆ. ಫ್ಲೈಟ್ ಟ್ರ್ಯಾಕಿಂಗ್ ಸೇವೆ 'ಫ್ಲೈಟ್‌ರಾಡಾರ್24' ಪ್ರಕಾರ, ಒಂದೇ ದಿನದಲ್ಲಿ 4,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಸಿಲುಕಿರುವ ಪ್ರಯಾಣಿಕರ ನೆರವಿಗಾಗಿ ಯುಎಇಯ ಜನರಲ್ ಸಿವಿಲ್ ಏವಿಯೇಷನ್ ಅಥಾರಿಟಿ ವಿಶೇಷ ವಿಮಾನ ಸೇವೆಗಳನ್ನು ಆರಂಭಿಸಿದೆ ಎಂದು ಯೂರೋ ನ್ಯೂಸ್ ವರದಿ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯುದ್ಧದ ನಡುವೆ ಅಣ್ವಸ್ತ್ರ ಪರೀಕ್ಷೆ ನಡೆಸಿತಾ ಇರಾನ್‌? ಗೆರಾಶ್‌ನಲ್ಲಿ 4.3 ತೀವ್ರತೆಯ ಭೂಕಂಪ!
ಹೊಸ ಇರಾನ್ ನಿರ್ಮಾಣ ನಮ್ಮ ಗುರಿ ಅಲ್ಲ, ಅದು ಟೈಮ್ ವೇಸ್ಟ್: ಅಮೆರಿಕಾ