ಬಹರೇನ್‌ನಲ್ಲಿ ಕನ್ನಡ ಭವನ ಉದ್ಘಾಟನೆ

By Kannadaprabha NewsFirst Published Sep 27, 2022, 12:51 PM IST
Highlights
  • ದ್ವೀಪರಾಷ್ಟ್ರ ಬಹರೇನ್‌ನಲ್ಲಿ ಕನ್ನಡ ಭವನ ಉದ್ಘಾಟನೆ
  • ಹೊರದೇಶದಲ್ಲಿ ನಿರ್ಮಾಣವಾದ ಮೊಟ್ಟಮೊದಲ ಸ್ವಂತ ಕನ್ನಡ ಭವನ

ಮನಾಮ (ಸೆ.27) : ಬಹರೇನ್‌ನಲ್ಲಿರುವ ಕನ್ನಡಿಗರು 12 ಕೋಟಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣ ಮಾಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಡಿಯೋ ಸಂದೇಶದ ಮೂಲಕ ಕಟ್ಟಡ ಉದ್ಘಾಟಿಸಿದರು. ಪುಟ್ಟದ್ವೀಪರಾಷ್ಟ್ರವಾದ ಬಹರೇನ್‌ನಲ್ಲಿನ ಕನ್ನಡ ಸಂಘ, ಕನ್ನಡಕ್ಕೆ ಸಾಕಷ್ಟುಕೊಡುಗೆ ನೀಡಿದೆ. ತನ್ನ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿದೆ. ಕನ್ನಡದ ಬೆಳವಣಿಗೆಗೆ ದುಡಿಯುತ್ತಿರುವ ಸಂಸ್ಥೆ ಮುಂದೆಯೂ ಅನೇಕ ಸಾಧನೆಗಳನ್ನು ಮಾಡಲಿ ಎಂದು ಬೊಮ್ಮಾಯಿ ಹಾರೈಸಿದರು.

ಕಾರ್ಯಕ್ರಮಕ್ಕೆ ವಿಡಿಯೋ ಸಂದೇಶದ ಮೂಲಕ ಶುಭ ಹಾರೈಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸೆ ಇತ್ತು. ಅನಿವಾರ್ಯ ಕಾರಣಗಳಿಂದ ಬರಲಾಗುತ್ತಿಲ್ಲ. ನೂತನ ಕನ್ನಡ ಭವನವನ್ನು ಕಟ್ಟುವ ಮೂಲಕ ಬಹರೇನ್‌ ಕನ್ನಡ ಸಂಘ ದೊಡ್ಡ ಸಾಧನೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಹರೇನ್‌ ಸಂಸ್ಥಾನದ ಭಾರತೀಯ ರಾಯಭಾರಿ ಪಿಯೂಷ್‌, ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ, ಮಾಜಿ ಅಧ್ಯಕ್ಷ ಮನು ಬಳಿಗಾರ್‌, ಕನ್ನಡಪ್ರಭ ಮತ್ತು ಸುವರ್ಣನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ, ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ, ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌, ಕರ್ನಾಟಕ ರಾಜ್ಯಹಿಂದುಳಿದ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್‌ ಹೆಗ್ಡೆ, ಉದ್ಯಮಿ ವಕ್ವಾಡಿ ಪ್ರವೀಣ್‌ ಶೆಟ್ಟಿ, ಬಹರೇನ್‌ ಸಂಸ್ಥಾನದ ವಾರ್ತಾ ಇಲಾಖೆಯ ನಿರ್ದೇಶಕ ಯೂಸುಫ್‌ ಲೋರಿ, ಡಾ. ಆರತಿ ಕೃಷ್ಣ ಇದ್ದರು. ಸಾವಿರಕ್ಕೂ ಹೆಚ್ಚು ಬಹರೇನ್‌ ಕನ್ನಡಿಗರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಬಹರೇನ್‌ ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್‌ ಶೆಟ್ಟಿಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕಿರಣ್‌ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು.

ಅಮೆರಿಕಾದ ಶಾಲೆಯಲ್ಲಿ ಕನ್ನಡದ ಕಲರವ: ವಿದೇಶಿ ಭಾಷೆಯಾಗಿ ಕನ್ನಡ ಕಲಿಕೆ!

click me!