
ಇಸ್ಲಾಮಾಬಾದ್ (ನ.26): ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ರಾವಲ್ಪಿಂಡಿಯ ಅಡಿಯಾಲಾ ಜೈಲಿನೊಳಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ ಎಂಬ ವದಂತಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು ಹಲವು ಪತ್ರಿಕೆಗಳು ವರದಿ ಮಾಡಿವೆ.
ಇಮ್ರಾನ್ ಖಾನ್ ಹತ್ಯೆ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲವಾದರೂ ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಮತ್ತು ಅಫ್ಘಾನ್ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ವಿದೇಶಾಂಗ ಸಚಿವಾಲಯ ಬಲೂಚಿಸ್ತಾನ್ ಎಂದು ಗುರುತಿಸಿಕೊಂಡಿರುವ ಒಂದು ಎಕ್ಸ್ ಖಾತೆಯು 'ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತು ಗುಪ್ತಚರ ಸಂಸ್ಥೆ ಐಎಸ್ಐ ಈ ಕೊಲೆಯ ಸಂಚನ್ನು ರೂಪಿಸಿದೆ' ಎಂದು ನೇರವಾಗಿ ಆರೋಪಿಸಿದೆ. ಈ ಮಾಹಿತಿ ನಿಜವೆಂದು ದೃಢಪಟ್ಟರೆ, ಅದು 'ಭಯೋತ್ಪಾದಕ ಪಾಕಿಸ್ತಾನದ ಸಂಪೂರ್ಣ ಅಂತ್ಯವನ್ನು' ಸೂಚಿಸುತ್ತದೆ ಎಂದು ಆ ಖಾತೆಯ ಪೋಸ್ಟ್ನಲ್ಲಿ ಬರೆಯಲಾಗಿದೆ. ಈ ವರದಿಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೃಢೀಕರಣಗಳು ಲಭ್ಯವಾಗಿಲ್ಲ ಎಂಬುದು ಗಮನಾರ್ಹ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಹತ್ಯೆ ವದಂತಿಗಳು ಹರಡಿದ ನಂತರ, ಜೈಲಿನ ಹೊರಗೆ ಜನಸಮೂಹ ಜಮಾಯಿಸಿತು. ಇಮ್ರಾನ್ ಖಾನ್ ಅವರ ಸಹೋದರಿಯರಾದ ನೊರೀನ್ ಖಾನ್, ಅಲೀಮಾ ಖಾನ್ ಮತ್ತು ಉಜ್ಮಾ ಖಾನ್ ಅವರು ಸಹೋದರನನ್ನು ಭೇಟಿಯಾಗಲು ಯತ್ನಿಸಿದಾಗ ಅವರಿಗೆ ಪ್ರವೇಶ ನಿರಾಕರಿಸಲಾಯಿತು. ಈ ವೇಳೆ ಪೊಲೀಸ್ ಸಿಬ್ಬಂದಿಯಿಂದ ತಮ್ಮ ಮೇಲೆ ತೀವ್ರ ಹಲ್ಲೆ ನಡೆದಿದೆ ಎಂದು ಸಹೋದರಿಯರು ಆರೋಪಿಸಿದ್ದಾರೆ. ಇದಲ್ಲದೆ, ಪಿಟಿಐ ನಾಯಕರಾದ ಖೈಬರ್ ಪಖ್ತುನ್ಖ್ವಾ ಮುಖ್ಯಮಂತ್ರಿ ಸೊಹೈಲ್ ಅಫ್ರಿದಿ ಅವರು ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ಹಲವು ಬಾರಿ ಪ್ರಯತ್ನಿಸಿದರೂ ಜೈಲು ಅಧಿಕಾರಿಗಳು ಪ್ರತಿ ಬಾರಿಯೂ ಅನುಮತಿ ನಿರಾಕರಿಸಿದ್ದಾರೆ.
ಆಗಸ್ಟ್ 2023 ರಿಂದ ಅಡಿಯಾಲಾ ಜೈಲಿನಲ್ಲಿ ಬಂಧಿತರಾಗಿರುವ ಇಮ್ರಾನ್ ಖಾನ್ ಅವರನ್ನು ಸಾರ್ವಜನಿಕ ಭೇಟಿಗಳಿಂದ ದೂರವಿಡಲಾಗಿದ್ದು, ಅವರ ಸ್ಥಿತಿಯ ಬಗ್ಗೆ ಕುಟುಂಬ ಮತ್ತು ಪಕ್ಷದ ಸದಸ್ಯರಿಗೆ ಸರಿಯಾದ ಮಾಹಿತಿ ದೊರೆಯುತ್ತಿಲ್ಲ. ಈ ಸನ್ನಿವೇಶವು ಹತ್ಯೆಯ ಕುರಿತ ಅನುಮಾನಗಳನ್ನು ಮತ್ತು ಜೈಲು ಆಡಳಿತದ ಮೇಲಿನ ಗಂಭೀರ ಆರೋಪಗಳನ್ನು ಇನ್ನಷ್ಟು ಹೆಚ್ಚಿಸಿದೆ. ಹೈಕಮಾಂಡ್ ಸೂಚನೆಯ ಮೇರೆಗೆ ಸೇನೆಯೇ ಭೇಟಿ ಸಂಪರ್ಕಗಳನ್ನು ತಡೆಯುತ್ತಿದೆ ಎಂದು ಖಾನ್ ಈ ಹಿಂದೆ ಆರೋಪಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ