
ಟೆಹ್ರಾನ್: ಸರ್ವೋಚ್ಚ ನಾಯಕ ಅಲಿ ಖಮೇನಿ ಸೇರಿದಂತೆ ತನ್ನ ಉನ್ನತ ನಾಯಕರ ಸಾವಿನಿಂದ ಕುದಿಯುತ್ತಿರುವ ಇರಾನ್, ಶತ್ರುಗಳಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹತ್ಯೆಯ ಬೆದರಿಕೆಯೊಡ್ಡಿದ್ದು, ‘ಸದ್ದಾಂ ಹುಸೇನ್ಗೆ ಆದ ಗತಿಯೇ ನಿಮಗೂ ಆಗಲಿದೆ’ ಎಂದು ಗುಡುಗಿದೆ. ಇದೇ ವೇಳೆ, ಯಾವುದೇ ಕಾರಣಕ್ಕೂ ಕದನ ವಿರಾಮಕ್ಕೆ ಒಪ್ಪುವುದಿಲ್ಲ ಎಂದು ಪುನರುಚ್ಚರಿಸಿದೆ.
‘ಇರಾಕ್ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್ಗಾದ ಗತಿಯೇ ಟ್ರಂಪ್ ಮತ್ತು ನೆತನ್ಯಾಹುಗೂ ಆಗಲಿದೆ. ಸೋಲಿನ ಹಾದಿಯನ್ನು ದೇವರು ನಮಗೆ ಬಂದ್ ಮಾಡಿದ್ದಾನೆ’ ಎಂದು ಇರಾನ್ ಸೇನಾ ವಕ್ತಾರ ಎಚ್ಚರಿಸಿದ್ದಾರೆ.ಇದೇ ವೇಳೆ, ‘ನಮ್ಮ ಜನರಿಗಾಗಿ ಮತ್ತು ದೇಶದ ಭದ್ರತೆಗಾಗಿ ಹೋರಾಟವನ್ನು ಮುಂದುವರಿಸುತ್ತೇವೆ. ಇರಾನ್ ಕದನ ವಿರಾಮಕ್ಕೆ ಒಪ್ಪಲು ಸಾಧ್ಯವೇ ಇಲ್ಲ’ ಎಂದು ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಗ್ಚಿ ಸ್ಪಷ್ಟಪಡಿಸಿದ್ದಾರೆ.
ಇರಾಕ್ನ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್ನನ್ನು 2006ರ ಡಿ.30ರಂದು ಬಾಗ್ದಾದ್ನಲ್ಲಿ ಕ್ರೂರ ರೀತಿಯಲ್ಲಿ ಎಳೆದೊಯ್ದು ಗಲ್ಲಿಗೇರಿಸಲಾಯಿತು. 1982ರಲ್ಲಿ 148 ಶಿಯಾ ಮುಸ್ಲಿಮರ ಹತ್ಯಾಕಾಂಡ ಸೇರಿದಂತೆ ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಇರಾಕಿನ ವಿಶೇಷ ನ್ಯಾಯಮಂಡಳಿ ದೋಷಿ ಎಂದು ಘೋಷಿಸಿ ಮರಣದಂಡನೆ ವಿಧಿಸಿತ್ತು.
ಜೆರುಸಲೇಂ: ರಂಜಾನ್ ಹಬ್ಬದ ದಿನವೇ ಇಸ್ರೇಲ್ ರಾಜಧಾನಿ ಜೆರುಸಲೇಂ ಮೇಲೆ ಇರಾನ್ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ಈ ಭಾಗದ ಮೇಲೆ ದಾಳಿಯಾಗಿದ್ದು 40 ವರ್ಷಗಳ ಬಳಿಕ ಇದೇ ಮೊದಲು ಎನ್ನಲಾಗಿದೆ.
ಇಸ್ರೇಲ್ ಶತ್ರು ಕ್ಷಿಪಣಿಯನ್ನು ಹೊಡೆದುರುಳಿಸಿದ್ದು, ಅದರ ಭಾಗಗಳು ವೆಸ್ಟರ್ನ್ ವಾಲ್ ಮತ್ತು ಅಲ್-ಅಕ್ಸಾ ಮಸೀದಿಯ ಸಮೀಪ ಬಿದ್ದಿವೆ. ಈ ಎರಡೂ ಜಾಗಗಳು ಯಹೂದಿ ಹಾಗೂ ಮುಸ್ಲಿಮರಿಗೆ ಪವಿತ್ರವಾದವುಗಳು ಎಂಬುದು ವಿಶೇಷ. ಹೈಫಾದಲ್ಲಿ ಕ್ಷಿಪಣಿಯ ಅವಶೇಷವೊಂದು ವೇರ್ಹೌಸ್ಗೆ ಬಿದ್ದು ಶಿಪ್ಪಿಂಗ್ ಕಂಟೈನರ್ಗಳಲ್ಲಿ ಬೆಂಕಿ ಹತ್ತಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ವರದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ