
ಜೆರುಸಲೇಂ(ಅ.23) ಹಮಾಸ್ ಉಗ್ರರು ಏಕಾಏಕಿ ಇಸ್ರೇಲ್ ಮೇಳೆ ಮೂರು ಮಾರ್ಗಗಳ ಮೂಲಕ ದಾಳಿ ನಡೆಸಿ ಮಾರಣಹೋಮ ನಡೆಸಿದ್ದರು. ಅಕ್ಟೋಬರ್ 7ರ ಶನಿವಾರ ನಡೆದ ಈ ಭೀಕರ ದಾಳಿಗೆ ಇಸ್ರೇಲ್ ಅಮಾಯಕ ನಾಗರೀಕರು ಬಲಿಯಾಗಿದ್ದರು. ಯೂಹೂದಿಗಳ ಮನೆಗಳನ್ನು ಹುಡುಕಿ ಹುಡುಕಿ ದಾಳಿ ಮಾಡಲಾಗಿತ್ತು. ಕುಟುಂಬ ಸಮೇತ ಹತ್ಯೆ ಮಾಡಲಾಗಿತ್ತು. ಪುಟ್ಟ ಕಂದಮ್ಮಗಳ ಶಿರಚ್ಚೇಧ, ಸಜೀವ ದಹನ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಹಮಾಸ್ ಉಗ್ರರ ಮೇಲೆ ದಾಳಿ ಆರಂಭಿಸಿ ಇದೀಗ 17ನೇ ದಿನಕ್ಕೆ ಕಾಲಿಟ್ಟಿದೆ. ಇಸ್ರೇಲ್ ಪ್ರತಿದಾಳಿಯನ್ನು ಅರಬ್ ರಾಷ್ಟ್ರಗಳು ಸೇರಿದಂತೆ ಹಲವು ರಾಷ್ಟ್ರಗಳು ವಿರೋಧಿಸಿದೆ. ಇದರ ನಡುವೆ ವಿಶ್ವಸಂಸ್ಥೆ ಕೂಡ ಇಸ್ರೇಲ್ ಮೇಲೆ ಮುಗಿಬಿದ್ದಿದೆ. ಯುದ್ಧ ಮಾಡುವಾಗಲೂ ಕನಿಷ್ಠ ನೀತಿಯೊಂದಿದೆ ಎಂದು ವಿಶ್ವಸಂಸ್ಥೆ ಟ್ವೀಟ್ ಮೂಲಕ ಇಸ್ರೇಲ್ ಕುಟುಕುವ ಪ್ರಯತ್ನ ಮಾಡಿತ್ತು. ಆದರೆ ಇಸ್ರೇಲ್ ನೀಡಿದ ಉತ್ತರಕ್ಕೆ ವಿಶ್ವಸಂಸ್ಥೆ ಸೈಲೆಂಟ್ ಆಗಿದೆ.
ಗಾಜಾ ಅಮಾಯಕ ಜನರ ಮೇಲೆ ದಾಳಿಯಾಗುತ್ತಿದೆ ಎಂದು ಪ್ಯಾಲೆಸ್ತಿನಿಯರು ವಿಶ್ವಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಗಾಜಾ ಆಸ್ಪತ್ರೆ ಮೇಲೆ ಬಾಂಬ್ ದಾಳಿಯನ್ನು ಇಸ್ರೇಲ್ ಸೇನೆ ಮಾಡಿದೆ ಎಂದು ಆರೋಪಿಸಿದ ಹಮಾಸ್ ಉಗ್ರ ಪಡೆ ಬಳಿಕ ಮುಖಭಂಗ ಅನುಭವಿಸಿತ್ತು. ಆದರೆ ಗಾಜಾದ ಆಸ್ಪತ್ರೆ ಮೇಲಿನ ಬಾಂಬ್ ದಾಳಿಯಿಂದ ಅಮಾಯಕರು ಬಲಿಯಾಗಿದ್ದರು. ಇನ್ನು ಗಾಜಾ ಮೇಲಿನ ಏರ್ಸ್ಟ್ರೈಕ್ನಿಂದ ಮಕ್ಕಳು, ಹೆಣ್ಣುಮಕ್ಕಳು ಸೇರಿದಂತೆ ಹಲವರು ಮತಪಟ್ಟಿದ್ದಾರೆ. ಈ ಎಲ್ಲಾ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ವಿಶ್ವಸಂಸ್ಥೆ ಟ್ವೀಟ್ ಮಾಡಿತ್ತು. ಯುದ್ಧ ಕೆಲ ನಿಯಮಗಳನ್ನು ಹೊಂದಿದೆ ಎಂದು ವಿಶ್ವಸಂಸ್ಥೆ ಟ್ವೀಟ್ ಮಾಡಿತ್ತು.
ಇಸ್ರೇಲ್ ವಿರುದ್ಧ ಮರುಕಳಿಸುತ್ತಾ 1948ರ ಅರಬ್ ಯುದ್ಧ..? ತೈಲ ನಿರ್ಬಂಧ ಹೇರುವಂತೆ ಇರಾನ್ ಒತ್ತಾಯ..!
ಯುದ್ಧದ ವೇಳೆ ಅಮಾಯಕರ ಮೇಲೆ ದಾಳಿ, ನಾಗರೀಕರ ಮನೆಗಳ ಮೇಲೆ ದಾಳಿ, ಆಸ್ಪತ್ರೆ ,ಶಾಲೆ, ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ಮಾಡುವಂತಿಲ್ಲ. ಈ ವಿಚಾರಗಳನ್ನೇ ಮುಖ್ಯವಾಗಿಟ್ಟುಕೊಂಡು ವಿಶ್ವಸಂಸ್ಥೆ ಟ್ವೀಟ್ ಮಾಡಿತ್ತು. ಈ ಟ್ವೀಟ್ಗೆ ಇಸ್ರೇಲ್ ಕೂಡ ಬದುಕಲು ಅರ್ಹವಾಗಿದೆ ಎಂದು ತಿರುಗೇಟು ನೀಡಿತ್ತು. ಈ ಮೂಲಕ ಈ ದಾಳಿ ನಮ್ಮ ಅಸ್ತಿತ್ವದ ಪ್ರಶ್ನೆ ಎಂಬ ಖಡಕ್ ಸಂದೇಶವನ್ನು ಇಸ್ರೇಲ್ ನೀಡಿದೆ.
ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಪರ ಅಮೆರಿಕ ಬ್ಯಾಟ್ ಬೀಸಿದೆ. ಇಸ್ರೇಲ್ ನಡೆಸುತ್ತಿರುವುದು ಅಸ್ತಿತ್ವದ ಹೋರಾಟ. ಇಸ್ರೇಲ್ ಉಗ್ರರನ್ನ ಮಾತ್ರ ಟಾರ್ಗೆಟ್ ಮಾಡಿದೆ. ಅಮಾಯಕ ನಾಗರೀಕರ ಮೇಲೆ ದಾಳಿ ಮಾಡುತ್ತಿಲ್ಲ. ಆದರೆ ಹಮಾಸ್ ಉಗ್ರರು ನಾಗರೀಕರನ್ನು ಬಳಸಿಕೊಳ್ಳುತ್ತಿದೆ. ಇರಾನ್ ದೇಶ, ಹಮಾಸ್ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆಯನ್ನು ನಿಲ್ಲಿಸಬೇಕು ಎಂದು ಅಮೆರಿಕ ಹೇಳಿದೆ.
ಹಮಾಸ್ ಆಸ್ಪತ್ರೆ ಮೇಲೆ ದಾಳಿ ಮಾಡಿದ್ದು ಇಸ್ರೇಲ್ ಸೇನೆಯೋ? ಪ್ಯಾಲೆಸ್ತೀನ್ ಉಗ್ರರೋ? 500 ಜನರ ಹತ್ಯೆ ರಹಸ್ಯ ಹೀಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ