
ಡಮಾಸ್ಕಸ್ (ಫೆ.8): ಇತ್ತೀಚಿನ ವರ್ಷಗಳಲ್ಲಿ ಟರ್ಕಿ ಹಾಗೂ ಸಿರಿಯಾ ದೇಶಗಳು ಕಂಡು ಕೇಳರಿಯದಂಥ ಭೀಕರ ಭೂಕಂಪಕ್ಕೆ ಸಾಕ್ಷಿಯಾಗಿದೆ. 24 ಗಂಟೆಯ ಅವಧಿಯಲ್ಲಿ ಮೂರು ಬಾರಿ ಸಂಭವಿಸಿದ ಭೂಕಂಪದಲ್ಲಿ ಈ ಎರಡೂ ದೇಶಗಳ ಬಹುತೇಕ ಪ್ರದೇಶಗಳು ಅಕ್ಷರಶಃ ನರಕದಂತಾಗಿದ್ದರೆ, ಸಾವಿನ ಸಂಖ್ಯೆ 6 ಸಾವಿರದ ಗಡಿ ದಾಟಿದೆ. ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಿಂದ ಪರಿಹಾರ ಸಾಮಗ್ರಿಗಳು, ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಾಗುವಂಥ ಸಿಬ್ಬಂದಿಗಳನ್ನು ಹೊತ್ತ ವಿಮಾನಗಳು ಟರ್ಕಿಗೆ ಬಂದಿಳಿದಿವೆ. ಈ ನಡುವೆ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ವ್ಯಕ್ತಿಗಳ ಹುಡುಕಾಟಕ್ಕೆ ಇನ್ನಷ್ಟು ವೇಗ ಸಿಕ್ಕಿದೆ. ಈ ನಡುವೆ ಸಿರಿಯಾದಲ್ಲಿ ಮಂಗಳವಾರದ ಕಾರ್ಯಾಚರಣೆಯ ವೇಳೆ ಜಗತ್ತೇ ಅಚ್ಚರಿ ಪಡುವಂಥ ವಿದ್ಯಮಾನ ನಡೆದಿದೆ. ಭೂಕಂಪ ಸಂಭವಿಸಿದ ದಿನದಂದೇ ಜನಿಸಿದ ಮಗು, ಅಗಾಧ ಕಟ್ಟಡಗಳ ಅವಶೇಷಗಳ ಮಧ್ಯೆಯೂ ಪವಾಡಸದೃಶ್ಯವಾಗಿ ಪಾರಾಗಿದೆ. ಮಗು ಆಗ ತಾನೆ ಜನಿಸಿತ್ತು ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಮಗುವಿನ ಹೊಕ್ಕಳಬಳ್ಳಿ ಕೂಡ ತುಂಡಾಗಿರಲಿಲ್ಲ. ನಗುತಲಿದ್ದ ಮಗುವಿನ ಪಕ್ಕದಲ್ಲಿಯೇ ಇದ್ದ ತಾಯಿ ಭೂಕಂಪಕ್ಕೆ ಬಲಿಯಾಗಿದ್ದರೆ. ಮಗುವಿನ ಇಡೀ ಕುಟುಂಬ ಕೂಡ ಸಾವಿ ಕಂಡಿದೆ.
ಸಾವಿರಾರು ಕಟ್ಟಡಗಳು ಧರೆಗೆ ಉರುಳಿದ್ದವು. ಈಗಲೂ ಕೂಡ ಸಾವಿರಾರು ಜನರು ಕಟ್ಟಡದ ಅಡಿಯಲ್ಲಿ ಸಮಾಧಿಯಾಗಿದ್ದಾರೆ. ಟರ್ಕಿ ಮತ್ತು ಸಿರಿಯಾದಲ್ಲಿ ಅವಶೇಷಗಳನ್ನು ತೆರವುಗೊಳಿಸುತ್ತಿದ್ದಂತೆ, ಅನೇಕ ಭಾವನಾತ್ಮಕ ಕಥೆಗಳು ಹೊರಬರುತ್ತಿವೆ. ವಾಯುವ್ಯ ಸಿರಿಯಾದಲ್ಲಿ ರಕ್ಷಣಾ ಕಾರ್ಯಾಚರಣೆಯ ವೇಳೆ ಅವಶೇಷಗಳ ಅಡಿಯಿಂದ ಆಗ ತಾನೆ ಹುಟ್ಟಿದ್ದ ಹೆಣ್ಣು ಮಗುವನ್ನು ಜೀವಂತವಾಗಿ ಹೊರತೆಗೆಯಲು ಯಶಸ್ವಿಯಾಗಿದ್ದಾರೆ. ಭೂಕಂಪ ನಡೆಯುತ್ತಿದ್ದ ವೇಳೆಯಲ್ಲಿಯೇ ತಾಯಿಗೆ ಹೆರಿಗೆ ನೋವು ಬಂದಿತ್ತೆಂದು ಕಾಣುತ್ತದೆ. ಸಾಯುವ ಮುನ್ನವೇ ಆಕೆ ಹೆಣ್ನು ಮಗುವಿಗೆ ಜನ್ಮ ನೀಡಿರುವ ಸಾಧ್ಯತೆ ಇದೆ ಎಂದು ಹೆಣ್ಣ ಮಗುವಿನ ಸಂಬಂಧಿಯೊಬ್ಬರು ತಿಳಿಸಿದ್ದಾರೆ. ದುರಂತದಲ್ಲಿ ಮಗುವಿನ ತಂದೆ, ನಾಲ್ವರು ಸಹೋದರರು ಮತ್ತು ಚಿಕ್ಕಮ್ಮ ಸಹ ಸಾವನ್ನಪ್ಪಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಸಿರಿಯಾದ ಜಿಂದಾಯ್ರಿಸ್ ಪಟ್ಟಣದಲ್ಲಿ ಒಬ್ಬ ವ್ಯಕ್ತಿ ಅವಶೇಷಗಳ ನಡವೆ ಹೆಣ್ಣು ಮಗುವನ್ನು ಹೊರಕ್ಕೆ ತೆಗೆಯುತ್ತಿರುವ ವೈರಲ್ ಆಗಿದೆ. ಜನಿಸಿ ಕೆಲ ದಿನಗಳಷ್ಟೇ ಆಗಿರುವ ಮಗು ಇದಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಆಫ್ರಿನ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. 7.8 ತೀವ್ರತೆಯ ಭೂಕಂಪದ ನಂತರ ಜಿಂದಾಯಾರಿಸ್ ನಗರದಲ್ಲಿ ನಾಶವಾದ ಸಾವಿರಾರು ಕಟ್ಟಡಗಳಲ್ಲಿ ಬಾಲಕಿಯ ಕುಟುಂಬ ವಾಸಿಸುತ್ತಿದ್ದ ಕಟ್ಟಡವೂ ಒಂದಾಗಿದೆ. ನಗರವು ಇಡ್ಲಿಬ್ ಪ್ರಾಂತ್ಯದಲ್ಲಿದೆ, ಇದು ಟರ್ಕಿಯ ಗಡಿಗೆ ಹತ್ತಿರದಲ್ಲಿದೆ.
ಜಗತ್ತನ್ನೇ ತಲ್ಲಣಗೊಳಿಸಿದ ಟರ್ಕಿಯ ಭೂಕಂಪ: ರಕ್ಕಸ ಪ್ರಳಯದ ರಹಸ್ಯ ಬಯಲು
ಕಾರ್ಯಾಚರಣೆಯ ವೇಳೆ ಕೇಳಿತ್ತು ಅಳುವಿನ ಶಬ್ದ: ಕಟ್ಟಡ ಕುಸಿದಿರುವ ಸುದ್ದಿ ಕೇಳಿ ಸಂಬಂಧಿಕರು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಬಾಲಕಿಯ ಚಿಕ್ಕಪ್ಪ ಖಲೀಲ್ ಅಲ್ ಸುವೈದಿ ಹೇಳಿದ್ದಾರೆ. ಅವಶೇಷಗಳನ್ನು ತೆಗೆಯುವ ವೇಳೆ ನಾವು ಮಗುವಿನ ಅಳುವಿನ ಶಬ್ದ ಕೇಳಿದ್ದೆವು. ಅದನ್ನೇ ಗಮನದಲ್ಲಿಟ್ಟುಕೊಂಡು, ಅವಶೇಷಗಳನ್ನು ಹೊರತೆಗೆದಾಗ, ಹೊಕ್ಕುಳಬಳ್ಳಿ ತಾಯಿಯೊಂದಿಗೆ ಜೋಡಿಕೊಂಡೇ ಇದ್ದ ಹೆಣ್ಣು ಮಗುವನ್ನು ನಾವು ಕಂಡುಕೊಂಡಿದ್ದವು. ಹೊಕ್ಕುಳಬಳ್ಳಿಯನ್ನು ಅಲ್ಲಿಯೇ ಕತ್ತರಿಸಿ ಮಗುವನ್ನು ಹೊರತೆಗೆದಿದ್ದೇವೆ. ನನ್ನ ಸಂಬಂಧಿಗಳು ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ಮಗುವಿನ ಆರೋಗ್ಯದ ಬಗ್ಗೆ ಕಳವಳಗಳಿತ್ತು ಎಂದು ಮಕ್ಕಳ ತಜ್ಞ ಹನಿ ಮಾರೂಫ್ ಹೇಳಿದ್ದು, ದೇಹದ ಮೇಲೆ ಹಲವು ಗಾಯಗಳಿದ್ದರೂ ಜನರನ್ನು ಕಂಡೊಡನೆ ನಗುತಲಿತ್ತು ಎಂದು ಹೇಳಿದ್ದಾರೆ.
ಟರ್ಕಿ ಸಿರಿಯಾ ಭೂಕಂಪಕ್ಕೆ ಬಲಿಯಾದವರು ಹತ್ತಲ್ಲ, 20 ಸಾವಿರಕ್ಕೂ ಹೆಚ್ಚು: WHO ಶಂಕೆ
ಕೊರೆಯುವ ಚಳಿ ಇದ್ದ ಕಾರಣ, ಆಕೆಯನ್ನು ಬೆಚ್ಚಗಿರಿಸುವ ಸಲುವಾಗಿ ಇನ್ಕ್ಯುಬೇಟರ್ನಲ್ಲಿ ಹಾಕಲಾಗಿತ್ತು. ಇನ್ನೊಂದೆಡೆ, ಮಗುವಿನ ತಾಯಿ, ತಂದೆ ಮತ್ತು ಎಲ್ಲಾ ನಾಲ್ವರು ಸಹೋದರರು ಸಾವು ಕಂಡಿದ್ದಾರೆ. ಭೂಕಂಪದಿಂದಾಗಿ ಸಿರಿಯಾ ಮತ್ತು ಟರ್ಕಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಆದರೆ, ಭೂಕಂಪಕ್ಕೂ ಮುನ್ನವೇ ಸಿರಿಯಾದಲ್ಲಿ 41 ಲಕ್ಷ ಜನರ ಬದುಕು ದುರಂತಕ್ಕಿಂತ ಕಡಿಮೆಯೇನೂ ಆಗಿರಲಿಲ್ಲ. ಹೆಚ್ಚಿನ ಮಹಿಳೆಯರು ಮತ್ತು ಮಕ್ಕಳು ಬದುಕಲು ಮಾನವೀಯ ನೆರವನ್ನು ಅವಲಂಬಿಸಿದ್ದಾರೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ