ಪಾರ್ಕ್ನಲ್ಲಿ ಕುಸಿದು ಬಿದ್ದಿದ್ದ ಶ್ವಾನಕ್ಕೆ ವ್ಯಕ್ತಿಯೊಬ್ಬ ಸಿಪಿಆರ್ (cardiopulmonary resuscitation) ಮಾಡುವ ಮೂಲಕ ಶ್ವಾನದ ಜೀವ ಉಳಿಸಿದ ಘಟನೆ ನಡೆದಿದೆ. ಹೌದು ಹೃದಯಾಘಾತವೆಂಬುದು ಕೇವಲ ಮನುಷ್ಯರಿಗೆ ಮಾತ್ರವಲ್ಲ. ಪ್ರಾಣಿಗಳಿಗೂ ಹೃದಯಾಘಾತವಾಗುವುದು. ಹೀಗೆ ನಿಂತಿದ್ದಾಗಲೇ ಒಮ್ಮೆಗೆ ಬಿದ್ದ ಶ್ವಾನಕ್ಕೂ ಹೃದಯಾಘಾತವಾಗಿದೆ. ಆದರೆ ಅದೃಷ್ಟ ಆಯಸ್ಸು ಎರಡು ಚೆನ್ನಾಗಿತ್ತೇನೋ ಕೂಡಲೇ ಅದಕ್ಕೆ ಚಿಕಿತ್ಸೆ ಸಿಕ್ಕಿದ್ದು ಅದು ಬದುಕುಳಿದಿದೆ.
ಇನ್ನು ಹೀಗೆ ಶ್ವಾನಕ್ಕೆ ಸಿಪಿಆರ್ ಮಾಡಿದ ವ್ಯಕ್ತಿ, ಸಿಪಿಆರ್ ಸೇರಿದಂತೆ ತುರ್ತು ಚಿಕಿತ್ಸೆ ಮಾಡುವ ದೃಶ್ಯವನ್ನು ಈ ಹಿಂದೆ ಯೂಟ್ಯೂಬ್ನಲ್ಲಿ ನೋಡಿ ಕಲಿತುಕೊಂಡಿದ್ದೆ ಅಲ್ಲದೇ ಹೀಗೆ ಮಾಡಿದ್ದು ಇದೇ ಮೊದಲು ಎಂದು ಹೇಳಿದ್ದಾರೆ. ಸಾಕು ಪ್ರಾಣಿಗಳನ್ನು ವಾಕಿಂಗ್ ಕರೆದೊಯ್ಯುವುದು ನಾಯಿ ಸಾಕಿದವರ ನೆಚ್ಚಿನ ಹವ್ಯಾಸವಾಗಿದೆ. ಹೀಗೆ ಮಹಿಳೆಯೊಬ್ಬರು ತಮ್ಮ ಸಾಕು ನಾಯಿ ಬಾಕ್ಸರ್ (boxer) ಹಾಗೂ ಸ್ಟೋನ್ (stone) ನನ್ನು ವಾಕಿಂಗ್ ಕರೆದುಕೊಂಡು ಪಾರ್ಕಿಗೆ ಬಂದಿದ್ದು, ಈ ವೇಳೆ 9 ವರ್ಷದ ಶ್ವಾನ ಸ್ಟೊನ್ ದಿಢೀರನೇ ಪಾರ್ಕ್ನಲ್ಲೇ ಕುಸಿದು ಬಿದ್ದಿದೆ. ಈ ವೇಳೆ ಮಹಿಳೆ ಸಹಾಯಕ್ಕಾಗಿ ಜೋರಾಗಿ ಕೂಗಿಕೊಂಡಿದ್ದಾರೆ.
ಮಹಿಳೆಯ ಸಂಕಟದ ಕರೆಯನ್ನು ಕೇಳಿದ, ಜೇ (Jay) ಎಂಬ ವ್ಯಕ್ತಿಯೊಬ್ಬರು ಅವರ ಬಳಿಗೆ ಧಾವಿಸಿದ್ದಾರೆ. ಈ ವೇಳೆ ಶ್ವಾನ ಉಸಿರಾಡುತ್ತಿಲ್ಲ ಎಂಬುದು ಅರಿವಿಗೆ ಬಂದಿದ್ದು, ಬಳಿಕ ನಾಯಿಯ ಹೃದಯದ ಮೇಲೆ ಗಟ್ಟಿಯಾಗಿ ಹಲವು ಸಲ ಒತ್ತಿದ ಅವರು ಅದಕ್ಕೆ ಉಸಿರು ನೀಡುವ ಪ್ರಯತ್ನ ಮಾಡಿದರು. ಬಳಿಕ ಹಲವಾರು ನಿಮಿಷಗಳ ನಂತರ, ನಾಯಿ ಸ್ವಲ್ಪ ಪ್ರತಿಕ್ರಿಯಿಸಲು ಶುರು ಮಾಡಿತ್ತು. ಮತ್ತೆ ಸ್ವಲ್ಪದರಲ್ಲೇ ಅದು ಎದ್ದು ಕುಳಿತಿದ್ದು, ಎಲ್ಲರೂ ಮತ್ತೊಮ್ಮೆ ಶ್ವಾನ ಸ್ಟೋನ್ ಉಸಿರಾಡುವುದನ್ನು ನೋಡಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
Viral Video: ಉಸಿರು ನೀಡಿ ಗಂಭೀರ ಸ್ಥಿತಿಯಲ್ಲಿದ್ದ ಕೋತಿಯ ಜೀವ ಉಳಿಸಿದ ಆಟೋ ಚಾಲಕ
ಈ ಕ್ಷಣವನ್ನು ಅಲ್ಲೇ ಇದ್ದವರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು ವೈರಲ್ ಆಗಿದೆ. ಇನ್ನು ಶ್ವಾನಕ್ಕೆ ಚಿಕಿತ್ಸೆ ನೀಡಿದ ವ್ಯಕ್ತಿ ಶ್ವಾನ ಸ್ಟೋನ್ ಬಗ್ಗೆ ಮತ್ತೊಂದು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ನಾಯಿಯನ್ನು ನಂತರ ಪಶುವೈದ್ಯರ ಬಳಿಗೆ ಕರೆದೊಯ್ಯಲಾಯಿತು. ಅದನ್ನು ಪರೀಕ್ಷಿಸಿದ ಅವರು ಅದರ ಹೃದಯ ಚೆನ್ನಾಗಿ ಕಾರ್ಯ ನಿರ್ವಸಹಿಸುತ್ತಿದೆ ಎಂದು ತಿಳಿಸಿದರು ಎಂದು ಜೇ ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
CPR Procedure: ಮನುಷ್ಯನ ಜೀವ ಉಳಿಸಬಲ್ಲ ಸಿಪಿಆರ್ ಚಿಕಿತ್ಸೆ ಬಗ್ಗೆ ತಿಳಿದಿರಿ
ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೇ, ಮಹಿಳೆಯ ಬೊಬ್ಬೆ ಕೇಳಿದ ಕೂಡಲೇ ನಾನು ಸಹಾಯಕ್ಕೆ ಧಾವಿಸಿದೆ. ಇದು ನಾನು ಮೊದಲು ಮಾಡಿದ ಸಿಪಿಆರ್ ಪ್ರಯೋಗ. ನಾನು ತುರ್ತು ಚಿಕಿತ್ಸೆಗಳ ಬಗ್ಗೆ ಯೂಟ್ಯೂಬ್ನಲ್ಲಿ ವಿಡಿಯೋ ನೋಡಿದ್ದೆ. ಅಲ್ಲದೇ ಆ ಕ್ಷಣ ನಾನು ಗಾಬರಿಯಾಗಿದ್ದೆ. ಆದರೆ ನನ್ನ ಬುದ್ದಿವಂತಿಕೆ ಶ್ವಾನದ ಜೀವ ಉಳಿಸಿದ್ದಕ್ಕೆ ಖುಷಿಯಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಇತ್ತ ಈ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದ ಜನರು ಜೇಯನ್ನು ಹೀರೋ ಎಂದು ಕರೆದಿದ್ದು, ಆತನ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ