
ನವದೆಹಲಿ (ಮಾ.16): ದಶಕಗಳಿಂದ ರಸ್ತೆ ಹಾಗೂ ಕೃಷಿ ಭೂಮಿಗಳನ್ನು ನುಂಗಿ ಹಾಕುತ್ತಿದ್ದ ಮರುಭೂಮಿಯ ಸುತ್ತ ಈಗ 3,046 ಕಿಲೋಮೀಟರ್ ಉದ್ದದ 'ಮರಗಳ ಗೋಡೆ' ನಿರ್ಮಾಣವಾಗಿದೆ. ಚೀನಾದ ತಕ್ಲಮಕನ್ ಮರುಭೂಮಿಯನ್ನು ಸುತ್ತುವರೆದಿರುವ ಈ ಹಸಿರು ಪಟ್ಟಿ, ಮನುಷ್ಯ ನಿರ್ಮಿತ ಅದ್ಭುತಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ನವೆಂಬರ್ 28, 2024 ರಂದು ತಕ್ಲಮಕನ್ ಮರುಭೂಮಿಯ ದಕ್ಷಿಣ ತುದಿಯಲ್ಲಿ ಕೊನೆಯ 100 ಮೀಟರ್ ಮರಗಳನ್ನು ನೆಡುವ ಮೂಲಕ ಈ ಬೃಹತ್ ಯೋಜನೆ ಪೂರ್ಣಗೊಂಡಿದೆ. ಈ ಮೂಲಕ 3,046 ಕಿಲೋಮೀಟರ್ ಉದ್ದದ ನಿರಂತರ ಹಸಿರು ಬೆಲ್ಟ್ ಮರುಭೂಮಿಯನ್ನು ಸಂಪೂರ್ಣವಾಗಿ ಆವರಿಸಿದಂತಾಗಿದೆ.
ಚೀನಾದ 'ಥ್ರೀ-ನಾರ್ತ್ ಶೆಲ್ಟರ್ಬೆಲ್ಟ್ ಪ್ರೋಗ್ರಾಂ' (Great Green Wall) ಅಡಿಯಲ್ಲಿ 1978 ರಲ್ಲಿ ಈ ಅಭಿಯಾನ ಆರಂಭವಾಗಿತ್ತು. 2023 ರ ಅಂತ್ಯದ ವೇಳೆಗೆ 2,761 ಕಿಮೀ ಪೂರ್ಣಗೊಂಡಿತ್ತು. ಅತ್ಯಂತ ಸವಾಲಿನದ್ದಾಗಿದ್ದ ಉಳಿದ 285 ಕಿಲೋಮೀಟರ್ ಭಾಗವನ್ನು ಈಗ ಯಶಸ್ವಿಯಾಗಿ ಪೂರ್ಣ ಮಾಡಲಾಗಿದೆ..
ಇದು ಕೇವಲ ಹವಾಮಾನ ಬದಲಾವಣೆಯ ಪ್ರಯೋಗವಾಗಿರಲಿಲ್ಲ. ಮರುಭೂಮಿಯ ಮರಳು ರಸ್ತೆ ಹಾಗೂ ಜಮೀನುಗಳಿಗೆ ನುಗ್ಗದಂತೆ ತಡೆಯುವುದು ಮತ್ತು ಧೂಳಿನ ಬಿರುಗಾಳಿಯ ತೀವ್ರತೆ ತಗ್ಗಿಸುವುದು ಇದರ ಮುಖ್ಯ ಗುರಿಯಾಗಿತ್ತು. ಮರಳು ದಿಬ್ಬಗಳ ಚಲನೆಯನ್ನು ನಿಧಾನಗೊಳಿಸಿ, ಮಾನವ ವಸತಿ ಪ್ರದೇಶಗಳನ್ನು ರಕ್ಷಿಸುವುದು ಇದರ ಹಿಂದಿನ ತುರ್ತು ಆವಶ್ಯಕತೆಯಾಗಿತ್ತು.
'PNAS' ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಕಳೆದ 25 ವರ್ಷಗಳ ಉಪಗ್ರಹ ದತ್ತಾಂಶಗಳು ಒಂದು ಮಹತ್ವದ ಬದಲಾವಣೆಯನ್ನು ತೋರಿಸಿವೆ. ಮರುಭೂಮಿಯ ಒಳಭಾಗವಲ್ಲದಿದ್ದರೂ, ಅದರ ಅಂಚುಗಳಲ್ಲಿ (Rim) ನೆಡಲಾದ ಸಸ್ಯಗಳು ಪರಿಸರದಲ್ಲಿ ಅಚ್ಚರಿ ಮೂಡಿಸಿವೆ.
ಜುಲೈನಿಂದ ಸೆಪ್ಟೆಂಬರ್ ವರೆಗಿನ ಮಳೆಗಾಲದಲ್ಲಿ ಈ ಸಸ್ಯಗಳು ಹೆಚ್ಚು ಸಕ್ರಿಯವಾಗುತ್ತವೆ. ಮರುಭೂಮಿಯ ಈ ಹಸಿರು ಅಂಚು ಈಗ ವಾತಾವರಣದ ಇಂಗಾಲದ ಡೈಆಕ್ಸೈಡ್ (CO2) ಅನ್ನು ಹೀರಿಕೊಳ್ಳುವ 'ಕಾರ್ಬನ್ ಸಿಂಕ್' ಆಗಿ ಕಾರ್ಯನಿರ್ವಹಿಸುತ್ತಿದೆ. ಒಣ ಹವೆಯ ಸಮಯದಲ್ಲಿ 416 ppm ಇದ್ದ ಇಂಗಾಲದ ಮಟ್ಟ, ಮಳೆಗಾಲದಲ್ಲಿ ಸಸ್ಯಗಳು ಸಕ್ರಿಯವಾದಾಗ 413 ppm ಗೆ ಇಳಿಯುತ್ತಿರುವುದು ಪತ್ತೆಯಾಗಿದೆ.
ಸಂಶೋಧಕ ಯುಕ್ ಎಲ್. ಯುಂಗ್ ಹೇಳುವಂತೆ, "ಅತ್ಯಂತ ಕಠಿಣ ಮರುಭೂಮಿಯನ್ನೂ ಇಂಗಾಲದ ಹೀರುವಿಕೆ ತಾಣವನ್ನಾಗಿ ಪರಿವರ್ತಿಸಬಹುದು ಮತ್ತು ಮರುಭೂಮಿಕರಣವನ್ನು ತಡೆಯಬಹುದು ಎಂಬುದಕ್ಕೆ ಇದು ಮೊದಲ ಯಶಸ್ವಿ ಮಾದರಿ' ಎಂದಿದ್ದಾರೆ.
ಮರುಭೂಮಿಯ ಅಂಚಿನಲ್ಲಿ ಕಾಡು ಬೆಳೆಸುವುದು ಅಷ್ಟು ಸುಲಭವಲ್ಲ. ಮಳೆಗಿಂತ ಹೆಚ್ಚಾಗಿ ಇಲ್ಲಿ ನೀರಿನ ನಿರ್ವಹಣೆಯೇ ಮುಖ್ಯ. ಪ್ರವಾಹದ ನೀರನ್ನು ತಿರುಗಿಸಿ ಪಾಪ್ಲರ್ ಕಾಡುಗಳನ್ನು ಬೆಳೆಸುವ ಮತ್ತು ಕೃಷಿ ಭೂಮಿಯನ್ನು ರಕ್ಷಿಸುವ ತಂತ್ರಜ್ಞಾನವನ್ನು ಚೀನಾ ಬಳಸುತ್ತಿದೆ. ವಿಜ್ಞಾನಿ ಕಿಂಗ್-ಫೈ ಲಿ ಎಚ್ಚರಿಸುವಂತೆ, "ಕೇವಲ ಮರುಭೂಮಿಯಲ್ಲಿ ಮರಗಳನ್ನು ನೆಡುವುದರಿಂದಲೇ ಹವಾಮಾನ ಬಿಕ್ಕಟ್ಟು ಬಗೆಹರಿಯುವುದಿಲ್ಲ." ಆದರೆ, ತಕ್ಲಮಕನ್ ಯೋಜನೆಯು ಭೂದೃಶ್ಯ ಇಂಜಿನಿಯರಿಂಗ್ ಮತ್ತು ಹವಾಮಾನ ಮೆಟ್ರಿಕ್ಗಳ ಅಪರೂಪದ ಸಂಗಮವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ