
ನವದೆಹಲಿ: ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರ ತಂದೆ ಪಿರೀ ಟ್ರೂಡೋ (Pierre Trudeau) ಸಹ ಭಾರತ ವಿರೋಧಿಯಾಗಿದ್ದರು. 1982ರಲ್ಲಿ ಖಲಿಸ್ತಾನಿ ಉಗ್ರ ತಲ್ವಿಂದರ್ ಪಾರ್ಮರ್ನನ್ನು ಹಸ್ತಾಂತರಿಸುವಂತೆ ಭಾರತ ಇಟ್ಟಿದ ಬೇಡಿಕೆಯನ್ನು ಅವರು ನಿರಾಕರಿಸಿದ್ದರು. ಇದಾದ ಬಳಿಕ 1985ರಲ್ಲಿ ಖಲಿಸ್ತಾನಿ ಉಗ್ರರು ಏರಿಂಡಿಯಾದ ಕನಿಷ್ಕ ವಿಮಾನದಲ್ಲಿ ಬಾಂಬ್ ಇಟ್ಟು 329 ಮಂದಿಯ ಸಾವಿಗೆ ಕಾರಣವಾಗಿದ್ದರು.
ಪ್ರತ್ಯೇಕತಾವಾದಿ ಖಲಿಸ್ತಾನಿ ಉಗ್ರರ (Khalistani militant) ಪರ ಹಿಂದಿನಿಂದಲೂ ಮೃಧು ಧೋರಣೆ ತಾಳುವ ಮೂಲಕ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದ ಕೆನಡಾ ಸರ್ಕಾರ (Canadian government), ಇದೀಗ ತನ್ನ ದೇಶದಲ್ಲಿ ಇತ್ತೀಚೆಗೆ ನಿಗೂಢವಾಗಿ ಸಾವನ್ನಪ್ಪಿದ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಭಾರತ ಸರ್ಕಾರದ ಏಜೆಂಟರ ಕೈವಾಡವಿದೆ ಎಂಬ ಗಂಭೀರ ಆರೋಪ ಮಾಡಿದೆ. ಅಲ್ಲದೆ ಈ ಆರೋಪ ಸಂಬಂಧ ತನ್ನ ದೇಶದಲ್ಲಿನ ಭಾರತೀಯ ರಾಯಭಾರಿ ಪವನ್ ಕುಮಾರ್ ರಾಯ್ರನ್ನು (Pawan Kumar Roy) ಉಚ್ಚಾಟಿಸಿದೆ.
ಭಾರತವು ಕೆನಡಾದ ಆರೋಪಗಳನ್ನು(Canada's allegations) ‘ಅಸಂಬದ್ಧ ಮತ್ತು ಪ್ರೇರಿತ’ ಎಂದು ಸಾರಾಸಗಟಾಗಿ ತಿರಸ್ಕರಿಸಿದೆ ಹಾಗೂ ಭಾರತದಲ್ಲಿನ ಕೆನಡಾ ರಾಯಭಾರಿ ಕ್ಯಾಮರಾನ್ ಮೆಕೆ (Cameron McKay) ಅವರಿಗೆ ದೇಶ ತೊರೆಯುವಂತೆ ಸೂಚಿಸಿ 5 ದಿನಗಳ ಗಡುವು ನೀಡಿದೆ. ಇದರೊಂದಿಗೆ ಉಭಯ ದೇಶಗಳ ನಡುವೆ ಭಾರೀ ಪ್ರಮಾಣದ ರಾಜತಾಂತ್ರಿಕ ಬಿಕ್ಕಟ್ಟು ಕಾಣಸಿಕೊಂಡಿದೆ. ನೆರೆಯ ಪಾಕಿಸ್ತಾನದ ಜೊತೆಗೆ ಭಾರತದ ಇಂಥ ಬಿಕ್ಕಟ್ಟು ಹೊಸದಲ್ಲವಾದರೂ ಮುಂದುವರೆದ ದೇಶವೊಂದರ ಜೊತೆಗೆ ಭಾರತದ ಈ ಮಟ್ಟಿನ ಬಿಕ್ಕಟ್ಟು ಇದೇ ಮೊದಲು ಎನ್ನಲಾಗಿದೆ.
ಕೆಣಕಿದವರ ಸುಮ್ಮನೆ ಬಿಡಲ್ಲ, 5 ದಿನದಲ್ಲಿ ದೇಶ ಬಿಟ್ಟು ಹೋಗಿ: ಕೆನಡಾ ಏಟಿಗೆ ಭಾರತದ ಎದಿರೇಟು
ಈ ನಡುವೆ, ಈ ಘಟನೆಗಳ ಬಗ್ಗೆ ಕಾಂಗ್ರೆಸ್ ಪಕ್ಷ ಪ್ರತಿಕ್ರಿಯಿಸಿ, ‘ಉಗ್ರವಾದದ ವಿರುದ್ಧ ಭಾರತ ಸದಾ ಹೋರಾಡುತ್ತ ಬಂದಿದೆ. ಈಗ ಕೆನಡಾ ಅನುಸರಿಸಿದ ನಡೆಗಳ ವಿಷಯದಲ್ಲಿ ದೇಶದ ಹಿತಾಸಕ್ತಿ ಕಾಯುವ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದೆ.
ಟ್ರುಡೋ ಆರೋಪ ಕಳವಳಕಾರಿ, ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದ ಅಮೆರಿಕ
ಅಮೆರಿಕ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಮಾಡಿದ ಆರೋಪಗಳು ಕಳವಳಕಾರಿಯಾಗಿವೆ. ಈ ಬಗ್ಗೆ ತನಿಖೆ ನಡೆಸಿ ಅಪರಾಧಿಗಳನ್ನು ನ್ಯಾಯದ ಕಟಕಟೆಗೆ ತರುವುದು ಮಹತ್ವದ್ದಾಗಿದೆ’ ಎಂದು ಆ ದೇಶದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಆಡ್ರಿಯೆನ್ ವ್ಯಾಟ್ಸನ್ ಹೇಳಿದ್ದಾರೆ.
ಖಲಿಸ್ತಾನ್ ಉಗ್ರ ನಿಜ್ಜರ್ ಹತ್ಯೆ : ಭಾರತದ ವಿರುದ್ಧ ಸೇಡು ತೀರಿಸಲು ಮುಂದಾದ ಕೆನಡಾ ಪ್ರಧಾನಿ
ಟ್ರುಡೋ ಗಂಭೀರ ಆರೋಪ:
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮಂಗಳವಾರ ಕೆನಡಾ ಸಂಸತ್ತಿನಲ್ಲಿ ಮಾತನಾಡಿ, ‘ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಸರ್ಕಾರದ ಏಜೆಂಟರ ಕೈವಾಡವಿದೆ ಎಂಬ ವಿಶ್ವಾಸಾರ್ಹ ಆರೋಪವಿದೆ. ಈ ಬಗ್ಗೆ ಕೆನಡಾ ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ’ ಎಂದು ಗಂಭೀರ ಆರೋಪ ಮಾಡಿದರು.
ನಾವು ಭಾರತವನ್ನು ಕೆಣಕಲು ಪ್ರಯತ್ನಿಸುತ್ತಿಲ್ಲ ಎಂದ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೊ
‘ಕೆನಡಾದ ನೆಲದಲ್ಲಿ ಕೆನಡಾದ ಪ್ರಜೆಯ ಹತ್ಯೆಯಲ್ಲಿ ವಿದೇಶಿ ಸರ್ಕಾರ ಭಾಗಿ ಆಗುವುದು ನಮ್ಮ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ. ಇದು ಮುಕ್ತ ಹಾಗೂ ಪ್ರಜಾಸತ್ತಾತ್ಮಕ ದೇಶದ ಮೂಲಭೂತ ನಿಯಮಗಳಿಗೆ ವಿರುದ್ಧವಾಗಿದೆ’ ಎಂದೂ ಅವರು ಹೇಳಿದರು.
ಇದರ ಬೆನ್ನಲ್ಲೇ ಕೆನಡಾ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು ‘ಕೆನಡಾವು ಹಿರಿಯ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿದೆ’ ಎಂದು ಅಧಿಕೃತ ಘೋಷಣೆ ಮಾಡಿದರು. ಉಚ್ಚಾಟಿತ ಭಾರತೀಯ ರಾಜತಾಂತ್ರಿಕ ಪವನ್ ಕುಮಾರ್ ರಾಯ್ ಎಂಬುವರಾಗಿದ್ದಾರೆ.
ಕೆನಡಾದ ಮತ್ತೊಂದು ಅಧಿಕಪ್ರಸಂಗ, ಭಾರತದಲ್ಲಿನ ಕೆನಡಾ ಪ್ರಜೆಗಳಿಗೆ ಪ್ರಯಾಣ ಸಲಹೆ ಕಳಿಸಿದ ಸರ್ಕಾರ!
ಭಾರತ ಸ್ಪಷ್ಟ ನಕಾರ:
ಭಾರತದ ವಿದೇಶಾಂಗ ಸಚಿವಾಲಯ ಈ ಬಗ್ಗೆ ಪ್ರತಿಕ್ರಿಯಿಸಿ, ‘ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿನ ಇತ್ತೀಚಿನ ಭೇಟಿಯಲ್ಲಿ ಕೆನಡಾ ಪ್ರಧಾನಿ ಟ್ರುಡೋ ಅವರು ನಿಜ್ಜರ್ ವಿಷಯ ಪ್ರಸ್ತಾಪಿಸಿ ಆರೋಪ ಮಾಡಿದ್ದರು. ಆಗ ಮೋದಿ ಈ ಆರೋಪಗಳನ್ನು ತಿರಸ್ಕರಿಸಿದ್ದರು. ಕೆನಡಾ ತನ್ನ ನೆಲದಲ್ಲಿ ಭಾರತದ ಸಾರ್ವಭೌಮತೆಗೆ ಧಕ್ಕೆ ತರುವ ವ್ಯಕ್ತಿಗೆ ಆಶ್ರಯ ನೀಡಿದ್ದು ಸಲ್ಲದು. ಈ ಬಗ್ಗೆ ಭಾರತ ಪ್ರತಿಭಟನೆ ಸಲ್ಲಿಸಿದ್ದರೂ ಕೆನಡಾ ಸರ್ಕಾರ ನಿಷ್ಕ್ರಿಯವಾಗಿತ್ತು. ಈಗ ಬಹಿರಂಗವಾಗೇ ಖಲಿಸ್ತಾನಿಗಳಿಗೆ ಕೆನಡಾ ಬೆಂಬಲ ನೀಡಿದ್ದು ಕಳವಳಕಾರಿ. ಅಂಥದ್ದರಲ್ಲಿ ಭಾರತದ ಮೇಲಿನ ಕೆನಡಾ ಆರೋಪ ನಿರಾಧಾರ’ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ