ಬಾಂಗ್ಲಾದಲ್ಲಿ ಉದ್ರಿಕ್ತರಿಂದ ದಾಂಧಲೆ: 4 ಹಿಂದೂ ದೇಗುಲಗಳ ಮೇಲೆ ದಾಳಿ

By Kannadaprabha NewsFirst Published Aug 6, 2024, 12:52 PM IST
Highlights

ಬಾಂಗ್ಲಾದೇಶದದಲ್ಲಿ ಶೇಕ್ ಹಸೀನಾ ರಾಜೀನಾಮೆಗೆ ಆಗ್ರಹಿಸಿ ಭುಗಿಲೆದ್ದ ದಂಗೆ ವೇಳೆ ಪ್ರತಿಭಟನಕಾರರು ಮೂರು ಹಿಂದೂ ದೇಗುಲಗಳು ಮತ್ತು ಭಾರತೀಯ ಸಾಂಸ್ಕೃತಿಕ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದಾರೆ.

ಢಾಕಾ: ಬಾಂಗ್ಲಾದೇಶದದಲ್ಲಿ ಶೇಕ್ ಹಸೀನಾ ರಾಜೀನಾಮೆಗೆ ಆಗ್ರಹಿಸಿ ಭುಗಿಲೆದ್ದ ದಂಗೆ ವೇಳೆ ಪ್ರತಿಭಟನಕಾರರು ಮೂರು ಹಿಂದೂ ದೇಗುಲಗಳು ಮತ್ತು ಭಾರತೀಯ ಸಾಂಸ್ಕೃತಿಕ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದಾರೆ. ಢಾಕಾದಲ್ಲಿರುವ ಹಿಂದೂ, ಬೌದ್ಧ, ಕ್ರೈಸ್ತ ಐಕ್ಯತಾ ಕೇಂದ್ರದ ಮೇಲೆ ದಾಳಿ ನಡೆಸಲಾಗಿದೆ.  ಭಾರತ ಹಾಗೂ ಬಾಂಗ್ಲಾದೇಶ ಉಭಯ ದೇಶಗಳ ನಡುವಿನ ಸೌಹಾರ್ದಯುತ ಸಂಬಂಧದ ಸಲುವಾಗಿ 2010ರಲ್ಲಿ ಇದನ್ನು ಸ್ಥಾಪಿಸಲಾಗಿತ್ತು. ಇದಲ್ಲದೆ ದೇಶದ ಹಲವು ಭಾಗಗಳಲ್ಲಿ ಕಾಳಿ ಮಂದಿರ ಸೇರಿದಂತೆ ನಾಲ್ಕು ದೇಗುಲಗಳ ಮೇಲೆ ದಾಳಿ ನಡೆಸಿ ಹಾನಿ ಮಾಡಲಾಗಿದೆ.

ಠಾಣೆ, ಕಾರಾಗೃಹಕ್ಕೂ ಉದ್ರಿಕ್ತರ ಬೆಂಕಿ: 500 ಕೈದಿಗಳು ಪರಾರಿ, ಅಪಾರ ಶಸ್ತ್ರಾಸ್ತ್ರ ಲೂಟಿ

Latest Videos

ಢಾಕಾ: ಇಲ್ಲಿನ ಶೆರ್ಪು‌ಜಿಲ್ಲಾ ಕಾರಾಗೃಹಕ್ಕೆ ಪ್ರತಿಭಟನಾಕಾರರ ಗುಂಪೊಂದು ದಾಳಿ ಮಾಡಿ ಕಾರಾಗೃಹದ ಗೇಟ್, ಗೋಡೆಗಳನ್ನು ಹೊಡೆದು ಹಾಕಿ, ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಜೈಲಿನಲ್ಲಿದ್ದ 500 ಕೈದಿಗಳು ಪರಾರಿಯಾಗಿದ್ದಾರೆ. ಅದೇ ರೀತಿ ಚಿತ್ತಗಾಂಗ್ ಮೆಟ್ರೋಪಾಲಿಟನ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ  ಹಲವು ಪೊಲೀಸ್ ಠಾಣೆಗಳ ಮೇಲೆ ಪ್ರತಿಭಟನಾಕಾರರು ದಾಳಿ ಮಾಡಿ ಬೆಂಕಿ ಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ಉಪಕರಣಗಳನ್ನು ಲೂಟಿ ಮಾಡಿದ್ದಾರೆ. ಢಾಕಾದಲ್ಲಿನ ಎಟಿನ್ ಬಾಂಗ್ಲಾ ಸುದ್ದಿ ವಾಹಿನಿ ಕಚೇರಿ ಮೇಲೆ ದಾಳಿ ನಡೆಸಿದ ಉದ್ರಿಕ್ತರು, ಟೇಬಲ್ ಹೊರತುಪಡಿಸಿ ಮಿಕ್ಕೆಲ್ಲಾ ವಸ್ತುಗಳನ್ನು ಲೂಟಿ ಮಾಡಿದ್ದಾರೆ.

ಬಾಂಗ್ಲಾ ದಂಗೆ ಹಿಂದೆ ಪಾಕ್ ಕೈವಾಡ ಶಂಕೆ : ಬಾಂಗ್ಲಾ ಗಡಿಯಲ್ಲಿ ಬಿಎಸ್‌ಎಫ್ ಹೈ ಅಲರ್ಟ್

ಹಸೀನಾ ಪಕ್ಷದ ನಾಯಕನ ಹೊಟೇಲ್‌ಗೆ ಬೆಂಕಿ: 8 ಜನ ಬಲಿ

ಢಾಕಾ: ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ನಾಯಕ ಶಾಹಿನ್‌ಗೆ ಸೇರಿದ ಜೆನ್ಸರ್‌ನ ಹೋಟೆಲ್ ಒಂದಕ್ಕೆ ದುಷ್ಕರ್ಮಿಗಳು ಸೋಮವಾರ ಬೆಂಕಿ ಹಚ್ಚಿದ್ದಾರೆ. ಈ ವೇಳೆ 8 ಮಂದಿ ಸಜೀವ ದಹನವಾಗಿದ್ದು ಉಳಿದ 84 ಮಂದಿ ಗಾಯಗೊಂಡಿದ್ದಾರೆ. ಪ್ರಧಾನಿ ಶೇಖ್ ಹಸೀನಾರ ರಾಜೀನಾಮೆಯನ್ನು ಸಂಭ್ರಮಿಸಿ ನಗರದ ಅನೇಕ ಕಡೆಗಳಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ಈ ವೇಳೆ ಜಬೀರ್ ಹೋಟೆಲ್‌ಗೆ ಬೆಂಕಿ ಹಚ್ಚಿ ಪೀಠೋಪಕರಣಗಳನ್ನು ಧ್ವಂಸಗೊಳಿ ಸಲಾಗಿದೆ. ಜೊತೆಗೆ ಅವಾಮಿ ಲೀಗ್‌ನ ಕಚೇರಿ ಹಾಗೂ 3 ನಾಯಕರ ಮನೆ ಮೇಲೆ ದಾಳಿ ನಡೆಸಲಾಗಿದೆ.

ಪರಿಸ್ಥಿತಿ ಅವಲೋಕನಕ್ಕೆ ಮೋದಿ ಸಭೆ

ನವದೆಹಲಿ: ಬಾಂಗ್ಲಾದೇಶದ ಪರಿಸ್ಥಿತಿಯನ್ನು ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ರಾತ್ರಿ ಭದ್ರತೆಯ ಕುರಿತ ಸಂಪುಟ ಸಮಿತಿ ಸಭೆ ನಡೆಸಿತು. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ತಮ್ಮ ದೇಶದಿಂದ ಪಲಾಯನ ಮಾಡಿ ಲಂಡನ್‌ಗೆ ತೆರಳುವ ಮಾರ್ಗದಲ್ಲಿ ಭಾರತಕ್ಕೆ ಬಂದಿಳಿದ ಸಂದರ್ಭದಲ್ಲಿ ಈ ಸಭೆ ನಡೆದಿದ್ದು, ಅಧಿಕಾರಿಗಳು ಬಾಂಗ್ಲಾ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ಜೈಶಂಕರ್, ನಿರ್ಮಲಾ ಸೀತಾರಾಮನ್ ಸೇರಿ ಇನ್ನಿತರೆ ಸಚಿವರು ಸಭೆಗೆ ಹಾಜರಾಗಿದ್ದರು.

ಬಾಂಗ್ಲಾ ದಂಗೆ: ಶೇಖ್ ಹಸೀನಾ ದೇಶ ತೊರೆಯುತ್ತಿದ್ದಂತೆ ಬಾಂಗ್ಲಾದಲ್ಲಿ ಇಬ್ಬರು ಹಿಂದೂಗಳ ಹತ್ಯೆ

click me!