
ಆಂತರಿಕ ದಂಗೆಯಿಂದಾಗಿ ದೇಶ ತೊರೆದು ರಷ್ಯಾಗೆ ಪರಾರಿಯಾಗಿರುವ ಸಿರಿಯಾದ ಉಚ್ಚಾಟಿತ ನಾಯಕ ಬಷರ್ ಅಲ್ ಅಸಾದ್ಗೆ ಮತ್ತೊಂದು ಅಘಾತ ಎದುರಾಗಿದೆ. ಬಷರ್ ಅಲ್ ಅಸಾದ್ ಕೌಟುಂಬಿಕ ಜೀವನದಲ್ಲೂ ಏರುಪೇರುಂಟಾಗಿದ್ದು, ಅವರ ಪತ್ನಿ ಅಸ್ಮಾ ಅಲ್ ಅಸಾದ್ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಪತಿ ಅಲ್ ಅಸಾದ್ಗೆ ವಿಚ್ಚೇದನ ನೀಡಿ ಯುಕೆ(ಬ್ರಿಟನ್)ಗೆ ವಾಪಸ್ ಮರಳುವ ಯೋಚನೆಯಲ್ಲಿ ಅವರಿದ್ದಾರೆ ಎಂದು ತಿಳಿದು ಬಂದಿದೆ. ಜೆರುಸಲೇಂಗೆ ಪೋಸ್ಟ್ನ ವರದಿಯನ್ನು ಉಲ್ಲೇಖಿಸಿ ಟರ್ಕಿ ಹಾಗೂ ಅರಬ್ನ ಮಾಧ್ಯಮಗಳು ವರದಿ ಮಾಡಿವೆ.
ಬಷರ್ ಪತ್ನಿ ಅಲ್ ಅಸ್ಮಾ ಅಲ್ ಅಸದ್ಗೆ ರಷ್ಯಾದ ಮಾಸ್ಕೋದಲ್ಲಿ ಜೀವನ ಮಾಡುವುದು ಸ್ವಲ್ಪವೂ ಇಷ್ಟವಿಲ್ಲವಂತೆ ಆದರೆ ಬಷರ್ ಅಲ್ ಅಸಾದ್ ಸಿರಿಯಾ ತೊರೆದ ನಂತರ ರಷ್ಯಾದ ರಾಜಾಶ್ರಯದಲ್ಲಿ ನೆಲೆಸಿದ್ದಾರೆ. ಹೀಗಾಗಿ ಅಸ್ಮಾ ಅವರು ರಷ್ಯಾದ ನ್ಯಾಯಾಲಯದಲ್ಲಿ ದೇಶ ತೊರೆಯಲು ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆಕೆಯ ಅರ್ಜಿಯನ್ನು ರಷ್ಯಾದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದೆ.
1975ರಲ್ಲಿ ಸಿರಿಯಾ ಮೂಲದ ಪೋಷಕರಿಗೆ ಲಂಡನ್ನಲ್ಲಿ ಜನಿಸಿರುವ ಅಸ್ಮಾ ಅಸಾದ್ ಅವರು ಬ್ರಿಟನ್ ಹಾಗೂ ಸಿರಿಯಾ ಈ ಎರಡು ದೇಶಗಳ ಪೌರತ್ವವನ್ನು ಹೊಂದಿದ್ದಾರೆ. ಇವರು ಹೂಡಿಕೆ ಬ್ಯಾಂಕಿಂಗ್ (investment banking)ಕ್ಷೇತ್ರದಲ್ಲಿ ಕೆಲಸ ಶುರು ಮಾಡುವ ಮೊದಲು ಲಂಡನ್ನ ಕಿಂಗ್ಸ್ ಕಾಲೇಜಿನಲ್ಲಿ ಫ್ರೆಂಚ್ ಸಾಹಿತ್ಯ ಹಾಗೂ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಇದಾದ ನಂತರ 2000ನೇ ಇಸವಿಯಲ್ಲಿ ಅಸ್ಮಾ ಅವರು ಸಿರಿಯಾ ನಾಯಕನಾಗಿದ್ದ ಬಶರ್ ಅಲ್ ಅಸಾದ್ನನ್ನು ಮದುವೆಯಾಗಿದ್ದರು.
ಈ ಜೋಡಿಗೆ ಹಫೀಜ್, ಝೈನ್ ಹಾಗೂ ಕರೀಮ್ ಹೆಸರಿನ ಮೂವರು ಮಕ್ಕಳಿದ್ದಾರೆ. ಸಿರಿಯಾದಲ್ಲಿ ನಾಗರಿಕ ದಂಗೆ ಉಲ್ಭಣವಾಗುತ್ತಿದ್ದಂತೆಯೇ ಅಸ್ಮಾ ಅವರು ತಮ್ಮ ಮೂವರು ಮಕ್ಕಳೊಂದಿಗೆ ಲಂಡನ್ನಲ್ಲಿ ನೆಲೆಸಲು ಬಯಸಿದ್ದಾರೆ ಎಂದು ವರದಿಯಾಗಿದೆ.
ಬಷರ್ ಅಲ್ ಅಸಾದ್ ಅವರು ರಷ್ಯಾದ ರಾಜಾಶ್ರಯದ ನೆರವಿನಲ್ಲಿ ಮಾಸ್ಕೋದಲ್ಲಿ ನೆಲೆಸಿದ್ದಾರೆ. ರಷ್ಯಾ ಬಷರ್ ಅಲ್ ಅಸಾದ್ ಅವರಿಗೆ ರಾಜಾಶ್ರಯ ನೀಡಿದ್ದರೂ ಕೂಡ ಜೊತೆಗೆ ಹಲವು ನಿರ್ಬಂಧಗಳನ್ನು ಹೇರಿದೆ. ಹೀಗಾಗಿ ಬಷರ್ ಅವರು ರಷ್ಯಾದ ಆಡಳಿತ ವಿಧಿಸಿರುವ ತೀವ್ರವಾದ ನಿರ್ಬಂಧಗಳನ್ನು ಎದುರಿಸುತ್ತಿದ್ದಾರೆ. ಮಾಸ್ಕೋವನ್ನು ತೊರೆಯುವುದಕ್ಕೆ ಹಾಗೂ ರಾಜಕೀಯ ಚಟುವಟಿಕೆಯಲ್ಲಿ ಭಾಗಿಯಾಗವುದಕ್ಕೂ ಅವರಿಗೆ ರಷ್ಯಾ ನಿಷೇಧ ಹೇರಿದೆ. ಅಲ್ಲದೇ ರಷ್ಯಾದ ಅಧಿಕಾರಿಗಳು ಬಷರ್ಗೆ ಸೇರಿದ ರಷ್ಯಾದಲ್ಲಿರುವ ಆಸ್ತಿಯನ್ನು ಕೂಡ ಸೀಜ್ ಮಾಡಿದ್ದಾರೆ. ಈ ಜಪ್ತಿ ಮಾಡಿದ ಆಸ್ತಿಯಲ್ಲಿ 270 ಕೆಜಿ ಚಿನ್ನ 2 ಬಿಲಿಯನ್ ಡಾಲರ್ ಹಣ ಹಾಗೂ ಮಸ್ಕೋದಲ್ಲಿರುವ 18 ಆಸ್ತಿಗಳು ಸೇರಿವೆ.
ಅಸಾದ್ ರಾಜಮನೆತನವೂ ಕಳೆದ 5 ದಶಕಗಳಿಂದ ಸಿರಿಯಾವನ್ನು ಆಳುತ್ತಿತ್ತು. ಆದರೆ ಈ ಆಡಳಿತದ ವಿರುದ್ಧ ಅಲ್ಲಿನ ಜನ ದಂಗೆ ಎದ್ದಿದ್ದು, ರಾಜಧಾನಿ ಡಮಾಸ್ಕಸ್ ಮೇಲೆ ನುಗ್ಗಿ ಬಂದಿದ್ದರು. ಇದಾದ ನಂತರ ಬಶರ್ ಅಲ್ ಅಸಾದ್ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಖಾಸಗಿ ವಿಮಾನದ ಮೂಲಕ ರಷ್ಯಾಗೆ ತಮ್ಮ ಕುಟುಂಬದೊಂದಿಗೆ ಪಲಾಯನ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ