
ವಾಷಿಂಗ್ಟನ್: ಪಾಕಿಸ್ತಾನದಲ್ಲಿ ಇರಾನ್ ಜೊತೆಗಿನ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಗುಡುಗಿದ್ದಾರೆ. ಇಡೀ ಇರಾನ್ ದೇಶವನ್ನು ಕೇವಲ ಒಂದೇ ದಿನದಲ್ಲಿ ನಾಶಮಾಡಬಲ್ಲೆ ಎಂದು ಅವರು ನೇರ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಇರಾನ್ ಶೀಘ್ರದಲ್ಲೇ ಮಾತುಕತೆಗೆ ವಾಪಸ್ ಬರಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಒಂದು ಪ್ರಮುಖ ಅಂತಾರಾಷ್ಟ್ರೀಯ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್ ಈ ಸ್ಪಷ್ಟ ನಿಲುವು ಪ್ರಕಟಿಸಿದ್ದಾರೆ. ಅಮೆರಿಕ ಹಾಕಿರುವ ಎಲ್ಲಾ ಷರತ್ತುಗಳನ್ನು ಇರಾನ್ ಒಪ್ಪಿಕೊಳ್ಳಲೇಬೇಕು, ಅವರಿಗೆ ಬೇರೆ ದಾರಿಯೇ ಇಲ್ಲ ಎಂದು ಡೊನಾಲ್ಡ್ ಟ್ರಂಪ್ ಒತ್ತಿ ಹೇಳಿದ್ದಾರೆ.
ಟ್ರಂಪ್ ಮುಖ್ಯವಾಗಿ ಇರಾನ್ನ ಇಂಧನ ಸ್ಥಾವರಗಳು ಮತ್ತು ವಿದ್ಯುತ್ ಉತ್ಪಾದನಾ ಕೇಂದ್ರಗಳ ಮೇಲೆ ಸೇನಾ ದಾಳಿ ನಡೆಸುವ ಬಗ್ಗೆ ಸುಳಿವು ನೀಡಿದ್ದಾರೆ. "ಕೇವಲ ಒಂದು ಗಂಟೆಯಲ್ಲಿ ಇರಾನ್ನ ಇಂಧನ ಕ್ಷೇತ್ರವನ್ನು ನಾನು ಧ್ವಂಸ ಮಾಡಬಲ್ಲೆ. ಆದರೆ, ಒಮ್ಮೆ ನಾಶವಾದರೆ ಅದನ್ನು ಮತ್ತೆ ನಿರ್ಮಿಸಲು ಅವರಿಗೆ ಹತ್ತು ವರ್ಷಕ್ಕೂ ಹೆಚ್ಚು ಸಮಯ ಬೇಕಾಗುತ್ತದೆ" ಎಂದು ಅವರು ಎಚ್ಚರಿಸಿದ್ದಾರೆ.
ಟ್ರಂಪ್ ಇಲ್ಲಿಗೆ ಸುಮ್ಮನಾಗದೇ ದೇಶದ ಪ್ರಮುಖ ಸೇತುವೆಗಳನ್ನೂ ನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಹಿಂದೆ, "ಜಗತ್ತು ಹಿಂದೆಂದೂ ಕಂಡಿರದಂತಹ ಒಂದು ನಾಗರಿಕತೆಯನ್ನೇ ಅಳಿಸಿ ಹಾಕುತ್ತೇವೆ" ಎಂಬ ತಮ್ಮ ಹೇಳಿಕೆಯನ್ನು ಅಮೆರಿಕಾ ಅಧ್ಯಕ್ಷ ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಇರಾನ್ ಕದನ ನಿಲ್ಲಿಸಿದ್ದೇ ನಾನು ಎಂದಿದ್ದ ಪಾಕ್ ಮತ್ತೆ ಬೆತ್ತಲು; ಸಂದೇಶ ಬರೆದುಕೊಟ್ಟಿದ್ದೇ ಅಮೆರಿಕ, ಸ್ಫೋಟಕ ವರದಿ ಬಯಲು!
ಅಮೆರಿಕದ ಕಡೆಯಿಂದ ಇಂತಹ ಕಠಿಣ ಎಚ್ಚರಿಕೆಗಳು ಬಂದಿದ್ದರಿಂದಲೇ ಇರಾನ್ ಮಾತುಕತೆಗೆ ಮುಂದಾಗಿತ್ತು ಎಂದು ಟ್ರಂಪ್ ಹೇಳಿಕೊಂಡಿದ್ದರು. ಇರಾನ್ನ ಘೋಷಣೆಗಳು ಮತ್ತು ಬೆದರಿಕೆಗಳಿಗೆ ಪ್ರತಿಯಾಗಿಯೇ ತಾನು ಈ ರೀತಿ ಪ್ರತಿಕ್ರಿಯಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಮಾತುಕತೆ ಸ್ಥಗಿತಗೊಂಡಿರುವ ಈ ಸಮಯದಲ್ಲಿ ಟ್ರಂಪ್ ಅವರ ಹೊಸ ಹೇಳಿಕೆಗಳು ಮಧ್ಯಪ್ರಾಚ್ಯದಲ್ಲಿ ದೊಡ್ಡ ಆತಂಕಕ್ಕೆ ಕಾರಣವಾಗಿವೆ. ಯುದ್ಧದ ಕಾರ್ಮೋಡ ಕವಿದಿರುವ ಈ ಹೊತ್ತಿನಲ್ಲಿ ಅಮೆರಿಕದ ಮುಂದಿನ ನಡೆ ಏನಿರಬಹುದು ಎಂದು ಇಡೀ ಜಗತ್ತು ಕುತೂಹಲದಿಂದ ನೋಡುತ್ತಿದೆ.
ಇದನ್ನೂ ಓದಿ: ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ವಿಮಾನಕ್ಕೆ ಪಾಕಿಸ್ತಾನದ ಎಫ್16 ವಿಮಾನದ ಬೆಂಗಾವಲು
ಈ ಮಧ್ಯೆ, ಅತ್ಯಂತ ಸೂಕ್ಷ್ಮ ಪ್ರದೇಶವಾದ ಹಾರ್ಮುಝ್ ಜಲಸಂಧಿಯ ಮೂಲಕ ಅಮೆರಿಕದ ಎರಡು ಯುದ್ಧನೌಕೆಗಳು ಹಾದುಹೋಗಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ. ಯುಎಸ್ ಸೆಂಟ್ರಲ್ ಕಮಾಂಡ್ ವರದಿಗಳ ಪ್ರಕಾರ, 'ಯುಎಸ್ಎಸ್ ಫ್ರಾಂಕ್ ಇ. ಪೀಟರ್ಸನ್' ಮತ್ತು 'ಯುಎಸ್ಎಸ್ ಮೈಕೆಲ್ ಮರ್ಫಿ' ಎಂಬ ಎರಡು ಗೈಡೆಡ್-ಮಿಸೈಲ್ ಡಿಸ್ಟ್ರಾಯರ್ಗಳು ಹಾರ್ಮುಝ್ ಜಲಸಂಧಿಯಲ್ಲಿ ಗಣಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ. ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಈ ಜಲಸಂಧಿಯಲ್ಲಿ ಅಳವಡಿಸಿರುವ ಬಾಂಬ್ಗಳನ್ನು ತೆಗೆದುಹಾಕಿ, ಅಂತಾರಾಷ್ಟ್ರೀಯ ಹಡಗು ಮಾರ್ಗವನ್ನು ಸುರಕ್ಷಿತಗೊಳಿಸುವುದೇ ಈ ಕಾರ್ಯಾಚರಣೆಯ ಉದ್ದೇಶವಾಗಿದೆ.
ಇದನ್ನೂ ಓದಿ: ಟ್ರಂಪ್ ಕೊಟ್ಟ ಸಾಲದಲ್ಲಿ ಶರೀಫ್, ಮುನೀರ್ ಸೂಟುಬೂಟು ಶೋಕಿ, ಅಮೆರಿಕಕ್ಕೆ ಪಾಕಿಸ್ತಾನ ಮಾಡಿದ ಸಾಲ ಎಷ್ಟು ಗೊತ್ತಾ!?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ