ಕಾಬೂಲ್(ಆ.15): ಉಗ್ರರ ನೆರಳಲ್ಲಿ ಬದುಕುತ್ತಿರುವ ಪ್ರತಿ ದೇಶಕ್ಕೂ ಆಫ್ಘಾನಿಸ್ತಾನ ಉದಾಹರಣೆಯಾಗಿದೆ. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಮಟ್ಟಹಾಕದಿದ್ದರೆ ಪ್ರತಿ ರಾಷ್ಟ್ರಕ್ಕೂ ಇದೇ ಪರಿಸ್ಥಿತಿ. ಒಂದೊಂದೆ ಪ್ರದೇಶಗಳನ್ನು ವಶಪಡಿಸಿಕೊಂಡ ತಾಲಿಬಾನ್ ಇದೀಗ ಕಾಬೂಲ್ ಕೈವಶ ಮಾಡಿದೆ. ಇತ್ತ ಆಫ್ಘಾನ್ ಅಧ್ಯಕ್ಷ ಅಶ್ರಫ್ ಘನಿಗೆ ಬೇಷರತ್ ಶರಣಾಗತಿಗೆ ತಾಲಿಬಾನ್ ತಾಕೀತು ಮಾಡಿದೆ. ಇದರ ಬೆನ್ನಲ್ಲೇ ಆಫ್ಘಾನ್ ಅಧ್ಯಕ್ಷ ಸದ್ದಿಲ್ಲದೆ ತಜಕಿಸ್ತಾನಕ್ಕೆ ಪರಾರಿಯಾಗಿದ್ದಾರೆ ಎಂದು ರಾಯರ್ಟಸ್ ವರದಿ ಮಾಡಿದೆ.
ತಾಲಿಬಾನ್ ಉಗ್ರರ ತೆಕ್ಕೆಗೆ ಕಾಬೂಲ್; 126 ಮಂದಿ ಕೊನೆಯ ವಿಮಾನ ಮೂಲಕ ದೆಹಲಿಗೆ ಪ್ರಯಾಣ!
ಬೇಷರತ್ ಶರಣಾಗತಿಗೆ ಹಿಂದೇಟು ಹಾಕಿದ ಅಧ್ಯಕ್ಷ ಅಶ್ರಫ್ ಘನಿ ತಮ್ಮ ರಾಷ್ಟ್ರೀಯ ಭದ್ರತಾ ಸಲಹಗಾರ ಹಮ್ದುಲ್ಲಾ ಮೊಹಿಬ್ ಹಾಗೂ ಕೆಲ ಆಪ್ತರನ್ನು ಕರೆದುಕೊಂಡು ತಜಕಿಸ್ತಾನಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಬಯಲಾಗಿದೆ. ಈ ಮೂಲಕ ಆಫ್ಘಾನ್ ಸರ್ಕಾರ ಹಾಗೂ ಆಡಳಿತ ಪತನಗೊಂಡಿದೆ. ಇನ್ನು ಸಂಪೂರ್ಣ ತಾಲಿಬಾನ್ ಆಡಳಿತ.
ಅಶ್ರಫ್ ತಜಕಿಸ್ತಾನಕ್ಕೆ ಪರಾರಿಯಾಗಿರುವ ಕಾರಣ ಈಗಾಗಲೇ ಮದ್ಯಂತರ ಅಧ್ಯಕ್ಷರನ್ನಾಗಿ ಅಹಮ್ಮದ್ ಜಲಾಲಿಗೆ ಪಟ್ಟ ಕಟ್ಟಲಾಗಿದೆ. ಕಾಬೂಲ್ ಪ್ರಮುಖ ಆಡಳಿತ ಕೇಂದ್ರಗಳು ತಾಲಿಬಾನ್ ಉಗ್ರರ ಕೈಯಲ್ಲಿದೆ. ಮಿಲಿಟರಿಯನ್ನು ಕಾಬೂಲ್ನಿಂದ ಹೊರಕ್ಕೆ ಕಳುಹಿಸಲಾಗಿದೆ. ಇದೀಗ ಎಲ್ಲವೂ ತಾಲಿಬಾನ್ ತೆಕ್ಕೆಯಲ್ಲಿದೆ.
ಅಫ್ಘಾನಿಸ್ತಾನದ ಅಧಿಕಾರ ಬಿಟ್ಟುಕೊಟ್ಟ ಘನಿ, ಅಹ್ಮದ್ ಜಲಾಲಿ ನೂತನ ಮುಖ್ಯಸ್ಥ!
ಕಾಬೂಲ್ ಕೈವಶ ಮಾಡಿದ ಬಳಿಕ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ. ಇತ್ತ ತಾಲಿಬಾನ್ ಮದ್ಯಂತರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಅಹಮ್ಮದ್ ಜಲಾಲಿ ಹುಟ್ಟಿದ್ದು ಕಾಬೂಲ್ನಲ್ಲಿ. ಆದರೆ 1987ರಿಂದ ಅಮೆರಿದಲ್ಲಿ ನೆಲೆಸಿರುವ ಜಲಾಲಿ ಯುಎಸ್ ಪೌರತ್ವವನ್ನು ಪಡೆದಿದ್ದಾರೆ.