* ತಾಲಿಬಾನ್ ಆಡಳಿತದಿಂದ ಅಷ್ಘಾನಿಸ್ತಾನದಲ್ಲಿ ಜನರ ಪರದಾಟ
* ಹಣಕ್ಕಾಗಿ ಬ್ಯಾಂಕ್ ಮುಂದೆ ನೂರಾರು ನಾಗರಿಕರ ಪ್ರತಿಭಟನೆ
ಕಾಬೂಲ್(ಆ.29): ತಾಲಿಬಾನಿಗಳು ಅಷ್ಘಾನಿಸ್ತಾನವನ್ನು ವಶಕ್ಕೆ ಪಡೆಯುತ್ತಿದ್ದಂತೆಯೇ ದೇಶದಲ್ಲಿ ಸೂಕ್ತ ಆಡಳಿತವಿಲ್ಲದೇ ಭಾರೀ ಹಾಹಾಕಾರ ಸೃಷ್ಟಿಯಾಗುತ್ತಿದೆ. ಅತ್ತ ಎಟಿಎಂ, ಬ್ಯಾಂಕ್ಗಳಲ್ಲಿ ಹಣವೂ ಸಿಗದೇ ಇತ್ತ ಸರಿಯಾಗಿ ಸಂಬಳವೂ ಸಿಗದೇ ಸಾವಿರಾರು ಜನರು ಪರದಾಡುತ್ತಿದ್ದಾರೆ.
ತಾಲಿಬಾನ್ ಆಳ್ವಿಕೆ ಆರಂಭವಾದ ನಂತರ ಮುಚ್ಚಿದ್ದ ಬ್ಯಾಂಕ್ಗಳು 3 ದಿನದ ಹಿಂದೆ ತೆರೆದಿವೆ. ಹೀಗಾಗಿ ಹಣ ಸಿಗಬಹುದು ಎಂಬ ಆಸೆಯಿಂದ ಬಂದಿದ್ದ ಜನರಿಗೆ ನಿರಾಸೆ ಕಾದಿದೆ. ಜನರು ಹಣಕ್ಕಾಗಿ ಸಾಲುಗಟ್ಟಿನಿಂತರೂ, ಯಂತ್ರಗಳಲ್ಲಿ ದುಡ್ಡು ಖಾಲಿ ಆಗಿ ಹಣ ಸಿಗಲಿಲ್ಲ. ಇದೇ ವೇಳೆ, ಹೆಚ್ಚಿನ ಜನರಿಗೆ ಹಣ ಒದಗಿಸಬೇಕು ಎಂಬ ಉದ್ದೇಶದಿಂದ ಎಟಿಎಂನಲ್ಲಿ ಹಣ ತೆಗೆಯುವುದಕ್ಕೆ ಮಿತಿ ಹೇರಲಾಗಿದೆ. ಆದ್ದರಿಂದ ಜನರು ಬ್ಯಾಂಕುಗಳ ಮುಂದೆ ಜನ ಪ್ರತಿಭಟನೆ ಆರಂಭಿಸಿದ್ದಾರೆ.
ಇದೇ ವೇಳೆ, ಕಳೆದ 3ರಿಂದ 6 ತಿಂಗಳವರೆಗೆ ತಮಗೆ ಸಂಬಳ ದೊರೆತಿಲ್ಲ ಎಂದು ಸರ್ಕಾರಿ ನೌಕರರು ಆರೋಪಿಸಿದ್ದಾರೆ. ಇದು ದೇಶದ ದುಃಸ್ಥಿತಿಯ ದ್ಯೋತಕವಾಗಿದೆ.
ಇತ್ತೀಚೆಗೆ ತಾಲಿಬಾನ್ ಆಡಳಿತ ಶುರು ಮಾಡಿದ ನಂತರ ದೇಶದ ವ್ಯವಸ್ಥೆ ಕುಸಿದುಬಿದ್ದಿದ್ದು, ಆಹಾರ ಪೂರೈಕೆ ಕೂಡ ವ್ಯತ್ಯಾಸವಾಗಿತ್ತು. ಇದಲ್ಲದೇ, ದೇಶದಲ್ಲಿ ಭೀಕರ ಬರಗಾಲ ಸೃಷ್ಟಿಆಗಬಹುದು ಎಂದು ವಿಶ್ವಸಂಸ್ಥೆ ಇತ್ತೀಚೆಗೆ ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ ಮುಂದಿನ ಪರಿಸ್ಥಿತಿ ಇನ್ನಷ್ಟುಭೀಕರವಾಗುವ ಆತಂಕ ಎದುರಾಗಿದೆ.