ಆಂಜನೇಯನ ಪಾತ್ರ ಮಾಡಲು ನಾನ್‌ವೆಜ್‌ ಬಿಟ್ಟಿದ್ದೆ: ದರ್ಶನ್

By Kannadaprabha NewsFirst Published Feb 26, 2021, 9:10 AM IST
Highlights

ಸಂದರ್ಶನ ಅಂದರೆ ದರ್ಶನ್‌ ಅವರಿಗೆ ಅಷ್ಟುಅಚ್ಚುಮೆಚ್ಚು ಏನಲ್ಲ. ಅವರು ಸುಮ್ಸುಮ್ನೆ ಮಾತಾಡುವವರೂ ಅಲ್ಲ. ಸುಮಾರು ಎರಡು ವರ್ಷಗಳ ನಂತರ ದರ್ಶನ್‌ ಕೊರೋನಾ ಕಾಲಾವಧಿ, ಹೊಸ ಸಿನಿಮಾ, ರಾಬರ್ಟ್‌ ಕತೆ, ಲಾಕ್‌ಡೌನ್‌ ವ್ಯಥೆಗಳ ಕುರಿತು ಸುದೀರ್ಘವಾಗಿ ಮಾತಾಡಿದ್ದಾರೆ.

ಆರ್‌.ಕೇಶವಮೂರ್ತಿ

ಅಭಿಮಾನಿಗಳು, ಪ್ರೇಕ್ಷಕರ ಜತೆಗೆ ನೀವು ಕೂಡ ನಿಮ್ಮ ಚಿತ್ರಕ್ಕಾಗಿ ಕಾದಿದ್ದು ಹೇಗಿದೆ?

ಕಾಯೋದು ತುಂಬಾ ಕಷ್ಟಅಂತ ಗೊತ್ತಾಯಿತು. ಅದರಲ್ಲೂ ಒಂದು ಸಂಕಷ್ಟದಿಂದ ಮನೆಯಿಂದ ಆಚೆ ಬರುವಂತಿಲ್ಲ, ಕೆಲಸ ಇಲ್ಲ, ಸಿನಿಮಾ ಬಿಡುಗಡೆ ಇಲ್ಲ, ಯಾರೂ ಯಾರಿಗೂ ಸಿಗುತ್ತಿಲ್ಲ, ಇಂಥ ಹೊತ್ತಿನಲ್ಲಿ ಕಾಯೋದು ಇದೆಯಲ್ಲ ಆ ಕಷ್ಟಯಾರಿಗೂ ಬೇಡ.

ಹುಬ್ಬಳ್ಳಿಯಲ್ಲಿ ರಾಬರ್ಟ್ ಉತ್ಸವ‌: ಡೇಟ್ & ಟೈಂ ಹೀಗಿದೆ 

ಈ ಸಂಕಷ್ಟದ ಕಾಯುವಿಕೆಯಿಂದ ನೀವು ಏನೆಲ್ಲ ಕಲಿತಿದ್ದೀರಿ?

ಕೊರೋನಾದಿಂದ ಚಿತ್ರರಂಗ ಮಾತ್ರವಲ್ಲ, ಎಲ್ಲರೂ ಸಂಕಷ್ಟಕ್ಕೆ ಸಿಕ್ಕಿಕೊಂಡರು. ದಿನದ ಕೂಲಿ ನಂಬಿಕೊಂಡು ಬದುಕುವವರಿಂದ ಎಲ್ಲರಿಗೂ ಕಷ್ಟಗಳು ಎದುರಾಯಿತು. ನೀವು ಕೇಳಿಬಹುದು, ಕೋಟಿ ಕೋಟಿ ದುಡಿಯೋವರಿಗೆ ಏನು ಕಷ್ಟಅಂತ. ಲಕ್ಷ, ಕೋಟಿ ದುಡಿಯುವ ನನಗೂ ಅಷ್ಟೇ ಖರ್ಚು ಇರುತ್ತದೆ. ಇನ್‌ಕಮಿಂಗ್‌ ಇಲ್ಲದೆ, ಬರೀ ಔಟ್‌ಗೋಯಿಂಗ್‌ ಆಗುತ್ತಿದ್ದಾಗ ಜೀವನ ಹೇಗೆ ನಡೆಸೋದು? ಕೈಯಲ್ಲಿ ಕಾಸಿಲ್ಲ, ಕೆಲಸ ಇಲ್ಲ ಎಂದಾಗ ಜೀವನದ ಎಲ್ಲ ಪಾಠಗಳು ಕಣ್ಣ ಮುಂದೆ ಬಂದು ಹೋಗುತ್ತವೆ.

"

ಈ ಲಾಕ್‌ಡೌನ್‌ನಲ್ಲಿ ನಿಮಗೆ ತೀರಾ ಕಾಡಿದ ಸಂಗತಿ ಯಾವುದು?

ನನ್ನ ಜತೆ ತುಂಬಾ ವರ್ಷಗಳಿಂದ ಇದ್ದ ನನ್ನ ಮೇಕಪ್‌ ಮ್ಯಾನ್‌ ತೀರಿಕೊಂಡಿದ್ದು. ಪಾಪ ಈ ಕೊರೋನ ಸಂಕಷ್ಟದಲ್ಲೇ ಅವರನ್ನು ಕಳೆದುಕೊಂಡೆ.

ರಾಬರ್ಟ್‌ ಚಿತ್ರಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಏನು ಹೇಳುತ್ತೀರಿ?

ಅವರ ನಿರೀಕ್ಷೆ ಯಾವ ಕಾರಣಕ್ಕೂ ಹುಸಿಯಾಗಲ್ಲ. ಒಂದು ಸಿನಿಮಾದಲ್ಲಿ ಏನೆಲ್ಲ ಇರಬೇಕೋ ಅಷ್ಟೂ‘ರಾಬರ್ಟ್‌’ ಚಿತ್ರದಲ್ಲಿದೆ. ಒಂದೇ ಒಂದು ಪಾಯಿಂಟ್‌ ಕೂಡ ಅವರನ್ನು ಡಿಸಪಾಯಿಂಟ್‌ ಮಾಡಲ್ಲ. ಅಷ್ಟರ ಮಟ್ಟಿಗೆ ನನಗೆ ಭರವಸೆ ಮತ್ತು ನಂಬಿಕೆ ಇದೆ. ಅಭಿಮಾನಿಗಳು ಮಾತ್ರವಲ್ಲ, ಎಲ್ಲರಿಗೂ ಇಷ್ಟಆಗುವ ಸಿನಿಮಾ ಇದು.

ಲೈಫಲ್ಲಿ ಹೀರೋ ಆಗ್ಬೇಕಂದ್ರೆ ಇನ್ನೊಬ್ರ ಲೈಫಲ್ಲಿ ವಿಲನ್ ಆಗ್ಬೇಕು; ದರ್ಶನ್ ರಾಬರ್ಟ್‌ ಟ್ರೈಲರ್ ರಿಲೀಸ್! 

ಅಂಥ ಭರವಸೆಯ ಅಂಶಗಳು ಚಿತ್ರದಲ್ಲಿ ಏನಿವೆ?

ಕಾಮಿಡಿ, ಸೆಂಟಿಮೆಂಟ್‌, ಆ್ಯಕ್ಷನ್‌.. ಈ ಮೂರು ಅಂಶಗಳನ್ನು ಒಂದು ಗಟ್ಟಿಯಾದ ಕತೆಗೆ ಪೂರಕವಾಗಿ ಹೇಗೆ ನಿರ್ದೇಶಕ ತರುಣ್‌ ಸುಧೀರ್‌ ಅವರು ಬಳಸಿಕೊಂಡಿದ್ದಾರೆ ಎಂಬುದಕ್ಕೆ ನೀವು ‘ರಾಬರ್ಟ್‌’ ಸಿನಿಮಾ ನೋಡಬೇಕು. ಇಲ್ಲಿನ ಯಾವ ಅಂಶಗಳೂ ಹೀರೋ ಇಮೇಜ್‌ಗಾಗಿ ಹುಟ್ಟಿಕೊಂಡಿರುವುದಲ್ಲ. ಕತೆಗೆ ಅಗತ್ಯವಾಗಿ ಸೃಷ್ಟಿಯಾಗಿರುವುದು. ಸ್ವಚ್ಚವಾಗಿರುವ ಅಪ್ಪಟ ಮನರಂಜನೆ ಇಲ್ಲಿದೆ.

ಹೆಸರು ‘ರಾಬರ್ಟ್‌’. ಚಿತ್ರದಲ್ಲಿ ಜೈಶ್ರೀರಾಮ್‌ ಹಾಡು, ಆಂಜನೇಯನ ವೇಷದಲ್ಲಿ ನೀವು... ಏನು ಇದೆಲ್ಲ?

ಅದೇ ಸಿನಿಮಾ. ಮೊದಲು ಪೇಯಿಂಟಿಂಗ್‌ ಪೋಸ್ಟರ್‌- ಅದರಲ್ಲಿನ ಡೈಲಾಗ್‌, ಟೀಸರ್‌, ಈಗ ಟ್ರೇಲರ್‌ ನೋಡಿದರೆ ನಿಮಗೆ ಸಾಕಷ್ಟುಕುತೂಹಲಕಾರಿ ಅಂಶಗಳು ಇವೆ. ವಾವ್‌್ಹ ಸೂಪರ್‌ ಹೀಗೂ ಒಂದು ಕತೆ ಮಾಡಬಹುದಾ ಎನ್ನುವ ಅಚ್ಚರಿ ಉಂಟಾಗುತ್ತದೆ. ಅದರಲ್ಲೂ ನೀವು ಚಿತ್ರದ ಕ್ಲೈಮ್ಯಾಕ್ಸ್‌ ನೋಡಿ, ‘ಏನಯ್ಯ ಹೀಗೂ ಆಟ ಆಡಬಹುದಾ’ ಎನ್ನುತ್ತೀರಿ.

ಕುತೂಹಲಕಾರಿ ಅಂಶಗಳು ಅಂತೀರಿ. ಆದರೆ, ಏನೂ ಬಿಟ್ಟು ಕೊಡುತ್ತಿಲ್ಲ ನೀವು?

ಸಿನಿಮಾ ಎನ್ನುವುದು ತಾಯಿಯ ಗರ್ಭದಲ್ಲಿರುವ ಮಗು ರೀತಿ. ಆ ಮಗು ಆಚೆ ಬರುವ ತನಕ ಹೆಣ್ಣಾ, ಗಂಡಾ ಅಂತ ಎಲ್ಲರಿಗೂ ಕುತೂಹಲ. ಸಿನಿಮಾ ಕೂಡ ತಾಯಿ ಹೊಟ್ಟೆಯಲ್ಲಿರುವ ಮಗು ರೀತಿ. ಮಾಚ್‌ರ್‍ 11ಕ್ಕೆ ಆ ಮಗು ಆಚೆ ಬರುತ್ತದೆ. ನೀವೇ ನೋಡುತ್ತೀರಿ. ಆಚೆ ಬಂದ ಮೇಲೆ ನಮ್ಮ ಸಿನಿಮಾ ಆ ಮೇಲೆ ನಿಮ್ಮ ಮಗು. ನೀವು ಬೆಳೆಸಬೇಕು, ಆಶೀರ್ವಾದ ಮಾಡಬೇಕು.

ರಾಬರ್ಟ್ ತೆಲುಗು ಡಬ್ಬಿಂಗ್ ರೈಟ್ಸ್ ಎಷ್ಟು ಮೊತ್ತಕ್ಕೆ ಮಾರಾಟವಾಗಿದೆ ಗೊತ್ತಾ? 

‘ರಾಬರ್ಟ್‌’ ಬಗ್ಗೆ ಒಂದು ಸಾಲಿನಲ್ಲಾದರೂ ಹೇಳುವುದಾದರೆ?

ಎಲ್ಲ ರೀತಿಯ ರಸಗಳು ಬೆರೆತಿರುವ ಸಿನಿಮಾ. ಯಾವುದೋ ಒಂದು ನಿಮಗೆ ಕೊರತೆ ಅನಿಸಲ್ಲ. ನಿರ್ಮಾಪಕ ಉಮಾಪತಿ, ನಿರ್ದೇಶಕ ತರುಣ್‌ ಸುಧೀರ್‌ ಅವರ ತಂಡ ಯಾವುದಕ್ಕೂ ಕೊರತೆ ಮಾಡಿಲ್ಲ. ದೇವರಾಜ್‌, ಅವಿನಾಶ್‌, ರವಿಶಂಕರ್‌, ವಿನೋದ್‌ ಪ್ರಭಾಕರ್‌, ಚಿಕ್ಕಣ್ಣ, ಆಶಾಭಟ್‌... ಹೀಗೆ ದೊಡ್ಡ ತಾರಾಗಣವೇ ಇಲ್ಲಿದೆ.

ಹೌದು, ಈ ಚಿತ್ರದಲ್ಲಿ ಇಬ್ಬರು ದರ್ಶನ್‌ಗಳಿದ್ದಾರೆ?

ಸಿನಿಮಾ ತುಂಬಾ ದರ್ಶನ್‌ಗಳೇ ಇದ್ದಾರೆ. ನಿಮಗೆ ಇಲ್ಲಿವರೆಗೂ ಗೊತ್ತಿರುವುದು ಶಬರಿ ಮುಂದೆ ಸೋತ ದರ್ಶನ್‌, ರಾವಣನ ಮುಂದೆ ಗೆಲ್ಲೋ ದರ್ಶನ್‌. ಇದರ ಆಚೆಗೂ ದರ್ಶನ್‌ ಇದ್ದಾರೆ.

ಮತ್ತೊಮ್ಮೆ ಬೇರೆ ಭಾಷೆಗಳಿಗೆ ಹೋಗುತ್ತಿರುವುದು ಹೇಗನಿಸುತ್ತಿದೆ?

ಕನ್ನಡದಲ್ಲಿ ನಾನು 50 ಸಿನಿಮಾಗಳಲ್ಲಿ ನಟಿಸಿರುವ ಕಲಾವಿದ. ಬೇರೆ ಭಾಷೆಗಳಲ್ಲಿ ನಾನು ಹೊಸಬ. ಬೇರೆ ಭಾಷೆಯದ್ದು ಸ್ನಾ್ಯಕ್ಸ್‌ ಇದ್ದಂತೆ.

50 ಸಿನಿಮಾಗಳನ್ನು ದಾಟಿದ್ದೀರಿ. ವೈಯಕ್ತಿಕವಾಗಿ ನಿಮಗೆ ಇಂಥ ಮಾಡಲೇ ಬೇಕು ಅನಿಸಿದುಂಟೆ?

ನಾನಾಗಿಯೇ ಯಾರಿಗೂ ಇಂಥ ಪಾತ್ರ ಬೇಕು ಅಂತ ಕೇಳಲ್ಲ. ನಿರ್ದೇಶಕ ಸೃಷ್ಟಿಸುವ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡರೆ ಆ ಪಾತ್ರವನ್ನು ನಾನು ಒಪ್ಪಿದರೆ, ಅದಕ್ಕೆ ಒಬ್ಬ ಕಲಾವಿದನಾಗಿ ಜೀವ ತುಂಬುವೆ. ಗೆಟಪ್‌ ಬದಲಾಯಿಸಬೇಕು ಎಂದರೆ ನಾನು ರೆಡಿ ಆಗುತ್ತೇನೆ. ರಾಬರ್ಟ್‌ನಲ್ಲಿ ಹೇರ್‌ ಸ್ಟೈಲ್‌ ಬದಲಾಯಿಸಿದರು, ಗಡ್ಡ ಬಿಡಬೇಕು ಅಂದರು. ಪಕ್ಕಾ ರೆಡಿಯಾಗಿ ಬಂದೆ.

ರಾಬರ್ಟ್‌ ಪ್ಯಾನ್‌ ಇಂಡಿಯಾ ಟ್ರೆಂಡ್‌ ಹಿಂದೆ ಓಡುವ ಸಾಹಸನಾ?

ಖಂಡಿತ ಅಲ್ಲ. ಚಿತ್ರದ ಟೈಟಲ್‌ನಿಂದ ಶುರುವಾದರೂ ಕತೆ, ಮೇಕಿಂಗ್‌ ಯಾವುದಕ್ಕೂ ಭಾಷೆಯ ಬೇಲಿ ಇಲ್ಲ. ದೊಡ್ಡ ಮಟ್ಟದಲ್ಲಿ ನಿರ್ಮಾಣ, ಎಲ್ಲ ಭಾಷಿಗರಿಗೂ ಕನೆಕ್ಟ್ ಆಗುವ ಕತೆ. ಇದ್ದಕ್ಕಿದ್ದಂತೆ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಬೇಕು ಅನಿಸಿದ್ದಲ್ಲ. ಮೊದಲೇ ನಿರ್ಧರಿಸಿ ಮಾಡುತ್ತಿದ್ದೇವೆ.

"

ನಿಮ್ಮ ಚಿತ್ರಗಳಲ್ಲಿ ಹಾಡುಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆಯಲ್ಲ?

ಅದು ನಿರ್ದೇಶಕರಿಗೆ ಸಲ್ಲಬೇಕು. ಆ್ಯಕ್ಷನ್‌ ಚಿತ್ರಗಳಲ್ಲಿ ಟಪ್ಪಾಂಗುಚ್ಚಿ ಹಾಡುಗಳೇ ಸೌಂಡು ಮಾಡುತ್ತವೆ ಎಂದುಕೊಂಡಿದ್ದರು. ಆದರೆ, ಯಜಮಾನ, ಕುರುಕ್ಷೇತ್ರ, ಈಗ ರಾಬರ್ಟ್‌ ಚಿತ್ರಗಳಲ್ಲಿ ಮೆಲೋಡಿ ಹಾಡುಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿವೆ ಮತ್ತು ಕಾಣುತ್ತಿವೆ.

ಎಷ್ಟುಹೊಸ ಚಿತ್ರಗಳು ನಿಮ್ಮ ಮುಂದಿವೆ?

ಸದ್ಯಕ್ಕೆ ಏಳೆಂಟು ಚಿತ್ರಗಳು ಪಕ್ಕಾ ಫೈನಲ್‌ ಆಗಿವೆ. ‘ರಾಬರ್ಟ್‌’ ಮುಗಿದ ಮೇಲೆ ರಾಕ್‌ಲೈನ್‌ ವೆಂಕಟೇಶ್‌ ಅವರ ನಿರ್ಮಾಣದ ಸಿನಿಮಾ ಸೆಟ್ಟೇರುತ್ತದೆ. ಈ ಚಿತ್ರದ ಮೂಲಕ ರಾಕ್‌ಲೈನ್‌ ಮಗ ಯತೀಶ್‌ ಪೂರ್ಣ ಪ್ರಮಾಣದಲ್ಲಿ ನಿರ್ಮಾಪಕರಾಗುತ್ತಿದ್ದಾರೆ. ಇದರ ಜತೆಗೆ ನಿರ್ಮಾಪಕರಾದ ಸಂದೇಶ್‌ ನಾಗರಾಜ್‌, ಉಮಾಪತಿ, ಶೈಲಜಾ ನಾಗ್‌, ಪ್ರಸಾದ್‌ ಅವರು ನಿರ್ಮಾಣದ ಚಿತ್ರಗಳು ಹಾಗೂ ಮಿಲನ ಪ್ರಕಾಶ್‌ ನಿರ್ದೇಶನದ ಸಿನಿಮಾ ಇದೆ. ಅಲ್ಲದೆ ಒಬ್ಬ ತೆಲುಗು ನಿರ್ಮಾಪಕನ ಚಿತ್ರ ಒಪ್ಪಿಕೊಂಡಿದ್ದೇನೆ.

- ‘ರಾಬರ್ಟ್‌’ ಚಿತ್ರದ ಕತೆ ಕೇಳಿದ ಮೇಲೆ ನಿರ್ದೇಶಕರು ನೀವು ಇಲ್ಲಿ ಆಂಜನೇಯನ ಪಾತ್ರ ಮಾಡಬೇಕು ಅಂದರು. ನಾನು ಮೊದಲೇ ನಾನ್‌ವೆಜ್‌ ಪ್ರಿಯ. ಹೇಗಪ್ಪ ಅಂತ ಯೋಚನೆ ಮಾಡಿದೆ. ಆದರೆ, ಆ ಪಾತ್ರ ಮುಗಿಯುವ ತನಕ ಸೆಟ್‌ ಒಳಗೆ ನಾನ್‌ವೆಜ್‌ ಊಟ ಪ್ರವೇಶ ಇರಲಿಲ್ಲ. ದೇವರ ಪಾತ್ರ ಮಾಡಕ್ಕೂ ನನಗೂ ಇಷ್ಟಆಯಿತು.

- ಬೆಂಗಳೂರಿನ ಬಿನ್ನಿಮಿಲ್‌ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಜೈ ಶ್ರೀರಾಮ್‌ ಹಾಡು ಚಿತ್ರೀಕರಣ ಮಾಡಿದ್ದು. ಇಡೀ ಮೈದಾನ ಸ್ವಚ್ಚಗೊಳಿಸುವಾಗ ಅಲ್ಲಿ ಎಷ್ಟುಹಾವುಗಳು ಇದ್ದವು ಎಂಬುದು ನಮಗೆ ಮಾತ್ರ ಗೊತ್ತು. ಸ್ವಚ್ಚಗೊಳಿಸಿದ ಮೇಲೂ ಭಯ ಆಗುತ್ತಿತ್ತು. ಯಾಕೆಂದರೆ ನೂರಾರು ಮಕ್ಕಳು ಇದ್ದಾರೆ. ಹಾವುಗಳು ಬಂದರೆ ಹೇಗೆ ಅನ್ನೋ ಆತಂಕ ಚಿತ್ರೀಕರಣ ಮುಗಿಯುವ ತನಕ ಇತ್ತು.

- ನಾನು ಬೇರೆಯವರ ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡಬೇಕು ಅಂದರೆ ಆ ಪಾತ್ರಕ್ಕೆ ಮಹತ್ವ ಇರಬೇಕು, ನನಗಾಗಿಯೇ ಹುಟ್ಟಿಕೊಂಡಿರಬಾರದು.ಕತೆಗಾಗಿ ಆ ಪಾತ್ರ ಇರಬೇಕು. ನಾನು ಆ ಪಾತ್ರಕ್ಕೆ ಅಗತ್ಯ ಅನಿಸಬೇಕು. ಇದಿಷ್ಟೇ ಷರತ್ತು.

- ‘ಚೌಕಾ’ ಸಿನಿಮಾ ಹೊತ್ತಿನಲ್ಲಿ ನಾನು ‘ರಾಬರ್ಟ್‌’ ಚಿತ್ರದ ಒಂದು ಸಾಲಿನ ಕತೆ ಕೇಳಿದ್ದು. ಆಗ ಏನೋ ಈ ಕತೆಯಲ್ಲಿದೆ ಇದೆ ಅನಿಸಿ, ತರುಣ್‌ಗೆ ಪೂರ್ತಿ ಕತೆ ಮಾಡಿಕೋ ಅಂದೆ. ಇಲ್ಲಿ ನಿರ್ದೇಶಕ ಬರೀ ತರುಣ್‌ ಅಲ್ಲ, ತರುಣ್‌ ಸುಧೀರ್‌. ಕತೆ ಮತ್ತು ಆ ಹೆಸರು ಮೊದಲು ನಮ್ಮನ್ನು ಜತೆಯಾಗಿಸಿತು.

click me!