‘ಅಯ್ಯೋ ಅಣ್ಣಾ, ನನ್ನ ಹೊರಗೆ ತೆಗೆಯಿರಿ’; ಮೋಕ್ಷ ಸಿಗುತ್ತೆ ಅಂತ ಹೋಗಿ ಸಾವಿನ ದವಡೆಗೆ ಜಾರಿದ ಮಹಿಳೆ; ಮುಂದೆ ಆಗಿದ್ದೇನು?

Published : Jul 31, 2026, 08:00 PM ISTUpdated : Jul 31, 2026, 08:36 PM IST
New Viral

ಸಾರಾಂಶ

ಮೋಕ್ಷ ಸಿಗುತ್ತದೆ ಎಂಬ ಮೂಢನಂಬಿಕೆಯಿಂದ ತಿರುವಣ್ಣಾಮಲೈನ 'ಮೋಕ್ಷ ಮಾರ್ಗಂ' ಎಂಬ ಕಿರಿದಾದ ಗುಹೆಯಲ್ಲಿ ಸಿಲುಕಿಕೊಂಡ ಮಹಿಳೆಯೊಬ್ಬರು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.

"ಹೇ, ನೀನು ಈ ಕಲ್ಲಿನ ಸಣ್ಣ ಗಿಂಡಿಯಿಂದ ಹೊರಗೆ ಬಂದರೆ ನಿನಗೆ ನೇರವಾಗಿ ಮೋಕ್ಷ ಸಿಗುತ್ತದೆ. ಹೀಗೆ ಯಾರೋ ಹೇಳಿದ ಮಾತನ್ನು ನಂಬಿ ಮಹಿಳೆಯೊಬ್ಬರು ಆ ಕಿರಿದಾದ ಗುಹೆಯೊಳಗೆ ಇಳಿಯಲು ಸಾಹಸ ಮಾಡಿದರು. ಆದರೆ ಗುಹೆಯನ್ನು ಪ್ರವೇಶಿಸುತ್ತಿದ್ದಂತೆಯೇ ಕೆಲವೇ ಸೆಕೆಂಡುಗಳಲ್ಲಿ ಅವರ ಧ್ವನಿ ಬದಲಾಯಿತು. ಓ ದೇವರೇ, ನಾನು ಇಲ್ಲಿ ಸಿಕ್ಕಿಬಿದ್ದಿದ್ದೇನೆ. ಯಾರಾದರೂ ದಯವಿಟ್ಟು ನನ್ನನ್ನು ಹೊರಗೆ ತೆಗೆಯಿರಿ... ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ, ಕಾಪಾಡಿ!" ಎಂದು ಆ ಮಹಿಳೆ ಕರುಣಾಜನಕವಾಗಿ ಗೋಗರೆಯಲು ತೊಡಗಿದರು.

ಭಯಾನಕ ಘಟನೆ!

ಮೋಕ್ಷ ಸಿಗುತ್ತದೆ ಎಂಬ ಮೂಢನಂಬಿಕೆಯಿಂದ ಕಲ್ಲಿನ ಬಿರುಕಿಗೆ ಇಳಿದ ಆ ಮಹಿಳೆಗೆ, ಕೆಲವೇ ಕ್ಷಣಗಳಲ್ಲಿ ತನ್ನ ಪ್ರಾಣಕ್ಕೇ ಅಪಾಯ ಎದುರಾಗುತ್ತದೆ ಎಂದು ಊಹಿಸಲೂ ಸಾಧ್ಯವಾಗಿರಲಿಲ್ಲ. ತಮಿಳುನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರ ತಿರುವಣ್ಣಾಮಲೈನಲ್ಲಿರುವ ಅರುಣಾಚಲ ಗಿರಿಯ “ಮೋಕ್ಷ ಮಾರ್ಗಂ” ಎಂಬ ಕಿರಿದಾದ ಗುಹೆಯಲ್ಲಿ ಸಂಭವಿಸಿದ ಈ ಭಯಾನಕ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ವೈರಲ್ ವೀಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ವೀಡಿಯೋದಲ್ಲಿ, ಮಹಿಳೆಯೊಬ್ಬರು ಕಲ್ಲಿನ ಸಣ್ಣ ಬಿರುಕಿನ ನಡುವೆ ಅರ್ಧ ಒಳಗೆ, ಅರ್ಧ ಹೊರಗೆ ತ ಸಿಲುಕಿಕೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಆ ಹಾದಿ ಎಷ್ಟು ಕಿರಿದಾಗಿದೆ ಎಂದರೆ, ಅವರಿಗೆ ಮುಂದೆ ಸಾಗಲು ಅಥವಾ ಹಿಂದಕ್ಕೆ ಬರಲು ಸಾಧ್ಯವಾಗದೆ ತೀವ್ರವಾಗಿ ಉಸಿರುಗಟ್ಟಲು ಪ್ರಾರಂಭಿಸುತ್ತದೆ. ಭಯದಿಂದ ಅವರು ಕಿರುಚಾಡಲು ತೊಡಗುತ್ತಾರೆ. ಅವರ ಆರ್ತನಾದ ಕೇಳಿ ಅಲ್ಲಿದ್ದ ಭಕ್ತರು ನೆರವಿಗೆ ಧಾವಿಸಿದರು. ಮೊದಲಿಗೆ ಒಬ್ಬ ಮಹಿಳೆ ಆಕೆಯನ್ನು ಎಳೆದು ಹೊರತೆಗೆಯಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ನಂತರ ಮತ್ತೊಬ್ಬ ಪುರುಷ ಮತ್ತು ಮಹಿಳೆ ಸೇರಿ ಸುಧೀರ್ಘ ಹೋರಾಟ ನಡೆಸಿ, ತೀವ್ರ ಶ್ರಮದ ಬಳಿಕ ಆಕೆಯನ್ನು ಸುರಕ್ಷಿತವಾಗಿ ಹೊರಗೆಳೆದರು. ಒಂದು ವೇಳೆ ರಕ್ಷಣಾ ಕಾರ್ಯಾಚರಣೆ ಕೊಂಚ ವಿಳಂಬವಾಗಿದ್ದರೂ ಆಕೆಯ ಜೀವಕ್ಕೆ ಕಂಟಕವಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕೆಲವೇ ದಿನಗಳ ಹಿಂದೆ ಸಂಭವಿಸಿತ್ತು ದುರಂತ ಸಾವು!

ಈ ಘಟನೆಗೂ ಕೆಲವೇ ದಿನಗಳ ಮುಂಚೆ, ಆಂಧ್ರಪ್ರದೇಶದ ರಾಜಮಹೇಂದ್ರವರಂ ನಿವಾಸಿಯಾದ 36 ವರ್ಷದ **ಮಣಿಕುಮಾರ್** ಎಂಬ ವ್ಯಕ್ತಿ ಇದೇ "ಮೋಕ್ಷ ಮಾರ್ಗ"ದ ಬಂಡೆಗಳ ನಡುವೆ ಸಿಲುಕಿಕೊಂಡು ದುರಂತವಾಗಿ ಕೊನೆಯುಸಿರೆಳೆದಿದ್ದರು. ಕಿರಿದಾದ ಜಾಗದಲ್ಲಿ ದೀರ್ಘಕಾಲ ಸಿಲುಕಿದ್ದರಿಂದ ತೀವ್ರ ಉಸಿರಾಟದ ತೊಂದರೆ ಅನುಭವಿಸಿದ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಜೀವ ಪಕ್ಷಿ ಹಾರಿಹೋಗಿತ್ತು. ಈ ಭೀಕರ ದುರಂತ ಮಾಸುವ ಮುನ್ನವೇ ಮತ್ತೊಬ್ಬ ಮಹಿಳೆ ಅದೇ ರೀತಿ ಸಿಲುಕಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಏನಿದು 'ಮೋಕ್ಷ ಮಾರ್ಗದ' ಮೂಢನಂಬಿಕೆ?

ಸ್ಥಳೀಯವಾಗಿ ಹರಡಿರುವ ಕಲ್ಪನೆಯ ಪ್ರಕಾರ, ಅರುಣಾಚಲ ಗಿರಿಯಲ್ಲಿರುವ ಈ ಅತ್ಯಂತ ಕಿರಿದಾದ ಬಂಡೆಯ ಸಂದಿನ ಮೂಲಕ ದೇಹವನ್ನು ಕೆರೆದುಕೊಂಡು ಹೊರಬಂದರೆ ಮಾಡಿದ ಪಾಪಗಳೆಲ್ಲ ಕಳೆದು ನೇರವಾಗಿ "ಮೋಕ್ಷ" ದೊರೆಯುತ್ತದೆ ಎಂಬ ಮೂಢನಂಬಿಕೆಯಿದೆ. ಈ ಅಂಧಶ್ರದ್ಧೆಗೆ ಮರುಳಾಗಿ, ಪ್ರತಿದಿನ ನೂರಾರು ಭಕ್ತರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಈ ಅಪಾಯಕಾರಿ ಬಿರುಕನ್ನು ದಾಟಲು ಸಾಹಸಪಡುತ್ತಾರೆ.

ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಸತತವಾಗಿ ಇಂತಹ ಜೀವನ್ಮರಣ ಅಪಘಾತಗಳು ಮತ್ತು ಸಾವುಗಳು ಸಂಭವಿಸುತ್ತಿದ್ದರೂ, ಸ್ಥಳೀಯ ಆಡಳಿತ ಮತ್ತು ದೇವಾಲಯ ಆಡಳಿತ ಮಂಡಳಿ ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಜನರು ತಮ್ಮ ಮೂಢನಂಬಿಕೆ ಮತ್ತು ಅಜ್ಞಾನದಿಂದ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಅಪಾಯಕಾರಿ "ಮೋಕ್ಷ ಮಾರ್ಗ"ಕ್ಕೆ ತಕ್ಷಣವೇ ಬೇಲಿ ಹಾಕಿ, ಸಾರ್ವಜನಿಕರ ಪ್ರವೇಶವನ್ನು ಪೂರ್ಣವಾಗಿ ಮುಚ್ಚಬೇಕು ಅಥವಾ ಕಟ್ಟುನಿಟ್ಟಿನ ಭದ್ರತಾ ಸಿಬ್ಬಂದಿಯನ್ನು ನೇಮಿಸಿ ಇಂತಹ ಹುಚ್ಚು ಸಾಹಸಗಳಿಗೆ ಬ್ರೇಕ್ ಹಾಕಬೇಕು ಎಂದು ನೆಟ್ಟಿಗರು ಹಾಗೂ ಪ್ರಜ್ಞಾವಂತ ನಾಗರಿಕರು ಒತ್ತಾಯಿಸುತ್ತಿದ್ದಾರೆ.

PREV
Read more Articles on
click me!

Recommended Stories

ಭಾರೀ ಅನಾಹುತ, ನಟಿ ರಶ್ಮಿಕಾ ಮಂದಣ್ಣಗೆ ಬಲವಾದ ಏಟು; ಇನ್ನೆಷ್ಟು ದಿನ ಮನೆಯಲ್ಲೇ ಇರ್ಬೇಕು ಗೊತ್ತಾ?
Viral Post: ವರ್ಷಗಟ್ಟಲೆ ಓದಿದ್ದಕ್ಕೂ ಬೆಲೆ ಇಲ್ಲವೇ? ಡಬಲ್ ಗೋಲ್ಡ್ ಮೆಡಲಿಸ್ಟ್‌ಗೆ 50 ರೂ. ಆಫರ್ ನೀಡಿದ ಕಂಪನಿ!