
ಬೆಂಗಳೂರು (ಆ.12) ಉದ್ಯೋಗ ಕಡಿತದಲ್ಲಿ ಕೆಲಸ ಕಳೆದುಕೊಂಡವರ ಹಿಂದಿನ ನೋವಿನ ಕತೆಗಳು ಒಂದೆರಡಲ್ಲ.ಕೆಲಸ ಕಳೆದುಕೊಂಡವರು ಮತ್ತೆ ಬದುಕು ಕಟ್ಟಿಕೊಳ್ಳಲು ಹರಸಹಾಸ ಮಾಡುತ್ತಾರೆ. ಹೀಗೆ ಉದ್ಯೋಗ ಕಡಿತಲ್ಲಿ ಕೆಲಸ ಕಳೆದುಕೊಂಡು ಬೆಂಗಳೂರು ಟೆಕ್ಕಿ ತನ್ನ ಕೊನೆಯ ದಿನ ಲ್ಯಾಪ್ಟಾಪ್ ಹಿಂದಿರುಗಿಸಲು ಕಚೇರಿಗೆ ತೆರಳಿದಾಗ ನಡೆದ ಘಟನೆ ಕುರಿತು ಹಂಚಿಕೊಂಡಿದ್ದಾರೆ. ರೆಡ್ಡಿಟ್ ಮೂಲಕ ತಮ್ಮ ನೋವು, ಕಚೇರಿ, ಕಂಪನಿ ಕಲಿಸಿದ ಪಾಠವನ್ನು ಹೇಳಿಕೊಂಡಿದ್ದಾರೆ. 2 ವರ್ಷದ ಮಗನ ಜೊತೆ ಲ್ಯಾಪ್ಟಾಪ್ ಹಿಂದಿರುಗಿಸಲು ಕಚೇರಿಗೆ ಹೋದ ಟೆಕ್ಕಿಗೆ ಒಂದೇ ದಿನದಲ್ಲಿ ನರಕ ದರ್ಶನವಾಗಿದೆ.
ಬೆಂಗಳೂರಿನ ಕಾರ್ಪೋರೇಟ್ ಕಂಪನಿ ಉದ್ಯೋಗ ಕಡಿತದಲ್ಲಿ ಟೆಕ್ಕಿ ಕೆಲಸ ಕಳೆದುಕೊಂಡಿದ್ದರು. ಕೊನೆಯ ದಿನ ಆಫೀಸ್ ಲ್ಯಾಪ್ಟಾಪ್ ಹಿಂದಿರುಗಿಸಿ ರಿಲೀವಿಂಗ್ ಪ್ರಕ್ರಿಯೆ ಮುಗಿಸಬೇಕಿತ್ತು. ಹೀಗಾಗಿ ಕಚೇರಿಗೆ ತೆರಳಬೇಕಿತ್ತು. ತನ್ನ 2 ವರ್ಷದ ಮಗನ ಜೊತೆ ಟೆಕ್ಕಿ ಕಚೇರಿಗೆ ತೆರಳಿದ್ದರು. 2 ವರ್ಷದ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಅನಿವಾರ್ಯವಾಗಿ ಮಗುವನ್ನು ಕರೆದುಕೊಂಡು ಕಚೇರಿಗೆ ಆಗಮಿಸಿದ್ದರು.
ಎರಡು ವರ್ಷದ ಮಗುವಿನ ಜೊತೆ ಕಚೇರಿಗೆ ತೆರಳಿದ ಟೆಕ್ಕಿಗೆ ಪ್ರವೇಶ ನೀಡಲು ಭದ್ರತಾ ಸಿಬ್ಬಂದಿ ನಿರಾಕರಿಸಿದ್ದಾರೆ. ಸಂದರ್ಶಕರಿಗೆ ಪ್ರವೇಶವಿಲ್ಲ ಎಂದು ಕಂಪನಿ ನಿಯಮ ಹೇಳಿದ್ದಾರೆ. ನಿಮಗೆ ಮಾತ್ರ ಪ್ರವೇಶವಿದೆ. ಮಗುವಿಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ಸಿಬ್ಬಂದಿಗಳು ಖಡಕ್ ಆಗಿ ಹೇಳಿದ್ದಾರೆ. ತಾನು ಇದೇ ಕಂಪನಿಯ ಉದ್ಯೋಗಿ, ಇಂದು ನನ್ನ ಕೊನೆಯ ದಿನ. ಕೇವಲ 5 ನಿಮಿಷದಲ್ಲಿ ಲ್ಯಾಪ್ಟಾಪ್ ಹಿಂದಿರುಗಿಸಿ ಪ್ರಕ್ರಿಯೆ ಮುಗಿಸುತ್ತೇನೆ. ಐದು ನಿಮಿಷದಲ್ಲಿ ಹೊರಬರುತ್ತೇನೆ ಎಂದು ಮನವಿ ಮಾಡಿದ್ದಾರೆ. ಭದ್ರತಾ ಸಿಬ್ಬಂದಿ ಒಪ್ಪಿಲ್ಲ. ಕಂಪನಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಪ್ರವೇಶಕ್ಕೆ ಅನುಮತಿ ಕೇಳಿದ್ದಾರೆ. ಆದರೆ ಅದು ಕೂಡ ಸಾಧ್ಯವಾಗಲಿಲ್ಲ.
ಕೇವಲ 2 ವರ್ಷದ ಮಗುವನ್ನು ತನ್ನ ಜೊತೆ ಕಚೇರಿ ಒಳಗೆ ಕರೆದುಕೊಂಡು ಹೋಗಲು ಬಿಡಲೇ ಇಲ್ಲ. ಕೊನೆಗೆ ಸಹೋದ್ಯೋಗಿಗೆ ಕರೆ ಮಾಡಿ ಅವರ ಕೈಯಲ್ಲಿ ಮಗುವನ್ನು ನೀಡಿದ್ದಾರೆ. ಬಳಿಕ 15 ನಿಮಿಷದಲ್ಲಿ ಪ್ರಕ್ರಿಯೆ ಮುಗಿಸಿ ಹೊರಬಂದಿದ್ದಾರೆ.
ಘಟನೆಯಿಂದ ಟೆಕ್ಕಿಗೆ ತೀವ್ರ ನೋವುಂಟಾಗಿದೆ. ಈ ಘಟನೆ ಬೆನ್ನಲ್ಲೇ ತಾನು ಕಲಿತ ಪಾಠವನ್ನು ಹಂಚಿಕೊಂಡಿದ್ದಾರೆ. ಕಂಪನಿ ಯಾವತ್ತಿಗೂ ಕಂಪನಿ. ನೀವು ಹಗಲು, ರಾತ್ರಿ ದುಡಿದಿರುತ್ತೀರಿ. ಡೆಡ್ಲೈನ್ ಒಳಗೆ ಕೆಲಸ ಮುಗಿಸಲು ಹಲವು ತ್ಯಾಗ ಮಾಡಿರುತ್ತೀರಿ. ನೀವೂ ಎಷ್ಟೇ ವರ್ಷ ಕಂಪನಿಗೆ ದುಡಿದರೂ ಕಂಪನಿಗೆ ನೀವು ಏನೂ ಅಲ್ಲ. ಅವರಿಗೆ ಮಗುವನ್ನು ಒಳಗೆ ಬಿಡಿದಿರಲು ಕಂಪನಿ ನಿಯಮಗಳು, ನೀತಿಗಳು ಇರಬಹುದು. ನಿಮ್ಮಿಂದ ಕೆಲಸ ಮುಗೀತು ಅಂದ ಮೇಲೆ ನೀವು ಕಂಪನಿಗೆ ಕೇವಲ ಕಸ. ಕಂಪನಿಗೆ ವೈಯುಕ್ತಿಕ ಭಾವನೆಗಳಿಲ್ಲ. ಶ್ರಮವಹಿಸಿ ದುಡಿದು ಏನೂ ಸಾಧಿಸಿದ್ದೂ ಇಲ್ಲ. ಉದ್ಯೋಗ ನಿಮ್ಮ ಜೀವನದ ಒಂದು ಭಾಗ ಮಾತ್ರ, ಅದುವೇ ಜೀವನವಲ್ಲ. ನಿಮ್ಮ ಕುಟುಂಬಕ್ಕೆ ಆದ್ಯತೆ ನೀಡಿ. ಉದ್ಯೋಗ ಹೊರತಾಗಿ ನಿಮ್ಮ ಜೀವನ ರೂಪಿಸಿಕೊಳ್ಳಿ ಎಂದು ಬೆಂಗಳೂರು ಟೆಕ್ಕಿ ಕಿವಿಮಾತು ಹೇಳಿದ್ದಾರೆ.