Udupi Paryayothsava: ಇಂದಿನಿಂದ ಕೃಷ್ಣಾಪುರ ಶ್ರೀಗಳ ಪರ್ಯಾಯ ಶುರು

Jan 18, 2022, 9:30 AM IST

ಉಡುಪಿ (ಜ. 18):  ಶ್ರೀ ಕೃಷ್ಣಮಠದ (Krishna Mutt) 500 ವರ್ಷಗಳ ದೈವಾರ್ಷಿಕ ಪರ್ಯಾಯೋತ್ಸವದ ಇತಿಹಾಸದಲ್ಲಿ, 251ನೇ ಪರ್ಯಾಯೋತ್ಸವ ಅತ್ಯಂತ ಸರಳವಾಗಿ, ಆದರೆ ಅಷ್ಟೇ ಸಂಪ್ರದಾಯಬದ್ಧವಾಗಿ ನಡೆಯಿತು. 

ಅದಮಾರು ಮಠದ ಪರ್ಯಾಯದ ಕೊನೇ ದಿನವಾದ ಸೋಮವಾರ ಪರ್ಯಾಯ ಪೀಠಾಧೀಶ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ತಮ್ಮ ಪ್ರಥಮ ಪರ್ಯಾಯದ ಕೊನೆಯ ಮಹಾಪೂಜೆ ನೆರವೇರಿಸಿದರು.  ಬಳಿಕ ಅವರು ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿಗೆ ಪೊಡವಿಗೊಡೆಯ ಶ್ರೀಕೃಷ್ಣನ ಪೂಜಾಧಿಕಾರವನ್ನು ವಿಧ್ಯುಕ್ತವಾಗಿ ಹಸ್ತಾಂತರಿಸಿದರು. ನಂತರ ತಮ್ಮ ಮಠದ ವತಿಯಿಂದ ಸಾವಿರಾರು ಮಂದಿ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಿದರು.

ಕೋವಿಡ್‌ ಹಿನ್ನೆಲೆಯಲ್ಲಿ ಮೆರವಣಿಗೆಯಲ್ಲಿ ಜನರ ಭಾಗವವಹಿಸುವಿಕೆಯನ್ನು ನಿರ್ಬಂಧಿಸಲಾಗಿದ್ದು, ಅಷ್ಟಮಠಾಧೀಶರು ಕುಳಿತುಕೊಳ್ಳುವ ಪಲ್ಲಕ್ಕಿಗಳನ್ನು ಹೊರುವುದಕ್ಕೆ ಭಕ್ತರಿಗೆ ಅವಕಾಶ ನೀಡಲಿಲ್ಲ. ಪಲ್ಲಕ್ಕಿಗಳನ್ನು ವಾಹನದ ಮೇಲಿಟ್ಟು ಮೆರವಣಿಗೆ ಮಾಡುವ ವ್ಯವಸ್ಥೆ ಮಾಡಲಾಗಿತ್ತು.