ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವಿನ ಆಣೆ ಪ್ರಮಾಣ ಯುದ್ಧ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಬಿಜೆಪಿ ಜೊತೆ ಕೈ ಜೋಡಿಸಲ್ಲ ಎಂದು ತಂದೆ ದೇವೇಗೌಡರ ಮೇಲೆ ಆಣೆ ಮಾಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ ಮಾತಿಗೆ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದರು.
ಬೆಂಗಳೂರು (ಏ.21): ರಾಜ್ಯದ ಇಬ್ಬರು ಮಾಜಿ ಸಿಎಂಗಳ ನಡುವಿನ ಆಣೆ ಪ್ರಮಾಣಗಳ (Oath) ಯುದ್ಧ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿ (BJP) ಜೊತೆ ಹೋಗಲ್ಲ ಎಂದು ದೇವೇಗೌಡರ ಮೇಲೆ ಕುಮಾರಸ್ವಾಮಿ (Hd Kumaraswamy) ಆಣೆ ಮಾಡಲಿ ಎಂದು ಸಿದ್ಧರಾಮಯ್ಯ(Siddaramaiah) ಹೇಳಿದ್ದೇ ತಡ, ಕುಮಾರಸ್ವಾಮಿ ನಖಶಿಖಾಂತ ಉರಿದುಹೋಗಿದ್ದರು. ಆಣೆ ಮಾಡು ಅನ್ನೋಕೆ ಅವನು ಯಾವೂರ ದಾಸಯ್ಯ ಎಂದು ಏಕವಚನದಲ್ಲಿಯೇ ಸಿದ್ಧರಾಮಯ್ಯ ಅವರಿಗೆ ಜಾಡಿಸಿದ್ದರು.
ಸಿದ್ಧರಾಮಯ್ಯ ಅಪ್ಪನ ಮೇಲೆ ಆಣೆ ಮಾಡ್ತೀರಾ ಎಂದು ಕೇಳಿದ್ದಕ್ಕದೆ, ಪ್ರತಿ ಸವಾಲ್ ಹಾಕಿದ ಕುಮಾರಸ್ವಾಮಿ ಹಾಗಿದ್ದರೆ ನೀವು ಉಪಚುನಾವಣೆಗಳಲ್ಲಿ ಕಾಂಗ್ರೆಸ್ (Congress) ಪಕ್ಷವನ್ನು ಸೋಲಿಸಲು ಬಿಜೆಪಿಯಿಂದ ಹಣ ಪಡೆದಿಲ್ಲ ಎಂದು ಮಗನ ಮೇಲೆ ಆಣೆ ಮಾಡಲು ಸಿದ್ಧವಿದ್ದೀರಾ ಎಂದು ಕೇಳಿದ್ದರು. ಬದ್ಧ ವೈರಿಗಳ ನಡುವೆ ಬುಗಿಲೆದ್ದ ಅಸಮಾಧಾನದ ಹಿಂದಿನ ಒಳನೋಟ.
ಆಣೆ ಮಾಡು ಎನ್ನೋಕೆ ಅವನು ಯಾವೂರ ದಾಸಯ್ಯ?: ಸಿದ್ದು ವಿರುದ್ಧ ಎಚ್ಡಿಕೆ ಕಿಡಿ
ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡು ಬಿಜೆಪಿ ಬಳಿ ಹಣ ಪಡೆದು, ಅಪರೇಷನ್ ಕಮಲ ನಡೆಸಲು ಬೆಂಬಲ ನೀಡಿ, ಆಪರೇಷನ್ ಕಮಲದಿಂದ ಬಂದು ಚುನಾವಣೆ ಎದುರಿಸದವರಿಗೆ ಒಳಗಿಂದೊಳಗೆ ಹಿಂಬದಿಯಲ್ಲಿ ಸಿದ್ದರಾಮಯ್ಯ ಬೆಂಬಲ ನೀಡಿದರು ಎಂದರು. ಸಿದ್ದರಾಮಯ್ಯನ ದುರಾಡಳಿತದ ಕಾರಣ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಮಾಡಿಕೊಂಡರು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ದರಾಮಯ್ಯ ಆಡಳಿತ ಕಾರಣ. ಅದನ್ನು ಬಿಟ್ಟು ಇಂದು ಬರಿ ಸಂತೊಷ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದರು.