- 2018 ರಲ್ಲೇ ಎಚ್ಡಿಕೆ ಎಚ್ಚರಿಸಿದ್ದರೂ ಸಿದ್ದು ‘ಬಿಟ್’ ಹಾಕಿದ್ದರು: ಬಿಜೆಪಿ
- ನಲಪಾಡ್ ಹಲ್ಲೆ ಘಟನೆ ಕ್ಷುಲ್ಲಕ ಕಾರಣಕ್ಕೆ ನಡೆದಿಲ್ಲ
ಹ್ಯಾಕಿಂಗ್, ಬಿಟ್ಕಾಯಿನ್, ಹವಾಲಾ ಕೈವಾಡ ಇತ್ತು
ಬೆಂಗಳೂರು (ನ. 17): 3 ವರ್ಷದ ಹಿಂದೆ ನಗರದ ಯುಬಿ ಸಿಟಿಯಲ್ಲಿ ನಡೆದಿದ್ದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಗಲಾಟೆ ಪ್ರಕರಣದ ಹಿಂದೆ ಬಿಟ್ ಕಾಯಿನ್ ದಂಧೆ (Bitcoin Scam) ಇದೆ ಎಂಬ ಶಂಕೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗಲೇ ವ್ಯಕ್ತಪಡಿಸಿದ್ದರು. ಆಗ ವಿರೋಧ ಪಕ್ಷದಲ್ಲಿದ್ದ ಕುಮಾರಸ್ವಾಮಿ ಅವರು ನಲಪಾಡ್ ಪ್ರಕರಣದ ಹಿಂದೆ ಬಿಟ್ ಕಾಯಿನ್ ದಂಧೆಯಿದೆ ಎಂಬ ಗಂಭೀರ ಆರೋಪವನ್ನು ಹುಬ್ಬಳ್ಳಿಯಲ್ಲಿ ಮಾಡಿದ್ದರು. ಆದರೆ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಆ ಆರೋಪವನ್ನು ಕಿವಿಗೇ ಹಾಕಿಕೊಳ್ಳಲಿಲ್ಲ ಎಂದು ಬಿಜೆಪಿ ಆರೋಪಿಸಿದೆ.
ಯುಬಿ ಸಿಟಿ ಗಲಾಟೆ ಪ್ರಕರಣದ ಸಂಬಂಧ 2018ರ ಅಕ್ಟೋಬರ್ 5ರಂದು ಶ್ರೀಕಿ ಹೈಕೋರ್ಟ್ನಲ್ಲಿ ಜಾಮೀನು ಪಡೆಯುತ್ತಾನೆ. ಆದರೆ ಜಾಮೀನು ಪಡೆಯದಂತೆ ಆಗಿನ ಕಾಂಗ್ರೆಸ್ ಸರ್ಕಾರ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಜಾಮೀನು ತೆಗೆದುಕೊಂಡ ನಂತರ ಶ್ರೀಕಿಯನ್ನು ಪೊಲೀಸ್ ಠಾಣೆಗೆ ಕರೆಸಿ ಯಾಕೆ ವಿಚಾರಣೆ ನಡೆಸಲಿಲ್ಲ? ಈ ರೀತಿ ಮಾಡದಂತೆ ತಡೆದದ್ದು ಯಾರು? 2018ರಲ್ಲೇ ಶ್ರೀಕಿ ತಾನು ಹ್ಯಾಕ್ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದರೂ ಆತನ ವಿರುದ್ಧ ಯಾಕೆ ಪ್ರಕರಣ ದಾಖಲಿಸಲಿಲ್ಲ? ಆತನಿಗೆ ರಾಜಾತಿಥ್ಯ ಕೊಟ್ಟವರು ಯಾರು ಎಂಬುದಕ್ಕೆ ಕಾಂಗ್ರೆಸ್ ಮುಖಂಡರು ಉತ್ತರಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.