ಬೀದರ್‌ನಲ್ಲಿ ಹೀಗೊಂದು ಗೆಳೆಯ ಬಳಗ: ಪ್ರಾಣಿ, ಪಕ್ಷಿಗಳ ದಾಹ ನೀಗಿಸುತ್ತಿರುವ ಸ್ನೇಹಿತರು..!

Jun 22, 2023, 8:53 PM IST

ಬೀದರ್‌(ಜೂ.22): ಬಿಸಿಲಿನ ನಾಡು ಎನಿಸಿಕೊಂಡಿರುವ ಗಡಿ ಜಿಲ್ಲೆ ಬೀದರ್‌ನಲ್ಲಿ ಈ ವರ್ಷ ಕೂಡ 40-42 ಡಿಗ್ರಿ ತಾಪಮಾನ ದಾಖಲಾಗಿದೆ. ರಣಭೀಕರ ಬಿಸಿಲಿನಲ್ಲಿ ಮನುಷ್ಯ ಸ್ವಲ್ಪ ಓಡಾಡಿದರೇ ಬಾಯಿ ಒಣಗಿ ಸುಸ್ತಾಗಿ ಕೂಡಬೇಕಾದ ಪರಿಸ್ಥಿತಿ ಇದೆ. ಇಂತಹ ದುಸ್ಥಿತಿ ಕಾಡು ಪ್ರಾಣಿಗಳು, ವನ್ಯಜೀವಿಗಳಿಗೆ ಬರಬಾರದು ಎಂದು, ಮೂಕ ಪ್ರಾಣಿಗಳ ದಾಹ ನೀಗಿಸಲು ಸ್ವಾಭಿಮಾನಿ ಗೆಳೆಯರ ಬಳಗ ಮುಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಒಂದು ಕಡೆ ರಣಬಿಸಿಲು ಮತ್ತೊಂದು ಕಡೆ ನೀರಿನ ಸಮಸ್ಯೆ, ಮನುಷ್ಯ ಆದರೆ ಏನೋ ಮಾಡಿ ನೀರು ಕುಡಿಯುತ್ತಾನೆ. ಆದರೆ ಅರಣ್ಯ ಪ್ರದೇಶದ ಮೂಕ ಪ್ರಾಣಿಗಳು ನೀರಿಗಾಗಿ ಪರಿತಪಿಸುವಂತ ಪರಿಸ್ಥಿತಿ ನಿರ್ಮಾಣ ಆಗಬಾರದು ಎಂದು ಬೀದರ್​ನ ಸ್ವಾಭಿಮಾನಿ ಗೆಳೆಯರ ಬಳಗ ಪ್ರಾಣಿಗಳ ದಾಹ ನೀಗಿಸಲು ಮುಂದಾಗಿದೆ. ಖಾಸಗಿ ಕಂಪನಿಯ ಉದ್ಯೋಗಿ ಚಂದ್ರಕಾಂತ ಪಡಶೆಟ್ಟಿ ಅಧ್ಯಕ್ಷತೆಯ ಸ್ವಾಭಿಮಾನಿ ಗೆಳೆಯರ ಬಳಗ ತಮ್ಮ ಸ್ವಂತ ಖರ್ಚಿನಲ್ಲಿ ಬೀದರ್​ ನ ಸುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಸಿಮೆಂಟ್​ನ ತೊಟ್ಟಿಗಳು ನಿರ್ಮಿಸಿ ಅದರಲ್ಲಿ ನೀರು ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಬೀದರ್​ ತಾಲೂಕಿನ ನಾಗೋರಾ ಅರಣ್ಯ ಪ್ರದೇಶ, ಚಿಟ್ಟಾ ಕಾಯ್ದಿಟ್ಟ ಅರಣ್ಯ ಪ್ರದೇಶ, ಶಹಾಪುರ ಗೇಟ್​ ಬಳಿ ದೇವ ದೇವ ವನ ಬಳಿಯ ಅರಣ್ಯದಲ್ಲಿ ನೀರಿನ ತೊಟ್ಟಿಗಳ ವ್ಯವಸ್ಥೆ ಮಾಡಲಾಗಿದೆ.

ಸೋಮಣ್ಣ ಸೋಲಿಗೆ ಕಾಂಗ್ರೆಸ್‌ನ ಗ್ಯಾರಂಟಿ ಕಾರಣವಲ್ಲ, ನೀವು ಲೀಡರ್‌ಗಳೇ ಕಾರಣ!

ಕಾಡಿನಲ್ಲಿರುವ ಜಿಂಕೆ, ಕೋಡಂಗಿ, ಕೋತಿ, ಹದ್ದು, ಮುಂಗಲಿ, ನವಿಲು ಸೇರಿ ಪಕ್ಷಿಗಳು ನೀರು ಕುಡಿದು ದಾಹ ತೀರಿಸಿಕೊಳ್ಳುತ್ತಿವೆ. ಸ್ವಾಭಿಮಾನಿ ಗೆಳೆಯರ ಬಳಗದಲ್ಲಿರುವ 30 ಜನ ಸದಸ್ಯರು ದಿನಾಲು ತಮ್ಮ ಕೆಲಸ ಮುಗಿದ ಮೇಲೆ ಅಥವ ಕೆಲಸ ಮಧ್ಯ ಬಿಡುವು ಮಾಡಿಕೊಂಡು 20 ಲೀ ನೀರಿನ ಕ್ಯಾನ್​ ನಲ್ಲಿ ಬಾವಿ, ಬೋರ್​, ನಳಗಳಿಂದ ನೀರು ತಂದು ತೊಟ್ಟಿಗಳನ್ನು ತುಂಬುತ್ತಾರೆ. ಸ್ವಾಭಿಮಾನಿ ಗೆಳೆಯರ ಬಳಗದಲ್ಲಿ ಖಾಸಗಿ ಕಂಪೆನಿಗಳ ಉದ್ಯೋಗಿಗಳು, ಕೃಷಿಕರು, ಸ್ವಉದ್ಯೋಗಿಗಳು ಇದ್ದಾರೆ. 

ಒಟ್ಟಿನಲ್ಲಿ ತಮ್ಮ ಕೆಲಸ ಮಗಿಸಿಕೊಂಡು, ತಮ್ಮದೇ ಖರ್ಚಿನಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರುಣಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ ಈ ಸ್ವಾಭಿಮಾನಿ ಗೆಳೆಯರ ಬಳಗದ ಸದಸ್ಯರು,. ಇವರ ಕಾರ್ಯಕ್ಕೆ ಈಗ ಎಲ್ಲಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.