- ಕಾಫಿ ತೋಟದ ಹುಡುಗಿ ಈಗ ಚಿನ್ನದ ಬೆಡಗಿ..ರೈತನ ಮಗಳು ,ಈಗ ಗೋಲ್ಡನ್ ಗರ್ಲ್
- ತೋಟಗಾರಿಕೆ ವಿವಿಯಲ್ಲಿ ಸ್ನಾತಕ ಪದವಿಯಲ್ಲಿ 16 ಚಿನ್ನದ ಪದಕಗಳಿಸಿ ಸಂಭ್ರಮ
- ಮಗಳ ಮುಂದಿನ ಓದಿಗಾಗಿ ಸಾಲ ನೀಡದ ಬ್ಯಾಂಕ್ಗಳು, ಸಿಎಂಗೆ ಮೊರೆ ಇಟ್ಟ ಕುಟುಂಬ
- ಇಟಲಿಯಲ್ಲಿ ಎಂಎಸ್ಸಿ ಮಾಡುವ ಕನಸು ಹೊತ್ತಿರುವ ಗೋಲ್ಡನ್ ಗರ್ಲ್
ಬದುಕಿನಲ್ಲಿ ಸಾಧಿಸುವ ಛಲವೊಂದಿದ್ದರೆ ಸಾಕು ಯಾವುದೇ ಕಾರ್ಯವನ್ನು ಸಾಧಿಸಿ ತೋರಿಸಬಹುದು ಅನ್ನೋದಕ್ಕೆ ಸಾಕ್ಷಿಯಾಗಿ ಈ ಮಧ್ಯಮ ಕುಟುಂಬ ವರ್ಗದಿಂದ ಬಂದ ವಿದ್ಯಾರ್ಥಿನಿ ಸಾಧಿಸಿ ತೋರಿಸಿದ್ದಾಳೆ. ಯಾಕಂದ್ರೆ ಓರ್ವ ರೈತನ ಮಗಳು ಶೈಕ್ಷಣಿಕವಾಗಿ ಅದ್ಭುತ ಸಾಧನೆ ಮಾಡಿ ಸಾಧನೆ ಶಿಖರ ಏರಿದ್ದಾಳೆ ಸಾಲದ್ದಕ್ಕೆ ವಿಶ್ವವಿದ್ಯಾಲಯದಲ್ಲಿ (University) ಭರ್ಜರಿ ಚಿನ್ನದ ಭೇಟೆಯಾಡಿ ಚಿನ್ನದ ಹುಡುಗಿ ಎಂಬ ಕೀರ್ತಿಗೆ ಪಾತ್ರಳಾಗಿದ್ದಾಳೆ.
ಸಮಾರಂಭದಲ್ಲಿ ಸ್ನಾತಕ ,ಸ್ನಾತಕೋತ್ತರ, ಪಿಎಚ್ಡಿ (PhD) ಸೇರಿದಂತೆ ಒಟ್ಟು 680 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡಲಾಯಿತು. ಇದರಲ್ಲಿ ಓರ್ವ ವಿದ್ಯಾರ್ಥಿನಿ ಸಾಧನೆ ಮಾತ್ರ ಅಪಾರವಾಗಿತ್ತು. ಸಾಧಿಸೋಕೆ ಛಲ ಬೇಕು, ಗುರಿಯಿರಬೇಕು ಎಂಬುದನ್ನು ಓರ್ವ ರೈತನ ಮಗಳು ಸಾಧಿಸಿ ತೋರಿಸಿದ್ದಳು. ಅವಳೇ ಉಮ್ಮೇಸರಾ. ಮೂಲತ: ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಸಾತಿಹಳ್ಳಿ ಗ್ರಾಮದ ಹಸ್ಮತ್ ಅಲಿ ಮತ್ತು ರಹೀಮ ಬಾನು ಎಂಬುವವರ ಮಗಳಾದ ಉಮ್ಮೇಸರಾ ಎಂಬ ವಿದ್ಯಾರ್ಥಿನಿ ತೋಟಗಾರಿಕೆ ವಿಜ್ಞಾನಿಗಳ ಬಿಎಸ್ಸಿ (BSc) ಪದವಿಯಲ್ಲಿ ಬರೋಬ್ಬರಿ 16 ಚಿನ್ನದ ಪದಕ ಪಡೆದು ಚಿನ್ನದ ಹುಡುಗಿ ಎನಿಸಿಕೊಂಡಿದ್ದಾಳೆ.
ತೋಟಗಾರಿಕೆ ಮಹಾವಿದ್ಯಾಲಯ ಶಿರಸಿಯಲ್ಲಿ ಬಿಎಸ್ಸಿ ಪದವಿ ಓದಿದ ಉಮ್ಮೇಸರಾಗೆ 16 ಚಿನ್ನದ ಪದಕಗಳು ಅರಸಿ ಬಂದಿವೆ. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ರಿಂದ ಚಿನ್ನದ ಪದಕ ಪಡೆದ ಉಮ್ಮೇಸರಾ ಚಿನ್ನದ ಪದಕಗಳನ್ನು ತಮ್ಮ ತಂದೆತಾಯಿ ಕೈಗೆ ಕೊಟ್ಟು ಸಂಭ್ರಮಿಸಿದರು. ನಾನು ರೈತನ ಮಗಳು, ನನ್ನ ಸಾಧನೆಗೆ ತಂದೆ ತಾಯಿ ಪ್ರೋತ್ಸಾಹ ಕಾರಣ ಅವರ ಮುಖದಲ್ಲಿ ನನಗಿಂತ ಖುಷಿ ಸಂಭ್ರಮವಿದೆ, ಅದು ನನಗೆ ಸಾಕು ಎಂದರು. ಮುಂದೆ ಇಟಲಿಯಲ್ಲಿ ಎಮ್ಎಸ್ಸಿ ಮಾಡುವ ಕನಸು ಹೊಂದಿದ್ದು, ವಿದ್ಯಾಭ್ಯಾಸ ಮುಗಿಸಿ ಸಂಶೋಧನಾ ವಿಭಾಗದಲ್ಲಿ ಸಾಧನೆ ಮಾಡುವ ಅಭಿಲಾಷೆ ವ್ಯಕ್ತಪಡಿಸಿದರು..
ಉಮ್ಮೇಸರಾ ಸದ್ಯ ಶಿರಸಿಯಲ್ಲಿ ತೋಟಗಾರಿಕೆ ಬಿಎಸ್ಸಿ ಪದವಿ ಮುಗಿಸಿದ್ದಾರೆ. ಬಿಎಸ್ಸಿಯಲ್ಲಿ 91.1 ಶೇಕಡಾ ಅಂಕ ಪಡೆದು ಉತ್ತಮ ಸಾಧನೆ ಮಾಡಿದ ಹಿನ್ನೆಲೆ 16 ಚಿನ್ನದ ಪದಕಗಳು ಅರಸಿ ಬಂದಿವೆ. ಇವರ ತಂದೆ ಹಸ್ಮತ್ ಅಲಿ ರೈತನಾಗಿದ್ದು ನಾಲ್ಕು ಎಕರೆ ಹೊಲ ಇದೆ, ಹೊಲದಲ್ಲಿ ಕಾಫಿ- ಕರಿಮೆಣಸು ಕೃಷಿ ಮಾಡಿದ್ದಾರೆ. ಮೂಲತಃ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿನಿಯಾಗಿರುವ ಉಮ್ಮೇಸರಾ ಸ್ಕಾಲರ್ ಶಿಪ್, ಎಜ್ಯುಕೇಶನ್ ಲೋನ್ ಪಡೆದು ಓದಿ ಸಾಧಿಸಿದ್ದಾಳೆ.
ಆದ್ರೆ ಇದೀಗ ಮಗಳು ಮುಂದಿನ ಶಿಕ್ಷಣವನ್ನು ಇಟಲಿಯಲ್ಲಿ ಕಲಿಯಬೇಕಿರೋದ್ರಿಂದ ಇದ್ದ ಜಮೀನಿನ ಮೇಲೆ ಸಾಲ ಕೇಳಿದ್ರೆ ಬ್ಯಾಂಕ್ನವರು ಸಾಲ ನೀಡಲು ಮುಂದಾಗುತ್ತಿಲ್ಲವಂತೆ. ಈ ಬಗ್ಗೆ ಸಾಕಷ್ಟು ಬಾರಿ ಬ್ಯಾಂಕ್ಗೆ ಅಲೆದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ಮಗಳ ಸಾಧನೆಗೆ ಸಂಭ್ರಮಿಸುತ್ತಲೇ ಅಸಮಾಧಾನ ಹೊರಹಾಕಿದ ತಂದೆ ಹಸ್ಮತ್ ಅಲಿ ಅವರು, ಮಗಳು ವಿದೇಶದಲ್ಲಿ ಸ್ನಾತಕೋತ್ತರ ಪದವಿ ಮಾಡುವ ಕನಸು ಹೊಂದಿದ್ದಾಳೆ. ಏನು ಮಾಡೋದು 16 ಚಿನ್ನದ ಪದಕ ಪಡೆದು ಇಷ್ಟು ಸಾಧನೆ ಮಾಡಿದರೂ ನಮ್ಮ ಹೊಲದ ಮೇಲೆ ಹದಿನೈದು ಲಕ್ಷ ಸಾಲ ಕೊಡಲು ಯಾವ ಬ್ಯಾಂಕ್ ಒಪ್ಪುತ್ತಿಲ್ಲ. ಹೀಗಾಗಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ನಮ್ಮ ನೆರವಿಗೆ ಬಂದು ನಮ್ಮ ಮಗಳ ಓದಿಗೆ ಸಹಾಯ ಮಾಡಬೇಕೆಂದು ಮನವಿ ಮಾಡಿದ್ದಾರೆ.