ಅಡುಗೆ ಮನೆಯ ಈ ವಾಸ್ತುವಿನಲ್ಲಿದೆ ಆರೋಗ್ಯದ ಗುಟ್ಟು...!!

By Suvarna NewsFirst Published Jul 17, 2021, 3:10 PM IST
Highlights

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಸುಖ-ಸಮದ್ಧಿ ನೆಲೆಸಿರಲು ಅಡುಗೆ ಮನೆಯ ವಾಸ್ತು ಅತ್ಯಂತ ಮುಖ್ಯ. ವಾಸ್ತು ಪ್ರಕಾರ ಮನೆಯ ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆಯನ್ನು ನಿರ್ಮಿಸುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುವುದಲ್ಲದೇ, ಆರೋಗ್ಯವೂ ಉತ್ತಮವಾಗಿರುತ್ತದೆ. ಹಾಗಾಗಿ ಸ್ವಾಸ್ಥ್ಯ ಸಂರಕ್ಷಣೆಗೆ ಅಡುಗೆ ಮನೆಯ ವಾಸ್ತುವಿನ ಬಗ್ಗೆ ತಿಳಿಯೋಣ..

ವಾಸ್ತು ಶಾಸ್ತ್ರದಲ್ಲಿ ಉತ್ತಮ ಆರೋಗ್ಯವನ್ನು ಹೊಂದಲು ಅನೇಕ ನಿಯಮಗಳನ್ನು ತಿಳಿಸಲಾಗಿದೆ. ವಾಸ್ತು ಶಾಸ್ತ್ರದ ಮೂಲ ಆಧಾರವೇ ಪಂಚತತ್ವಗಳಾದ ಪೃಥ್ವಿ, ಜಲ, ಆಕಾಶ, ಅಗ್ನಿ ಮತ್ತು ವಾಯು. ಈ ಐದು ತತ್ವಗಳು ಸಮತೋಲನದಲ್ಲಿದ್ದಾಗ ಮಾತ್ರ  ಸುಖಿ-ಸಮೃದ್ಧ ಜೀವನ ಸಾಧ್ಯವಾಗುತ್ತದೆ. ಪಂಚತತ್ವಗಳ ಅಸಮತೋಲನವು ನಕಾರಾತ್ಮಕ ಪ್ರಭಾವಗಳು ಹೆಚ್ಚುವಂತೆ ಮಾಡುತ್ತವೆ. ಆರೋಗ್ಯದ ವಿಚಾರದಲ್ಲಿ ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ನಿಯಮಗಳನ್ನು ಪಾಲಿಸಿದಲ್ಲಿ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದಲ್ಲದೆ, ಆರ್ಥಿಕ ಮತ್ತು ಸಾಮಾಜಿಕವಾಗಿ ಸಹ ಉತ್ತಮ ಪರಿಣಾಮಗಳನ್ನು ಕಾಣಬಹುದಾಗಿದೆ.

ಉತ್ತಮ ಆರೋಗ್ಯವನ್ನು ಹೊಂದಬೇಕೆಂದರೆ ಸ್ವಾದಿಷ್ಟ ಮತ್ತು ಪೌಷ್ಟಿಕ ಭೋಜನವೊಂದೇ ಸಾಲದು, ವಾಸ್ತು ಪ್ರಕಾರ ಎಲ್ಲವೂ ಇರುವುದು ಮುಖ್ಯವಾಗುತ್ತದೆ. ಆಗ ಆರೋಗ್ಯದ ಜೊತೆಗೆ ನೆಮ್ಮದಿ ಸಹ ನೆಲೆಸುವುದು. ಇದಕ್ಕಾಗಿ ಅಡುಗೆ ಕೋಣೆಯ ವಾಸ್ತು ಸರಿಯಾಗಿದಿಯೇ ಎಂಬುದನ್ನು ತಿಳಿಯುವುದು ಅವಶ್ಯಕ. ವಾಸ್ತು ಶಾಸ್ತ್ರ ಉಲ್ಲೇಖಿಸುವಂತೆ ಅಡುಗೆ ಕೋಣೆಯ ವಾಸ್ತು ಸರಿ ಇದ್ದರೆ ದಾರಿದ್ಯ್ರ ದೂರವಾಗುವುದಲ್ಲದೇ, ರೋಜ-ರುಜಿನಗಳ ಬಾಧೆ ತಟ್ಟುವುದಿಲ್ಲ.

ಇದನ್ನು ಓದಿ: ತಾರೀಖಿನಲ್ಲಿ ಜನಿಸಿದವರು ಹೆಚ್ಚು ಭಾಗ್ಯವಂತರು..!

ಅಡುಗೆ ಮನೆಯಲ್ಲಿ ಅನುಸರಿಸಬೇಕಾದ ವಾಸ್ತು ನಿಯಮಗಳು:

- ಅಡುಗೆ ಮನೆಯಲ್ಲಿ ಒಲೆಯನ್ನು ಆಗ್ನೇಯ ದಿಕ್ಕಿಗೆ ಇಡಬೇಕು. ಮುಖ್ಯವಾಗಿ ಅಡುಗೆಯನ್ನು ತಯಾರಿಸುವವರು ಪೂರ್ವ ದಿಕ್ಕಿಗೆ ಮುಖಮಾಡಿರಬೇಕು. ಇದರಿಂದ ಧನ ವೃದ್ಧಿಯಾಗುವುದಲ್ಲದೆ, ಆರೋಗ್ಯ ಉತ್ತಮವಾಗಿರುತ್ತದೆ.  

- ಗೃಹಿಣಿಯರು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಅಡುಗೆಯನ್ನು ತಯಾರಿಸುವುದು ಉತ್ತಮವಲ್ಲ. ಇದರಿಂದ ಸ್ವಾಸ್ಥ್ಯ ಸಂಬಂಧಿ ತೊಂದರೆಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.


- ಅಡುಗೆ ಕೋಣೆಯ ಈಶಾನ್ಯ ಭಾಗದಲ್ಲಿ ಯಾವುದೇ ಭಾರವಿರುವ ಸಾಮಗ್ರಿಗಳನ್ನು ಇಡುವುದು ಉತ್ತಮವಲ್ಲ. ಭಾರವಿರುವ ಸಾಮಗ್ರಿಗಳನ್ನು ದಕ್ಷಿಣ ದಿಕ್ಕಿನಲ್ಲಿ ಅಥವಾ ನೈರುತ್ಯ ದಿಕ್ಕಿನಲ್ಲಿಡಬೇಕು.

- ಮನೆಯ ಅಡುಗೆ ಕೋಣೆಯು ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ ಇಲ್ಲವಾದ ಸಂದರ್ಭದಲ್ಲಿ ವಾಸ್ತು ದೋಷವನ್ನು ನಿವಾರಿಸಲು ಅಡುಗೆ ಮನೆಯ ನೈರುತ್ಯ ದಿಕ್ಕಿನಲ್ಲಿ ಕೆಂಪು ಬಣ್ಣದ ಬಲ್ಬ್ ಅನ್ನು ಹಾಕಿ, ಸದಾ ಉರಿಯುವಂತೆ ನೋಡಿಕೊಳ್ಳಬೇಕು.

ಇದನ್ನು ಓದಿ:  ಈ ರಾಶಿ ಹುಡುಗಿಯರಿಂದ ಪರಿಶುದ್ಧ ಸ್ನೇಹ ನಿರೀಕ್ಷಿಸಬಹುದು!

- ಮನೆಯ ಮುಖ್ಯ ದ್ವಾರಕ್ಕೆ ನೇರವಾಗಿ ಅಡುಗೆ ಕೋಣೆ ಇದ್ದರೆ ಅದು ವಾಸ್ತು ದೋಷವನ್ನುಂಟು ಮಾಡುತ್ತದೆ. ಈ ವಾಸ್ತು ದೋಷ ನಿವಾರಣೆಗೆ ಮುಖ್ಯ ದ್ವಾರ ಮತ್ತು ಅಡುಗೆ ಕೋಣೆಯ ಮಧ್ಯೆ ಪರದೆಯನ್ನು ಹಾಕುವುದು ಉತ್ತಮ.

- ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ದೇವರ ಕೋಣೆಯಿರುವುದು ಒಳ್ಳೆಯದಲ್ಲ. ಇದರಿಂದ ಮನೆಯ ಸದಸ್ಯರ ಸ್ವಾಸ್ಥ್ಯ ಕೆಡುವುದಲ್ಲದೇ, ಸಿಟ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದಾಗ ದೇವರ ಕೋಣೆಯನ್ನು ಬೇರೆಡೆ ವಾಸ್ತು ಪ್ರಕಾರ ನಿರ್ಮಾಣ ಮಾಡಿಕೊಳ್ಳುವುದು ಉತ್ತಮ.

- ಅಡುಗೆ ಮನೆ ಮತ್ತು ಸ್ನಾನಗೃಹ ನೇರವಾಗಿ ಇದ್ದರೆ ಒಳ್ಳೆಯದಲ್ಲವೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದರಿಂದ ಕುಟುಂಬ ಸದಸ್ಯರಿಗೆ ಸ್ವಾಸ್ಥ್ಯ ಸಮಸ್ಯೆ ಕಾಡುತ್ತದೆ. ಮನೆಯಲ್ಲಿ ಅಶಾಂತಿ ಉಂಟಾಗುತ್ತದೆ. ಈ ದೋಷವನ್ನು ನಿವಾರಣೆ ಮಾಡಿಕೊಳ್ಳಲು ಸ್ನಾನಗೃಹದಲ್ಲಿ ಗಾಜಿನ ಬಾಟಲಿಯಲ್ಲಿ ಕಲ್ಲುಪ್ಪನ್ನು ಇಟ್ಟು , ಅದನ್ನು ಕಾಲ ಕಾಲಕ್ಕೆ ಬದಲಿಸುತ್ತಿರಬೇಕು.

- ಸ್ನಾನಮಾಡದೆಯೇ ಅಡುಗೆ ಮನೆಯನ್ನು ಪ್ರವೇಶಿಸುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇದರಿಂದ ಆಲಸ್ಯ ಹೆಚ್ಚುವುದಲ್ಲದೇ, ಅಶಾಂತಿ ಹೆಚ್ಚುತ್ತದೆ. ಹಾಗಾಗಿ ಸ್ನಾನ ಮಾಡಿಯೇ ಅಡುಗೆ ಕೋಣೆಯನ್ನು ಪ್ರವೇಶಿಸುವುದು ಉತ್ತಮ.

ಇದನ್ನು ಓದಿ : ಈ 4 ರಾಶಿಯವರು ಸೋಲೊಪ್ಪೋದು ವಿರಳ: ನಿಮ್ಮದು ಇದೇ ರಾಶಿನಾ?

- ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಾಗಲು ಪ್ರತಿನಿತ್ಯ ಗೋವಿಗೆ ಆಹಾರವನ್ನು ಇಡಬೇಕು. ಆ ನಂತರ ಮನೆಯ ಸದಸ್ಯರು ಭೋಜನ ಸೇವಿಸುವುದರಿಂದ ಗೃಹಿಣಿಯ ಸ್ವಾಸ್ಥ್ಯ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲದೆ ಎಲ್ಲ ದೇವತೆಗಳ ಆಶೀರ್ವಾದ ಲಭ್ಯವಾಗುತ್ತದೆ.

- ಮುಖ್ಯವಾಗಿ ಸಕಾರಾತ್ಮಕ ಶಕ್ತಿ ಹೆಚ್ಚಲು ಅಡುಗೆ ಕೋಣೆಯಲ್ಲಿ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆದಿಡುವುದರಿಂದ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ.

click me!