Udupi: ಪಾಶ್ಚಾತ್ಯ ರಾಷ್ಟ್ರ ಇಂಗ್ಲೆಂಡ್‌ನಲ್ಲಿ ಜಟಾಯು ಮೋಕ್ಷ ಯಕ್ಷಲೋಕ

By Sathish Kumar KHFirst Published Dec 5, 2022, 3:39 PM IST
Highlights

ಇಂಗ್ಲೆಂಡಿನ ಪ್ರದರ್ಶನ ಕಲೆಗಳ ಇತಿಹಾಸದಲ್ಲೇ ಮೊದಲ ಬಾರಿಗೆ, ಮಿಲ್ಟನ್ ಕೀನ್ಸ್ ನಗರದಲ್ಲಿ 'ಬಯಲಾಟ ಯುಕೆ' ಹವ್ಯಾಸಿ ಕಲಾವಿದರ ತಂಡದಿಂದ ಯಕ್ಷಗಾನ ಬ್ಯಾಲೆ 'ಜಟಾಯು ಮೋಕ್ಷ' ಪ್ರದರ್ಶನಗೊಂಡಿತು.

ವರದಿ- ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್ 

ಉಡುಪಿ (ಡಿ.5): ಕರಾವಳಿಯ ಸಾಂಪ್ರದಾಯಿಕ ಕಲೆಗಳು ಹೊಸ ಜೀವಂತಿಕೆಯೊಂದಿಗೆ ನಳನಳಿಸುತ್ತಿವೆ. ಒಂದು ಕಡೆ ಕಾಂತರಾ ಸಿನಿಮಾ ಬಂದ ನಂತರ ಕರಾವಳಿಯ ಜನಪದ ಸಂಸ್ಕೃತಿಯಾದ ದೈವಕೋಲ ವಿಶ್ವ ಪ್ರಸಿದ್ಧಿ ಪಡೆದಿದ್ದರೆ, ಮತ್ತೊಂದೆಡೆ ಇಲ್ಲಿನ ಪ್ರಸಿದ್ಧ ಕಲೆಯಾಗಿರುವ ಯಕ್ಷಗಾನ ಜಗದಗಲ ಹಬ್ಬುತ್ತಿದೆ. ಇದೀಗ ಹವ್ಯಾಸಿಗಳ ತಂಡವೊಂದು ಯುಕೆ ನಲ್ಲಿ ಅಪರೂಪದ ಯಕ್ಷಗಾನ ಪ್ರದರ್ಶಿಸಿ ಪಾಶ್ಚತ್ಯ ರಾಷ್ಟ್ರದಲ್ಲೂ ಚಂಡೆಯ ಸದ್ದು ಮೊಳಗಿದೆ.

ಇಂಗ್ಲೆಂಡಿನ ಪ್ರದರ್ಶನ ಕಲೆಗಳ ಇತಿಹಾಸದಲ್ಲೇ ಮೊದಲ ಬಾರಿಗೆ, 'ಬಯಲಾಟ ಯುಕೆ' ಹೆಸರಿನಲ್ಲಿ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ಬ್ಯಾಲೆ 'ಜಟಾಯು ಮೋಕ್ಷ' ಪ್ರದರ್ಶನಗೊಂಡಿತು. ಮಿಲ್ಟನ್ ಕೀನ್ಸ್ ನಗರದಲ್ಲಿ ನಡೆದ ಈ ಕಾರ್ಯಕ್ರಮ ಬಹಳ ಜನ ಮನ್ನಣೆ ಪಡೆಯಿತು. ವಿವಿಧ ಸಂಗೀತ, ಕಲಾ, ನಾಟಕ ಸಂಘಗಳ ವೀಕ್ಷಕರೂ, ವಿಮರ್ಶಕರೂ ಈ ಪ್ರದರ್ಶನವನ್ನು ಕಂಡು ಹೊಗಳಿದರು.  ಉಡುಪಿಯ ಬೈಂದೂರು ಮೂಲದ ಪ್ರಸ್ತುತ ಇಂಗ್ಲೆಂಡಿನ ಡೋಂಕಾಸ್ಟರ್ ನಗರದಲ್ಲಿ ವೈದ್ಯರಾಗಿರುವ ಡಾ. ಗುರುಪ್ರಸಾದ್ ಪಟ್ವಾಲ್ ಅವರು ಈ ಯಕ್ಷಗಾನ ಪ್ರದರ್ಶನ ಮಾಡಿರುವ ಇಂಗ್ಲೆಂಡಿನ ಬಯಲಾಟ ಯು.ಕೆ ಯಕ್ಷಗಾನ ತಂಡ ಸಂಸ್ಥಾಪಕರಾಗಿದ್ದಾರೆ. ಸದ್ಯ ಅವರೇ ನಡೆಸಿಕೊಂಡು ಬರುತ್ತಿರುವ ಹವ್ಯಾಸಿ ಯಕ್ಷಗಾನ ತಂಡ ಇದಾಗಿದ್ದು, ಇಂಗ್ಲೆಂಡ್ ಹಾಗೂ ಯೂರೋಪಿನಲ್ಲಿ ಯಕ್ಷಗಾನದ ಪ್ರದರ್ಶನ ನೀಡುತ್ತಿದೆ.

Udupi: ಯಕ್ಷ ಶಿಕ್ಷಣ ವಿದ್ಯಾರ್ಥಿಗಳಿಂದ ವೈಭವದ ಯಕ್ಷೋತ್ಸವ

ಕೋವಿಡ್‌ ವೇಳೆ ಆನ್‌ಲೈನ್‌ ತರಗತಿ ನಡೆಸಿ ನೆರವು: ಇಲ್ಲಿನ ಜನರಿಗೆ ಸುಂದರ, ಶ್ರೀಮಂತ ಕಲೆಯ ಸವಿಯುಣಿಸುವುದಷ್ಟೇ ಅವರ ಉದ್ದೇಶ. ಸ್ವಂತ ಪ್ರಚಾರಕ್ಕಾಗಲೀ ಅಥವಾ ಯಾವುದೇ ಉತ್ಪತ್ತಿಯ ಆಸೆಯಿಂದ ಪ್ರಾರಂಭವಾದ ಸಂಸ್ಥೆ ಅಲ್ಲ. ಈ ಬಯಲಾಟ ಯು.ಕೆ. ಇಂಗ್ಲೆಂಡಿನಲ್ಲಿ ಹಲವಡೆ ಯಕ್ಷಗಾನವನ್ನ ಪ್ರದರ್ಶಿಸಿರುವ ಹಾಗೂ ಅಂತಾರಾಷ್ಟ್ರೀಯ ಕಲಾ ಸಮ್ಮೇಳನಗಲ್ಲಿ ನಮ್ಮ ಕರ್ನಾಟಕದ ಕಲೆಯನ್ನ ಮೊದಲ ಭಾರಿಗೆ ತೋರಿಸಿರುವ ಹೆಮ್ಮೆ ಡಾ.ಗುರುಪ್ರಸಾದ್ ಪಟ್ವಾಲ ಅವರದ್ದಾಗಿದೆ. ಕೊರೋನಾ ಭಾರತದಲ್ಲಿ ಹಬ್ಬಿದಾಗ, ಹಲವು ಯಕ್ಷಗಾನ ಕಲಾವಿದರು ಆರ್ಥಿಕವಾಗಿ ಬಹಳ ಕಷ್ಟ ಅನುಭವಿಸಿದರು. ಅವರಿಗೆ ಸಹಾಯವಾಗಲೆಂದು, ಇಲ್ಲಿ ಯಕ್ಷಗಾನ ತರಭೇತಿಯನ್ನು ಆನ್ಲೈನ್ ಮೂಲಕ ಈ ಬಯಲಾಟ ಯು.ಕೆ ಹೆಸರಿನಲ್ಲಿ ಡಾ. ಗುರುಪ್ರಸಾದ್ ಪಟ್ವಾಲ್ ಪ್ರಾರಂಭಿಸಿದರು. ಈ ತರಗತಿಗಳಿಂದ ಸಂಗ್ರಹಿಸಿದ ಹಣವನ್ನ ಊರಿನಲ್ಲಿ ಕಷ್ಟದಲ್ಲಿದ್ದ ಯಕ್ಷಗಾನ ಕಲಾವಿದರ ಕುಟುಂಬಕ್ಕೆ ಒದಗಿಸಿದರು.

ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನ: ಮಾರಣಕಟ್ಟೆ ಮೇಳದ ಪ್ರಧಾನ ಸ್ತ್ರೀ ವೇಷಧಾರಿ ಶ್ರೀಧರ ಗಾಣಿಗ ಅವರು ಆನ್ಲೈನ್ ತರಗತಿ ನಡೆಸಲು ಹಾಗೂ ವೇಷ ಭೂಷಣ ಒದಗಿಸಲು ಸಹಾಯ ಮಾಡಿದರು. ಇಲ್ಲಿನ ವಿದ್ಯಾರ್ಥಿಗಳು ಬಹಳ ಶ್ರದ್ದೆಯಿಂದ ಕಲಿತು, ಯಕ್ಷಗಾನ ಪ್ರದರ್ಶನ ಮಾಡಲು ಸಮರ್ಥರಾದರು.  ಬಯಲಾಟ ಯು.ಕೆಯ ವಿದ್ಯಾರ್ಥಿ, ಇಲ್ಲಿ ನೆಲೆಸಿರುವ ಗಿರೀಶ್ ಪ್ರಸಾದ್, ಶ್ರೀಧರ ಗಾಣಿಗರಿಗೂ, ಡಾ.ಗುರುಪ್ರಸಾದ್ ಪಟ್ವಾಲರಿಗೂ ಈ ಕ್ಲಾಸುಗಳನ್ನ ನಡೆಸುವಲ್ಲಿ ಬಹಳ ಸಹಕರಿಸಿದರು. ಈ ಬಾರಿ ಪ್ರದರ್ಶಿತಗೊಂಡ ಯಕ್ಷಗಾನ ಬ್ಯಾಲೆ ಜಟಾಯು ಮೋಕ್ಷದ ಪರಿಕಲ್ಪನೆ, ಭಾವರೂಪ, ಸಂಗೀತ ಸಂಯೋಜನೆ ಹಾಗೂ ನಿರ್ದೇಶನ, ಪ್ರಸ್ತುತ ಉಡುಪಿ ಯಕ್ಷಸಂಜೀವ ಯಕ್ಷಗಾನ ಕೇಂದ್ರದ ನಿರ್ದೇಶನವನ್ನು ಬನ್ನಂಜೆ ಸಂಜೀವ ಸುವರ್ಣ ಅವರದ್ದಾಗಿದೆ.

ಬಡ ಮಕ್ಕಳಿಗೆ ಮನೆ ಕಟ್ಟಿಸಿ ಕೊಡುವ 'ಯಕ್ಷಗಾನ ಕಲಾರಂಗದ' ಪುಣ್ಯಕಾರ್ಯ

ಬಡಗುತಿಟ್ಟಿನ ಬಣ್ಣದ ವೇಷ: ಸಂಜೀವ ಸುವರ್ಣರ ಮಗ ಶಿಶಿರ ಸುವರ್ಣ ಇಂಗ್ಲಡ್ ನಲ್ಲಿ, ಬಯಲಾಟ ಯು.ಕೆಯ ಕಲಾವಿದರಿಗೆ ಬಹಳ ಶ್ರದ್ಧೆ ಹಾಗೂ ತಾಳ್ಮೆಯಿಂದ ನಿರ್ದೇಶನ ಮಾಡಿದ್ದಾರೆ. ಡಾ ಗುರುಪ್ರಸಾದ್ ಪಟ್ವಾಲ್ ರಾವಣನಾಗಿ ರಂಗಸ್ಥಳದಲ್ಲಿ ರಂಜಿಸಿದರು. ಯಕ್ಷಗಾನ ರಂಗದಿಂದ ಮರೆಯಾಗುತ್ತಿರುವ ಬಡಗುತಿಟ್ಟಿನ ಬಣ್ಣದ ವೇಷದ ಒಡ್ಡೋಲಗವನ್ನ ರಾವಣ ವೇಷಧಾರಿ ಈ ಭಾರಿ ಮಾಡಿ ಜನರಿಗೆ ತೋರಿಸಿದರು. ಗಿರೀಶ್ ಪ್ರಸಾದರ ಜಟಾಯು ಬಹಳ ಜನ ಮನ್ನಣೆ ಪಡೆಯಿತು. ಇಲ್ಲಿ ಆಯುರ್ವೇದ ವೈದ್ಯರಾಗಿರುವ ಡಾ. ದೀಪಾ ಪಟ್ವಾಲ್ ಮಾಯಾ ಜಿಂಕೆಯಾಗಿ ರಂಜಿಸಿದರು. ಉದ್ಯಮಿ ನಿರುಪಮಾ ಶ್ರೀನಾಥ್ ಸೀತೆಯಾಗಿ ಬಹಳ ಸುಂದರ ಅಭಿನಯ ನೀಡಿದರು. ಗುರು ಬನ್ನಂಜೆ ಸಂಜೀವ ಸುವರ್ಣರ ಸುಪುತ್ರ, ಶಿಶಿರ ಸುವರ್ಣರ ಕಪಟ ಸನ್ಯಾಸಿ ಅಭಿನಯ, ಈ ಸುಂದರ ಗುರು ಪರಂಪರೆಯ ಶಕ್ತಿ ಹಾಗೂ ಸಾಧ್ಯತೆಗಳ ಪರಿಚಯ ನೀಡಿತು.

click me!