
ಬೆಂಗಳೂರು (ಮಾ.9): ಕನ್ನಡ ಕಿರುತೆರೆಯ ಟಾಪ್ ನಟಿಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಹೆಸರು ವೈಷ್ಣವಿ ಗೌಡ. 'ಅಗ್ನಿಸಾಕ್ಷಿ' ಧಾರಾವಾಹಿಯ ಸನ್ನಿಧಿ ಪಾತ್ರದ ಮೂಲಕ ಇಡೀ ಕರ್ನಾಟಕದ ಮನೆಮಾತಾಗಿದ್ದ ಈ ನಟಿ, ಮದುವೆಯ ನಂತರ ಬಣ್ಣದ ಲೋಕದಿಂದ ದೂರ ಉಳಿಯಲಿದ್ದಾರೆ ಎಂಬ ಚರ್ಚೆಗಳಿಗೆ ಈಗ ತೆರೆ ಬಿದ್ದಿದೆ. ಮದುವೆಯ ಬಳಿಕವೂ ನಟನೆ ಮುಂದುವರಿಸುವುದಾಗಿ ಅಭಿಮಾನಿಗಳಿಗೆ ನೀಡಿದ್ದ ಮಾತನ್ನು ವೈಷ್ಣವಿ ಈಗ ಉಳಿಸಿಕೊಂಡಿದ್ದಾರೆ.
ವಿಶೇಷವೆಂದರೆ, ವೈಷ್ಣವಿ ಗೌಡ ಸುಮಾರು ಒಂದು ದಶಕದ ನಂತರ ಮತ್ತೆ ಉದಯ ವಾಹಿನಿಗೆ ಮರಳುತ್ತಿದ್ದಾರೆ. ಈ ಹಿಂದೆ ಇದೇ ವಾಹಿನಿಯ 'ಮನೆದೇವ್ರು' ಸೀರಿಯಲ್ನಲ್ಲಿ ಅವರು ಮಿಂಚಿದ್ದರು. ಅಲ್ಲಿಂದ 'ಅಗ್ನಿಸಾಕ್ಷಿ', 'ಸೀತಾರಾಮ' ಹಾಗೂ 'ಬಿಗ್ಬಾಸ್' ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ವೈಷ್ಣವಿ, ಈಗ ಮತ್ತೆ ತನ್ನ ಹಳೆಯ ಮನೆಗೆ ಮರಳುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಈ ಹೊಸ ಪ್ರಾಜೆಕ್ಟ್ನ ಮತ್ತೊಂದು ಹೈಲೈಟ್ ಎಂದರೆ ಇಲ್ಲಿ ಇಬ್ಬರು ಪ್ರಬಲ ನಾಯಕಿಯರು ಇರಲಿದ್ದಾರೆ. ವೈಷ್ಣವಿ ಗೌಡ ಅವರಿಗೆ ಸಾಥ್ ನೀಡಲು ಕೃತಿಕಾ ರವೀಂದ್ರ ಸಜ್ಜಾಗಿದ್ದಾರೆ. 'ರಾಧಾ ಕಲ್ಯಾಣ' ಮತ್ತು 'ಭೂಮಿಗೆ ಬಂದ ಭಗವಂತ' ಖ್ಯಾತಿಯ ಕೃತಿಕಾ ಹಾಗೂ ವೈಷ್ಣವಿ ಜೋಡಿ ಒಂದೇ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಣ್ಣ ಪರದೆಯ ಇತಿಹಾಸದಲ್ಲಿ ದೊಡ್ಡ ಸಂಚಲನ ಮೂಡಿಸುವ ನಿರೀಕ್ಷೆಯಿದೆ. ಸದ್ಯ ಜೀ ಕನ್ನಡದ 'ಕರ್ಣ' ಧಾರಾವಾಹಿಯ ಮಾದರಿಯಲ್ಲೇ ಈ ಸೀರಿಯಲ್ ಕೂಡ ಇಬ್ಬರು ನಾಯಕಿಯರ ಕಥಾಹಂದರ ಹೊಂದಿರಲಿದೆ ಎನ್ನಲಾಗಿದೆ.
ಶೀಘ್ರದಲ್ಲೇ ಈ ಹೊಸ ಧಾರಾವಾಹಿಯ ಅಧಿಕೃತ ಪ್ರೋಮೋ ಬಿಡುಗಡೆಯಾಗಲಿದ್ದು, ವೈಷ್ಣವಿ ಗೌಡ ಅವರನ್ನು ಮತ್ತೆ ಸ್ಕ್ರೀನ್ ಮೇಲೆ ನೋಡಲು ಕಿರುತೆರೆ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.