ಆ್ಯಕ್ಸಿಡೆಂಟ್​ ರಹಸ್ಯ ಬಯಲಾಗೋ ಕಾಲ ಬಂದೇ ಬಿಡ್ತು! ವಿಲನ್​ಗೇ ತಿರುಗೇಟು ಅಂದ್ರೆ ಇದೇ ನೋಡಿ..!

By Suvarna NewsFirst Published Apr 21, 2024, 2:29 PM IST
Highlights

ಆ್ಯಕ್ಸಿಡೆಂಟ್​ ಮಾಡಿಸಿದ್ದು ಪತ್ನಿ ಶಾರ್ವರಿಯೇ ಎನ್ನುವ ಸತ್ಯ  ತುಳಸಿಗೆ ಹೇಳಿಯೇ ಬಿಡುವ ನಿರ್ಧಾರ ಮಾಡಿದ್ದಾನೆ ಮಹೇಶ್​. ಆದರೆ ಇದು ಸಾಧ್ಯನಾ?
 

ಮಹೇಶ್​ಗೆ ಪತ್ನಿ ಶಾರ್ವರಿಯ ಗುಟ್ಟು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಮಡಿಲಲ್ಲಿ ಬೆಂಕಿ ಇಟ್ಟುಕೊಂಡ ಅನುಭವ ಆಗ್ತಿದೆ. ಅಂದು ನಡೆದ ಆ್ಯಕ್ಸಿಡೆಂಟ್​ ರಹಸ್ಯವನ್ನು ತುಳಸಿ ಎದುರು ಹೇಳಿಯೇ ಬಿಡೋಣ ಎಂದುಕೊಳ್ಳುತ್ತಿದ್ದಾರೆ. ತುಳಸಿ, ಪೂರ್ಣಿ ಮತ್ತು ಮಾಧವ್​ ಮೇಲೆ ಸದಾ ಕಿಡಿ ಕಾರುತ್ತಾ, ಅವರನ್ನು ತುಳಿಯಲು ನೋಡುತ್ತಾ, ಇನ್ನಿಲ್ಲದ ಮಸಲತ್ತು ಮಾಡುತ್ತಿರುವ ಶಾರ್ವರಿಗೆ ಈಗ ಸಂಕಟ ಎದುರಾಗಿದೆ. ಅದೂ ಖುದ್ದು ಪತಿ ಮಹೇಶ್​ನಿಂದಲೇ. ಮಹೇಶ್​ನಿಗೆ ಶಾರ್ವರಿಯ ಎಲ್ಲಾ ಮಸಲತ್ತುಗಳ ಪರಿಚಯ ಚೆನ್ನಾಗಿಯೇ ಇದೆ. ಮಾಧವ್​ ತನ್ನ ಮೊದಲ ಪತ್ನಿಯ ಅಪಘಾತಕ್ಕೆ ತಾನೇ ಕಾರಣ ಎಂದುಕೊಂಡಿದ್ದಾನೆ. ಆದರೆ ಅಸಲಿಗೆ ಅದನ್ನು ಮಾಡಿಸಿದ್ದು, ಶಾರ್ವರಿ ಎನ್ನುವ ಸತ್ಯ ಶಾರ್ವರಿಗೆ ಬಿಟ್ಟರೆ ಗೊತ್ತಿರುವುದು ಮಹೇಶ್​ಗೆ ಮಾತ್ರ. ಅದೇ ಅಪಘಾತದಲ್ಲಿ ಮಹೇಶ್​ ನೆನಪು ಕಳೆದುಕೊಂಡು ಹಾಸಿಗೆ ಹಿಡಿದಿದ್ದ. ಆತ ಹುಷಾರಾಗಿ ಬಿಟ್ಟರೆ ತನ್ನ ಗುಟ್ಟೆಲ್ಲಿ ಬಯಲಾಗುವುದೋ ಎಂದುಕೊಂಡಿದ್ದ ಶಾರ್ವರಿ, ಆತನಿಗೆ ಹುಷಾರು ಆಗದ ರೀತಿಯಲ್ಲಿ ಏನೇನೋ ಮಾತ್ರೆಗಳನ್ನು ನೀಡುತ್ತಿದ್ದಳು.

ಆದರೆ ತುಳಸಿ ಯಾವಾಗ ಆ ಮನೆಗೆ ಕಾಲಿಟ್ಟಳೋ ಎಲ್ಲವೂ ಬದಲಾಯಿತು. ಶಾರ್ವರಿಯ ತಂತ್ರ, ಕುತಂತ್ರ ಏನೂ ಅರಿಯದ ಮುಗ್ಧ ತುಳಸಿ ಮಹೇಶ್​ನ ಸೇವೆ ಮಾಡುತ್ತಲೇ, ಆತ ಹುಷಾರಾಗಿದ್ದಾನೆ. ಆತ ಹಾಸಿಗೆ ಮೇಲೆ ಇರುವಾಗಲೂ ಸದಾ ಖರ್ಜೂರ ಖರ್ಜೂರ ಎನ್ನುತ್ತ ಏನೋ ನೆನಪು ಮಾಡಿಕೊಳ್ಳುತ್ತಿದ್ದ. ಈ ಶಬ್ದ ಕೇಳುತ್ತಿದ್ದಂತೆಯೇ ಶಾರ್ವರಿ ಗರ ಬಡಿದವಳಂತೆ ಆಗುತ್ತಿದ್ದಳು. ಅಪಘಾತಕ್ಕೂ ಮುನ್ನ ಖರ್ಜೂರ ತಿಂದದ್ದಕ್ಕೂ, ಪೂರ್ಣಿಯ ಗರ್ಭಪಾತವಾಗುವುದಕ್ಕೂ ಎಲ್ಲದಕ್ಕೂ ಲಿಂಕ್​ ಇದೆ ಎನ್ನುವುದು ಅವನ ಮಾತಿನಿಂದ ತಿಳಿದು ಬರುತ್ತಿತ್ತು. ಆದರೆ ಅರೆಬರೆ ನೆನಪಿನಲ್ಲಿದ್ದ ಮಹೇಶ್​. ಇದೀಗ ಸಂಪೂರ್ಣವಾಗಿ ಹುಷಾರಾದ ಮೇಲೂ ಆ ವಿಷಯವನ್ನು ಕೆದಕಿರಲಿಲ್ಲ. ಆದರೆ ಪತ್ನಿ ಶಾರ್ವರಿಯ ಕುತಂತ್ರ ಆತನಿಗೆ ಚೆನ್ನಾಗಿ ಗೊತ್ತು. ಇದೀಗ ಪತ್ನಿಯನ್ನು ಹೊಗಳುವಂತೆ ಮಾಡಿ, ಮತ್ತೆ ಖರ್ಜೂರದ ವಿಷಯ ತೆಗೆದಿದ್ದ. 

ಪೊಲೀಸ್‌ ಠಾಣೆಯಲ್ಲಿ ಸಿಕ್ಕ ಶಾರ್ವರಿ! ಗುರಿ ಗೊತ್ತಾಗುವುದರೊಳಗೆ ನಾಶವಾಗುತ್ತಾ ಇಡೀ ಕುಟುಂಬ?

ಆದರೆ ಇದೀಗ ಅವನಿಗೆ ಅಂದು ಆ್ಯಕ್ಸಿಡೆಂಟ್​ ಮಾಡಿಸಿದ್ದು ಶಾರ್ವರಿ ಎನ್ನುವ ನೆನಪು ಮತ್ತೆ ಮತ್ತೆ ಕಾಡುತ್ತಿದೆ. ಅಣ್ಣ ಮತ್ತು ಅತ್ತಿಗೆಯನ್ನು ಅಪ್ಪ-ಅಮ್ಮನಂತೆ ಭಾವಿಸುವ ಮಹೇಶ್​ ಅವರ ಆಶೀರ್ವಾದ ಪಡೆದ ಹೊತ್ತಲ್ಲೇ ನೀವು ಮತ್ತು ಶಾರ್ವರಿ ಚೆನ್ನಾಗಿ ಬಾಳಿ ಎಂದು ತುಳಸಿ ಆಶೀರ್ವಾದ ಮಾಡಿದ್ದಾಳೆ. ಆದರೆ ಮಹೇಶ್​ಗೆ ಅಪರಾಧಿ ಜೊತೆ, ಅದೂ ತಮ್ಮ ಕುಟುಂಬವನ್ನೇ ಸರ್ವನಾಶ ಮಾಡಿದವಳ ಜೊತೆ ಹೇಗೆ ಸಂಸಾರ ಮಾಡುವುದು ಎನ್ನುವ ನೋವು. ಇದೇ ಕಾರಣಕ್ಕೆ ಆತ ಖಿನ್ನತೆಗೆ ಹೋಗಿದ್ದಾನೆ. ಇದನ್ನು ತುಳಸಿ ಗಮನಿಸುತ್ತಿದ್ದಾಳೆ.

ಮನಸ್ಸಿನಲ್ಲಿ ಏನೋ ಕೊರೆಯುತ್ತಿದೆ ಎಂದು ಮಹೇಶ್​ನನ್ನು ತುಳಸಿ ಕೇಳಿದಾಗ, ಅವನು ಆ್ಯಕ್ಸಿಡೆಂಟ್​ ಹೇಗೆ ಆಗಿದ್ದು ಎಂದು ಹೇಳಲು ಹೊರಟಿದ್ದಾನೆ. ಅಷ್ಟರಲ್ಲಿಯೇ ಶಾರ್ವರಿ ಅಲ್ಲಿಗೆ ಬಂದಿದ್ದಾಳೆ. ಖಂಡಿತವಾಗಿಯೂ ಶಾರ್ವರಿ ಪತಿಯನ್ನು ತಡೆಯಬಹುದು. ಆದರೆ ಎಷ್ಟು ದಿನ? ವಿಲನ್​ಗೂ ಒಂದು ಕಾಲ, ಒಳ್ಳೆಯವರಿಗೂ ಒಂದು ಕಾಲ ಎನ್ನೋದು ಬಂದೇ ಬರತ್ತಲ್ಲ. ಈಗ ಮುಂದೇನು ಎನ್ನುವ ಕುತೂಹಲ. 

ಯೋಗರಾಜ ಭಟ್ಟರ ಎಲ್ಲಾ ಸೀಕ್ರೇಟ್​ಗಳನ್ನು ಓಪನ್ನಾಗೇ ಹೇಳ್ಬಿಟ್ಟ ಪತ್ನಿ ರೇಣುಕಾ!


click me!