
ವಸುದೇವನ ಕುಟುಂಬವು ಸಮಾಜದಲ್ಲಿ ಅಪಾರ ಪ್ರೀತಿ, ಗೌರವವನ್ನು ಪಡೆದಿರುತ್ತದೆ. ಹಳ್ಳಿಯಲ್ಲಿ ಊರ ಹಬ್ಬದ ಸಡಗರ ಜೊತೆಗೆ ಹಿರಿಮಗಳ ಮದುವೆ ಸಿದ್ಧತೆಯು ವಿಜೃಂಭಣೆಯಿಂದ ಸಾಗುತ್ತಿರುತ್ತದೆ. ಆದರೆ ಸಂತೋಷದಿಂದ ತುಂಬಿದ್ದ ಈ ಕುಟುಂಬದಲ್ಲಿ ಆಕಸ್ಮಿಕವಾಗಿ ಸಂಭವಿಸುವಂತಹ ಆ ಒಂದು ದುರ್ಘಟನೆಯು ಎಲ್ಲರ ಜೀವನವನ್ನು ತಲೆಕೆಳಗಾಗಿಸುವಂತೆ ಮಾಡುತ್ತದೆ. ಇದರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತದೆ ಈ ವಸುದೇವ ಕುಟುಂಬ.
ಇಂತಹ ಸಂಕಷ್ಟದ ಸಮಯದಲ್ಲಿ ಹೀರೋಯಿನ್ ಸ್ವಾತಿ, ತನ್ನ ತಾಳ್ಮೆ ಮತ್ತು ಧೈರ್ಯದಿಂದ ತಾಯಿ ಹಾಗೂ ಅಕ್ಕ-ತಂಗಿಯರಿಗೆ ಹೇಗೆ ಆಧಾರವಾಗಿ ನಿಲ್ತಾಳೆ? ತನ್ನ ದುಃಖವನ್ನು ಮರೆತು ಕುಟುಂಬದ ಬದುಕನ್ನು ಮರು ಕಟ್ಟುವಲ್ಲಿ ಸ್ವಾತಿ ಯಶಸ್ವಿಯಾಗ್ತಾಳಾ? ಹಾಗು ಮನೆತನದ ಮಾನ-ಗೌರವವನ್ನು ಹೇಗೆ ಕಾಪಾಡ್ತಾಳೆ ಎಂಬುದೇ ಈ ಕಥೆಯ ಮುಖ್ಯ ಆಶಯ.
ಇನ್ನು ಈ ಧಾರಾವಾಹಿಯ ಮುಖ್ಯ ಆಕರ್ಷಣೆ ಅಂದ್ರೆ ಕನ್ನಡದ ಖ್ಯಾತ ನಟ ಅವಿನಾಶ್ ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ. ಬಹುಭಾಷಾ ನಟರಾಗಿರುವ ಅವಿನಾಶ್ 'ವಸುದೇವ ಕುಟುಂಬ' ಧಾರಾವಾಹಿಯಲ್ಲಿ ವಸುದೇವ ಎಂಬ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನನ್ನ ಹೆಂಡತಿ ಮಾಳವಿಕಾ ಬೈದಿದ್ದಕ್ಕೆ ಸೀರಿಯಲ್ ಒಪ್ಪಿಕೊಂಡೆ. ನಾನು 27 ವರ್ಷಗಳ ಹಿಂದೆ ಸೂಪರ್ ಹಿಟ್ ಸೀರಿಯಲ್ನಲ್ಲಿ ನಟಿಸಿದ್ದಾಗ ಅಲ್ಲಿ ನನಗೆ ಮಾಳವಿಕಾ ಸಿಕ್ಕಿದಳು, ಈಗ ಸುಂದರವಾದ ನಾಲ್ಕು ಹೆಣ್ಣು ಮಕ್ಕಳು ಸಿಕ್ಕಿದ್ದಾರೆ” ಎಂದರು.
ಸುಂದರ ತಾರಾಬಳಗವನ್ನು ಹೊಂದಿರೋ ಈ ಧಾರಾವಾಹಿಯಲ್ಲಿ ಜನಪ್ರಿಯ ನಟಿ ಅಂಜಲಿ, ನಾಲ್ಕು ಹೆಣ್ಣು ಮಕ್ಕಳ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಭಾವನಾ ಪಾಟೀಲ್, ಚೈತ್ರಾ ತೋಟದ್, ಬೃಂದಾ ಕಶ್ಯಪ್, ಆರಾಧ್ಯ, ಹಂಸ ನಾರಾಯಣಸ್ವಾಮಿ, ಭಗತ್ ಹಾಗು ಆರ್.ಜೆ ಅನೂಪ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದಾರೆ. 'ಕೋರಮಂಗಲ ಟಾಕೀಸ್' ಎಂಬ ಸಂಸ್ಥೆಯಡಿ ನಿರ್ದೇಶಕ ಅನಿಲ್ ಕೋರಮಂಗಲ ಈ ಧಾರಾವಾಹಿಯನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.
ಒಂದೇ ಬೇರು, ಕವಲು ನೂರು ಎಂಬ ಅಡಿಬರಹದೊಂದಿಗೆ ಶುರುವಾಗ್ತಿದೆ ಹೊಸ ಕಥೆ "ವಸುದೇವ ಕುಟುಂಬ" ಇದೇ ಸೋಮವಾರದಿಂದ (ಸೆಪ್ಟೆಂಬರ್ 15) ಪ್ರತಿದಿನ ರಾತ್ರಿ 8.30 ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.