ತುಮಕೂರು: ಕಾಲಮಿತಿಯೊಳಗೆ ಸ್ಮಾರ್ಟ್‌ ಸಿಟಿ ಸಿದ್ಧ

By Kannadaprabha NewsFirst Published Oct 12, 2019, 9:58 AM IST
Highlights

ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಅಗತ್ಯ ಸುರಕ್ಷತಾ ಕ್ರಮದಡಿ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಬದ್ಧವಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್‌ ತಿಳಿಸಿದ್ದಾರೆ. ತುಮಕೂರು ನಗರವನ್ನು 2021ನೇ ಸಾಲಿನೊಳಗೆ ಸಂಪೂರ್ಣ ನವೀಕೃತವಾಗಿ ಅಭಿವೃದ್ಧಿಗೊಳಿಸಬೇಕೆಂಬ ಗುರಿಯನ್ನು ಹೊಂದಲಾಗಿದೆ ವಿವರಿಸಿದ್ದಾರೆ.

ತುಮಕೂರು(ಅ.12): ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಅಗತ್ಯ ಸುರಕ್ಷತಾ ಕ್ರಮದಡಿ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಬದ್ಧವಾಗಿದೆ ಎಂದು ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್‌ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಬೆಂಗಳೂರಿನ ಭವಿಷ್ಯದ ಉಪನಗರಿ ಎಂದೇ ಕರೆಯಲ್ಪಡುವ ತುಮಕೂರು ನಗರವನ್ನು ಎಲ್ಲ ರೀತಿಯಲ್ಲೂ ‘ಸ್ಮಾರ್ಟ್‌ ಸಿಟಿ’ಯನ್ನಾಗಿಸಲು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಕಟಿಬದ್ಧವಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆ ಪ್ರಕ್ರಿಯೆಯು 2016ರಿಂದ ಚಾಲನೆಗೊಂಡಿದ್ದು, 5 ವರ್ಷಗಳ ಕಾಲಾವಧಿಯದ್ದಾಗಿದೆ. ತುಮಕೂರು ನಗರವನ್ನು 2021ನೇ ಸಾಲಿನೊಳಗೆ ಸಂಪೂರ್ಣ ನವೀಕೃತವಾಗಿ ಅಭಿವೃದ್ಧಿಗೊಳಿಸಬೇಕೆಂಬ ಗುರಿಯನ್ನು ಹೊಂದಲಾಗಿದೆ ವಿವರಿಸಿದ್ದಾರೆ.

ತುಮಕೂರು: ಮಾಜಿ ಡಿಸಿಎಂ ಪರಮೇಶ್ವರ್ ಸಹೋದರನ ಪುತ್ರನಿಗೆ ಸಮನ್ಸ್‌..!

ಯೋಜನೆಯನ್ನು ಶೀಘ್ರಗತಿಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಯನ್ನು ಡಿಸೆಂಬರ್‌ 2019ರೊಳಗೆ ಪೂರ್ಣಗೊಳಿಸಿ ಕಾಮಗಾರಿಗಳಿಗೆ ಚಾಲನೆ ನೀಡಲು ಕೇಂದ್ರ ಸರಕಾರ ಸೂಚನೆ ನೀಡಿರುವ ನಿಟ್ಟಿನಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯ ಎಲ್ಲಾ ಕಾಮಗಾರಿಗಳನ್ನು ಒಟ್ಟಿಗೆ ಪ್ರಾರಂಭಿಸಲಾಗಿದೆ. ಈ ಕಾರ್ಯ ಯೋಜನೆಯಿಂದ ಕೇಂದ್ರ ಸರ್ಕಾರವು ಪ್ರತಿ ವಾರ ನೀಡುವ ಸ್ಮಾರ್ಟ್‌ ಸಿಟಿಗಳ ಶ್ರೇಯಾಂಕ ಪಟ್ಟಿಯಲ್ಲಿ ನೂರು ಸ್ಮಾರ್ಟ್‌ ಸಿಟಿ ನಗರಗಳ ಪೈಕಿ 21ನೇ ಸ್ಥಾನದಲ್ಲಿದ್ದ ತುಮಕೂರು ಸ್ಮಾರ್ಟ್‌ ಸಿಟಿಯು 20 ನೇ ಸ್ಥಾನ ಪಡೆದುಕೊಂಡಿದೆ. ಕರ್ನಾಟಕದ 7 ಸ್ಮಾರ್ಟ್‌ ಸಿಟಿ ನಗರಗಳ ಪೈಕಿ 2ನೇ ಸ್ಥಾನದಲ್ಲಿ ಇದೆ ಎಂದು ತಿಳಿಸಿದ್ದಾರೆ.

ಪರಮೇಶ್ವರ್ ಒಡೆತನದ ಕಾಲೇಜು ಒಮ್ಮೆಯೂ ತೆರಿಗೆ ಕಟ್ಟಿಲ್ಲ..! ಕೋಟಿ ಕೋಟಿ ವಂಚನೆ

ಯೋಜನಾಬದ್ಧವಾದ ನಗರೀಕರಣ ಪ್ರಕ್ರಿಯೆಗೆ ಚಾಲನೆ ನೀಡುವ ‘ಸ್ಮಾರ್ಟ್‌ ಸಿಟಿ’ಯು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿ ಯೋಜನೆಯಾಗಿದೆ. ಕೇಂದ್ರದ ಶೇ.50 ಹಾಗೂ ರಾಜ್ಯ ಸರ್ಕಾರದ ಶೇ.50ರಷ್ಟುಸೇರಿದಂತೆ ಒಟ್ಟು 1000 ಕೋಟಿ ರು.ಗಳ ಅನುದಾನ ವಿನಿಯೋಗಿಸಿಕೊಂಡು ಹಾಗೂ ಉಳಿದ 344 ಕೋಟಿ ರುಪಾಯಿ ಪಿಪಿಪಿ ಮೂಲಕ ತುಮಕೂರು ನಗರವನ್ನು ಸ್ಮಾರ್ಟ್‌ ಸಿಟಿಯನ್ನಾಗಿಸಲು ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆಧುನಿಕ ಸ್ಪರ್ಶಕ್ಕೆ ಆದ್ಯತೆ:

ಹಳೆಯ ನಗರಿಕರಣದ ಪರಿಕಲ್ಪನೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡುವುದೇ ‘ಸ್ಮಾಟ್‌ ಸಿಟಿ’ ಎಂದು ಸರಳವಾಗಿ ಹೇಳಬಹುದು. ಇಲ್ಲಿ ಪ್ರಮುಖವಾಗಿ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರುವಂತಹ ಮೂಲಸೌಕರ್ಯಗಳ ಜೊತೆಗೆ ಮಾಹಿತಿ, ಸಂವಹನ ಹಾಗೂ ತಂತ್ರಜ್ಞಾನಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

950 ಎಕರೆ ಪ್ರದೇಶದಲ್ಲಿ ಕಾಮಗಾರಿ ಪ್ರಗತಿ:

ಸ್ಮಾರ್ಟ್‌ ಸಿಟಿ ಯೋಜನೆಯಡಿ ಆರಂಭಿಕವಾಗಿ ತುಮಕೂರು ನಗರದ 4, 5, 8, 10, 14, 15, 16 ಹಾಗೂ 19 ವಾರ್ಡ್‌ಗಳ ವ್ಯಾಪ್ತಿಗೆ ಬರುವ 950 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದೆ.

ಮಳೆಯಿಂದಾಗಿ ತೊಡಕು:

ಇತ್ತೀಚೆಗೆ ಸತತ ಮಳೆಯಿಂದಾಗಿ ನಗರದಲ್ಲಿ ಕಾಮಗಾರಿ ಪ್ರಗತಿಯಲ್ಲಿರುವ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಕಾಮಗಾರಿಯಿಂದ ಸಾರ್ವಜನಿಕರಿಗೆ ತಾತ್ಕಾಲಿಕ ತೊಂದರೆ ಆಗಬಹುದು. ಸ್ಮಾರ್ಟ್‌ ರಸ್ತೆಗಳ ಯಶಸ್ವಿ ಅನುಷ್ಠಾನದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಅರಿತು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳ ಸೂಚನೆ:

ತುಮಕೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಬೀಳುತ್ತಿರುವ ಮಳೆಯಿಂದ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬವಾಗಿದ್ದು, ಕೂಡಲೇ ಅಗತ್ಯ ಕ್ರಮಕೈಗೊಂಡು ತ್ವರಿತಗತಿಯಲ್ಲಿ 2-3 ತಿಂಗಳೊಳಗೆ ಪೂರ್ಣಗೊಳಿಸಲು ಹಾಗೂ ಎಲ್ಲಾ ಕಾಮಗಾರಿಗಳ ಗುಣಮಟ್ಟಮತ್ತು ಪಾರದರ್ಶಕತೆ ಕಾಪಾಡಲು ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಜಿಲ್ಲಾಧಿಕಾರಿಗಳಿಂದ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಐಟಿ ದಾಳಿ: ಮಾಜಿ ಡಿಸಿಎಂ ಕಾಲೇಜಿನಲ್ಲಿ ಹುಂಡಿ ಹಣ..!

click me!