ಹೊರಡಿ ಬೇಗನೆ: ನ್ಯಾಶನಲ್ ಕಾಲೇಜ್ ವಿಜ್ಞಾನ ಮೇಳಕ್ಕೆ ಚಾಲನೆ

By nikhil vkFirst Published Dec 16, 2019, 2:17 PM IST
Highlights

ನ್ಯಾಶನಲ್ ಕಾಲೇಜಿನಲ್ಲಿ ವಿಜ್ಞಾನ ಉತ್ಸವ| ಬಿ.ವಿ.ಜಗದೀಶ್ ವಿಜ್ಞಾನ ಕೇಂದ್ರ, ನೆಹರು ತಾರಾಲಯದ ಸಹಭಾಗಿತ್ವ| `ಸೈನ್ಸ್ ಇನ್ ಆ್ಯಕ್ಷನ್’ ವಿಜ್ಞಾನ ಉತ್ಸವ ಉದ್ಘಾಟನಾ ಸಮಾರಂಭ| ವಿಜ್ಞಾನ ಮೇಳ ಉದ್ಘಾಟಿಸಿದ ಫ್ಲೋರಿಡಾ ಇಂಟರ್ನ್ಯಾಷನಲ್ ವಿವಿಯ ಪ್ರೋ ಎಸ್.ಎಸ್. ಅಯ್ಯಂಗಾರ್| 'ಅನೇಕ ಭಾರತೀಯ ದಿಗ್ಗಜರು ವಿಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ'| 'ಭಾರತೀಯ ಬುದ್ದಿಮತ್ತೆ ವಿಶ್ವದ ಸಕಲ ಜ್ಞಾನವನ್ನು ತನ್ನೊಡಲಲ್ಲಿ ಇಟ್ಟುಕೊಂಡಿದೆ'| ಹ್ಯುಮನಾಯ್ಡ್ ರೋಬೋಟ್ ಸಮಾರಂಭದ ಪ್ರಮುಖ ಆಕರ್ಷಣೆ| ಡಿ.16 ರಿಂದ ಡಿ.18ರವರೆಗೆ ಜಯನಗರ ನ್ಯಾಶನಲ್ ಕಾಲೇಜಿನಲ್ಲಿ ವಿಜ್ಞಾನ ಮೇಳ|

ಬೆಂಗಳೂರು(ಡಿ.16): ಭಾರತೀಯ ಬುದ್ದಿಮತ್ತೆ ವಿಶ್ವದ ಸಕಲ ಜ್ಞಾನವನ್ನು ತನ್ನೊಡಲಲ್ಲಿ ಇಟ್ಟುಕೊಂಡಿದ್ದು, ಇದರ ಸದುಪಯೋಗವೇ ಸಶಕ್ತ ಸಮಾಜ ನಿರ್ಮಾಣಕ್ಕಿರುವ ದಾರಿ ಎಂದು ಅಮೆರಿಕದ ಫ್ಲೋರಿಡಾ ಇಂಟರ್ನ್ಯಾಷನಲ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಕಂಪ್ಯೂಟಿಂಗ್ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನಿರ್ದೇಶಕ ಎಸ್.ಎಸ್. ಅಯ್ಯಂಗಾರ್ ಅಭಿಪ್ರಾಯಪಟ್ಟಿದ್ದಾರೆ.

ಬಿ.ವಿ.ಜಗದೀಶ್ ವಿಜ್ಞಾನ ಕೇಂದ್ರ ಮತ್ತು ಜವಾಹರಲಾಲ್ ನೆಹರು ತಾರಾಲಯದ ಸಹಭಾಗಿತ್ವದಲ್ಲಿ, ಬೆಂಗಳೂರಿನ ಜಯನಗರದಲ್ಲಿರುವ ನ್ಯಾಶನಲ್ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ `ಸೈನ್ಸ್ ಇನ್ ಆ್ಯಕ್ಷನ್’ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಪ್ರೋ.ಅಯ್ಯಂಗಾರ್ ಮಾತನಾಡಿದರು.

ಭಾರತದ ಜ್ಞಾನ ಸಂಪತ್ತು ಇಡೀ ವಿಶ್ವಕ್ಕೆ ಪಸರಿಸಿದ್ದು, ಅನೇಕ ಭಾರತೀಯ ದಿಗ್ಗಜರು ವಿಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಇದಕ್ಕೆ ವಿಶ್ವ ಕಂಡ ಅಪರೂಪದ ಗಣಿತ ವಿಜ್ಞಾನಿ ಪ್ರೋ. ರಾಮಾನುಜನ್ ಅವರೇ ಸಾಕ್ಷಿ ಎಂದು ಅಯ್ಯಂಗಾರ್ ಹೇಳಿದರು.

ಬನ್ನಿ ನ್ಯಾಶನಲ್ ಕಾಲೇಜಿಗೆ: ಸಾಕ್ಷಿಯಾಗಿ ವಿಜ್ಞಾನ ಉತ್ಸವದ ಮೋಜಿಗೆ!

ನ್ಯಾಶನಲ್‌ ಕಾಲೇಜೀನಲ್ಲಿ ಹಮ್ಮಿಕೊಂಡಿರುವ ವಿಜ್ಞಾನ ಮೇಳ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕುರಿತು ಹೆಚ್ಚಿನ ಆಸಕ್ತಿ ಮೂಡಿಸಲಿ ಎಂದು ಅಯ್ಯಂಗಾರ್ ಈ ವೇಳೆ ಹಾರೈಸಿದರು.

ಇದಕ್ಕೂ ಮೊದಲು ಮಾತನಾಡಿದ ರಾಷ್ಟ್ರೀಯ ಶಿಕ್ಷಣ ಸೊಸೈಟಿಯ ಅಧ್ಯಕ್ಷ  ಪ್ರೋ.ಎ.ಎಚ್.ರಾಮರಾವ್, ಬಿ.ವಿ.ಜಗದೀಶ್ ವಿಜ್ಞಾನ ಕೇಂದ್ರ ಮತ್ತು ಜವಾಹರಲಾಲ್ ನೆಹರು ತಾರಾಲಯ ವಿಜ್ಞಾನ ಮೇಳದ ರೂವಾರಿಗಳು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜವಾಹರಲಾಲ್ ನೆಹರು ತಾರಾಲಯದ ಮುಖ್ಯಸ್ಥ ಡಾ. ಪ್ರಮೋದ್ ಗಲಗಲಿ, ಸಮಾಜದಲ್ಲಿ ಅದರಲ್ಲೂ ಪ್ರಮುಖವಾಗಿ ವಿದ್ಯಾರ್ಥಿ ಸಮುದಾಯದಲ್ಲಿ ವಿಜ್ಞಾನ ಕ್ಷೇತ್ರದ ಮಹತ್ವವನ್ನು ಪ್ರಚುರಪಡಿಸುವಲ್ಲಿ ತಾರಾಲಯ ಸದಾ ಸಿದ್ಧ ಎಂದು ಭರವಸೆ ನೀಡಿದರು.

ಹ್ಯುಮನಾಯ್ಡ್ ರೋಬೋಟ್ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದು, ಕಾರ್ಯಕ್ರಮಕ್ಕೆ ಹಾಜರಾದ ಎಲ್ಲಿರಗೂ ಸ್ವಾಗತ ಕೋರಿದ ರೋಬೋಟ್ ಕಂಡು ವಿದ್ಯಾರ್ಥಿಗಳು ಆಶ್ಚರ್ಯ ಚಕಿತಗೊಂಡರು.

"

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸೊಸೈಟಿಯ ಪ್ರೋ. ಎಸ್.ಎನ್ ನಾಗರಾಜ್ ರೆಡ್ಡಿ, ಬಿ.ವಿ.ಜಗದೀಶ್ ವಿಜ್ಞಾನ ಕೇಂದ್ರದ ಮುಖ್ಯಸ್ಥ ಕೆ.ಎಸ್. ನಟರಾಜ್ ಸೇರಿದಂತೆ ಇತರ ಗಣ್ಯರು ಹಾಜರಿದ್ದರು.

ಇನ್ನು ಮೂರು ದಿನಗಳ ಕಾಲ ನಡೆಯುವ ವಿಜ್ಞಾನ ಮೇಳದಲ್ಲಿ ನೂರಾರು ಸಂವಾದಾತ್ಮಕ ವಿಜ್ಞಾನ ಮಾದರಿಗಳು ಮತ್ತು ಹ್ಯುಮನಾಯ್ಡ್, ಮೊಬೈಲ್ ತಾರಾಲಯ, 3 ಡಿ ಮುದ್ರಕ, ಇಸ್ರೋದ ಉಪಗ್ರಹಗಳ ಸ್ಕೇಲ್ಡ್ ಮಾದರಿಗಳ ಪ್ರದರ್ಶನ ಇರಲಿದೆ.

click me!