ಕೋವಿಡ್ ಅಪ್ಪಳಿಸಿದ ಬಳಿಕವೂ ಪ್ರಗತಿಯತ್ತ ಸಾಗಿದ ಮಾಹಿತಿ ತಂತ್ರಜ್ಞಾನ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

By Govindaraj SFirst Published Apr 13, 2022, 7:56 PM IST
Highlights

ಕೋವಿಡ್ ಅಪ್ಪಳಿಸಿದ ಬಳಿಕವೂ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರ ಭಾರಿ ಪ್ರಗತಿ ಸಾಧಿಸಿದೆ. ಕೋವಿಡ್ ನಂತರದ ದಿನದಲ್ಲಿ ಮಾಹಿತಿ ತಂತ್ರಜ್ಞಾನ ಶೇ.15ರ ಪ್ರಗತಿ ಸಾಧಿಸಿದೆ ಎಂದು ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ವರದಿ: ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಏ.13): ಕೋವಿಡ್ (Covid 19) ಅಪ್ಪಳಿಸಿದ ಬಳಿಕವೂ ಮಾಹಿತಿ ತಂತ್ರಜ್ಞಾನ (Information Technology) ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರ ಭಾರಿ ಪ್ರಗತಿ ಸಾಧಿಸಿದೆ. ಕೋವಿಡ್ ನಂತರದ ದಿನದಲ್ಲಿ ಮಾಹಿತಿ ತಂತ್ರಜ್ಞಾನ ಶೇ.15ರ ಪ್ರಗತಿ ಸಾಧಿಸಿದ್ದು  ಸುಮಾರು 8 ಲಕ್ಷ ಉದ್ಯೋಗ ಸೃಷ್ಟಿಸಿದೆ ಎಂದು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಉದ್ದಿಮೆಶೀಲತೆ ಮತ್ತು ಕೌಶಲ್ಯಾಭಿವೃದ್ಧಿ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಹೇಳಿದ್ದಾರೆ. 

ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಬೆಂಗಳೂರಿನ ನವೋದ್ಯಮಿಗಳ ಜೊತೆ ಸಭೆ ನಡೆಸಿ ಮಾತನಾಡಿದರು. ಈ ದಶಕದಲ್ಲಿ ಭಾರತ ತನ್ನ ಅಭಿವೃದ್ಧಿ ಮೈಲಿಗಲ್ಲನ್ನು ಸಾಧಿಸಬೇಕು, ಈ ದಶಕ ಭಾರತಕ್ಕೆ ಸೇರಬೇಕು ಎಂಬುದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಸಂಕಲ್ಪ. ಈ ನಿಟ್ಟಿನಲ್ಲಿ ದೃಢವಾದ ಹೆಜ್ಜೆಯನ್ನು ಸರ್ಕಾರ ಮತ್ತು ಉದ್ಯಮ ಇಡುತ್ತಿದೆ. ಕೋವಿಡ್‌ನ ಸವಾಲನ್ನು ಮೆಟ್ಟಿ ನಿಂತು ಉತ್ತಮ ಸಾಧನೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ನವೋದ್ಯಮಗಳಿಗೆ ಪೂರಕವಾದ ಅನ್ವೇಷಣಾ ಪ್ರವೃತ್ತಿಯನ್ನು ಪ್ರೋತ್ಸಾಹಿಸುವ ಪರಿಸರವನ್ನು ವಿಸ್ತರಿಸಲು ಸರ್ಕಾರ ಬದ್ಧವಾಗಿದೆ. 

ಪ್ರಧಾನಿ ಮೋದಿ ಕನಸಿನ‌ ಕೆರೆ ಯೋಜನೆಗಾಗಿ ಸಚಿವ ರಾಜೀವ್ ಚಂದ್ರಶೇಖರ್ ಬೆಂಗಳೂರು ರೌಂಡ್ಸ್

ಎಲೆಕ್ಟ್ರಾನಿಕ್ಸ್, ಸೆಮಿ ಕಂಡಕ್ಟರ್, ಡೀಪ್ ಟೆಕ್, ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ಆಧಾರಿತ ಸ್ಟಾರ್ಟ್ ಆಫ್‌ಗಳಿಗೆ ಉತ್ತಮ ಅವಕಾಶವಿದೆ. ಸದ್ಯ ನಾವು ಈ ದಶಕದ ಆರಂಭದಲ್ಲಿದ್ದು ನಮ್ಮ ಮುಂದಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನವೋದ್ಯಮಿಗಳಿಗೆ ಕರೆ ನೀಡಿದರು. ಕೋವಿಡ್‌ನ ಪರಿಣಾಮವಾಗಿ ಸರ್ಕಾರ ಮತ್ತು ಉದ್ದಿಮೆಗಳು, ವ್ಯವಹಾರಗಳು ಮತ್ತು ವೈಯಕ್ತಿಕ ಡಿಜಿಟಲೀಕರಣ ಪ್ರಕ್ರಿಯೆ ಭಾರಿ ವೇಗ ಪಡೆದಿದೆ. ಈ ಡಿಜಿಟಲೀಕರಣವು ಭಾರತೀಯ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಉದ್ದಿಮೆದಾರರಿಗೆ ಮತ್ತು ಕಂಪೆನಿಗಳಿಗೆ ಅವಕಾಶ ಸೃಷ್ಟಿಸಿದೆ. 

ಭವಿಷ್ಯದಲ್ಲಿ ಸಣ್ಣ ಪಟ್ಟಣಗಳಿಂದ ದೊಡ್ಡ ಉದ್ದಿಮೆಗಳು: ಐಟಿ ಅವಕಾಶಗಳು ಸಣ್ಣ ಸಣ್ಣ ಪಟ್ಟಣಗಳಿಗೂ ಹೋಗಬೇಕು ಎಂಬುದು ನಮ್ಮ ಆಶಯ. ಕೋವಿಡ್‌ನಿಂದಾಗಿ ಕಚೇರಿಯಿಂದ ದೂರವಿದ್ದು ಕೆಲಸ ಮಾಡುವ ಪ್ರಯೋಗ ಯಶ ಕಂಡಿದೆ. ಈ ಯಶಸ್ಸಿನಿಂದ ಪ್ರೇರಣೆ ಪಡೆದು ಉದ್ದಿಮೆಗಳು ಎರಡನೇ ಮತ್ತು ಮೂರನೇ ಹಂತದ ನಗರಗಳಿಗೆ ಹೋಗುತ್ತಿವೆ. ರಾಜ್ಯದಲ್ಲಿ ಈಗಾಗಲೇ ’ಬಿಯಾಂಡ್ ಬೆಂಗಳೂರು’ ಯೋಜನೆ ಅನುಷ್ಠಾನಗೊಂಡಿದೆ. ಮುಂದಿನ ದಿನಗಳಲ್ಲಿ ಎರಡು ಮತ್ತು ಮೂರನೇ ಹಂತದ ನಗರಗಳಿಂದ ಇನ್ನಷ್ಟು ಸ್ಟಾರ್ಟ್ ಅಪ್‌ಗಳು ಹೊರಹೊಮ್ಮಲಿವೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.

Bengaluru: ಐಟಿ ಕ್ಷೇತ್ರದಲ್ಲಿ ಭಾರತಕ್ಕೆ ವಿಫುಲ ಅವಕಾಶ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಬೆಂಗಳೂರಿನ ಸಂಸದನಾಗಿ ನನ್ನ ಬೆಂಗಳೂರು, ನನ್ನ ರಾಜ್ಯದ ಸ್ಟಾರ್ಟ್ ಅಪ್‌ಗಳಿಗಾಗಿ ನನ್ನ ಹೃದಯ ಮಿಡಿಯುತ್ತದೆ. ಇಲ್ಲಿನ ಯುವಕರು ಉತ್ತಮ ಸಾಧನೆ ಮಾಡಬೇಕು, ಅವರಿಗೆ ಒಳ್ಳೆಯ ಅವಕಾಶ ಸಿಗಬೇಕು ಎಂದು ನಾನು ಸದಾ ಬಯಸುತ್ತೇನೆ. ಆದರೆ ಕೇಂದ್ರದ ಸಚಿವನಾಗಿ ದೇಶದೆಲ್ಲೆಡೆಯ ಸ್ಟಾರ್ಟ್ ಆಪ್‌ಗಳಿಗೆ ಪ್ರೋತ್ಸಾಹ ನೀಡುವುದು ನನ್ನ ಕರ್ತವ್ಯ. ನಾವೆಲ್ಲ ಒಟ್ಟಾಗಿ ಜಗತ್ತಿನ ಅತಿದೊಡ್ಡ ಮತ್ತು ಅತ್ಯುತ್ತಮ ಸ್ಟಾರ್ಟ್ ಅಪ್‌ಗಳನ್ನು ಭಾರತದಲ್ಲಿ ರೂಪಿಸಬೇಕು ಎಂದು ಹೇಳಿದರು.

click me!